ಶನಿವಾರ, ನವೆಂಬರ್ 3, 2007

ಜೇನಿನ ಹೊಳೆಯೋ... ಹಾಲಿನ ಮಳೆಯೋ...

ನಮಸ್ಕಾರ! ಬಹಳ ದಿನವಾಗಿದೆ ಇಲ್ಲಿ ಬರೆದು... ಏನ್ ಮಾಡಲಿ ನಾನು ಏನ್ ಮಾಡಲಿ? ಕೇವಲ ನೀರು, ಶುದ್ಧ ಗಾಳಿ ಮುಂತಾದವುಗಳ ಅಭಾವದಿಂದ ಕಂಗೆಟ್ಟಿದ್ದ ಬೆಂಗಳೂರಿಗೆ ನಾನು ಬಂದಾಗಿನಿಂದ (ನನಗೆ) ಹೊಸ ಅಭಾವಗಳು ಶುರುವಾಗಿವೆ. ಬರೆಯೋದಕ್ಕೆ ಬಹಳ ವಿಷಯಗಳಿವೆ, ಆದರೆ ಸಮಯದ ಅಭಾವ. ಸಾಕಷ್ಟು ಸಮಯವಿದೆ, ಆದರೆ ಕಂಪ್ಯೂಟರ್ ಅಭಾವ. ಸಾಕಷ್ಟು ಕಂಪ್ಯೂಟರ್ ಗಳೂ ಇವೆ, ಆದರೆ ಇಂಟರ್ನೆಟ್ ಅಭಾವ. ಹೀಗೆ ಅಭಾವಗಳ ಸುಳಿಗೆ ಸಿಕ್ಕು ಭಾವದ ಭಾವನೆಗಳನ್ನು ವ್ಯಕ್ತಪಡಿಸಲು ಸಾಧ್ಯವಾಗಿರಲಿಲ್ಲ. ಈಗ ಮತ್ತೆ ದೋಣಿಗೆ ಹುಟ್ಟು ಹಾಕುವ ಕಾಲ ಕೂಡಿ ಬಂದಿದೆ.

ರಾಜಧಾನಿಗೆ ನಾನು ಬಂದಾಗಿನಿಂದ ಅನುಭವಿಸಿರುವ ಕಷ್ಟ ಎಂದರೆ ಎಲ್ಲರಿಗೂ ತಿಳಿದಿರುವ ಟ್ರಾಫಿಕ್ ಜಾಮ್. ಅದರಲ್ಲಿ ಸಿಕ್ಕಿ ಹಾಕಿಕೊಂಡಾಗ ಬಹಳಷ್ಟು ಜನ ಮಾಡುವ ಕೆಲಸವೆಂದರೆ ಎಫ್.ಎಂ. ಕೇಳುವುದು ("ಸಿಗ್ನಲ್ ಅಲ್ಲೇ ಶೇವಿಂಗ್ ಮಾಡಿ, ಟ್ರಾಫಿಕ್ ನಲ್ಲೇ ಮೇಕಪ್ ಮಾಡಿ, ಪಾರ್ಕಿಂಗ್ ಲಾಟಲ್ ಪ್ರೀತಿ ಮಾಡ್ತಾರೋ" ಎನ್ನುವ ಅಮೇರಿಕಾ ಸಂಸ್ಕೃತಿ ಇಲ್ಲಿಲ್ಲವಲ್ಲ!). ಎಫ್.ಎಂ ಆದರೋ ಬರೀ ಕಂಗ್ಲಿಷ್ ಮಾತನಾಡುವ ಆರ್.ಜೆ. ಗಳ ತಂಡ, ಅವರ ನಿರುಪಯುಕ್ತ ಹರಟೆ ಹಾಗೂ ಅಲ್ಲೋ ಇಲ್ಲೋ ಕೆಲವು ಉತ್ತಮ ಹಾಡುಗಳು. ಆದರೆ ಬೇರೆ ಮನರಂಜನೆಯಿಲ್ಲದೆ ಬೆಂಗಾಡಾಗಿರುವ ಈ ಮನಸ್ಸಿಗೆ ಅದೇ ಓಯಸಿಸ್!

ನವೆಂಬರ್ ಬಂದ ತಕ್ಷಣ ಜಾಗೃತವಾಗುವ ಕನ್ನಡ ಸಂಘಗಳು ಎಂದಿನಂತೆ ಈ ಬಾರಿಯೂ ತಮ್ಮ ಕೆಲಸ ಮಾಡಿದವು, ರೇಡಿಯೋ ಜಾಕಿಗಳು ಯಥಾಪ್ರಕಾರ ಕಂಗ್ಲಿಷ್ ಮೆರೆದರು. ಇವೆಲ್ಲದರ ಮಧ್ಯೆ ಕನ್ನಡ ಬಾರದವರ/ಬಂದರೂ ಮಾತನಾದದವರ ಸಂದರ್ಶನ ಬೇರೆ. ಕರ್ನಾಟಕದಲ್ಲೇ ಓದಿ, ಬೆಳೆದಿದ್ದರೂ ಕನ್ನಡ ಮಾತನಾಡಲು ನಾಚುವ(?) ದೀಪಿಕಾ ಪಡುಕೋಣೆಯ ಸಂದರ್ಶನ ಇದರಲ್ಲೊಂದು. ಕನ್ನಡದ ಐಶ್ವರ್ಯ ಎಂದು ಹೆಸರಾಗಿರುವ ಇವಳಿಗೆ ಕನ್ನಡ ಮಾತನಾಡಲು ಅಂಜಿಕೆಯೇ ಅಳುಕೇ? ಆರ್.ಜೆ. ಕನ್ನಡದಲ್ಲಿ ಪ್ರಶ್ನೆ ಕೇಳುತ್ತಿದ್ದರೂ ಹಿಂದಿ ಅಥವಾ ಆಂಗ್ಲದಲ್ಲಿಯೇ ಉತ್ತರಿಸುತ್ತಿದ್ದ ಆಕೆಯ ಧೈರ್ಯ ಮೆಚ್ಚಲೇಬೇಕು. ಇನ್ನು ಐಶ್ವರ್ಯಾ ಬಚ್ಚನ್ ಅಂತೂ ತನಗೆ ಕನ್ನಡ ಬರುತ್ತದೆಂದು ಹೇಳಿಕೊಳ್ಳಲೂ ಇಷ್ಟಪಡುವುದಿಲ್ಲ. ಕನ್ನಡ ರಾಜ್ಯೋತ್ಸವದಂದೇ ಆಕೆ ಹುಟ್ಟಿದ್ದು ಕನ್ನಡಿಗರ ಕರ್ಮಕಾಂಡ. ಒಟ್ಟಿನಲ್ಲಿ ಇನ್ನೊಂದು ರಾಜ್ಯೋತ್ಸವ ಮುಗಿದಿದೆ. ನವೆಂಬರ್ ತಿಂಗಳಿನಲ್ಲಿ ಮಾತ್ರ ವ್ಯಕ್ತವಾಗುತ್ತಿದ್ದ ಕನ್ನಡಿಗರ ಕನ್ನಡಾಭಿಮಾನ ನವೆಂಬರ್ ಒಂದಕ್ಕೆ ಮಾತ್ರ ಸೀಮಿತವಾಗಿದೆ. ಜೇನಿನ ಹೊಳೆಯೋ... ಹಾಲಿನ ಮಳೆಯೋ... ಎಂಬ ಮಾತು ಡಾ|| ರಾಜ್ ರೊಂದಿಗೆ ಅವಸಾನವಾಗಿದೆಯೋ ಎಂಬ ಶಂಕೆ ಉಂಟಾಗುತ್ತಿದೆ.

ಸೋಮವಾರ, ಅಕ್ಟೋಬರ್ 8, 2007

ದೋಣಿ ಸಾಗಲಿ, ಮುಂದೆ ಹೋಗಲಿ...

ಹರಿಹರಕ್ಕೆ ಗುಡ್ ಬೈ ಹೇಳುವ ಸಮಯ ಬಂದಿದೆ... ಇದೇ ತಿಂಗಳು ೧೧ನೇ ತಾರೀಖಿನಿಂದ ಕೆಲಸಕ್ಕೆ ಸೇರಬೇಕಾಗಿರುವುದರಿಂದ ಬೆಂಗಳೂರಿಗೆ ಹೊರಡಲಿದ್ದೇನೆ. ಹೊಸ ಆಸೆ-ಆಕಾಂಕ್ಷೆಗಳೊಂದಿಗೆ ಹೊಸ ಬಾಳನ್ನು ಆರಂಭಿಸುತ್ತಿದ್ದೇನೆ. ಬಾಲ್ಯದ ಹುಡುಗಾಟಗಳು, ಗೆಳೆಯರ ಸಂಗ, ಶಾಲೆ-ಕಾಲೇಜುಗಳ ಜೀವನ ಇವೆಲ್ಲವಕ್ಕೂ ಸಾಕ್ಷಿಯಾದ ಈ ಊರು ಬಿಟ್ಟು ಹೋಗಲು ಮನಸ್ಸಾಗುತ್ತಿಲ್ಲ. ಇದೇನಪ್ಪಾ, ಕೆಲಸಕ್ಕೆ ಸೇರುವವನಿಗೆ ಇಷ್ಟೊಂದು ಫೀಲಿಂಗಾ ಅನ್ಬೇಡಿ. ಇದಕ್ಕೆ ಕಾರಣವಿದೆ. ನಾನು ಬೆಂಗಳೂರಿಗೆ ಹೋಗುತ್ತಿರುವುದಷ್ಟೇ ಅಲ್ಲದೆ ನಮ್ಮ ಕುಟುಂಬವೂ ನಮ್ಮೂರಾದ ಮಂಚಾಲೆಯಲ್ಲಿ ನೆಲೆಸಲಿದೆ. ಹಾಗಾಗಿ ನಾನು ಮತ್ತೆ ಹರಿಹರಕ್ಕೆ ಎಂದು ಬರುತ್ತೇನೆ ಎಂಬುದು ಅನಿಶ್ಚಿತ. ಆದರೆ ಒಂದಂತೂ ಸತ್ಯ. ಅಸಂಖ್ಯ ಮಧುರ ನೆನಪುಗಳನ್ನು ನೀಡಿದ ಹರಿಹರ ಸದಾ ನನ್ನ ನೆನಪಿನಂಗಳದಲ್ಲಿ ಅಚ್ಚಳಿಯದೆ ನಿಂತಿರುತ್ತದೆ...

ಉದ್ಯಾನನಗರಿಯ ಬದುಕು ಸುಂದರವಾಗಿರುತ್ತದೆಂದು ಆಶಿಸುತ್ತಾ ಬಾಳೆಂಬ ದೋಣಿ ಹೀಗೇ ಮುಂದುವರಿಯುತ್ತದೆಂದು ಬಯಸುತ್ತೇನೆ. ಕುವೆಂಪು ರಚಿಸಿರುವ ಮಿಸ್ ಲೀಲಾವತಿ ಚಿತ್ರದ ಈ ಹಾಡು ಈ ಸಮಯದಲ್ಲಿ ಪ್ರಸ್ತುತವೆಂದೆನಿಸುತ್ತಿದೆ:

ದೋಣಿ ಸಾಗಲಿ ಮುಂದೆ ಹೋಗಲಿ ದೂರ ತೀರವ ಸೇರಲಿ
ಬೀಸು ಗಾಳಿಗೆ ಬೀಳುತೇಳುವ ತೆರೆಯ ಮೇಗಡೆ ಹಾರಲಿ ||ಪ||

ಹೊನ್ನಗಿಂಡಿಯ ಹಿಡಿದು ಕೈಯೊಳು ಹೇಮವಾರಿಯ ಚಿಮುಕಿಸೆ
ಮೇಘಮಾಲೆಗೆ ಬಣ್ಣವೀಯುತ ಯಕ್ಷಲೋಕವ ವಿರಚಿಸೆ
ನೋಡಿ ಮೂಡಣದಾ ದಿಗಂತದಿ ಮೂಡುವೆಣ್ಣಿನ ಮೈಸಿರಿ
ರಂಜಿಸುತ್ತಿದೆ ಚೆಲುವೆಯಾಕೆಗೆ ಸುಪ್ರಭಾತವ ಬಯಸಿರಿ ||೧||

ಕೆರೆಯ ಅಂಚಿನ ಮೇಲೆ ಮಿಂಚಿನ ಹನಿಗಳಂದದಿ ಹಿಮಮಣಿ
ಮಿಂಚುತಿರ್ಪುವು ಮೂಡುತೈತರೆ ಬಾಲಕೋಮಲ ದಿನಮಣಿ
ಹಸುರು ಜೋಳದ ಹೊಲದ ಗಾಳಿಯು ತೀಡಿ ತಣ್ಣಗೆ ಬರುತಿರೆ
ಹುಡುಗಿ ಹಾಡುವ ಮತ್ತ ಕೋಕಿಲ ಮಧುರ ವಾಣಿಯ ತರುತಿರೆ ||೨||

ದೂರ ಬೆಟ್ಟದ ಮೇಲೆ ತೇಲುವ ಬಿಳಿಯ ಮೋಡವ ನೋಡಿರಿ
ಅದನೆ ಹೋಲುತ ಅಂತೆ ತೇಲುತ ದೋಣಿಯಾಟವನಾಡಿರಿ
ನಾವು ಲೀಲಾಮಾತ್ರ ಜೀವರು ನಮ್ಮ ಜೀವನ ಲೀಲೆಗೆ
ನಿನ್ನೆ ನಿನ್ನೆಗೆ ಇಂದು ಇಂದಿಗೆ ಇರಲಿ ನಾಳೆಯು ನಾಳೆಗೆ ||೩||

(ಈ ಹಾಡನ್ನು ಕನ್ನಡಆಡಿಯೋ.ಕಾಂ ನ ಈ ಪುಟದಿಂದ ಕೇಳಬಹುದು)

ಇಷ್ಟು ದಿನ ನನ್ನೊಂದಿಗೆ ಇದ್ದ ಎಲ್ಲ ಗೆಳೆಯರಿಗೆ ನನ್ನ ಸ್ನೇಹಪೂರ್ವಕ ವಂದನೆಗಳು, ಧನ್ಯವಾದಗಳು

ಶುಕ್ರವಾರ, ಸೆಪ್ಟೆಂಬರ್ 28, 2007

ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......

ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.

ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.

ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!

ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಬುಧವಾರ, ಸೆಪ್ಟೆಂಬರ್ 26, 2007

ಶಿರಸಿಗೆ ಸ್ಪೈಸ್ ಬಂದಿದೆ!!

ಹೌದು. ಉತ್ತರ ಕನ್ನಡದ ಪ್ರಮುಖ ಪಟ್ಟಣವಾಗಿದ್ದರೂ ಶಿರಸಿಯಲ್ಲಿ ಇಷ್ಟು ದಿವಸ ಸ್ಪೈಸ್ ನೆಟ್‌ವರ್ಕ್ ಇರಲಿಲ್ಲ. ಇಂದು ಅಲ್ಲಿಗೆ ಹೋಗಿದ್ದ ನನಗೆ ಆಶ್ಚರ್ಯ! ಏಕೆಂದರೆ ಸ್ಪೈಸ್ ಇರುವುದಷ್ಟೇ ಅಲ್ಲ, ನೆಟ್‌ವರ್ಕ್ ಕೂಡಾ ಚೆನ್ನಾಗಿಯೇ ಇದೆ (ನಾನೊಬ್ಬನೇ ಸ್ಪೈಸ್ ಗ್ರಾಹಕ ಅಲ್ಲಿದ್ದಿದ್ದು ಅಂತೀರಾ? ಅನ್ನಿ). ಒಟ್ಟಿನಲ್ಲಿ ಶಿರಸಿ ಈಗ hot and spicy!!

ಅಲ್ಲಿಂದ ಬರುವಾಗ ಇನ್ನೊಂದು ಸಂಗತಿ ನಡೆಯಿತು. ಶಿರಸಿಯಿಂದ ಹಾವೇರಿಗೆ ಬರುವಾಗ ಬಸ್ಸಿನಲ್ಲಿ ಒಬ್ಬ ಶಾಲೆಯ ಹುಡುಗ ಸುಮ್ಮನೇ ಕೂರದೇ ಉಣ್ಣೆಯಿಂದ ನೇಯ್ಗೆ ಮಾಡುತ್ತಿದ್ದ. ಅಕ್ಕ ಪಕ್ಕ ಕುಳಿತಿದ್ದ ಅವನ ಗೆಳೆಯರು ಹರಟೆ ಹೊಡೆಯುತ್ತಿದ್ದರೂ ಅವನು ಮಾತನಾಡುತ್ತಲೇ ನನ್ನ ಕಾರ್ಯ ಮುಂದುವರೆಸಿದ್ದ. ಅವನು ಯಾರೆಂದು ನನಗೆ ತಿಳಿದಿಲ್ಲ; ಆದರೆ ಅವನು ಮಾಡುತ್ತಿದ್ದ ಕೆಲಸ ಮಾತ್ರ ಜೀವನಕ್ಕೊಂದು ಪಾಠ, ಅನುಕರಣೀಯ.



ಕೆಲಸ ಮಾಡಲೇಬೇಕೆಂದಿದ್ದರೆ ಹೇಗೆ ಬೇಕಾದರೂ ಮಾಡಬಹುದೆಂಬುದಕ್ಕೆ ಇದೇ ಸಾಕ್ಷಿಯಲ್ಲವೇ? ಮನಸ್ಸಿದ್ದರೆ ಮಾರ್ಗ.

ಸೋಮವಾರ, ಸೆಪ್ಟೆಂಬರ್ 24, 2007

ತಲೆನೋವಿಗೆ ಒಂದು ಡಜನ್ ಕಾರಣಗಳು...

  • ಮೈಗ್ರೇನ್ ಅಥವಾ ಇನ್ಯಾವುದೋ ತಲೆಗೆ ಸಂಬಂಧಿಸಿದ ರೋಗ ಬಂದಿರುವುದು

  • ಬಹಳ ನಿದ್ದೆಗೆಡುವುದು

  • ದೀರ್ಘ ಕಾಲ ಟಿವಿ ನೋಡುವುದು

  • ಮಳೆಯಲ್ಲಿ ನೆನೆದು ತಲೆ ಒರೆಸಿಕೊಳ್ಳದಿರುವುದು

  • ಟಾಯ್ಲೆಟ್‍ಗೆ ಸಮಯಕ್ಕೆ ಸರಿಯಾಗಿ ಹೋಗದೆ ಮಲಬದ್ಧತೆಯಾಗುವುದು

  • ಶಾಲೆಗೆ ಚಕ್ಕರ್ ಹಾಕಲು ನೆಪ ಬೇಕಾಗಿರುವುದು

  • ಮನೆಗೆಲಸ ತಪ್ಪಿಸಿಕೊಳ್ಳಲು ನೆಪ ಬೇಕಾಗಿರುವುದು

  • ಹೆಂಡತಿಯೊಡನೆ ಶಾಪಿಂಗ್ ಹೋಗದಿರಲು ನೆಪ ಬೇಕಾಗಿರುವುದು

  • ಬಿಸಿ ಕಾಫಿ ಅಥವಾ ಚಹಾ (ದಿನದ ೨೫ ನೇ ಬಾರಿ) ಕುಡಿಯಲು ನೆಪ ಬೇಕಾಗಿರುವುದು

  • ಭಾರತ ಸೋಲುತ್ತಿರುವ ಕ್ರಿಕೆಟ್ ಮ್ಯಾಚ್‍ನ ಆಡಿಯೋ ಕಾಮೆಂಟರಿ ಕೇಳುವುದು

  • ಬರಿಯ ಸ್ಪ್ಯಾಮ್‍ಗಳೇ ತುಂಬಿರುವಾಗ ಈಮೇಲ್ ಚೆಕ್ ಮಾಡುವುದು

  • ಮೆಡಿಕಲ್ ಓದುತ್ತಿರುವ ಗೆಳೆಯರೊಂದಿಗೆ ಕಾಲು ಗಂಟೆಗಿಂತ ಹೆಚ್ಚು ಮಾತನಾಡುವುದು

ಶನಿವಾರ, ಸೆಪ್ಟೆಂಬರ್ 22, 2007

ಹೀಗೊಂದು ನಾಲ್ಕೂವರೆ ತಾಸಿನ ಪಯಣ

ಸಮಯದ ಅಭಾವವೋ ಹಬ್ಬಗಳ ಬಗ್ಗೆ ಅಸಡ್ಡೆಯೋ ಗೊತ್ತಿಲ್ಲ, ಎಂಜಿನಿಯರಿಂಗ್ ಓದುತ್ತಿದ್ದ ಹಿಂದಿನ ನಾಲ್ಕು ವರ್ಷಗಳಲ್ಲಿ ಯಾವ ಹಬ್ಬವನ್ನೂ ಒಮ್ಮೆ ಕೂಡ ಹಬ್ಬದಂತೆ ಆಚರಿಸಿರಲಿಲ್ಲ. ಹರಿಹರದಲ್ಲಿನ ಪೇಟೆ ಸಂಸ್ಕೃತಿಯಿಂದಾಗಿ ಎಷ್ಟೋ ಹಬ್ಬಗಳು ನನಗರಿವಿಲ್ಲದಂತೆ ಬಂದು ಹೋಗಿದ್ದವು. ಈಗ ಸಮಯವೂ ಇದೆ, ಮಾಡಲು ಕೆಲಸವೂ ಕಾಣುತ್ತಿಲ್ಲ; ಈಗಿರುವ ಸಮಯ ಭವಿಷ್ಯದಲ್ಲಿ ಸಿಗುವುದು ಕಷ್ಟ ಎಂದು ಎರಡು ದಿನ ಮೊದಲೇ ಚೌತಿಗೆಂದು ಊರಿಗೆ ಹೋಗಲು ನಿರ್ಧರಿಸಿದೆ. ಕಳೆದ ಬುಧವಾರ ಮಧ್ಯಾಹ್ನ ಅಗತ್ಯ ವಸ್ತುಗಳನ್ನೆಲ್ಲ ಬ್ಯಾಗ್‌ನಲ್ಲಿ ತುಂಬಿಕೊಂಡು ಮನೆಗೆ ಬೀಗ ಹಾಕಿ ನಾಲ್ಕು ಹೆಜ್ಜೆ ನಡೆಯುವಷ್ಟರಲ್ಲಿ ಕೊಡೆ ತರುವಂತೆ ಅಮ್ಮ ಎಚ್ಚರಿಸಿದ್ದು ನೆನಪಾಯಿತು. ಮನೆಗೆ ತಿರುಗಿ ಬಂದು ಎಲ್ಲಿ ಹುಡುಕಿದರೂ ಛತ್ರಿ ಸಿಗಬಾರದೆ? ಹಿಂದಿನ ಬಾರಿ ಊರಿಂದ ಬರುವಾಗ ಮುರಿದಿದ್ದ ಕೊಡೆಯನ್ನು ಅಲ್ಲಿಯೇ ಬಿಟ್ಟು ಅಮ್ಮನ ಹೊಸ ಕೊಡೆ ತೆಗೆದುಕೊಂಡು ಹೊರಟಿದ್ದಷ್ಟೇ ನೆನಪಿದೆ. ಸರಿಯಾಗಿ ಮನೆಗೆ ತಂದಿದ್ದೆನೋ ಅಥವಾ ದಾರಿ ಮಧ್ಯದಲ್ಲೇ ಅದು ಇನ್ನೊಬ್ಬರ ಸ್ವತ್ತಾಯಿತೋ ದೇವರೇ ಬಲ್ಲ! ನನಗೆ ಹಾಗೇ - ನೆನಪಿನ ಶಕ್ತಿ ಕಡಿಮೆ, ಜೀರ್ಣಶಕ್ತಿ ಜಾಸ್ತಿ!! ಸಿಗದ ಕೊಡೆಗೆ ಶಪಿಸುತ್ತಾ ಹೊರಟೆ. ಊಟ ಬೇರೆ ಆಗಿರಲಿಲ್ಲ. ಹರಿಹರ ಬಸ್‍ಸ್ಟ್ಯಾಂಡ್ ಬಳಿಯ ಗಣೇಶ್ ಕೆಫೆಯಲ್ಲಿ ರೈಸ್‍ಬಾತ್ ತಿಂದು ಬಸ್ ಹತ್ತುವಾಗ ಗಂಟೆ ಮೂರೂವರೆಯಾಗಿತ್ತು.

ಸಾಗರಕ್ಕೆ ೧೫ ಕಿಲೋಮೀಟರ್ ದೂರವಿರುವ ಮಲೆನಾಡಿನ ನಡುಮಧ್ಯದ ಚಿಕ್ಕ, ಚೊಕ್ಕ ಹಳ್ಳಿ ಮಂಚಾಲೆ. ಮಳೆಗಾಲದಲ್ಲಿ ಬಿಡದೆ ಹೊಯ್ದು ಬೇಸರ ಮೂಡಿಸುವ ಜಿಟಿಜಿಟಿ ಮಳೆ, ಚಳಿಗಾಲದಲ್ಲಿ ಕೊರೆಯುವ ಚುಮುಚುಮು ಚಳಿ, ಬೇಸಿಗೆಯಲ್ಲಿ ಸುಖಕರವೆನಿಸುವ ತಂಪು ಹವೆ - ಇದು ಅಲ್ಲಿಯ ಸಾಮಾನ್ಯ ವಾತಾವರಣ. ಮಳೆಗಾಲವಾಗಿದ್ದರಿಂದ ಕೊಡೆಯಿಲ್ಲದ ನಾನು ಎಂಥ ಸ್ಥಿತಿ ಎದುರಿಸಬೇಕೋ ಎಂದು ಅಂಜುತ್ತ, ಮೊಬೈಲ್‍ನಲ್ಲಿ ಹಾಕಿಕೊಂಡಿದ್ದ 'ಮುಂಗಾರು ಮಳೆಯೇ... ಏನು ನಿನ್ನ ಹನಿಗಳ ಲೀಲೆ...' ಹಾಡನ್ನು ಮನಸ್ಸಿನಲ್ಲೇ ಗುನುಗುತ್ತ ಪಯಣಿಸಿದೆ.

ಶಿವಮೊಗ್ಗದಲ್ಲಿ ನೋಡಿದರೆ ಧಾರಾಕಾರ ಮಳೆ. ಸಾಗರದ ಕಡೆ ಕಾರ್ಮೋಡ ಆವರಿಸಿತ್ತು. ಅಲ್ಲಿಯೇ ಸಂಜೆಯಾಗಿದ್ದರಿಂದ ತ್ಯಾಗರ್ತಿಯ ಕಡೆಗೆ ಹೋಗುವ ಲಾಸ್ಟ್ ಬಸ್ ಮಿಸ್ ಆಗುವುದು ಕೂಡ ಖಾತ್ರಿಯಾಗಿತ್ತು. ನನ್ನ ಬಳಿಯಿದ್ದಿದ್ದು ಎರಡೇ ಮಾರ್ಗ: ಸಾಗರದಿಂದ ಕೇಳಿದಷ್ಟು ದುಡ್ಡು ಕೊಟ್ಟು ರಿಕ್ಷಾ ಮಾಡಿಕೊಂಡು ಹೋಗಬೇಕು ಅಥವಾ ಶಿವಮೊಗ್ಗ-ಸಾಗರ ಮಧ್ಯೆ ಜೋಗಿನಗದ್ದೆಯ ಬಳಿ ಬಿ.ಹೆಚ್ ರಸ್ತೆಯಲ್ಲಿಳಿದು ಸುಮಾರು ೪ ಕಿಲೋಮೀಟರ್ ನಡೆದು ಮನೆ ತಲುಪಬೇಕು. ನಡೆಯುವಾಗ ಕಾಡುಕೋಣಗಳು ಭೇಟಿ ಕೊಟ್ಟರೆ ಇನ್ನೂ ಕಷ್ಟ. ಆದರೂ ಏಕೋ ಎರಡನೆಯದೇ ವಾಸಿ ಎನಿಸಿತು. ಶಿವಮೊಗ್ಗ ದಾಟಿದ ಮೇಲೆ ನನ್ನ ಸ್ಪೈಸ್ ಸಿಗ್ನಲ್ ರೀಚ್ ಆಗುವುದು, ಕತ್ರೀನಾ ಕೈಫ್ ಭರತನಾಟ್ಯ ಮಾಡುವುದು ಎರಡೂ ಒಂದೇ. ಮನೆಗೆ ತಿಳಿಸೋಣವೆಂದು ಶಿವಮೊಗ್ಗದಿಂದಲೇ ಫೋನ್ ಮಾಡಿದೆ. "ನೀವು ಕರೆ ಮಾಡಿರುವ ಚಂದಾದಾರರು ವ್ಯಾಪ್ತಿ ಪ್ರದೇಶದೊಳಗಿಲ್ಲ" ಎಂಬ ಧ್ವನಿ ಕೇಳಿ ಆಶ್ಚರ್ಯವಾಯಿತು. ಎಲಾ ಬಿಎಸ್ಸೆನ್ನೆಲ್ಲೆ! ಲ್ಯಾಂಡ್‍ಲೈನ್ ಕೂಡ ನಾಟ್ ರೀಚೆಬಲ್ಲಾ? ಒಟ್ಟಿನಲ್ಲಿ ನನ್ನ ಗ್ರಹಚಾರ ಆ ದಿನ ಸರಿ ಇರಲಿಲ್ಲ ಎಂಬುದು ಪದೇ ಪದೇ ಮನವರಿಕೆಯಾಗುತ್ತಿತ್ತು. ಏನಾದರಾಗಲಿ ಎಂದು ನಿರ್ಧರಿಸಿ, ಡ್ರೈವರ್ ಬಳಿ ಜೋಗಿನಗದ್ದೆ ಬಳಿ ಬಸ್ ನಿಲ್ಲಿಸುವಂತೆ ಹೇಳಿ ಅಲ್ಲೇ ಮುಂದಿನ ಅಡ್ಡ ಸೀಟಿನಲ್ಲಿ ಕುಳಿತೆ. ಬಸ್ ಹೊರಟಾಗ 'ಎಲ್ಲಿಗೆ ಪಯಣ... ಯಾವುದೋ ದಾರಿ... ಏಕಾಂಗಿ ಸಂಚಾರಿ...' ಎಂಬ ಎವರ್‌ಗ್ರೀನ್ ಚಿತ್ರಗೀತೆ ನನಗರಿವಿಲ್ಲದಂತೆ ನೆನಪಿಗೆ ಬಂದಿತ್ತು.

ವಿಘ್ನನಿವಾರಕನಿಗೆ ನನ್ನ ಕಷ್ಟ ಅರ್ಥವಾಗಿರಬೇಕು. ಮಳೆ ನಿಂತಿತ್ತು. ದೂರದೂರದವರೆಗೆ ಮೋಡದ ಸುಳಿವು ಕೂಡ ಇರಲಿಲ್ಲ. ಗಾಡಿಕೊಪ್ಪ ದಾಟುವಷ್ಟರಲ್ಲಿ ಮನೆಯಿಂದಲೇ ಫೋನ್ ಬಂತು. ಅಲ್ಲಿವರೆಗೆ ಸ್ಪೈಸ್ ಸಿಗ್ನಲ್ ಇದ್ದಿದ್ದು ಹಾಗೂ ಸ್ಪಷ್ಟವಾಗಿ ಕೇಳುತ್ತಿದ್ದುದು ಎರಡೂ ನನ್ನ ಕೋಟಿ ಜನ್ಮದ ಪುಣ್ಯದ ಫಲಗಳೇ ಇರಬೇಕು. ತಿಳಿಸಬೇಕಾಗಿದ್ದ ವಿಷಯಗಳನ್ನೆಲ್ಲ ತಿಳಿಸಿ ನೆಮ್ಮದಿಯಿಂದ ಕುಳಿತೆ. ಆರ್ದ್ರಾ ಮಳೆಯ ರುದ್ರಾವತಾರವಾಗಿ ಬಹುದಿನಗಳ ನಂತರ ಬಿದ್ದಿದ್ದ ಮಳೆಯಿಂದಾಗಿ ಎದ್ದಿದ್ದ ಮಣ್ಣಿನ ಹೊಲ-ಸುವಾಸನೆಯೊಂದಿಗೆ ಹೊಲಸು-ವಾಸನೆಯೊಂದು ಮೂಗಿಗೆ ಬಡಿಯಿತು. ಹಿಂದಿನ ದಿನ ಬಸ್ ಡಿಕ್ಕಿ ಹೊಡೆದು ಸತ್ತಿದ್ದ ೯ ದನ-ಕರುಗಳ ಕಳೇಬರಗಳ ವಾಸನೆ ಅದೆಂದು ಡ್ರೈವರ್ ಹೇಳಿದ. ಅವುಗಳ ಆತ್ಮಕ್ಕೆ ಶಾಂತಿ ಸಿಗಲೆಂದು ಪ್ರಾರ್ಥಿಸುವಷ್ಟರಲ್ಲಿ ಉಳ್ಳೂರು ಬಂದಿತು. ನನಗೆ ಬೇಕಾದ ಸ್ಟಾಪ್ ಬಳಿ ಸರಿಯಾಗಿ ನಿಲ್ಲಿಸದಿದ್ದರೆ ಕತ್ತಲೆಯಲ್ಲಿ ಎಲ್ಲೆಂದು ಹೋಗುವುದು? ಹಿಂದೊಮ್ಮೆ ಅಮ್ಮನ ಗಾಬರಿಯಿಂದಾಗಿ ಬನಕೊಪ್ಪ-ಹಾರೇಕೊಪ್ಪ ಸ್ಟಾಪ್ ಬಳಿಯೇ ಇಳಿದು ೧ ಕಿಲೋಮೀಟರ್ ಬೋನಸ್ ನಡೆದದ್ದು ಇನ್ನೂ ನೆನಪಿದೆ. ಹಾಗಾಗಿ ಕಣ್ಣಲ್ಲಿ ಕಣ್ಣಿಟ್ಟು ರಸ್ತೆ ನೋಡುತ್ತಾ ಕುಳಿತೆ.

ಏಳು ಗಂಟೆಯ ವೇಳೆ ನಾನು ಬಸ್ ಇಳಿಯುವಷ್ಟರಲ್ಲಿ ಅಪ್ಪ ಬೇಡ ಎಂದಿದ್ದರೂ ಬಂದಿದ್ದರು. ಮಳೆ ಬರುತ್ತಿರಲಿಲ್ಲವಾದ್ದರಿಂದ ಅವರು ತಂದಿದ್ದ ಕೊಡೆಯೇನೂ ಉಪಯೋಗಕ್ಕೆ ಬರದಿದ್ದರೂ ಕೈಯಲ್ಲಿದ್ದ ಬ್ಯಾಟರಿ ಸಹಾಯಕ್ಕೆ ಬಂತು. ವಾರದ ಹಿಂದಷ್ಟೇ ಹಿಡಿದಿದ್ದ ಕಾಳಿಂಗ ಸರ್ಪದ ಬಗ್ಗೆ, ಮನೆಯ ಹೊಸ ಲ್ಯಾಂಡ್‍ಲೈನ್ ಫೋನಿನ ಬಗ್ಗೆ - ಹೀಗೇ ಲೋಕಾಭಿರಾಮವಾಗಿ ಹರಟುತ್ತಾ ಮನೆ ಸೇರುವಷ್ಟರಲ್ಲಿ ರಾತ್ರಿ ಎಂಟಾಗಿತ್ತು...

ಗುರುವಾರ, ಸೆಪ್ಟೆಂಬರ್ 13, 2007

ಸೆಪ್ಟೆಂಬರ್ ೧೩ರ ಕರಾಳ ರಾತ್ರಿ!

ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...

ಪುಣೆ ಬೆಂಗಳೂರು ಹೆದ್ದಾರಿಯಲ್ಲಿ ಕಾರ್ ಡ್ರೈವ್ ಮಾಡುತ್ತಿದ್ದ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳಿದ. "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?" ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ..." ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ, ಕಾರನ್ನು ಹಿಂದಕ್ಕೆ ತಗೊಂಡ...

***

ಆ ಕರಾಳ ರಾತ್ರಿ ಘಟಿಸಿ, ಇವತ್ತಿಗೆ ಸರಿಯಾಗಿ ಒಂದ್ ವರ್ಷ ತುಂಬುತ್ತೆ. ಕೆಳ ದಿನಗಳ ಹಿಂದೆ ಭಟ್ಟ ಸಿಕ್ಕಿದ್ದ. ಆ ಕರಾಳ ರಾತ್ರಿಯ ನೆನಪುಗಳನ್ನು ಭಟ್ಟ ಮೆಲುಕು ಹಾಕುತ್ತಾ ಹೋದಂತೆಲ್ಲಾ, ನಾನೂ ಸಹ ಆ ಕರಾಳ ರಾತ್ರಿಯ ಪ್ರತ್ಯಕ್ಷ ದರ್ಶಿಯಾಗಿದ್ನೇನೋ ಅಂತ ಅನಿಸೋದಕ್ಕೆ ಶುರು ಆಯಿತು. ಕಳೆದ ವರ್ಷ ಸೆಪ್ಟೆಂಬರ್ ೧೩ರಂದು ನನ್ನ ಗೆಳೆಯರಾದಂತಹ ವಾಗೀಶ್ ಅಲಿಯಾಸ್ ವಾಗಿ, ರಾಜೇಶ್ ಅಲಿಯಾಸ ರಾಜು ಯಾವುದೋ ಕೆಲಸದ ಮೇಲೆ ಬೆಂಗಳೂರಿಗೆ ಹೋಗಿದ್ರು. ಕಾಕತಾಳಿಯವೆನೋ ಎಂಬಂತೆ ಭರತ್ ಅಲಿಯಾಸ್ ಭಟ್ಟನೂ ಅವತ್ತು ಬೆಂಗಳೊರಿನಲ್ಲೆ ಇದ್ದ. ವಾಗಿ ಹಾಗು ರಾಜು ೧೩ರರ ರಾತ್ರಿನೇ ದಾವಣಗೆರೆಗೆ ವಾಪಸ್ ಬರೋದು ಅಂತ ಡಿಸೈಡ್ ಆಗಿತ್ತು. ಎಂದಿನಂತೆ ವಾಗಿ ಭಟ್ಟನಿಗೆ ಫೋನ್ ಮಿಲಾಯಿಸಿದ. ಅವರ ನಡುವೆ ನಡೆದ ಫೋನಾಯಣದ ಫಲಶ್ರುತಿಯೇ, ಮೂವರೂ ಸೇರಿ ವಾಗಿಯ ಮಾರುತಿ ೮೦೦ ಕಾರಿನಲ್ಲಿ ದಾವಣಗೆರೆಗೆ ರಿಟರ್ನ್ ಆಗಿದ್ದು!

ಸಮಯ ಸುಮಾರು ರಾತ್ರಿಯ ೧೦:೩೦... ಮೆಜೆಸ್ಟಿಕ್ ಬಳಿಯ ಹೋಟೆಲಿನಲ್ಲಿ...

ವಾಗಿ ಹಾಗು ರಾಜು ಮೆಜೆಸ್ಟಿಕ್ ಬಳಿಯಿರುವ ಕಾಮತ್ ಹೋಟೆಲಿನಲ್ಲಿ ರಾತ್ರಿಯ ಫುಲ್ ಮೀಲ್ಸ್ ಮುಗಿಸಿ ವಾಗಿಯ ಬಿಳೀ ಮಾರುತಿ ಕಾರಿನಲ್ಲಿ ಕುಳಿತು ಸೀದಾ ಸಿಟಿ ರೈಲ್ವೇ ನಿಲ್ದಾಣದ ಕಡೆ ತೆರಳಿದರು. ರಾಜು ಕಾರಿನಲ್ಲಿದ್ದ ಎಫ್.ಎಂ. ಆನ್ ಮಾಡಲು ವಾಗಿಗೆ ಹೇಳಿದ. ಅದರಲ್ಲಿ ಬರುತ್ತಿದ್ದ ಯಾವುದೋ ಒಂದು ಸಾಂಗ್ ಕೆಳ್ತಾ, ಗಿಜಿ ಗಿಜಿ ಎಂದು ಗುಯ್ಗುಡುವ ಟ್ರಾಫಿಕನ್ನು ದಾಟಿ ಕೊನೆಗೂ ಸಿಟಿ ರೈಲ್ವೆ ನಿಲ್ದಾಣ ತಲುಪಿದರು. ಕೊಟ್ಟ ಮಾತಿಗೆ ತಪ್ಪದವನಂತೆ ಅಲ್ಲಿಯೇ ಎಂಟ್ರೆನ್ಸ್ ಬಳಿ ಭಟ್ಟನು ಇವರಿಗಾಗಿ ಕಾಯುತ್ತಿದ್ದದ್ದು ಕಂಡುಬಂತು. ಭಟ್ಟನನ್ನು ಹಿಂಬದಿಯ ಸೀಟ್ನಲ್ಲಿ ಕುಂದ್ರುಸ್ಕಂಡ ಇವರು, ಸೀದಾ ದಾವಣಗೆರೆಯ ಕಡೆಗೆ ತಮ್ಮ ಪಯಣ ಬೆಳೆಸಿದರು. ಹೈವೇ ರೀಚ್ ಆಗೋ ಹೋತ್ತಿಗೆ, ಸ್ವಲ್ಪ ಹೆವೀಯಾಗೇ ಊಟ ಮಾಡಿದ್ದ ರಾಜೂಗೆ ನಿದ್ರಾದೇವಿಯು, "ಬಾ ನನ್ನನ್ನು ಆಲಂಗಿಸೂ..." ಎಂದು ಕರೆಯುತ್ತಿದ್ದಳು. ಕಾರಿನಲ್ಲಿ ಆಗಿಂದಲೂ ಒಂದೇ ಸಮನೆ ಹೊಡ್ಕೋತಿದ್ದ ಎಫ್.ಎಂ ಅನ್ನು ಬಂದ್ ಮಾಡಲು ವಾಗಿಗೆ ಹೇಳಿ, ಅವನ ಉತ್ತರಕ್ಕೂ ಕಾಯದೆ ನಿದ್ರೆಗೆ ಜಾರಿದ, ಆ ಭೂಪ! ಭಟ್ಟನಿಗೆ ಅದೇಕೋ ಏನೋ ಅವತ್ತು ಎಷ್ಟೇ ಟ್ರೈ ಮಾಡಿದ್ರೂ ನಿದ್ದೇನೇ ಬರ್ತಾ ಇಲ್ಲಾ. ಅವನು ಎಷ್ಟೇ ಮಗ್ಗಲು ಬದಲಾಯಿಸಿದರೂ ನಿದ್ರಾ ದೇವಿ ತನ್ನ ಕೃಪೆ ತೋರಲೇ ಇಲ್ಲ! ಇವನು ಪಡುತಿದ್ದ ಎಲ್ಲಾ ಕಷ್ಟಗಳನ್ನು ಅದುವರೆಗೂ ಕಾರಿನ ಕನ್ನಡಿಯಲ್ಲಿ ನೋಡುತಿದ್ದ ವಾಗಿ, "ಲೇ ಯಾಕ್ ಅಷ್ಟೋಂದು ಒದ್ದಾಡ್ತಾ ಇದೀಯಾ... ಯಾವ್ದಾದ್ರು ಒಳೆ ಸಾಂಗ್ ಹಾಕ್ತೀನಿ ತಡೀ..." ಎಂದು, ಕಾರಿನಲಿದ್ದ ಸಿ.ಡಿ. ಒಂದನ್ನು ತೆಗೆದು ತನ್ನ ಮ್ಯುಸಿಕ್ ಸಿಸ್ಟಂನೊಳಗೆ ಜಾರಿಸಿದನು. ಎಲ್ಲಿ ರಾಜು ಮತ್ತೆ ಎದ್ದು ಬಿಡ್ತಾನೋ ಅನ್ನೋ ಹೆದರಿಕೆಯಿಂದ ಸ್ವಲ್ಪ ಕೆಳ ಧ್ವನಿಯಲ್ಲಿ ಇಬ್ಬರೂ ಹಾಡಿನ ಮಜಾ ತಗೊಳೋಕೆ ಶುರು ಹಚ್ಚಿದ್ರು. ಇದರಲ್ಲಿ ವಾಗಿಯ ಸ್ವಾರ್ಥವೂ ಇತ್ತು ಬಿಡ್ರಿ... ಹಾಡ್ ಹಾಕಿರೋದ್ರಿಂದ ಭಟ್ಟ ಎಚ್ಚರವಾಗಿರ್ತಾನೆ. ಸೋ... ನನ್ಗೆ ಡ್ರೈವ್ ಮಾಡೋವಾಗ ಒಳ್ಳೆ ಸಾಥ್ ಕೊಡ್ತಾನೆ ಅನ್ನೋ ಒಂದು ಚಿಕ್ಕ ಸ್ವಾರ್ಥ... ಅಷ್ಟೆ!

ರಾತ್ರಿಯ ಸಮಯ ಸುಮಾರು ೧೧:೪೫... ಶಿರಾದಿಂದ ಸ್ವಲ್ಪ ದೂರದ ಬಳಿ...

ಮ್ಯುಸಿಕ್ ಸಿಸ್ಟಂನಿಂದ ಮೆಲು ಧ್ವನಿಯಲ್ಲಿ ಕೇಳಿಬರುತ್ತಿದ್ದ ’ಡಾನ್" ಚಿತ್ರದ, "... ಮುಝ್ಕೊ ಪೆಹೆಚಾನುಲೋ... ಮೆ ಹೂ ಡಾನ್..." ಕೆಳುತ್ತಾ, ಅದು ಇದು ಅಂತ ಶುಂಟಿ ಸುಡುಗಾಡು ವಿಷಯಗಳ ಬಗ್ಗೆ ಹರಟುತ್ತಾ ಹೊರಟಿದ್ದರು. ಶಿರಾದಿಂದ ಸ್ವಲ್ಪ ದೂರದ ಬಳಿ ಬರುತ್ತಿದ್ದಂತೆ ಅವರಿಗೆ ಯಾರೋ ತಮ್ಮ ಕಾರಿಗೆ ಕೈ ಮಾಡುತ್ತಿರುವುದು ಕಂಡು ಬಂತು. ಕಾರನ್ನು ಹಾಗೆ ಹತ್ರಕ್ಕೆ ತಗೋತಿದ್ದ ಹಾಗೆ ತಮ್ಮ ಕಾರಿಗೆ ಕೈ ಮಾಡಿದ್ದು ಒಬ್ಬ ಮುದುಕ ಎಂದು ತಿಳಿದು ಬಂತು. ಕುರುಚಲು ಗಡ್ದ, ಒಗೆತವೇ ಕಾಣದ ಬಿಳಿ(?) ಬಣ್ಣದ ಕುರ್ತಾ ಹಾಕಿದ್ದ ಅವನು ಸುಮಾರು ೬೦ ವರ್ಷದವನಂತೆ ಕಾಣುತಿದ್ದ. ತನ್ನ ಬಳಿಯಿದ್ದ ಒಂದು ಕಿಟ್ ಬ್ಯಾಗನ್ನು ರಸ್ತೆಗೆ ರೋಡ್ ಹಂಪಿನಂತೆ ಅಡ್ಡ ಇಟ್ಟು, "ದಯವಿಟ್ಟು ಯಾರಾದ್ರು ನಂಗೆ ಡ್ರಾಪ್ ಕೊಡ್ರಪ್ಪಾ..." ಅನ್ನೋ ರೀತೀಲಿ ಲಿಫ್ಟ್ ಕೇಳ್ತಾ ಇದ್ದ.

ವಾಗಿ ಕಾರನ್ನು ಗೊಣಗುತ್ತಲೇ ಅಜ್ಜನ ಬಳಿ ನಿಲ್ಲಿಸಿದ. ಕಾರು ನಿಲ್ಲಿಸುವುದನ್ನೇ ಕಾಯ್ತಾಯಿದ್ದ ಆ ಮುದುಕ, "ಬೇಟಾ ನನ್ಗೆ ಸ್ವಲ್ಪ ದೂರ್ದಲ್ಲಿ ಇಳ್ಕೊ ಬೇಕಿದೆ... ಥೋಡ ಡ್ರಾಪ್ ಕೊಡಿ..." ಅಂತ ಅಂಗಲಾಚಿದ. ತಾವು ಡ್ರೈವ್ ಮಾಡ್ತಾ ಇರೋದು ಹೈವೇನಲ್ಲಿ, ಅದೂ ರಾತ್ರಿ ಹೊತ್ನಲ್ಲಾದ್ದರಿಂದ್ದ, ಗುರುತು ಪರಿಚಯ ಇರದವರಿಗೆ ಡ್ರಾಪ್ ಕೊಡೋದು ಅಷ್ಟೋಂದು ಸೇಫ್ ಅಲ್ಲ ಅಂತ ವಾಗಿ ಕಾರನ್ನು ಮುಂದಕ್ಕೆ ಡ್ರೈವ್ ಮಾಡ್ಕೊಂಡು ಹೊರಟ. ಆಗ ಭಟ್ಟ ವಾಗಿಗೆ, "ಲೇ ನೀನ್ ಸ್ವಲ್ಪ ಓವರ್ ಕಾಶಿಯಸ್ಸಾಗಿ ಬಿಹೇವ್ ಮಾಡ್ದಿ ಅನ್ನುಸ್ತಾ ಐತಲೆ ನನಿಗೆ..." ಅಂದ. ಆಗ ವಾಗಿ ಹಿಂಬದಿಯ ಸೀಟಿನಲ್ಲಿದ್ದ ಭಟ್ಟನಿಗೆ ಹೇಳ್ದ, "ಲೇ ಆ ಅಜ್ಜ ಯಾರೋ ಏನೋ ಒಂದೊ ಗೊತ್ತಿಲ್ಲಾ ಮಗಾ... ಕಾರ್ನ್ಯಾಗ್ ಕುಂದ್ರುಸ್ಕೊಳೊದ್ ಬ್ಯಾಡ್ಲೆ... ಸುಮ್ನೆ ರಿಸ್ಕ್ ಯಾಕೆ?". ಭಟ್ಟನಿಗೆ ಅಜ್ಜನ ಮೇಲೆ ಅದ್ಯಾವಾಗ್ ಕನಿಕರ ಮೂಡಿತೊ ಕಾಣೆ, ಹಿಡಿದ ಪಟ್ಟು ಬಿಡ್ಲೆವಲ್ಲಾ. "ಲೇ ವಾಗಿ ಪಾಪ ಅಜ್ಜ ಒಬ್ನೆ ಇದಾನ್ಲೆ... ರಾತ್ರಿ ಟೈಮ್ ಬೇರೆ... ಎನೋ ಇಲ್ಲೆ ಸ್ವಲ್ಪ ದೂರದ್ ಮಟ ಡ್ರಾಪ್ ಕೇಳ್ತಾಯಿದ್ದಾನೆ.. ಡ್ರಾಪ್ ಮಾಡೋದ್ರಾಗ್ ಏನೂ ಪ್ರಾಬ್ಲಮ್ ಆಗಂಗಿಲ್ಲ... ನಾ ಹೇಳದ್ ಕೇಳು, ಆ ಅಜ್ಜಂಗೆ ಡ್ರಾಪ್ ಕೊಡೋಣ...". ಒಲ್ಲದ ಮನಸ್ಸಿನಿಂದ ವಾಗಿ, ಭಟ್ಟನ ಅಧಿಕ ಪ್ರಸಂಗತನಕ್ಕೆ ಮನಸ್ಸಿನಲ್ಲೇ ಹಿಡಿ ಶಾಪ ಹಾಕಿ ಕಾರನ್ನು ಹಿಂದ್ದಕ್ಕೆ ತಗೊಂಡ...

ಪುನಃ ರಿಟರ್ನ್ ಆದ ಕಾರನ್ನು ಕಂಡ ಮುದುಕ ಸ್ವಲ್ಪ ಚಿಯರ್ ಅಪ್ ಆದವನಂತೆ ಕಂಡು ಬಂದ. ಈ ಬಾರಿ ಭಟ್ಟ ಹಿಂಬದಿಯ ಕಾರ್ ಡೋರನ್ನು ತೆಗೆದು, "ಕ್ಯಾ ಮಿಯಾ ಕಿದರ್ ಜಾನಾ ಹೈ ಆಪ್ಕೋ?" ಎಂದು ಕೇಳಿದ. "ಯಹೀ ಪಾಸ್ ಮೇ ಹೀ ಉತರ್ ಜಾವೂಂಗಾ" ಅಂತ ಹೇಳ್ದೋನೇ, ತನ್ನ ಕಿಟ್ ಬ್ಯಾಗನ್ನು ಬ್ಯಾಕ್ ಸೀಟ್ನಲ್ಲಿ ಇಟ್ಟು ತಾನೂ ಕಾರೊಳಗೆ ಸೇರ್ಕೊಂಡ್ಬಿಟ್ಟ. ಇವೆಲ್ಲದಕ್ಕೂ ನನ್ಗೂ ಸಂಬಂಧವೇ ಇಲ್ಲವೇನೋ ಎಂಬಂತೆ ರಾಜು ಮುಂಬದಿಯ ಸೀಟಿನಲ್ಲಿ ಡೀಪ್ ಸ್ಲೀಪ್ಗೆ ರಿಟೈರ್ ಆಗಿದ್ದ!

ರಾತ್ರಿಯ ಸಮಯ ಸುಮಾರು ೧೨:೪೫... ಹೈವೇದಾಗ್ ಎಲ್ಲೋ...

ವಾಗಿಗೋ ಭಟ್ಟನ ಮೇಲೆ ಎಲ್ಲಿಲ್ಲದ ಕೋಪ. ಅದನ್ನ ಹೇಳ್ಕೋಳೋ ಹಂಗಿಲ್ಲ ಬಿಡಂಗೂ ಇಲ್ಲದಂತಹ ಧರ್ಮ ಸಂಕಟ! ಮುದುಕ ಆಗ್ ಇಳೀತಾನೆ ಈಗ್ ಇಳೀತಾನೆ ಅಂತ ಡ್ರೈವ್ ಮಾಡ್ತಾನೆ ಇದ್ದ ವಾಗಿ... ಸುಮಾರು ೧ ಘಂಟೆಯ ನಂತರ ವಾಗಿಗೆ ತಡ್ಕೋಳೊಕೆ ಆಗ್ಲೇ ಇಲ್ಲ. ಅವನು ಭಟ್ಟನನ್ನು ನೋಡಿ, "ಲೇ ಅವನು ಯಾವಾಗ ಇಳೀತಾನ್ ಕೇಳಲೇ?" ಅಂತ, ತನ್ನೋಳಗಿದ್ದ ಅಸಮಾಧಾನವನ್ನೆಲ್ಲಾ ಒಮ್ಮೆಲೆ ಹೊರಹಾಕಿದ. ಭಟ್ಟ ಅಜನ್ನನ್ನು ಕೇಳಿದ,"ಕ್ಯಾ ಮಿಯಾ ಆಪ್ ಥೋಡಿ ದೇರ್ ಕರ್ಕೋ ಬೋಲೆ... ಲೇಕಿನ್ ೧ ಘಂಟಾ ಹೋಗಯಾ? ಠೀಕ್ಸೇ ಬತಾವ್ ಆಪ್ಕೋ ಕಿದರ್ ಉತರ್ನಾ ಹೈ..." ಎಂದು ಸ್ವಲ್ಪ ಜೋರಾಗಿಯೇ ಕೇಳಿದ. ಅದಕ್ಕೆ ಅಜ್ಜ, "ಬಸ್ ಥೋಡಿ ದೇರ್ ಔರ್ ಬೇಟಾ... ಉಸ್ಕೆ ಬಾದ್ ಲೆಫ್ಟ್ ಮೇ ಲೇಲೋ..." ಅಂತ ಹೇಳಿದ.

ರಾತ್ರಿಯ ಸಮಯ ಸುಮಾರು ೧:೧೦... ಮಡ್ ರೋಡ್ ಕಡೆ ಹೋಗೊ ಡೀವಿಯೇಶನ್ ಬಳಿ...

ಆದರೆ ಈ ಬಾರಿ ಅಜ್ಜ ಹೇಳಿದ್ದು ನಿಜವಾಗಿತ್ತು. ಸುಮಾರು ೨೫ ನಿಮಿಷ ಡ್ರೈವ್ ಮಾಡಿದ ಬಳಿಕ ಹೈವೆಯ ಬದಿಯಲ್ಲಿ ಒಂದು ಮಡ್ ರೋಡ್ ಕಂಡು ಬಂತು. ಕೂಡಲೆ ವಾಗಿ ಭಟ್ಟಂಗೆ ಕೇಳ್ದಾ, "ಇದೇ ಏನ್ಲೇ ಆ ರೋಡ್?" ಆಗ ಅಜ್ಜ ಮಧ್ಯ ಬಾಯಿ ಹಾಕಿ, "ಯಹೀ ಲೆಫ್ಟ್ ಮೆ ಲೋ ಬೇಟಾ..." ಎಂದ. ವಾಗಿಯ ಮುಖದಲ್ಲಿ ನಗು ಪುನಃ ಮರಳುವ ಸೂಚನೆ ಕಂಡು ಬಂದವು. ಕೊನೆಗೂ ಈ ಅಜ್ಜನ್ನಿಂದ ಮುಕ್ತಿ ಸಿಗ್ತಲ್ಲಾ ಅಂತ ಖುಶಿ ಖುಶಿಯಿಂದಲೇ ಅಜ್ಜ ಹೇಳಿದ ಮಾರ್ಗವಾಗಿ ಗಾಡಿ ಡ್ರೈವ್ ಮಾಡ್ತಾ ಹೋದ. ಹಿಂಬದಿಯ ಸೀಟಿನಲ್ಲಿ ಕೂತಿದ್ದ ಭಟ್ಟ ಇದ್ದಕಿದ್ದ ಹಾಗೆ ವಾಗಿಗೆ ಹೇಳ್ದ, "ಎನ್ಲೆ ಇದು... ಇಲ್ಲಿ ಒಂದೇ ಒಂದು ಮನೇನೂ ಇಲ್ಲ. ಈ ಅಜ್ಜ ಏನ್ ಕಾಡಿನಲ್ಲಿ ಇರ್ತಾನೋ ಹೆಂಗೆ?" ಅಂತ ಕೇಳ್ದಾಗ್ಲೆ, ವಾಗಿಗೆ ತೋಚಿದ್ದು ತಾನೆಲ್ಲಿ ಡ್ರೈವ್ ಮಡ್ಕೋಂಡು ಬರ್ತಾ ಇದ್ದೀನಿ ಅಂತ... ಅಷ್ಟೋತ್ತಿಗಾಗ್ಲೆ ಹೈವೇಯಿಂದ ಸುಮಾರು ದೂರ ಬಂದಾಗಿತ್ತು. ಅವರು ಹೋದಂತಹ ರೋಡ್‍ನ ಆಜು ಬಾಜುಬಲ್ಲಿ ಕಗ್ಗತ್ತಲು. ಅಲ್ಲಿ ಯಾರು ತಲೆ ಹೊಡ್ದ್ರೂ ಗೊತ್ತಾಗಲ್ಲ, ಅಂಥ ಜಾಗ ಅದು! ಮೊದಲ ಬಾರಿಗೆ ಭಟ್ಟನಿಗೆ, ಆ ಅಜ್ಜನಿಗೆ ನಾವು ಯಾಕಾದ್ರು ಡ್ರಾಪ್ ಕೊಡೋಕೆ ಒಪ್ಪಿಕೊಂಡೆವು ಅಂತ ಅನ್ನಿಸೋದಕ್ಕೆ ಶುರುವಾಯಿತು. ಆದರೆ ಅದನ್ನು ಬಾಯಿ ಬಿಟ್ಟು ಹೇಳಂಗಿಲ್ಲ, ಯಾಕಂದ್ರೆ ಅವ್ನೆ ಪಾಪ ಹೋಗ್ಲಿ ಬಿಡು ಅಂತ ಆ ಅಜ್ಜನನ್ನು ಹತ್ಸ್ಕೊಂಡಿದ್ದು! ಮೊದಲ ಬಾರಿಗೆ ಅವರಿಬ್ಬರಿಗೂ ಅಜ್ಜನ ಮೇಲೆ ಸಂದೇಹ ಮೂಡಲು ಶುರುವಾಯಿತು. ಮನಸ್ಸಿನ ಮೂಲೆಯಲ್ಲೆಲ್ಲೋ ಭಯ ಚಿಗುರೊಡೆಯೋದಕ್ಕೆ ಪ್ರಾರಂಭವಾಯಿತು. ಇಷ್ಟೊತ್ತೂ ಹೋಡ್ಕೊತಾ ಇದ್ದ ಮ್ಯೂಸಿಕ್ ಸಿಸ್ಟಮ್ ಈಗ ಏಕ್ ದಮ್ ಬಂದ್! ಇಬ್ಬರಿಗೂ ತಮ್ಮ ಎದೆಯ ಬಡಿತ ಸ್ಪಷ್ಟವಾಗಿ ಕೇಳಿಸ್ತಾ ಇತ್ತು!

ರಾತ್ರಿಯ ಸಮಯ ಸುಮಾರು ೧:೨೫... ಕಗ್ಗತ್ತಲೇ ಇರುವಂತಹ ನಿರ್ಜನ ಪ್ರದೇಶ...

ಯಾರೊಬ್ಬ ನರಪಿಳ್ಳೆಯೂ ಸುಳಿಯದಂತಹ ದಟ್ಟ ಕಾಡಿನಲ್ಲಿ ಚಲಿಸುತ್ತಿರುವಂತಹ ಅನುಭವದ ಮಧ್ಯೆಯೇ ಆ ಅಜ್ಜ ಇವರ ಮೌನವನ್ನು ಮುರಿದ. "ಆ ಗಯಾ ಬೇಟಾ... ವಹಾ ರೈಟ್ ಮೇ ಜೋ ಘರ್ ಹೈನಾ... ವಹೀ" ಅಂತಾ ತನ್ನ ಬೆರಳಿನಿಂದ ತೋರಿಸ್ತಾ ಹೇಳಿದ. ಅಜ್ಜನು ತೋರಿಸಿದ ಮನೆಯು ಒಂದು ಹಳೆಯ ಕಾಲದ ಹಂಚಿನ ಮನೆಯಂತೆ ಕಂಡು ಬಂತು. ಅಜ್ಜನ ಮನೆಯ ಮುಂದೆಯೂ ಘೊರ ಕಗ್ಗತ್ತಲು. ಬಹುಶಃ ಅಲ್ಲಿ ಅಜ್ಜನನ್ನು ಬಿಟ್ಟರ್‍ಎ ಬೇರಾರೂ ವಾಸ ಮಾಡ್ತಾ ಇರ್ಲಿಲ್ಲಾ ಅಂತ ಯಾರು ಬೇಕಾದ್ರು ಸರ್ಟಿಫಿಕೇಟ್ ಕೊಡ್ಬೋದಿತ್ತು. ಅಜ್ಜನ ಮನೆಯ ಮುಂದೆ ಕೇವಲ ಒಂದು ಗಾಡಿ ಹೋಗೋ ಅಷ್ಟು ಜಾಗ ಮಾತ್ರ ಇತ್ತು. ವಾಗಿ ಗಾಡಿಯನ್ನು ಸೀದಾ ಅಜ್ಜನ ಮನೆಯ ಮುಂದೆ ನಿಲ್ಲಿಸಿ, "ಲೇ ಅಜ್ಜಂಗೆ ಬಡ ಬಡ ಇಳ್ಕೋ ಅಂತ ಹೇಳು..." ಎಂದು ಭಟ್ಟನಿಗೆ ಆರ್ಡರ್ ಮಾಡುವ ಧ್ವನಿಯಲ್ಲಿ ಹೇಳಿದ. ಇವನ ಮಾತು ಅರ್ಥ ಮಾಡ್ಕೊಂಡೋನ ಹಾಗೆ, ಸರ ಸರನೆ ಕಾರಿನಿಂದ ಇಳಿದು ಮನೆಯ ಕಡೆಗೆ ಹೋದ. ಕಾರಿನ ಬೆಳುಕಿನಲ್ಲಿ, ಅಜ್ಜನು ಆ ಮನೆಯ ಮರದ ಗೇಟ್ ತೆಗೆದು ಒಳ ಹೋಗಿದ್ದು ಸ್ಪಷ್ಟವಾಗಿ ಕಂಡಿತು. ಇದ್ದಕ್ಕಿದ್ದಂತೆ ವಾಗಿ ಜೋರಾಗಿ, ಸ್ವಲ್ಪ ಸಿಟ್ಟಿನಿಂದಾನೇ ಭಟ್ಟನಿಗೆ ಹೇಳ್ದ, "ಲೇ ಅಜ್ಜ ಬ್ಯಾಗ್ ಇಲ್ಲೇ ಬಿಟ್ಟ್ ಹೋದ್ನಲ್ಲೋ... ಕರಿಯಲೇ ಅವನ್ನಾ..." ಎಂದ. ಅದಕ್ಕೆ ಭಟ್ಟ, ಅದ್ರಲೇನಿದೆ ದೊಡ್ಡ ವಿಷಯ ಎಂಬಂತೆ, "ಲೇ.., ಮೋಸ್ಟ್ಲಿ ಅಜ್ಜ ಲೈಟ್ ಆನ್ ಮಾಡ್ ಬರಕ್ಕೆ ಹೋಗಿರಬಹುದು... ಬರ್ತಾನ್ ಬಿಡು ಟೆನ್ಷನ್ ಯಾಕೆ ಮಾಡ್ಕೊತೀಯಾ?" ಅಂತ ತನ್ನ ಸೋಮಾರಿತನವನ್ನು ಮರೆಮಾಚಲು ಕುಂಟು ನೆಪ ಹೇಳಿ ಬಿಟ್ಟ. ಅದಕ್ಕೆ ವಾಗಿ ನೀಡಿದ ಉತ್ತರ ಕೇಳಿ ಭಟ್ಟನಲ್ಲಿ ಇದ್ದ ಅಲ್ಪ ಸ್ವಲ್ಪ ಧೈರ್ಯಾನೂ ಮಾಯವಾಯಿತು. ವಾಗಿ ಹೇಳ್ದ, "ಲೇ... ಅವಾಗ್ಲಿಂದ ನಾನೆ ಡ್ರೈವ್ ಮಾಡ್ಕೋಂಡ್ ಬರ್ತಾ ಇದೀನೀ, ಒಂದೇ ಒಂದು ಎಲೆಕ್ಟ್ರಿಕ್ ಕಂಬಾನೂ ಕಣ್ಣಿಗೆ ಬಿದ್ದಿಲ್ಲಾ... ಲೈಟ್ ಆನ್ ಮಾಡೋಕ್ಕೆ ಹೋದ ಅಂತೀಯಲ್ಲಾ... ನಿನಿಗ್ ಏನ್ ಹೇಳ್ಲಿ?" ಎಂದ. ಭಟ್ಟನಿಗೆ ಆಗ ಏನ್ ಹೇಳ್ಬೇಕೋ ತಿಳೀಲೇ ಇಲ್ಲ. ಆದ್ರೂ ಅಜ್ಜನ ಮೇಲೆ ಮಹಾ ನಂಬಿಕೆ ಉಳ್ಳವನಂತೆ, "ವಾಗಿ... ಅಜ್ಜ ಏನ್ ಓಡಿ ಹೋಗಲ್ಲ... ಬರ್ತಾನೆ ಬಿಡ್ಲೇ... ನೋಡಪ್ಪಾ ೫ ಐದ್ ನಿಮಿಷ ವೇಟ್ ಮಾಡೋಣ... ಬಂದಿಲ್ಲಾ ಅಂದ್ರೆ... ಮುಂದೆ ಏನ್ ಮಾಡಬೇಕೂ ಅಂತ ನೋಡೋಣ..." ಎಂದು ಹೇಳ್ದ. ಭಟ್ಟನ ಮಾತು ಕೆಲ್ಸ ಮಾಡ್ತು ಅಂತ ಕಾಣುತ್ತೆ, ವಾಗಿ ಸ್ವಲ್ಪ ಹೊತ್ತು ಕಾಯೋದಕ್ಕೆ ಒಪ್ಕೊಂಡ.

ರಾತ್ರಿಯ ಸಮಯ ಸುಮಾರು ೧:೩೫... ಅಜ್ಜನ ಮನೆಯ ಮುಂದೆ...

೫ ನಿಮಿಷ ಆಯಿತು, ೧೦ ನಿಮಿಷ ಆಯಿತು ಆ ಅಜ್ಜ ಹೋರ ಬರುವ ಲಕ್ಷಣಗಳೇ ಕಾಣ್ತಾಯಿಲ್ಲಾ... ವಾಗಿಗೆ ಪಿತ್ತ ನೆತ್ತಿಗೇರಿತು... ಬಹಳ ಕೋಪದಿಂದಲೇ ಭಟ್ಟನಿಗೆ, "ಲೇ ಅಜ್ಜ ಯಾಕೋ ಹೋರಗೆ ಬರುವಹಾಗೆ ಕಾಣ್ತಾ ಇಲ್ಲ... ನಾನ್ ಎಷ್ಟು ಬ್ಯಾಡ ಬ್ಯಾಡ ಅಂದ್ರೂ ನೀನೇ ಅವನನ್ನ ಹತ್ತುಸ್ಕೋ ಅಂದ್ದಿದ್ದು... ಅದೇನ್ ಮಾಡ್ತೀಯೋ ಗೊತ್ತಿಲ್ಲ... ಹೋಗಿ ಅಜ್ಜ ಎಲ್ಲಿದ್ದಾನೆ ಅಂತ ನೋಡ್ಕೋಂಡ್ ಬಾ.." ಅಂತ ಹೇಳಿದ. ಆಗಲೇ ಫ್ಯೂಸ್ ಔಟಾಗಿದ್ದ ಭಟ್ಟ ವಿಧಿ ಇಲ್ದೆ, ಒಲ್ಲದ ಮನಸ್ಸಿನಿಂದ ಕಾರಿಂದ ಇಳಿದ... ಕಾರಿನ ಹೆಡ್ ಲೈಟ್ ಚೆಲ್ಲುತ್ತಿದ್ದ ಬೆಳಕಿನಲ್ಲೇ ಅವನೂ ಸಹ, "ನಾನ್ ಯಾಕಾದ್ರೂ ಆ ಅಜ್ಜನಿಗೆ ಲಿಫ್ಟ್ ಕೊಡ್ಸಿದ್ನೋ..." ಅಂತ ಗೊಣುಗುತ್ತಾ, ಅಜ್ಜನ ಮನೆಯ ಗೇಟ್ ತೆಗೆದು ಒಳಕ್ಕೆ ಹೋದ. ಕಾರು ಕೇವಲ ೧೦ ಅಡಿಯ ದೂರದಲ್ಲಿಯೇ ಪಾರ್ಕ್ ಆಗಿದ್ದರಿಂದ, ಭಟ್ಟನಿಗೆ ಏನೋ ಒಂದು ರೀತಿಯ ಧೈರ್ಯ. ಅಕಸ್ಮತ್ ಏನಾದ್ರೂ ಎಡ್ವಟ್ಟಾದ್ರೆ, ವಾಗಿ ಹೆಲ್ಪಿಗೆ ಬಂದೇ ಬರ್ತಾನೇ ಅನ್ನೋ ಖಾತ್ರಿ!

ಇಷ್ಟೊತ್ತಿಗೆ ಅಜ್ಜ ಕಡೆ ಪಕ್ಷ ಸೀಮೇ ಎಣ್ಣೆಯ ಬುಡ್ಡಿಯನ್ನಾದ್ರೂ ಹಚ್ಚಿರ್ ಬೋದು ಅಂತ ಎಣಿಸಿ, ಭಟ್ಟ, "ಮಿಯಾ... ಆಪ್ ಕಿದರ್ ಹೈ... ಘರ್ ಮೇ ಕೊಯಿ ಹೈ..." ಅಂತ ಕೊಂಚ ಹಿಂಜರಿಕೆಯಿಂದಲೇ ಆವಾಜ಼್ ಹಾಕ್ತ ಇದ್ದ... ಆದರೆ ಮನೆಯೊಳಗಿಂದ ಒಬ್ಬರೂ ಕಮಕ್ ಕಿಮಕ್ ಅನ್ನಲಿಲ್ಲ... ಭಟ್ಟ ಹಾಗೇ ಒಮ್ಮೆ ಕಾರಿನೆಡೆಗೆ ತಿರುಗಿ, "ಲೇ... ಏನ್ ಮಾಡ್ಲಿ? ಅಜ್ಜ ರಿಪ್ಲೈ ಮಾಡ್ತಾ ಇಲ್ಲ..." ಅಂತ ತನ್ನ ನಿಸ್ಸಹಾಯಕ ಸ್ಥಿತಿ ಸೂಚಿಸಿದ. ಆಗ ವಾಗಿ, "ಲೇ... ಅಲ್ಲೇ ಒಳಗಡೆ ಇರ್ತಾನೇ, ಸ್ವಲ್ಪ ಜೋರಾಗಿ ಬಾಗ್ಲಾ ಬಡಿ... " ಅಂದ. ವಾಗಿಯ ಮಾತನ್ನು ತಳ್ಳಿ ಹಾಕುವ ಪ್ರಶ್ನೆಯೇ ಇರಲಿಲ್ಲ.

ತನ್ನ ಬಳಿ ಇದ್ದ ನೋಕಿಯಾ ೧೧೧೨ ಹ್ಯಾಂಡ್ ಸೆಟ್ಟಿನಿಂದ ಚೆಲ್ಲುತ್ತಿದ್ದ ಅಲ್ಪ ಸ್ವಲ್ಪ ಬೆಳುಕಿನಲ್ಲೇ, ಉಳಿದ ಪಳಿದ ಎಲ್ಲಾ ಧೈರ್ಯವನ್ನೂ ಒಟ್ಟುಗೂಡಿಸಿ, ಭಟ್ಟ ಮನೆಯೋಳಗೆ ಕಾಲ್ ಇಟ್ಟೇ ಬಿಟ್ಟ... ಮನೆಯೋಳಗೆ ಯಾರೋಬ್ಬರು ಇದ್ದಂಗೆ ಕಾಣಿಸುತ್ತಿರಲ್ಲಿಲ್ಲ... ಮನೇ ಪೂರ್ತಿ ಜಾಲಾಡೀದ್ರೂ ಯಾವನೇ ಒಬ್ಬ ನರಪಿಳ್ಳೆಯೂ ಕಣ್ಣಿಗೆ ಕಾಣಲಿಲ್ಲ... ಆ ಅಜ್ಜ ಏನಾದ್ರೂ ಮನೆಯ ಸೈಡಿಗಿದ್ದ ಜಾಗಕ್ಕೆ ಹೋಗ್ಯಾನ ಅಂತ ನೋಡಲು ಭಟ್ಟ ಮನೆಯ ಸುತ್ತ ಮುತ್ತಾನೂ ಜಾಲಾಡಿದ... ಯಾವಗ್ ಆ ಅಜ್ಜನ ಸುಳಿವು ಅವನಿಗೆ ಸಿಗಲಿಲ್ಲವೋ ಅವನಿಗೆ ಒಂದು ರೀತಿಯ ಡರ್ ಹೋಡೆಯಲು ಶುರುವಾಯಿತು... ಅಲ್ಲೆನೋ ಫಾಲ್ಟ್ ಹೋಡ್ದಿದೆ ಅನ್ನುವುದು ಅವನಿಗೆ ಖಾತ್ರಿಯಾಗ್ ಹೋಯ್ತು!

ಅಲ್ಲಿಂದ ಎದ್ನೋ ಬಿದ್ನೋ ಅಂತ ಓಡೋಡಿ ಕಾರ್ ಬಳಿ ಬಂದು... "ವಾಗಿ... ಗಡಾ ಕಾರ್ ವಾಪಸ್ ತಕ್ಕ... ಮನೇ ಪೂರ್ತಿ ಸ್ಕ್ಯಾನ್ ಹೋಡ್ದೀನಿ... ಆ ಅಜ್ಜ ಎಲ್ಲೂ ಇಲ್ಲಾ ಲೇ... ಇಲ್ಲೇನೋ ಆಗೈತ್ಲೇ... ಫಸ್ಟ್ ಗಾಡಿ ರಿವರ್ಸ್ ತಗೋ..." ಎಂದು ಒಂದೇ ಸಮನೆ ಪೀಡಿಸತೊಡಗಿದ... ಇಷ್ಟೆಲ್ಲಾ ಆದ್ರೂ ರಾಜು ಮಾತ್ರ ನಿದ್ರೆಯಿಂದ ಏಳಲೇ ಇಲ್ಲ... ಭಟ್ಟ ತನಗೆ ಹೇಳಬೇಕದ್ದನೆಲ್ಲಾ ಒಂದೇ ಉಸಿರಿಗೆ ಹೇಳ್ದೋನೆ ಅವಸರ ಅವಸರವಾಗಿ ಕಾರಿನ ಹಿಂಬದಿಯ ಸೀಟಿನಲ್ಲಿ ಭದ್ರವಾಗಿ ತಳವೂರಿಬಿಟ್ಟ... ವಾಗಿಗೂ ಏನೂ ತೊಚದಂತಾಗಿ, ತಾವು ಯಾಕಾದ್ರೂ ಇಲ್ಲಿಗೆ ಬರೋಕ್ಕೆ ಹೋದ್ವೋ ಅಂತ ಅಂದ್ಕೊಂಡು ಗಾಡಿಯನ್ನು ರಿವರ್ಸ್ ತಗೋಂಡು ಸೀದಾ ಹೈವೇ ಕಡೆಗೆ ಹೊರಟ್ ಬಿಟ್ಟ...

ರಾತ್ರಿಯ ಸಮಯ ಸುಮಾರು ೨:೦೫... ಪುನಃ ಪುಣೆ ಬೆಂಗಳೂರು ಹೆದ್ದಾರಿಯಲ್ಲಿ...

ಯಾವಗ್ ಹೈವೆ ಸಿಗುತ್ತಪ್ಪಾ ಅಂತ ಎದುರು ನೋಡುತ್ತಾ ಡ್ರೈವ್ ಮಾಡ್ಕೋಂಡು ಬಂದ ವಾಗಿಗೆ ತನ್ನ ಜೀವ ಉಳೀತೂ ಅಂತ ಅನ್ಸಿದ್ದೆ ಪುನಃ ಹೆದ್ದಾರಿ ರೀಚ್ ಆದಾಗ... ಬದುಕೋಂಡ್ಯಾ ಬಡ್ ಜೀವೀ ಅಂತ ನಿಟ್ಟಿಸಿರು ಬಿಡುತ್ತಾ ಭಟ್ಟ ಹಾಗು ವಾಗಿ ದಾವಣಗೆರೆ ಬರುವುದನ್ನೇ ಕಾಯುತ್ತಾ ಇದ್ದರು. ಸ್ವಲ್ಪ ಸಮಯದ ನಂತರ ವಾಗಿ, "ಭಟ್ಟ... ನೋಡ್ಲೆ... ಹ್ಯಾಂಗೆ ಮೈಮ್ಯಾಗೆ ಹರಾಸ್ ಇಲ್ಲ್ದೋರಹಂಗೆ ಬಿದ್ಕೋಂಡಾನೇ ಭೂಪ..." ಅಂತ ರಾಜೂನ ತೋರಿಸಿ ಹೇಳ್ದ. ಆ ಟೈಮಿಗಾಗಲೆ ಸ್ವಲ್ಪ ಚೇತರಿಸಿಕೊಂಡಿದ್ದ ಭಟ್ಟ ಏನೋ ನಗ್ ಬೇಕಲ್ಲಾ ಅಂತ ಒಲ್ಲದ ಮನಸ್ಸಿನಿಂದ ನಕ್ಕು ಸುಮ್ಮನಾಗಿ ಬಿಟ್ಟ. ಆದ್ರೂ ಇಬ್ಬರಿಗೂ ಒಳ್ಗೋಳಗೆ ತೀಳಿದಿದ್ದ ಸತ್ಯ ಏನಪ್ಪಾ ಅಂದರೆ, ಇದೆಲ್ಲಾ ತಮ್ಮಲ್ಲಿದ್ದ ಹೆದರಿಕೆಯನ್ನು ಮರೆಮಾಚೊದಕ್ಕೇನೇ ಹೀಗೆ ಮಾಡ್ತಾಯಿದ್ದೀವಿ ಅಂತ... ಅವರ ಬಳಿ ಬೇರೆ ದಾರೀನೆ ಇರ್ಲಿಲ್ಲಾ... ಅವರು ಯಾವಾಗ್ ದಾವಣಗೆರೆ ತಲುಪುತ್ತೇವೋ ಅಂತ ಯೋಚನೆ ಮಾಡ್ತಾ ಇದ್ರು...

ಮುಂಜಾನೆಯ ಸಮಯ ಸುಮಾರು ೫:೨೫... ದಾವಣಗೆರೆಯ ಹೊರವಲಯದಲ್ಲಿ ...

ದಾವಣಗೆರೆ ಮುಟ್ಟುತ್ತಿದ್ದಂತೆ ಇಬ್ಬರಿಗೂ ಒಂದು ರೀತಿಯ ಸಮಧಾನ. ಹೋದ ಜೀವ ಬಂದ ಹಾಗಾಯಿತು... ಇನ್ನೂ ಕತ್ತಲೆಯೇ ಆವರಿಸಿದ್ದ ಆಕಾಶ, ನಾಳೆಯನ್ನು ಬರಮಾಡಿಕೋಳ್ಳಲು ಇನ್ನು ಪ್ರಿಪೇರ್ ಆಗ್ತಾ ಇತ್ತು... ಕೆಲ ಸಮಯದ ಬಳಿಕ ವಾಗಿಯ ಮನೆ ಮುಂದೆ ಕಾರು ನಿಂತಿತು... ರಾತ್ರಿಯಿಡಿ ಆ ಅಜ್ಜನ ಸಲುವಾಗಿ ಎಚ್ಚರದಿಂದಿರಬೇಕಾಗಿದ್ದ ಕಾರಣ ಇಬ್ಬರಿಗೂ ಯಾವಾಗ್ ಮಲಗಿಕೊಂಡೆವೋ ಅಂತ... ಇತ್ತ ಆರಾಮಾಗಿಯೇ ನಿದ್ರೆ ಮಾಡುತ್ತಿದ್ದ ರಾಜುವನ್ನು ಇಬ್ಬರೂ ಹೆಗಲ ಮೇಲೆ ಹೊತ್ತುಕೊಂಡು ಹೋಗಿ ಒಂದು ರೂಮಿನಲ್ಲಿ ’ಬಿಸಾಡಿ’, ತಾವು ಹಾಲ್ನಲ್ಲೆ ಬಿದ್ದು ಕೊಂಡರು...

ಬೆಳಿಗ್ಗೆ ಸಮಯ ಸುಮಾರು ೯:೪೫... ವಾಗಿಯ ಮನೆಯ ಒಳಗೆ...

ಹಿಂದಿನ ರಾತ್ರಿಯ ಬಗ್ಗೆ ಏನೂ ಗೊತ್ತಿರದ ರಾಜು ಕಣ್ ಬಿಟ್ಟಾಗ ತಿಳಿದಿದ್ದು, ತಾನು ವಾಗಿಯ ಮನೇಲಿದ್ದೇನೆ ಅಂತ... ಎದ್ದವನೇ ಸೀದಾ ಹಾಲಿಗೆ ಬಂದು, ಗಾಢವಾದ ನಿದ್ರೆಯಲ್ಲಿದ್ದ ವಾಗಿ ಹಾಗು ಭಟ್ಟನನ್ನು ತಿವಿದು ತಿವಿದು, "ಲೇ... ಏಳ್ರಲೇ... ಏನ್ ಹಂಗ್ ಬಿದ್ಕೋಂಡಿದ್ದಿರಲ್ಲಾ... ಆಗ್ಲೇ ೧೦ ಘಂಟೆ ಆಗೋಕೆ ಬಂತು..." ಎಂದು ಒಂದೇ ಸಮನೇ ಕಾಡೋಕೆ ಶುರು ಮಾಡ್ದ... ಸುಮಾರು ಹೊತ್ತಿನ ಪ್ರಯತ್ನದ ಬಳಿಕ, ಇಬ್ಬರೂ ಎದ್ದರು... ಎಲ್ಲರೂ ತಮ್ಮ ತಮ್ಮ ನಿತ್ಯ ಕಾರ್ಯಗಳನ್ನು ಮುಗಿಸಿಕೊಂಡ ಬಳಿಕ, ಮನೆಯ ಬಳಿಯಿದ್ದ ಟೀ ಸ್ಟಾಲಿಗೆ ಹೋಗಿ ಒಂದು ಕಪ್ ಕಡಕ್ ಟೀ ಹೀರಿ ಬಂದರು...

ಬೆಳಿಗ್ಗೆಯ ಸಮಯ ಸುಮಾರು ೧೦:೪೫... ವಾಗಿ ಮನೆಯ ಹೊರಗೆ...

ಕಾರಿನ್ನೂ ಮನೆಯ ಮುಂದೇನೆ ಪಾರ್ಕ್ ಆಗಿದ್ದನ್ನು ನೋಡಿದ ವಾಗಿ, "ತಡೀಲೇ ಭಟ್ಟ... ಕಾರನ್ನ ಶೆಡ್ನಲ್ಲಿ ನಿಲ್ಲಿಸಿ ಬರ್ತೀನಿ.." ಅಂತ ಹೇಳಿ ಹೋದ. ಇನ್ನೇನು ಕಾರ್ ಬಾಗಿಲು ತೆಗೆದು ಒಳಗಡೆ ಕೂತ್ಕೋ ಬೇಕು, ಅವನ ದೃಷ್ಟಿ ಬ್ಯಾಕ್ ಸೀಟಿನಲ್ಲಿದ್ದ ಕಿಟ್ ಬ್ಯಾಗ ಕಡೆಗೆ ಬಿತ್ತು... ಒಂದು ಕ್ಷಣ ಹಿಂದಿನ ರಾತ್ರಿ ನಡೆದದ್ದೆಲ್ಲಾ ಕಣ್ಮುಂದೆ ಬಂದಂತಾಗಿ, "ಲೇ ಭಟ್ಟ... ಬೇಗ್ ಬಾರಲೇ... " ಅಂತ ಕಿರುಚಿದ.

ಇವನ್ಯಾಕಪ್ಪಾ ಹಿಂಗ್ ಕಿರುಚ್ಕೋಂಡ ಅಂತ ಭಟ್ಟ ಹಾಗು ರಾಜು ಇಬ್ಬರೂ ಅವನ ಬಳಿ ಓಡಿ ಬಂದರು. ವಾಗಿ ಕಾರಿನಲ್ಲಿದ್ದ ಆ ಬ್ಯಾಗನ್ನೇ ತೋರಿಸುತ್ತಾ ನಿಂತನು... ಭಟ್ಟನೂ ಕೆಲ ಕ್ಷಣ ಗರ ಬಡ್ದೋರಹಾಗೆ ನಿಂತು ಬಿಟ್ಟ... ಇವರಿಬ್ರೂ ಯಾಕ್ ಹಿಂಗೆ ಕರ್‍ಎಂಟ್ ಹೊಡ್ದ್ ಕಾಗಿ ಆದಂಗಾದ್ರು ಅಂತ ರಾಜು ವಿಚಾರ ಮಾಡಲು ಶುರು ಮಾಡ್ದ... ಆಗ ವಾಗಿ, "ಲೇ ಭಟ್ಟ ಎಂಥಾ ಕೆಲ್ಸ ಮಾಡ್ಬಿಟ್ವಲೆ ನಾವು... ಅಜ್ಜನ ಬ್ಯಾಗ್ನ್ ಹಾಗೇ ತಗೋಂಡ್ ಬಂದ್ ಬಿಟ್ವಲ್ಲೋ.." ಅಂತ ಆತಂಕ ವ್ಯಕ್ತ ಪಡಿಸಿದ. ಅಲ್ಲಿದ್ದ ೩ ವರಿಗೂ ಒಂದೇ ತೆರನಾದ ಕುತೂಹಲ. ಕೊನೇಗೂ ವಾಗಿ ಧೈರ್ಯ ಮಾಡಿ ಆ ಬ್ಯಾಗನ್ನು ಮನೆ ಒಳಗೆ ಹೋಗಿ ತೆರೆದೇ ಬಿಟ್ಟ...

ಬ್ಯಾಗ್ ಒಳಗಿದ್ದ ವಸ್ತುಗಳನ್ನು ನೋಡುತ್ತಿದ್ದಂತೆ, ಮೂವರೂ ಫ್ಯೂಸ್ ಔಟ್ ಆದವರಂತೆ, ಬಿಟ್ಟ ಕಣ್ಣು ಬಿಟ್ಟಂತೆ ಒಬ್ಬರ ಮುಖವನ್ನೊಬ್ಬರು ನೋಡ್ಕೋತ ನಿಂತ್ ಬಿಟ್ರು... ಅದನ್ನು ನೋಡಿದ ಬಳಿಕ ಯಾರೊಬ್ಬರಿಗೂ ೩ ದಿನ ಊಟ ಸೇರಲಿಲ್ಲಾ...

ಇಷ್ಟೆಲ್ಲಾ ವಿವರಗಳನ್ನು ನೀಡಿದ ಭಟ್ಟ, ಕೊನೆಗೆ ಹೇಳುದ್ದು ಕೇಳಿ ಕೆಲ ಕ್ಷಣ ನನಗೂ ಕೈಕಾಲು ಆಡದ ಹಾಗೆ ಆದವು. ಭಟ್ಟ ಹೇಳಿದ, "ಲೇ... ಅವತ್ತು ಏನಾದ್ರೂ ಹೈವೇನಲ್ಲಿ ಟ್ರಾಫಿಕ್ ಪೋಲೀಸ್ ನಮ್ಮನ್ನು ನಿಲ್ಲಿಸಿ ಕಿಟ್ ಬ್ಯಾಗ್ ಚೆಕ್ ಮಾಡಿದಿದ್ದರೆ, ನಮ್ಗೆ ಕಾಯಂ ಟಾಡಾ ಕೇಸಿನಲ್ಲಿ ೧೦ ವರ್ಷ ಜೈಲ್ ಆಗುತಿತ್ತಲೇ... ಪುಣ್ಯ, ಹೇಗೋ ಆ ಕಿಟ್ ಬ್ಯಾಗು ಯಾರ್ ಕೈಗೂ ಸಿಕ್ಕಲಿಲ್ಲ..." ಎಂದು ನಿಟ್ಟುಸಿರು ಬಿಟ್ಟ. ಅವನು ಹೇಳಿದನ್ನು ಕೇಳಿದ ಬಳಿಕ ನಾನೂ ಸಹ ಒಪ್ಕೊಂಡೆ, ಅದು ನಿಜವಾಗ್ಲೂ ಒಂದು ಕರಾಳ ರಾತ್ರಿಯೇ ಸರಿ ಅಂತ!

ಶನಿವಾರ, ಸೆಪ್ಟೆಂಬರ್ 8, 2007

ಚಕ್ ದೇ ಇಂಡಿಯಾ!

ನಾನು ಸಿನಿಮಾ ನೋಡೋದು ಇಲ್ಲವೇ ಇಲ್ಲ ಎನ್ನುವಷ್ಟು ಕಡಿಮೆ. ಆದರೆ ವಿದ್ಯಾರ್ಥಿ ಜೀವನದ ಮಜಾ ಮುಗಿಸಿ ಸ್ವಲ್ಪ ಹೆಚ್ಚೇ ಎನಿಸುವಷ್ಟು ರಜೆ ಅನುಭವಿಸುತ್ತಿರುವ ಈಗಿನ ಪರಿಸ್ಥಿತಿಯಲ್ಲಿ ನಾನು ಅವುಗಳನ್ನು ನೋಡದೆ ವಿಧಿಯಿಲ್ಲ. ಹಾಗಾಗಿ ಇತ್ತೀಚೆಗೆ ಬಿಡುಗಡೆಯಾದ ಕೆಲವು ಚಿತ್ರಗಳನ್ನು ನೋಡುವ ಅದೃಷ್ಟ ನನ್ನದಾಯಿತು. ನಾನು ಇತ್ತೀಚೆಗೆ ನೋಡಿದ ಚಕ್ ದೇ ಇಂಡಿಯಾ ಒಂದು ಒಳ್ಳೆಯ ಸಿನಿಮಾ. ಮೊದಲಿನಿಂದ ಕೊನೆಯವರೆಗೆ ತನ್ನ ವೇಗವನ್ನು ಕಾಪಾಡಿಕೊಂಡು ಹೋಗಿದ್ದು, ಎಲ್ಲೂ ಬೋರ್ ಬರದೇ ಇರೋ ಹಾಗೆ ಇದೆ. ಭಾರತದ ಸಮೂಹ ಮಾಧ್ಯಮಗಳ ದುಃಸ್ಥಿತಿ, ಆಟಗಾರರ ಮನಸ್ಥಿತಿ, ಕ್ರಿಕೆಟ್‍ಗೆ ಕೊಡುತ್ತಿರುವ ಅತಿ ಎನಿಸುವಂತಹ ಗೌರವ ಇವೆಲ್ಲವುಗಳನ್ನು ಹದವಾಗಿ ಬೆರೆಸಿರುವ ರೀತಿ ಮನಸ್ಸಿಗೆ ಹತ್ತಿರವಾಗುತ್ತದೆ. ಅದರಲ್ಲಿನ ಕೆಲವು ಸಂಭಾಷಣೆಗಳು ಮನಸ್ಸಿನಲ್ಲಿ ಅಚ್ಚೊತ್ತುತ್ತವೆ. ಅವುಗಳಲ್ಲೊಂದು "ಹಮ್ಲಾ ಗೋಲ್ ಪರ್ ನಹೀ, ಗೋಲ್‍ಕೀಪರ್ ಕೇ ದಿಮಾಗ್ ಪರ್ ಕರೋ" ಎಂದು ಶಾರುಖ್ ಖಾನ್ ಹೇಳುವುದು. ಅದರರ್ಥ ಮನದಟ್ಟಾಗುವಂತೆ ಮಾಡಿದ್ದು ಇತ್ತೀಚಿನ ನ್ಯಾಟ್‍ವೆಸ್ಟ್ ಸರಣಿಯ ೬ನೇ ಪಂದ್ಯದಲ್ಲಿ ಯುವರಾಜ್ ಸಿಂಗ್ ಔಟ್ ಆದ ಪರಿ.

ಯುವರಾಜ್ ಸಿಂಗ್ ಬೌಲಿಂಗ್ ದಾಳಿಯಲ್ಲಿ ಮಸ್ಕರೆನ್ಹಾಸ್ ಸತತ ೫ ಸಿಕ್ಸ್ ಹೊಡೆದು ಆತನನ್ನು ಯುವರಾಜ ಪದವಿಯಿಂದ ಕೆಳಗಿಳಿಸಿದ್ದಾಗಿತ್ತು. ಈ ಸಂದರ್ಭದಲ್ಲಿ ಯುವರಾಜ ಸೇಡು ತೀರಿಸಿಕೊಂಡು ತನ್ನ ಪಟ್ಟ ಮರಳಿ ಪಡೆಯಲು ಬಯಸುವುದು ಸಹಜ. ಹೀಗಿರುವಾಗ ಇಂಗ್ಲಿಷ್ ನಾಯಕ ಕಾಲಿಂಗ್‍ವುಡ್ ಅವರು ಯುವರಾಜ್ ಸಿಂಗ್ ಬ್ಯಾಟಿಂಗ್ ಮಾಡಲು ಬಂದ ಅಲ್ಪ ಸಮಯದಲ್ಲೇ ಮಸ್ಕರೆನ್ಹಾಸ್ ಅವರನ್ನು ದಾಳಿಗಿಳಿಸಿ ಮಾನಸಿಕವಾಗಿ ಒತ್ತಡ ಹೇರಿದರು. ಮೊದಲ ಎಸೆತದಲ್ಲೇ ಕ್ಯಾಚ್ ಕೊಟ್ಟ ಯುವರಾಜ್‍ಗೆ ತಮ್ಮ ಪದವಿ ಮರಳಿ ಸಿಗಲೇ ಇಲ್ಲ. Hats off to Collingwood and his mind-game!

ಬಹುತೇಕ ಭಾರತೀಯರಲ್ಲಿ ಕಂಡುಬರುವ ಒಂದು ಸಮಸ್ಯೆಯೆಂದರೆ ಕುತ್ತಿಗೆಯವರೆಗೆ ಬರುವವರೆಗೆ ಕೆಲಸ ಮಾಡದಿರುವುದು. ಅದೇನೋ ಹೇಳ್ತಾರಲ್ಲ, ಗಡ್ಡಕ್ಕೆ ಬೆಂಕಿ ಹತ್ತಿದಾಗ ಬಾವಿ ತೋಡಿದ್ರು ಅಂತ, ಹಾಗೆ. ಈ ವಿಚಾರದಲ್ಲಿ ನಾನಂತೂ ಕಟ್ಟಾ ಭಾರತೀಯನೆಂದು ಹೇಳಿಕೊಳ್ಳಲೇಬೇಕು. ನೀವೂ ಭಾರತೀಯರೇ? ನಂಗೊತ್ತಿಲ್ಲ, ಗೊತ್ತಾಗೋದೂ ಬೇಡ ಬಿಡಿ... ನಿಮ್ಮ ಪರ್ಸನಲ್ ವಿಷ್ಯ ನಂಗ್ಯಾಕೆ?

ಆ ಮಾತು ಈಗ ಯಾಕಪ್ಪಾ ಅಂದ್ರೆ, ನಮ್ಮ ಕ್ರಿಕೆಟ್ ತಂಡ ಇಂಗ್ಲೆಂಡ್‍ನಲ್ಲಿ ಆಡಿದ ರೀತಿ ನೋಡಿದ್ರೆ ಅದರಲ್ಲಿರೋರೆಲ್ಲ ಅಪ್ಪಟ ಭಾರತೀಯರೇ ಅನ್ಸೋದಿಲ್ವೇ? ನೀವೇ ಹೇಳಿ, ೪ನೇ ಪಂದ್ಯದಲ್ಲಿ ೧೧೪ ರನ್‍ಗೆ ೭ ವಿಕೆಟ್ ಕಳೆದುಕೊಂಡು ಹೀನಾಯ ಸ್ಥಿತಿಯಲ್ಲಿದ್ದ ಬ್ರಿಟಿಷರಿಗೆ ಗೆಲ್ಲುವ ಅವಕಾಶ ಮಾಡಿಕೊಟ್ಟು, ಸರಣಿಯಲ್ಲಿ ೩-೧ ರ ಹಿನ್ನಡೆ ಅನುಭವಿಸಿ, 'ಮಾಡು ಇಲ್ಲವೆ ಮಡಿ' ಸ್ಥಿತಿಗೆ ಹೋಗಿ, ನಂತರ ಫೀನಿಕ್ಸ್‍ನಂತೆ ಮತ್ತೆ ಸತತವಾಗಿ ೨ ಪಂದ್ಯಗಳನ್ನು ಗೆದ್ದು ಸರಣಿ ಸಮವಾಗಿಸಿಕೊಳ್ಳುವುದು ಇನ್ಯಾರಿಗೆ ಸಾಧ್ಯ? ಅದರಲ್ಲೂ ೬ನೇ ಪಂದ್ಯದಲ್ಲಿ ಭಾರತ ಗೆಲ್ಲುವುದು ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ಪರಿಸ್ಥಿತಿ ಹದಗೆಟ್ಟಿತ್ತು. ೩೧೬ ರನ್‍ ಬೆನ್ನಟ್ಟುವುದು ಬಾಳೆಹಣ್ಣು ತಿಂದಹಾಗಲ್ಲ. ಅದಕ್ಕೆ ಉತ್ತಮ ಆಟ, ಮಾನಸಿಕ ದೃಢತೆ, ಆತ್ಮವಿಶ್ವಾಸ ಹಾಗೂ ಎಲ್ಲಕ್ಕಿಂತ ಮುಖ್ಯವಾಗಿ ಗೆಲ್ಲಲೇಬೇಕೆಂಬ ಛಲ ಬೇಕು. ಛಲವನ್ನು ಭಾರತ ತಂಡದವರು ಪ್ರದರ್ಶಿಸುವುದು ಬಹಳ ಕಡಿಮೆ. ಆದರೆ ಈ ಪಂದ್ಯ ಅಂತಹ ವಿರಳ ಸಂದರ್ಭಗಳಲ್ಲೊಂದಾಗಿತ್ತು. ಇದಕ್ಕೆ ಓವಲ್ ಕ್ರೀಡಾಂಗಣದಲ್ಲಿ ಹಾಕಿದ್ದ ಚಕ್ ದೇ... ಚಕ್ ದೇ ಇಂಡಿಯಾ ಹಾಡು ಸ್ಫೂರ್ತಿಯಾಗಿರಬಹುದೇ? ಇರಬಹುದು...

ಕೊನೇ ಘಳಿಗೆಯಲ್ಲಿ ಕೆಲಸ ಮಾಡುವ ಅಥವಾ ತಿರುಗಿ ಬೀಳುವ ಸಂಪ್ರದಾಯ ಕೇವಲ ಹಾಕಿ, ಕ್ರಿಕೆಟ್‍ಗೆ ಸಂಬಂಧಿಸಿದ್ದಲ್ಲ. ಹಾಗೆ ನೋಡಿದರೆ ಅದಕ್ಕೂ ಭಾರತಕ್ಕೂ ಅವಿನಾಭಾವ ಸಂಬಂಧವಿದೆ. ಹಿಂದೆ ಅಣ್ವಸ್ತ್ರದ ವಿಷಯದಲ್ಲಿ ಅಮೆರಿಕಾ ಆರ್ಥಿಕ ದಿಗ್ಬಂಧನ ವಿಧಿಸಿದಾಗ ಭಾರತೀಯ ವಿಜ್ಞಾನಿಗಳು ಜಗ್ಗಲಿಲ್ಲ. ಬದಲಿಗೆ ಪ್ಲುಟೋನಿಯಮ್‍ನಿಂದ ಶಕ್ತಿ ಪಡೆಯುವ ತಂತ್ರಜ್ಞಾನ ಅಭಿವೃದ್ಧಿಪಡಿಸಿದರು. Necessity is the mother of invention ಅಂತಾರಲ್ಲ, ಹಾಗೆ. ಒಂದು ಕಾಲದಲ್ಲಿ ಡಾಲರ್‌ನ ಪ್ರಭಾವದಿಂದಾಗಿ ತನ್ನ ಅಸ್ತಿತ್ವವನ್ನೇ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದ ರೂಪಾಯಿ ಈಗ ಮತ್ತೆ ಚೇತರಿಸಿಕೊಳ್ಳುತ್ತಿದೆ. ಇದು ಅಮೆರಿಕಾ ಆರ್ಥಿಕವಾಗಿ ಕಷ್ಟ ಅನುಭವಿಸುತ್ತಿರುವ ಸಮಯದಲ್ಲಿ ಆಗಿರುವ ಬೆಳವಣಿಗೆ ಎಂಬುದನ್ನು ಮರೆಯಬಾರದು. ಒಟ್ಟಿನಲ್ಲಿ ಆರ್ಥಿಕ ಕ್ಷೇತ್ರದಲ್ಲಿ ಕೂಡ ತಿರುಗಿ ಬೀಳುವ ಶಕ್ತಿ ತೋರಿಸುತ್ತಿರುವ ಭಾರತಕ್ಕೆ "ಚಕ್ ದೇ" ಎನ್ನೋಣವೇ?

ಶುಕ್ರವಾರ, ಸೆಪ್ಟೆಂಬರ್ 7, 2007

ಬಚ್ಚಲು ಮನೆಯ ಖಳನಾಯಕ ಇನ್ನಿಲ್ಲ!

ನಿಮ್ಮೊಂದಿಗೆ ಹರಟೆ ಹೊಡೆದು ಬಹಳ ದಿನಗಳೇ ಕಳೆದು ಹೋದವು ನೋಡಿ. ಹಾಗೆಂದ ಮಾತ್ರಕ್ಕೆ ನಾನೇನು ಗುಡ್ಡ ಕಡಿಯೋ ಅಂಥ ಘನ ಕಾರ್ಯದಾಗ ಬ್ಯುಸಿ ಇದ್ದೆ ಅಂತ ನೀವೇನಾದ್ರೂ ತಿಳಿದಿದ್ದ್ರೆ, ನೀವು ಭಾರಿ ಗಲತ್ ಫೈಮಿದಾಗದೀರಿ... ಜೋಕೆ!! ನನ್ನ ಪಾಲಿಗೆ ಸಿಕ್ಕಿರೋ ಈ ರಜೆಯ ದಿನಗಳನ್ನು ಅತ್ಯಂತ ನಿರುಪಯುಕ್ತವಾದ ರೀತಿಯಲ್ಲಿ ಕಳೆಯುವ ದುಸ್ಸಾಹಸಕ್ಕಿಳಿದಿದ್ದೇನೆ. ಎಂದಿನಂತೆ ಹೀಗೇ ವಿ.ಕ. ತಿರುವುತ್ತಾ ಇದ್ದಾಗ, ಕಣ್ಣಿಗೆ ಬಿದ್ದಂತಹ ಒಂದು ಲೇಖನವೇ ಈ ನನ್ನ ಹರಟೆಯ ಕಥಾ ವಸ್ತು.

ಮಳೆಗಾಲ ಎಂದ ಮೇಲೆ ಕೇಳಬೇಕೇ, ಸದಾ ಎಡ(ಬಲ)ಬಿಡಂತೆ ಹುಯ್ಯುವ ಮಳೆ. ಈ ಬಾರಿ ವರುಣನ ಆರ್ಭಟ ಸ್ವಲ್ಪ ಜಾಸ್ತಿನೇ ಆಯಿತು ಬಿಡ್ರಿ. ಈ ಸಲದ ಮಳೆ, ಬಟ್ಟಾ ಬಯಲು ಸೀಮೆಯಲ್ಲಿರುವಂತಹ ನಮಗೂ ಸಹ ಮಲೆನಾಡಿನ ಮಳೆಗಾಲದ ರುಚಿ ಹೆಂಗಿರುತ್ತೆ ಅಂತ ತೋರಿಸಿಬಿಡ್ತು! ಮಳೆಗಾಲ ಬಂತೆಂದರೆ ಸಾಕು ಬೆಳಗ್ ಬೆಳಿಗ್ಗೀನೇ ಎಲ್ಲರಿಗೂ ಒಳ್ಳೆ ಸಾಥ್ ನೀಡುವ ಸ್ಥಳ ಅಂದರೆ ಬಚ್ಚಲು ಮನೆ ನೋಡ್ರಿ! ಹೊರಗೆ ಹುಯ್ಯುವ ಜಿಟಿ ಜಿಟಿ ಮಳೆಯಿಂದ ತಪ್ಪಿಸಿಕೊಳ್ಳಕ್ಕೆ ಅಂತಾನೇ ಹಲವರು ಬಚ್ಚಲುಮನೆಯ ಆಶ್ರಯ ಪಡೀತಾರೆ. ಒಮ್ಮೆ ಬಾತ್ ರೂಮ್ ಬೋಳ್ಟ್ ಜಡ್ದು ಇಳಿದು ಬಿಟ್ರೆ ಮುಗೀತು. ಅದೆಷ್ಟು ಬಕೀಟು ನೀರು ಖಾಲಿಯಾಗ್ತಾವೋ ಲೆಕ್ಕಕ್ಕೇ ಸಿಗದು. ಹೊರಗಡೆ ಇರೋರು ಎಷ್ಟೇ ಗಂಟೆ ಬಾರ್ಸಿದ್ರೂ ಕಿವಿಗಳು ಜಾಣ ಕಿವುಡುತನ ಪ್ರದರ್ಶನ ಮಾಡ್ತವೆ!!

ನೀವು ಏನೇ ಹೇಳಿ, ಈಗಿನ ಕಾಲದ ಬಾಯ್ಲರ್, ಗೀಜರ್‍ನಲ್ಲಿ ನೀರ್ ಕಾಯಿಸಿ ಸ್ನಾನ ಮಾಡೋದ್ರಲ್ಲಿ ಮಜಾನೆ ಬರೋಲ್ಲಾ ಕಣ್ರೀ. ನಮ್ಮ ಮನೆಯಲ್ಲಿಯೂ ಸಹ ಇದೆ ಕಾರಣಕ್ಕೆಂದು ಹಂಡೆಯ ಸಹಾಯದಿಂದ ನೀರು ಬಿಸಿ ಮಾಡ್ಕೋತ ಇದ್ವಿ. ಎಲ್ಲವೂ ಪ್ಲಾನ್ ಮಾಡ್ಧಂಗೆ ಆಗಿದ್ದಿದ್ದರೆ ಇವತ್ತು ನಮ್ಮನೆಯಲ್ಲಿದಂತಹ ಹಂಡೆಯನ್ನು ಇತಿಹಾಸದ ಪುಟಗಳಿಗೆ ಸೇರಿಸುವ ಪ್ರಸಂಗವೇ ಬರ್ತಾ ಇರ್ಲಿಲ್ಲಾ ಅನ್ಸುತ್ತೆ! ಕಳೆದ ೧೬ರೂವರೆ ವರ್ಷಗಳಿಂದ ನನಗೆ ಬಾತ್ ರೂಮ್ನಲ್ಲಿ ಸಾಥ್ ನೀಡುತ್ತಾ ಬಂದಿದ್ದ ಆ ಹಂಡೆ ಇನ್ನಿಲ್ಲ!! ಇದೇನಪ್ಪಾ ಇಷ್ಟು ದಿನ ಇಲ್ಲ್ದಿದ್ದು ಇದ್ದಕ್ಕಿದ್ದ ಹಾಗೆ ಹಂಡೆಯನ್ನು ಎತ್ತಂಗಡಿ ಮಡ್ಬಿಟ್ರಲ್ಲಾ ಅಂತ ಕೇಳ್ಬೋದು ನೀವು. ಅದೆನೋ ಹೇಳ್ತಾರಲ್ಲಾ, "ಕುಂಬಾರನಿಗೆ ನೂರು ನಿಮಿಷ ಅಂದ್ರೆ ದೊಣ್ಣೆಗೆ ಮೂರು ನಿಮಿಷ" ಅಂತ, ಹೋದ್ ಭಾನುವಾರ ಆಗಿದ್ದೂ ಅದೇಯ. ಈ ಹಂಡೆಯ 'ಕಾಟ' ತಾಳಲಾರದೆ ಅದನ್ನು 'ಅಮಾನುಷವಾಗಿ' ಒಡೆಸಲಾಯಿತು. ನಿಮಗೆನ್ನಿಸಬಹುದು, ಈ ಹಂಡೆಯಿಂದ ಇವರಿಗೇನು ತೊಂದರೆ ಆಗಿರಬಹುದು ಅಂತ? ಅಲ್ಲೆ ಇರೋದು ಕಣ್ರಿ ಈ 'ಖಳನಾಯಕನ' ಒಳ ಮರ್ಮ.

ಕೆಲದಿನಗಳ ಹಿಂದೆ ನಮ್ಮ ತಂದೆಯ ಸ್ನೇಹಿತರೋಬ್ಬರು ನಮ್ಮ ಮನೆಗೆ ಬಂದಾಗ, ಕಾಲು ತೊಳೆಯಲು ಬಾತ್ ರೂಮಿಗೆ ತೆರಳಿದರು. ಹೊರಬಂದವರೆ ನಮ್ಮನ್ನು ಕೇಳಿದರು, "ನೀವು ಯಾಕೆ ಬಾತ್ ರೂಮಿಗೆ 'ಡಾಂಬರ್' ಕಲರ್ ಹೊಡಿಸಿದ್ದೀರಾ ಅಂತ?" ಕ್ಷಣ ಕಾಲ ನಾವೆಲ್ಲಾ ಒಬ್ಬರ ಮುಖವನ್ನೋಬ್ಬರು ನೋಡಿಕೋಂಡೆವು. ಇದೇನಿವ್ರು ಹೀಗ್ ಕೇಳ್ತಾರಲ್ಲಾ ಅಂತ ಎಲ್ಲರಿಗೂ ಆಶ್ಚರ್ಯ! ನೀವು ನಂಬುತ್ತಿರೋ ಇಲ್ಲವೋ ಗೊತ್ತಿಲ್ಲ, ನೀವೇನಾದ್ರು ಕತ್ತಲೆಯಲ್ಲಿ ಒಬ್ಬರೆ ನಮ್ಮ ಮನೆಯ ಬಾತ್ ರೂಮಗೆ ಹೋಗಿದ್ದೆ ಆದರೆ, ಹೆದರಿಕೋಂಡು ಬೆಚ್ಚಿ ಬೀಳೋದಂತು ಗ್ಯಾರಂಟಿ! ಕಳೆದ ೧೬ರೂವರೆ ವರ್ಷಗಳಿಂದ ಹಂಡೆಯ 'ಕೃಪಾ ಕಟಾಕ್ಷ'ದಿಂದ ಬಾತ ರೂಮಿನ ಹಾಲತ್ ಹೇಳತೀರದು. ಬಾತ್ ರೂಮಿನಲ್ಲಿ ಒಲೆ ಉರಿ ಹಚ್ಚಿದೆವೆಂದರೆ ಮುಗೀತು. ಒಳಗೆ ಹೋದವರ ಕಣ್ಣಲ್ಲಿ 'ಆನಂದ ಭಾಷ್ಪ ' ಧಾರಾಕಾರವಾಗಿ ಹರಿದುಬರುತ್ತಿತ್ತು! ಹಂಡೆಯು ಹೊರ ಹಾಕುತಿದ್ದ ಹೊಗೆಯ ಕಾರಣ ಬಾತ್ ರೂಮ್ ಇರುವ ಪ್ರದೇಶ ಜನ ವಸತಿಗೆ ಸೂಕ್ತವಾಗಿರಲ್ಲಿಲ್ಲ ಎಂಬುದು ಇಲ್ಲಿ ಉಲ್ಲೇಖಾರ್ಹ!!! ನಾವೆಲ್ಲಾ ಹೇಗೆ ಅದರೊಂದಿಗೆ ಇಷ್ಟೊಂದು ದಿನ ಕಾಲಹಾಕಿದೆವೋ ಪರಮಾತ್ಮನೇ ಬಲ್ಲ! ಕೊನೆಗೂ ಎಲ್ಲರ ಸಂಯಮದ ಕಟ್ಟೆಯೊಡೆಯಿತು. ನಾವೆಲ್ಲ ಸೇರಿ ಈ ಖಳನಾಯಕನಿಗೋಂದು ಗತಿ ಕಾಣಿಸಲೇಬೇಕೆಂದು, ಅದರ ಅಸ್ತಿತ್ವಕ್ಕೆ ಕೊಡಲಿ ಇಡಲು ನಿಶ್ಚಯಿಸಿದೆವು. ಅದರ ಫಲವೆ ಇವತ್ತು ನಮ್ಮ ಮನೆಯ ಬಾತ ರೂಮಿನಲ್ಲಿ ಹೊಸ ನಾಯಖನ ಎಂಟ್ರಿಯಾಗಿದೆ! ಹಂಡೆ ಹೋಯಿತು ಗೀಜರ್ ಬಂತು ಡುಮ್ ಡುಮ್ ಡುಮ್!!

ಆದ್ರು ಕಣ್ರಿ ಹಂಡೆ ಇಲ್ಲ ಅಂದ್ರೆ ಮನೆನಲ್ಲಿ ಯಾರನ್ನೋ ಒಬ್ಬರನ್ನ ಮಿಸ್ ಮಾಡ್ಕೊತಾ ಇದೀನೇನೋ ಅಂತ ಅನಿಸ್ತಾ ಇದೆ. ನಮ್ಮ ತಂದೆಯವರಿಗೆ ಒಂದು ರೀತಿಯ ಅಭ್ಯಾಸವೆ ಆಗಿಹೋಗಿದೆ. ಈಗಲೂ ಸಹ ನಮ್ಮಣ್ಣನ್ನ ಉದ್ದೇಶಿಸಿ ಹೇಳ್ತಾನೇ ಇರ್ತಾರೆ, "ಲೊ ಚಂದ್ರು ಹೋಗೊ ಹೊಟ್ಟು ಹಾಕಿ ಒಲೆ ಉರಿ ಹಾಕು" ಅಂತ. ಆಗ ನಾವೆಲ್ಲಾ ಅಪ್ಪನ್ನ ಗೇಲಿ ಮಾಡ್ತಿವಿ. ಇನ್ನೆಲ್ಲಿಯ ಹೊಟ್ಟು, ಇನ್ನೆಲ್ಲಿಯ ಒಲೆ ಉರಿ ಅಣ್ಣಾ? (ನಮ್ಮ ಕಡೆ ತಂದೆಯವರನ್ನು ಅಣ್ಣಾ ಎಂತಲೇ ಸಂಬೋಧಿಸೋದು) ಹಂಡೆ ಉಡೀಸ್ ಅಯಿತು... ಹ್ಹ ಹ್ಹ ಹ್ಹಾ!!

ಈ ಖಳನಾಯಕನ ಸಾವಿನಿಂದ ಯಾರಿಗೆ ಖುಶಿಯಾಗಿದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಚಂದ್ರು ಮಾತ್ರ ಫುಲ್ ಖುಶ್ ಖುಶ್!! ಅವನಿಗೆ ಕೊನೆಗೂ ಈ ಹೊಟ್ಟು ತುಂಬಿ, ಒಲೆ ಉರಿ ಹಾಕುವ ಉಸಾಬರಿಯಿಂದ ಮುಕ್ತಿ ಸಿಕ್ಕಿದೆ! ಅವನ ಬಾಯಲ್ಲಿ ಒಂದೇ ಹಾಡು, "ಈ ಹಂಡೆಯ ಕಾಟದಿಂದ ಕೊನೆಗೂ ಆದೆನು ನಾನು... ಮುಕ್ತ ಮುಕ್ತ ಮುಕ್ತ!!!"

ಮಂಗಳವಾರ, ಸೆಪ್ಟೆಂಬರ್ 4, 2007

ಸುಂದರಿಯ ಬುದ್ಧಿವಂತಿಕೆ

ಬಹಳ ದಿನದಿoದ ಕನ್ನಡದಲ್ಲಿ ಒಂದು ಚೂರು ಗೀಚ್‍ಬೇಕು ಅಂತ ಅನ್ನಿಸುತ್ತಿತ್ತು. ಅದಕ್ಕೆ ಈ ನನ್ನ ಪತ್ರ. ನಾನು ತುoಬ ದಿನದಿoದ ಬಿಸಿನೆಸ್ ಪತ್ರಗಳನ್ನು ಓದುತ್ತಿದ್ದೇನೆ. ಬಹಳ ಜನ ಇದನ್ನು ಒಂದು ಬೇಸರ ತರುವ ಕೆಲಸ ಅoತ ತಿಳಿದಿದ್ದಾರೆ, ಆದರೆ ಬಿಸಿನೆಸ್ ಪತ್ರಗಳು ನಿಜವಾಗಿಯೂ ಸ್ವಾರಸ್ಯಕರವಾಗಿರುತ್ತವೆ. ಇದಕ್ಕೆ ನಿದರ್ಶನ ಅದರಲ್ಲಿ ಪ್ರಕಟವಾದ ಒಂದು ಜೋಕು...

ಒಮ್ಮೆ ಕಛೇರಿಯಲ್ಲಿ ಒಬ್ಬಾಕೆ ಸುoದರಿ ತನ್ನ ಕೆಲಸ ಮುಗಿಸಿ ಶಾಪಿoಗ್ ಹೋಗುತ್ತಾಳೆ. ಅಲ್ಲಿ ಅವಳು ಒಂದು ಹೊಸ ತರಹದ ಥರ್ಮೋಸ್ ಡಬ್ಬಿ ನೋಡುತ್ತಾಳೆ. ಮೊದಲು ಎಂದೂ ಅವಳು ಆ ಡಬ್ಬಿ ನೋಡಿರುವುದಿಲ್ಲ. ಆದ್ದರಿoದ ಅವಳು ಅoಗಡಿಯ ಮಾಲೀಕನಿಗೆ ಕೇಳುತ್ತಾಳೆ- "ಈ ಡಬ್ಬಿಯನ್ನು ಯಾತಕ್ಕೆ ಉಪಯೋಗಿಸುತ್ತಾರೆ?". ಆಗ ಮಾಲೀಕ- "ಇದನ್ನು ತಣ್ಣನೆ ವಸ್ತುವನ್ನು ತಣ್ಣಗಿಡಲು ಮತ್ತು ಬಿಸಿಯ ವಸ್ತುವನ್ನು ಬಿಸಿಯಾಗಿಡಲು ಉಪಯೋಗಿಸುತ್ತಾರೆ" ಅಂತ ಉತ್ತರಿಸುತ್ತಾನೆ.

ಮಾರನೇ ದಿನ ಅವಳು ಆ ಥರ್ಮೋಸ್ ಡಬ್ಬಿಯನ್ನು ಕಛೇರಿಗೆ ತೆಗೆದುಕೊಂಡು ಹೋಗುತ್ತಾಳೆ. ಆಗ ಅವಳ ಸಹೋದ್ಯೋಗಿ ಹೀಗೆ ಅವಳನ್ನು ಕೇಳುತ್ತಾಳೆ- "ಇದೇನು ಡಬ್ಬಿ, ಹೊಸತಾಗಿದೆ, ಇದರ ವಿಶೇಷತೆ ಏನು?". ಆಗ ಆಕೆ ಹೀಗೆ ಹೇಳುತ್ತಾಳೆ- "ಇದು ಥರ್ಮೋಸ್ ಡಬ್ಬಿ. ಇದನ್ನು ತಣ್ಣನೆ ವಸ್ತುವನ್ನು ತಣ್ಣಗಿಡಲು ಮತ್ತು ಬಿಸಿಯ ವಸ್ತುವನ್ನು ಬಿಸಿಯಾಗಿಡಲು ಉಪಯೋಗಿಸುತ್ತಾರೆ". ಅವಳ ಸಹೋದ್ಯೋಗಿ ಹೀಗೆ ಕೇಳುತ್ತಾಳೆ- "ಇದರಲ್ಲಿ ಈಗ ಏನಿದೆ?"

ಆಕೆ ಅನ್ನುತ್ತಾಳೆ- "ಇದರಲ್ಲಿ ಈಗ ಕಾಫಿ ಮತ್ತು ಐಸ್ ಕ್ರೀಮ್ ಇದೆ" :)

ಶುಕ್ರವಾರ, ಆಗಸ್ಟ್ 31, 2007

ಮದುವೆಯ ಈ ಬಂಧ!

ಶಿರಸಿಯ ಲಿಂಗದಕೋಣ ಕಲ್ಯಾಣಮಂಟಪ ಸುಸಜ್ಜಿತವಾಗಿದ್ದು ಸುತ್ತಲಿನ ಹತ್ತೂರಿಗೆ ಹೆಸರುವಾಸಿಯಾಗಿದೆ. ಶಿರಸಿ-ಸಿದ್ಧಾಪುರದ ಸುತ್ತಮುತ್ತಲಿನ ಬಹುತೇಕ ಮದುವೆಗಳು ಅಲ್ಲಿ ನಡೆಯುತ್ತವೆ. ಅಲ್ಲಿ ಎರಡು ಸಭಾಂಗಣಗಳಿದ್ದು ಮೇಲೆ ಹಾಗೂ ಕೆಳಗೆ ಪ್ರತ್ಯೇಕ ಮದುವೆಗಳು ನಡೆಯುವುದು ಸರ್ವೇಸಾಮಾನ್ಯ. ಇನ್ನು ಕೆಲವು ಬಾರಿ, ಮೇಲೆ ಯಾವುದೇ ಮದುವೆಗಳಿಲ್ಲದಿದ್ದರೆ ಕೆಳಗೆ ಮದುವೆ ನಡೆಸುವುದು, ಸಾಂಪ್ರದಾಯಿಕ ಪದ್ಧತಿಯಂತೆ ನೆಲದ ಊಟ ಹಾಕುವುದು, ಮೇಲೆ ಬಫೇ ಸಿಸ್ಟಂ ನಲ್ಲಿ ಊಟ ಹಾಕುವುದು ಕೂಡ ಹೊಸದೇನಲ್ಲ. ಬಂದವರಿಗೆ ಗಡಿಬಿಡಿಯಿದ್ದರೆ (ಇಲ್ಲದಿದ್ದರೂ) ಬೇಗ ಉಂಡು ಹೋಗಲು ಇದರಿಂದ ಸಹಕಾರಿಯಾಗುತ್ತದೆಂಬುದನ್ನು ಬಾಯಿ ಬಿಟ್ಟೇನೂ ಹೇಳಬೇಕಿಲ್ಲ.

ಸಮಯಕ್ಕೆ ಸರಿಯಾಗಿ ಬರುವುದು ಶಿರಸಿ ಕಡೆಯ ಒಂದು ಪದ್ಧತಿ. ಹಾಗೆಂದು ಇವರೇನೂ ಮಹಾ ಸಮಯಪಾಲಕರೆಂದುಕೊಳ್ಳಬೇಡಿ. ನಾನು ಹೇಳಿದ ಪದ್ಧತಿ ಊಟದ ಸಮಯಕ್ಕೆ ಸರಿಯಾಗಿ ಬರುವುದು. ಮದುವೆ ಬೆಳಿಗ್ಗೆ ೯-೩೦ ಕ್ಕೇ ಇರಲಿ, ೧೨-೦೦ ಘಂಟೆಗೇ ಇರಲಿ, ಹೆಚ್ಚಿನ ಮಹಾಪುರುಷರು ಬರುವುದು ೧೨-೩೦ ರ ನಂತರವೇ. ೧೨-೧೫ ರವರೆಗೆ ಖಾಲಿ ಹೊಡೆಯುವ ಸಭಾಂಗಣ ೧ ಘಂಟೆ ಸುಮಾರಿಗೆ ಜನರಿಂದ ತುಂಬಿ ಗಿಜಿಗುಡುತ್ತಿರುತ್ತದೆ. ೨-೧೫ ಕ್ಕೆ ನೋಡಿದರೆ ಮತ್ತೆ ೧೨-೧೫ ರ ಸ್ಥಿತಿ! ಗಂಡು-ಹೆಣ್ಣಿನ ಆಪ್ತ ಸಂಬಂಧಿಗಳನ್ನು ಬಿಟ್ಟರೆ ಯಾರೂ ಇರುವುದಿಲ್ಲ. ಇದು ಇಂದಿನ ವೇಗದ ಬದುಕಿನ ಫಲವೋ, ಅಥವಾ ಶಿಥಿಲವಾಗುತ್ತಿರುವ ಮಾನವ ಸಂಬಂಧಗಳ ಪ್ರತೀಕವೋ ತಿಳಿಯದು.

ಹೀಗಿರುವಾಗ ಭಾನುವಾರ ಒಂದು ಮದುವೆಗೆ ಹೋಗಿದ್ದೆ. ಬಹಳ ಬಂಧು-ಮಿತ್ರರಿದ್ದಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನ ಮದುವೆಗೆ ಬಂದಿದ್ದರು. ಮದುವೆ ನಡೆಯಿತು. ಈಗ ಊಟದ ಸಮಯ. ಮೇಲಿನ ಸಭಾಂಗಣದಲ್ಲಿ ಯಾವುದೇ ಮದುವೆಯಿರದಿದ್ದರೂ ಬಫೇ ಇಟ್ಟಿರಲಿಲ್ಲ. ಇದನ್ನು ಮೊದಲೇ ಅರಿತಿದ್ದ ಕೆಲವರು ೧೨-೩೦ ಕ್ಕೆ ಪ್ರಾರಂಭವಾಗುವ ಸಂತರ್ಪಣೆಗೆ ೧೨ ಘಂಟೆಗೇ ಹೋಗಿ ಕುಳಿತಿದ್ದರು. ಹಾಗಾಗಿ ಮೊದಲ ಪಂಕ್ತಿಗೆ ಊಟ ಮಾಡಬೇಕೆಂದು ೧೨-೨೫ ಕ್ಕೆ ಎದ್ದು ಸಿದ್ಧವಾದವರಿಗೆ ಜಾಗವೇ ಇಲ್ಲದಂತಾಗಿ ನಂತರದ ಬಾರಿಗೆ ಕಾಯುವಂತಾಯಿತು. ಇನ್ನು ಎರಡನೇ ಪಂಕ್ತಿಗೆ ಹೋಗಲು ಸಾಲು ಬೇರೆ!! ೫೦ ಜನರ ಬಸ್ನಲ್ಲಿ ಸೀಟು ಹಿಡಿಯುವುದಕ್ಕಿಂತ ೨೦೦ ಜನರು ಹಿಡಿಸುವ ಈ ಭೋಜನಶಾಲೆಯಲ್ಲಿ ಜಾಗ ಹಿಡಿಯುವುದೇ ಕಷ್ಟಕರವಾಗಿತ್ತು. ಇದರಿಂದ ನಿಧಾನವಾಗಿ ಬಂದವರ ಗೊಣಗಾಟ ಆರಂಭವಾಯಿತು. "ಬಫೇ ಇಡಬೇಕಾಗಿತ್ತು. ಇಲ್ಲಿ ಇಷ್ಟೊಂದು ರಶ್ ಆಗ್ತಿರಲಿಲ್ಲ", "ಬಫೇ ಇದ್ದಿದ್ದರೆ ಇಷ್ಟು ಹೊತ್ತಿಗಾಗಲೇ ಮನೆಯಲ್ಲಿರಬಹುದಾಗಿತ್ತು" ಎಂಬ ಮಾತುಗಳು ಕೇಳಿ ಬಂದವು. ಆದರೆ ಕಾಯದೆ ವಿಧಿಯಿರಲಿಲ್ಲ! ತಮ್ಮ ಮನೆಯ ಜನರೊಂದಿಗೆ ಒಟ್ಟಿಗೆ ಕುಳಿತು ಉಣ್ಣುವ ಅವಕಾಶ ಬಹುಶಃ ಯಾರಿಗೂ ಸಿಕ್ಕಿರಲಿಕ್ಕಿಲ್ಲ. ಮನೆಯವರೆಲ್ಲರಿಗೂ ಊಟವಾಗದೆ ಮನೆಗೆ ಹೋಗುವಂತಿಲ್ಲವಲ್ಲ! ಉಂಡಾದವರು ಕುಟುಂಬದವರಿಗಾಗಿ, ಉಳಿದವರು ಊಟಕ್ಕಾಗಿ ಕಾಯುವುದೇ ಕೆಲಸವಾಯಿತು. ಬಂದ ಸುಮಾರು ೮೦೦ ಮಂದಿಗೆ ಊಟವಾಗುವ ಹೊತ್ತಿಗೆ ಸಮಯ ೩-೩೦ ಆಗಿತ್ತು. ಬ್ರಾಹ್ಮಣೋ ಬಹುಜನಪ್ರಿಯಃ ಎಂಬ ಉಕ್ತಿ ಬ್ರಾಹ್ಮಣೋ ಭೋಜನಪ್ರಿಯಃ ಎಂದು ಏಕೆ ಬದಲಾವಣೆಗೊಂಡಿದೆ ಎಂಬುದು ಅರಿವಿಗೆ ಬಂದಿತ್ತು.

ಬಂದವರೆಲ್ಲ ಮಾತನಾಡುತ್ತ ಕುಳಿತಿದ್ದಾಗ ಕೆಲವು ಹೆಂಗಸರು ಹೀಗೆ ಮಾತಾಡುತ್ತಿದ್ದುದು ಕೇಳಿಬಂತು: "ಹಿಂದೆಲ್ಲ ೩-೪ ದಿನ ಮೊದಲೇ ಬಂದು ಎಲ್ಲ ತಯಾರಿ ನಡೆಸುತ್ತಿದ್ದೆವು. ಒಟ್ಟಿಗೆ ಬೆರೆತು ಮಾತನಾಡಲು ಸಮಯವಿರುತ್ತಿತ್ತು. ಈಗ ಕಲ್ಯಾಣಮಂಟಪದಲ್ಲಿ ಮದುವೆ ಆಗಿರೋದ್ರಿಂದ ಆ ಅವಕಾಶವೂ ಇಲ್ಲ. ಇವತ್ತು ಬಫೇ ಇಲ್ಲದೇ ಇದ್ದಿದ್ದಕ್ಕೆ ಎಲ್ಲರೂ ಸಿಕ್ಕು ಮಾತನಾಡುವಂತಾಯಿತು". ಯೋಚಿಸಿ ನೋಡಿ! ಅಕ್ಷರಶಃ ಸತ್ಯವಲ್ಲವೆ? ಮನೆಯನ್ನೆಲ್ಲ ಸುಣ್ಣ-ಬಣ್ಣ ಮಾಡಿ, ಅಂಗಳಕ್ಕೆಲ್ಲ ಚಪ್ಪರ ಹಾಕಿ, ಊರಿನ ಜನರೆಲ್ಲ ಒಂದಾಗಿ ಸೇರಿ ನಡೆಸುತ್ತಿದ್ದ ಅಂದಿನ ಕಾಲದ ಮದುವೆಯ ಸೊಬಗು ಮತ್ತೆ ನೋಡಲು ಸಿಕ್ಕೀತೇ? ಅಗ್ನಿಸಾಕ್ಷಿಯಾಗಿ ಸಪ್ತಪದಿ ತುಳಿದು ಆಗಬೇಕಾದ ವಿವಾಹ ಇಂದಿನ ಸಿನಿಮಾಗಳಲ್ಲಿ ತೋರಿಸುವಂತೆ ಹಾರ ಬದಲಾಯಿಸುವ ಶಾಸ್ತ್ರವಾಗುವ ಕಾಲ ಬರದಿದ್ದರೆ ಸಾಕು...

ಬುಧವಾರ, ಆಗಸ್ಟ್ 15, 2007

ನನ್ನ ದೇಶ, ನನ್ನ ಜನ

ಆಗಸ್ಟ್ ೧೫. ಸ್ವಾತಂತ್ರ್ಯ ದಿನಾಚರಣೆ. ಕೆಲವೇ ವರ್ಷಗಳ ಹಿಂದಿನ ಮಾತು. ಸಂಭ್ರಮದಿಂದ ನಮ್ಮದೇ ಮನೆಯ ಕಾರ್ಯಕ್ರಮವೇನೋ ಎಂಬಂತೆ ಬೆಳಿಗ್ಗೆ ಎದ್ದು ಧ್ವಜಾರೋಹಣಕ್ಕೆ ಸಿದ್ಧಪಡಿಸಲು ಹೋಗುತ್ತಿದ್ದೆವು. ತಿಂಡಿ ತಿಂದಿರದಿದ್ದರೂ ಶಾಲೆಯಲ್ಲಿ ಕೊಡುತ್ತಿದ್ದ ಒಂದು ನಿಂಬೆ ಹುಳಿ ಚಾಕಲೇಟ್ ತಿಂದು ಮಧ್ಯಾಹ್ನದವರೆಗೆ ನಗರದ ಮುಖ್ಯ ಮೈದಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಮುಗಿಸಿಕೊಂಡೇ ಮನೆಗೆ ಬರುತ್ತಿದ್ದೆವು. "ಆಹಾ! ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ!" ಎಂದು ಇತಿಹಾಸವನ್ನೂ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರನ್ನೂ ನೆನಪಿಸಿಕೊಳ್ಳುತ್ತಿದ್ದೆವು. ಈಗ? "ವಾವ್! ಒನ್ ಡೇ ಫುಲ್ ರೆಸ್ಟ್ ತಗೋಬಹುದು" ಎನ್ನುವ ಭಾವನೆ. ಧ್ವಜಾರೋಹಣಕ್ಕೆ ಹೋಗುವುದಿರಲಿ, ದೂರದರ್ಶದಲ್ಲಿ ತೋರಿಸುವ ಪರೇಡ್ ನೋಡಲೂ ನಮಗೆ ಪುರಸೊತ್ತಿಲ್ಲ.

೩ನೇ ತರಗತಿಯಲ್ಲಿದ್ದಾಗ ಓದಿದ ಒಂದು ಪದ್ಯದ ಪಲ್ಲವಿ ನೆನಪಿಗೆ ಬರುತ್ತಿದೆ:
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ...
ಆಗ ನಾವಿನ್ನೂ ಚಿಕ್ಕವರು. ಇದು ಕೇವಲ ಕಂಠಪಾಠಕ್ಕಾಗಿಟ್ಟ ಒಂದು ಪದ್ಯವಾಗಿತ್ತು. ಆದರೆ ಈಗ ಅದರ ಅರ್ಥ ನೋಡಿದಾಗ ನಿಜಕ್ಕೂ ಕವಿಯ ಬಗ್ಗೆ ಗೌರವ ಉಕ್ಕುತ್ತದೆ. ಈ ದೇಶ ಏನೇನನ್ನು ಕೊಟ್ಟಿಲ್ಲ ನಮಗೆ: ಇರಲು ನೆಲ, ತಿನ್ನಲು ಅನ್ನ, ಉಸಿರಾಡಲು ಗಾಳಿ, ಕುಡಿಯಲು ನೀರು. ಅವನ್ನು ಎಲ್ಲ ದೇಶಗಳೂ ಕೊಡುತ್ತವೆ, ನಿಜ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ಭಾರತ ನಿಲ್ಲುವುದು ಇದರ ಅನೇಕತೆಯಲ್ಲಿನ ಐಕ್ಯತೆಯಿಂದ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಎಲ್ಲ ಜಾತಿ-ಮತದ ಜನರೊಂದಿಗೆ ಸಹಬಾಳ್ವೆ ನಡಸುವ, ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಇನ್ನಾವ ರಾಷ್ಟ್ರದವರಿಗಿದೆ? ಮರುಭೂಮಿ, ಹಿಮಾಚ್ಛಾದಿತ ಪ್ರದೇಶ, ಕರಾವಳಿ, ಜಲಪಾತ, ಪರ್ವತಶ್ರೇಣಿಗಳೆಲ್ಲವನ್ನೂ ಒಂದೆಡೆ ನೋಡಿ ಪ್ರಕೃತಿಯ ಸೊಬಗನ್ನು ಅನುಭವಿಸುವ ಅದೃಷ್ಟ ಇನ್ನಾವ ನಾಡಿನಲ್ಲಿ ಸಿಕ್ಕೀತು?

ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾವು. ೩೫ ಕೋಟಿ ಇದ್ದ ಜನಸಂಖ್ಯೆ ೧೧೫ ಕೋಟಿ ಆಗಿದೆ. ೧.೨೫ ಡಾಲರ್ ಇದ್ದ ರೂಪಾಯಿ ಬೆಲೆ ೦.೦೨೫ ಡಾಲರ್‍ಗೆ ಇಳಿದಿದೆ. ಆದರೆ ಇವಾವುದರ ಪರಿವೆಯೂ ಜನರಿಗಿದ್ದಂತಿಲ್ಲ. ಇಂದಿನ ಮಾಧ್ಯಮಗಳು ಬಿಂಬಿಸುತ್ತಿಲ್ಲ ಕೂಡ. ದುಡ್ಡಿಗಾಗಿ ದೇಶ ಮಾರಲು ಸಿದ್ಧವಿರುವವರು ನಮ್ಮ ರಾಜಕೀಯ ನಾಯಕರು! ದುಡ್ಡಿಗಾಗಿ ತಮ್ಮನ್ನೇ ಮಾರಿಕೊಂಡಿರುವ ಸಿನಿಮಾ ನಟರು, ಕ್ರಿಕೆಟಿಗರು ನಮ್ಮ ಆದರ್ಶವ್ಯಕ್ತಿಗಳು!! ಲಗೇ ರಹೋ ಮುನ್ನಾ ಭಾಯ್ ಚಿತ್ರದಲ್ಲಿನ ಗಾಂಧೀಜಿ ಹೇಳುವಂತೆ, ದೇಶವೇನೋ ನಮ್ಮದಾಗಿದೆ, ಆದರೆ ಜನ ಪರಕೀಯರಾಗಿದ್ದಾರೆ. ನನ್ನ ತಂದೆ ಆಗಾಗ ಹೇಳುವ ಒಂದು ಸಾಲು ಹೀಗಿದೆ:
ದೇಖ್ ತೇರಾ ಸಂಸಾರ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ್...
ಕಿತನಾ ಬದಲ್ ಗಯಾ ಇನ್‍ಸಾನ್...
ನಿನ್ನೆ ಪೇಪರ್‍ನಲ್ಲಿ ಓದಿದ ಒಂದು ಸುದ್ದಿ: "ಅಕ್ರಮವಾಗಿ ಹರಿಸಲಾಗಿದ್ದ ವಿದ್ಯುತ್ ತಂತಿ ತುಳಿದು ತೆಂಗಿನಕಾಯಿ ಕದಿಯಲು ಹೋಗಿದ್ದ ಇಬ್ಬರ ಸಾವು".
ನೀವೇ ಹೇಳಿ, ನಾವೆಲ್ಲಿಗೆ ಬಂದು ನಿಂತಿದ್ದೇವೆ? ಎತ್ತ ಸಾಗುತ್ತಿದ್ದೇವೆ?

ಬುಧವಾರ, ಆಗಸ್ಟ್ 8, 2007

ಸವಿ ಸವಿ ನೆನಪು!!

ನೀವು ಏನೇ ಹೇಳಿ ಈ ಸಂಗೀತದಲ್ಲಿ ಒಂದು ರೀತಿ ಶಕ್ತಿ ಇದೆ ಕಣ್ರಿ! ನಾನಂತೂ ಹಾಡುಗಳನ್ನು ಸದಾ ಕೇಳುತ್ತಲೇ ಇರುತ್ತೇನೆ. ನನಗೆ ತುಂಬಾ ಇಷ್ಟ ಆಗುವ ಹಿನ್ನಲೆ ಗಾಯಕರೆಂದರೆ ಎಸ್.ಪಿ.ಬಿ., ಕಿಶೋರ್ ಕುಮಾರ್, ಪಿ.ಬಿ.ಎಸ್., ಸೋನು ನಿಗಮ್ ಹಾಗೂ ಶ್ರೇಯಾ ಗೋಶಾಲ್. ಸಂಗೀತವು ಮನಸ್ಸಿಗೆ ಒಂದು ರೀತಿಯಾದ ಆಹ್ಲಾದ ನೀಡುತ್ತದೆ!
ಹೀಗೇ ಹಾಡು ಕೇಳುತ್ತಿರುವ ಸಮಯದಲ್ಲಿ ಸುದೀಪ್ ನಟಿಸಿರುವಂತಹ 'ಮೈ ಆಟೊಗ್ರಾಫ್' ಚಿತ್ರದ ಹಾಡು ಮನಸ್ಸಿಗೆ ತುಂಬಾ ಹಿಡಿಸಿತು. ಈ ಹಾಡು ಕೇಳುತಿದ್ದಂತೆ ನನ್ನ ಬಾಲ್ಯ ನೆನಪಾಯಿತು. ಈ ಹಾಡು ತುಂಬಾ ಅರ್ಥ ಪೂರ್ಣವಾಗಿದೆ.
ಸವಿ ಸವಿ ನೆನಪು ಸಾವಿರ ನೆನಪು
ಸಾವಿರ ಕಾಲಕು ಸವೆಯದ ನೆನಪು
ಎದೆಯಾಳದಲ್ಲಿ ಬಚ್ಚಿಕೊಂಡಿರಿವ
ಅಚ್ಚಳಿಯದ ನೂರೊಂದು ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಎದೆಯಾಳದಲ್ಲಿ ಬಚ್ಚಿಕೊಂಡಿರುವ
ಅಚ್ಚಳಿಯದ ನೂರೊಂದು ನೆನಪು
ಏನೊ ಒಂದು ತೊರೆದ ಹಾಗೆ
ಯಾವುದೊ ಒಂದು ಪಡೆದ ಹಾಗೆ
ಅಮ್ಮನ ಮಡಿಲ ಅಪ್ಪಿದ ಹಾಗೆ
ಕಣ್ಣಂಚಲ್ಲೀ... ಕಣ್ಣೀರ ನೆನಪು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು ...
ಮೊದ ಮೊದಲ್ ಹಿಡಿದ ಬಣ್ಣದ ಚಿಟ್ಟೆ
ಮೊದ ಮೊದಲ್ ಕದ್ದ ಜಾತ್ರೆಯ ವಾಚು
ಮೊದ ಮೊದಲ್ ಸೇದಿದ ಗಣೇಶ ಬೀಡಿ
ಮೊದ ಮೊದಲ್ ಕೂಡಿಟ್ಟ ಹುಂಡಿಯ ಕಾಸು
ಮೊದ ಮೊದಲ್ ಕಂಡ ಟೂರಿಂಗ್ ಸಿನಿಮಾ
ಮೊದ ಮೊದಲ್ ಗೆದ್ದ ಕಬಡ್ಡಿ ಆಟ
ಮೊದ ಮೊದಲ್ ಇದ್ದ ಹಳ್ಳಿಯ ಗರಿ ಮನೆ
ಮೊದ ಮೊದಲ್ ತಿಂದ ಕೈ ತುತ್ತೂಟ
ಮೊದ ಮೊದಲ್ ಅಡಿದ ಚುಕುಬುಕು ಪಯಣ
ಮೊದ ಮೊದಲ್ ಅಳಿಸಿದ ಗೆಳೆಯನ ಮರಣ

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಮೊದ ಮೊದಲ್ ಕಲಿತ ಅರೆ ಬರೆ ಈಜು
ಮೊದ ಮೊದಲ್ ಕೊಂಡ ಹೀರೋ ಸೈಕಲ್
ಮೊದ ಮೊದಲ್ ಕಲಿಸಿದ ಕಮಲಾ ಟೀಚರ್
ಮೊದ ಮೊದಲ್ ತಿಂದ ಅಪ್ಪನ ಏಟು
ಮೊದ ಮೊದಲ್ ಅದ ಮೊಣಕೈ ಗಾಯ
ಮೊದ ಮೊದಲ್ ತೆಗೆಸಿದ ಕಲರ್ ಕಲರ್ ಫೊಟೋ
ಮೊದ ಮೊದಲಾಗಿ ಚಿಗುರಿದ ಮೀಸೆ
ಮೊದ ಮೊದಲಾಗಿ ಮೆಚ್ಚಿದ ಹೃದಯ
ಮೊದ ಮೊದಲ್ ಬರೆದ ಪ್ರೇಮದ ಪತ್ರ
ಮೊದ ಮೊದಲಾಗಿ ಪಡೆದ ಮುತ್ತು

ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಸವಿ ಸವಿ ನೆನಪು ಸವಿ ಸವಿ ನೆನಪು
ಸಾವಿರ ನೆನಪು...
ಅನುಲೇಖ: ಬಾಲ್ಯದ ನೆನಪುಗಳೇ ಹಾಗೆ. ನಮ್ಮ ಮನದಾಳದಲ್ಲಿ ಅಚ್ಚಳಿಯದೆ ಹಾಗೆ ಉಳಿದು ಬಿಡುತ್ತವೆ. ಆ ಬಾಲ್ಯ ಎಷ್ಟೊಂದು ಸುಂದರ ಅಲ್ವಾ?

ಭಾನುವಾರ, ಆಗಸ್ಟ್ 5, 2007

ಕನಸುಗಳು!

ನೀವೇ ಹೇಳಿ, ಕನಸನ್ನು ಯಾರು ಕಾಣುವುದಿಲ್ಲಾ ಅಂತ?

ಈ ಭೂಮಿ ಮೇಲೆ ಹುಟ್ಟಿದ ಪ್ರತಿಯೊಬ್ಬ ಮನಷ್ಯನಿಗೂ ಜೀವನದಲ್ಲಿ ಏನಾದರೊಂದು ಸಾಧನೆ ಮಾಡಬೇಕು ಎನ್ನುವ ಆಸೆ ಇದ್ದೇ ಇರುತ್ತದೆ. ಈ ನಿಟ್ಟಿನಲ್ಲಿ ಕನಸನ್ನು ಸಹ ಕಂಡಿರುತ್ತಾನೆ. ನಮ್ಮ ಪೂರ್ವ ರಾಷ್ಟ್ರಪತಿಗಳಾದ ಡಾ. ಎ. ಪಿ. ಜೆ. ಅಬ್ದುಲ್ ಕಲಾಂ ಹೇಳುವಂತೆ, "ನಾವು ಜೀವನದಲ್ಲಿ ಏನ್ನನ್ನಾದರೂ ಸಾಧಿಸಬೇಕಾದರೆ, ಮೊದಲು ಅದರ ಬಗ್ಗೆ ಕನಸು ಕಾಣುವುದು ಮುಖ್ಯ!" ಅದರೆ ನಮ್ಮಲಿರುವ ದುರಂತ ಎಂಥದು ನೀವೇ ನೋಡಿ, ನಾವು ಕನಸನ್ನೇನೋ ಶ್ರದ್ಧೆಯಿಂದ ಕಾಣುತ್ತೇವೆ, ಆದರೆ ಅದನ್ನು ಸಾಕಾರಗೊಳಿಸುವ ಇಚ್ಛಾ ಶಕ್ತಿ ನಮ್ಮಲ್ಲಿ ಎಷ್ಟು ಜನರಲ್ಲಿರುತ್ತದೆ? ಡಾ. ಕಲಾಂರವರೇ ಹೇಳುವಂತೆ, "ನೀವು ಕಾಣುವ ಕನಸನ್ನು ನಿಜವಾಗಿಸಬೇಕಾದರೆ, ಬೇರೆಯವರು ಕನಸು ಕಾಣುವ ಸಮಯದಲ್ಲಿ ನೀವು ಎಚ್ಚರವಾಗಿರುವುದು ಬಹಳ ಮುಖ್ಯ!" ಅಂದರೆ ನಾವು ಕಾಣುವ ಕನಸನ್ನು ಸಾಕರಗೊಳಿಸಲು ನಾವು ಹಗಲು ರಾತ್ರಿ ಎನ್ನದೆ ಸತತ ಪರಿಶ್ರಮ ಪಡಬೇಕು ಎಂದಾಯಿತು.

ಕೆಲ ದಿನಗಳ ಹಿಂದೆ ನಾನು ನೋಡಿದಂತಹ ಚಿತ್ರವೊಂದರ ಒಂದು ಸನ್ನಿವೇಶದಲ್ಲಿ, ಒಬ್ಬ ತಂದೆ ತನ್ನ ಮಗನಿಗೆ ಕನಸಿನ ಕುರಿತು ಹೇಳುವ ಮಾತುಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಆ ಮಾತುಗಳು ಹೀಗಿದ್ದವು, "ಜೀವನದಲ್ಲಿ ನಿ
ಗೇನಾದರು ಬೇಕೆನಿಸಿದರೆ, ಅದನ್ನು ಹೋಗಿ ಪಡೆದುಕೊ. ಜನರ ಮಾತಿಗೆ ಕಿವಿಗೊಡಬೇಡ. ಜನರಿಗೆ ತಮ್ಮ ಕೈಯಲ್ಲಿ ಏನ್ನನ್ನಾದರು ಸಾಧಿಸಲಾಗದು ಎಂದೆನಿಸಿದರೆ, ನೀವೂ ಸಹ ಅದನ್ನು ಸಾಧಿಸಲಾರಿರಿ ಎನ್ನುತ್ತಾರೆ. ನಿಮ್ಮ ಬಳಿ ಕನಸಿದ್ದರೆ, ಅದನ್ನು ಜಾಗ್ರತೆಯಿಂದ ಕಾಪಾಡಿ.. ಅದು ಸಾಕಾರಗೊಳ್ಳುವತನಕ..." ನಿಮ್ಮ ಮನದಲ್ಲಿ ಚಿಗುರುವಂತಹ ಕನಸುಗಳಿಗೆ, ಈ ಜಗತ್ತನ್ನು ನೊಡುವ ಅವಕಾಶ ಮಾಡಿಕೊಡಿ... ಪ್ಲೀಸ್!!! ಅದನ್ನು ದಯವಿಟ್ಟು ಭ್ರೂಣದಲ್ಲಿಯೇ ಹತ್ಯೆಗಯ್ಯಬೇಡಿ.

ನಾವು ಜೀವನದಲ್ಲಿ ಸ್ಫೂರ್ತಿಗಾಗಿ ಎಲ್ಲೆಲ್ಲೋ ಹುಡುಕಾಟ ನಡೆಸುತ್ತೇವೆ. ಆದರೆ ಒಂದು ಕ್ಷಣ ಈ ಹುಡುಕಾಟ ನಿಲ್ಲಿಸಿ, ನಿಮ್ಮ ಮನದಲ್ಲೇ ಹುದುಗಿ ಹೋಗಿರುವಂತಹ ಅಸಂಖ್ಯಾತ ಕನಸುಗಳಿಗೆ ಒಮ್ಮೆ ನಿಮ್ಮ ಕಿವಿಕೊಟ್ಟು ನೋಡಿ. ನಿಮಗೆ ನಿಮ್ಮ ಹುಡುಕಾಟ ಎಷ್ಟು ನಿರರ್ಥಕ ಎನಿಸುತ್ತದೆ. ಹಾಗಾದರೆ ಕನಸುಗಳಿಗೂ ಮಾತನಾಡಲು ಬರುತ್ಯೆ? ಹೌದ್ ಕಣ್ರೀ! ಆ ಪಿಸು ಮಾತುಗಳನ್ನು ಕೇಳುವಂತಹ ವ್ಯವಧಾನ ನಮ್ಮಲ್ಲಿ ಇರಬೇಕು ಅಷ್ಟೇ!!! ನೀವು ಯಾವುದೇ ಒಬ್ಬ ಯಶಸ್ವಿ ವ್ಯಕ್ತಿಯನ್ನು, ಅವರ ಯಶಸ್ಸಿನ ಗುಟ್ಟು ಏನು ಎಂದು ಕೇಳಿನೋಡಿ. ಅವರು ಖಂಡಿತವಾಗಿಯೂ ತಮ್ಮ ಯಶಸ್ಸಿನ ಬೇರು, ತಾವು ಕಂಡಂತಹ ಆ ಒಂದು ಪುಟ್ಟ ಕನಸು, ಎಂಬುದನ್ನು ಹೆಮ್ಮೆಯಿಂದ ಸ್ಮರಿಸುತ್ತಾರೆ. ಹಾಗಾದರೆ ಕನಸುಗಳ ಶಕ್ತಿ ಎಂಥಹದು ಎಂಬುದನ್ನು ನೀವೇ ಲೆಕ್ಕಹಾಕಿ.

ಕನಸುಕಾಣುವುದಕ್ಕೆ ಕಾಸು ಕೊಡಬೇಕೇ? ಇಲ್ಲ. ಆದರೆ ಅದನ್ನು ಸಾಕಾರಗೊಳಿಸಲು ಮಾತ್ರ ಒಳ್ಳೆಯ ಬೆಲೆಯನ್ನೇ ತೆರಬೇಕು! ದಯವಿಟ್ಟು ನೀವು ಕಾಣುವ ಕನಸನ್ನು ಕೇವಲ ಒಬ್ಬ ತಿರುಕನ ಕನಸಾಗಲು ಬಿಡಬೇಡಿ... It certainly deservers more respect!!!

ನೀವು ಸಹ ಏನಾದರು ಕನಸು ಕಂಡಿದ್ದಿರಾ? ಹಾಗದರೆ ನೀವು ಯಾರಿಗೋಸ್ಕರ ಕಾಯುತ್ತಿರುವಿರಿ? ಹೋಗಿ... ನೀವು ಕಂಡಂತಹ ಕನಸನ್ನು ಸಾಕಾರಗೊಳಿಸಿಕೊಳ್ಳಿ! ಗುಡ್ ಲಕ್!!!

ಗುರುವಾರ, ಜುಲೈ 26, 2007

ಬಹುದಿನಗಳ ಬಯಕೆ...

"ಅಮೃತಧಾರೆ" ಚಿತ್ರದ
ನೆನಪಿದೆಯೆ ಮೊದಲ ನೋಟ...
ನೆನಪಿದೆಯೆ ಮೊದಲ ಸ್ಪರ್ಶ...
ನೆನಪಿದೆಯೆ ಮತ್ತನು ತಂದ ಆ ಮೊದಲ ಚುಂಬನ...

ನೆನಪಿದೆಯೆ ಮೊದಲ ಕನಸು...
ನೆನಪಿದೆಯೆ ಮೊದಲ ಮುನಿಸು....
ನೆನಪಿದೆಯೆ ಕಂಬನಿ ತುಂಬಿ ನೀನಿತ್ತ ಸಾಂತ್ವನ...

ನೆನಪಿದೆಯೆ ಮೊದಲ ಸರಸ...
ನೆನಪಿದೆಯೆ ಮೊದಲ ವಿರಸ...
ನೆನಪಿದೆಯೆ ಮೊದಲು ತಂದ ಸಂಭ್ರಮದ ಕಾಣಿಕೆ...

ನೆನಪಿದೆಯೆ ಮೊದಲ ಕವನ...
ನೆನಪಿದೆಯೆ ಮೊದಲ ಪಯಣ...
ನೆನಪಿದೆಯೆ ಮೊದಲ ದಿನದ ಭರವಸೆಯ ಆಸರೆ...
ಎಂಬ ಸಾಲುಗಳು ಮೊದಲ ನೋಟಕ್ಕೆ ಕೇವಲ ಹಾಡಿನ ಸೊಲ್ಲುಗಳೆಂದೆನಿಸಿದರೂ, ಅರ್ಥಪೂರ್ಣವಾಗಿವೆ. ಇಂದು ನೆನಪಿರುವ ಎಷ್ಟೊಂದು ವಿಷಯಗಳು ನಾಳೆ ನಮ್ಮ ನೆನಪಿನಂಗಳದಿಂದ ಮರೆಯಾಗಬಹುದು. ಅಂಥ ಕೆಲವು ಘಟನೆಗಳನ್ನು ಬರೆದಿಟ್ಟರೆ ಮುಂದೊಂದು ದಿನ ನಮಗೆ ಸಂತಸ ತರಬಹುದಲ್ಲವೆ?

ಬಹಳ ದಿನಗಳಿಂದಲೂ ಇಂತಹುದೊಂದು ಬ್ಲಾಗ್ ಅನ್ನು ಆರಂಭಿಸಬೇಕೆಂಬ ಆಸೆಯಿತ್ತು. ಗೆಳೆಯರೊಂದಿಗೆ ಆರಂಭಿಸಿರುವ ಈ ಬ್ಲಾಗ್ ಯಶಸ್ವಿಯಾಗಿ ಮುಂದುವರೆಯುವುದೆಂದು ಆಶಿಸುತ್ತೇನೆ...