ಶುಕ್ರವಾರ, ಸೆಪ್ಟೆಂಬರ್ 18, 2009

ಮರಳಿ ಮರೆಯಾಗಿ...

ಬಾಳ ದೋಣಿ ಅಂಬಿಗರಿಲ್ಲದೆ ಅನಾಥವಾಗಿ ಬರೋಬ್ಬರಿ ಏಳು ತಿಂಗಳಾಯಿತು. ಕೆಲಸದ ಒತ್ತಡ, ಬರೆಯಬೇಕೆಂದರೂ ಬೇಡವೆನ್ನುವ ಮನಸು, ಓದುವುದರಲ್ಲೂ ಕಂಡುಬಂದ ನಿರಾಸಕ್ತಿ - ಹೀಗೆ.. ಕಾರಣಗಳು ಹಲವಾರು. ಇಲ್ಲಿಯವರೆಗೆ ನಡೆದಿದ್ದನ್ನು ಸಂಕ್ಷಿಪ್ತವಾಗಿ ಹೇಳಿಕೊಳ್ಳುವ ಬಯಕೆ:
  • ಫೆಬ್ರುವರಿಯಲ್ಲಿ ಬೆಂಗಳೂರಿನ ಸಮೀಪವಿರುವ ಸ್ಕಂಧಗಿರಿಗೆ ಹೋಗಿದ್ದೆವು. ಆದರೆ ನಾವು ಹೋದ ದಿನ ಮೋಡವೇ ಇಲ್ಲದೆ ನನಗೆ ಮತ್ತೆ ನಿರಾಸೆಯಾಯಿತು.
  • ಮಾರ್ಚಿನಲ್ಲಿ ಊರಿನಿಂದ ಬರುವಾಗ ಬಸ್ಸಿನಲ್ಲಿ "ದಟ್ಸ್-ಕನ್ನಡ"ದ ಶ್ಯಾಮಸುಂದರ್ ಅವರನ್ನು ಭೇಟಿಯಾಗಿದ್ದೆ. ಬ್ಲಾಗಿಗರ ಕೂಟ ನಡೆದು ಅಂದಿಗೆ ಸರಿಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ಅದನ್ನು ನೆನಪಿಸಿಕೊಂಡೆವು.
  • ಏಪ್ರಿಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಕೇರಳದ ವಯನಾಡಿಗೆ ಹೋಗಿದ್ದೆವು. ಅದೊಂದು ಅಭೂತಪೂರ್ವ ಅನುಭವ.
  • ಈಗ ಸುಮಾರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಲಿನಕ್ಸ್ ಅನ್ನೇ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಇಲ್ಲದೆಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ. ಈ ಲೇಖನವನ್ನು ಬರೆಯುತ್ತಿರುವುದೂ ಉಬುಂಟು ಲಿನಕ್ಸ್ ನಲ್ಲಿಯೇ. ಆರಂಭದಲ್ಲಿ ಕನ್ನಡ ಬಳಸುವಲ್ಲಿ ಸ್ವಲ್ಪ ತೊಡಕಾದಾಗ ಸಹಕರಿಸಿದ ಓಂ ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
  • ಮುಂಚೆ ಸೌಹಾರ್ದಯುತವಾಗಿದ್ದ ಕನ್ನಡ ಬ್ಲಾಗ್ ಲೋಕಕ್ಕೆ ಈಗ ಗುಂಪುಗಾರಿಕೆ ತಲೆದೋರಿದಂತೆ ಕಾಣುತ್ತಿದೆ. (ಇದು ನನ್ನ ಸ್ವಂತ ಅನಿಸಿಕೆ ಮಾತ್ರ) ಇದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಅಪಾಯಕಾರಿ ಬೆಳವಣಿಗೆ.
  • ಸಾವಿರದಷ್ಟು ಬ್ಲಾಗ್ ಬರಹಗಳನ್ನು ಓದುವುದು ಬಾಕಿ ಇದೆ. ಎಂದು ಓದಿ ಮುಗಿಸುವೆನೋ ತಿಳಿದಿಲ್ಲ. ಬ್ಲಾಗ್ ಓದುವಲ್ಲಿ, ಬರೆಯುವಲ್ಲಿ ಈಗೆರಡು ವರ್ಷಗಳ ಹಿಂದೆ ಇದ್ದ ಆಸಕ್ತಿ, ಹುರುಪು ಈಗ ಉಳಿದಿಲ್ಲ.