ಸೋಮವಾರ, ಆಗಸ್ಟ್ 29, 2011

ಜ್ಞಾನದ ಹರಿವು

ನಕ್ಷತ್ರಗಳ ಮೊತ್ತ
ಎಣಿಸಿದಷ್ಟು ನೋಡ

ಅಬ್ಧಿಯ ಆಳ
ಮುಳುಗಿದಷ್ಟು ನೋಡ

ಭೂಮಿಯ ವಿಸ್ತಾರ
ಅಗೆದಷ್ಟು ನೋಡ

ಆಕಾಶದ ಅಗಲ
ಅಳೆದಷ್ಟು ನೋಡ

ಜ್ಞಾನದ ಹರಿವು
ನಕ್ಷತ್ರಾಬ್ಧಿಭೂಮ್ಯಾಕಾಶ ನೋಡ

ಭಾನುವಾರ, ಆಗಸ್ಟ್ 14, 2011

ಕೆಚ್ಚದೆಯ ಕರುಳ ಕುಡಿಗಳೇ..

ಭಾರತ ಮಾತೆಯ ಕೆಚ್ಚದೆಯ ಕರುಳ ಕುಡಿಗಳೇ,
ಮನವ ಮಾತೃಭೂಮಿಗೆ ಮುಡಿಸಿ,
ನೈಜ ಬದುಕ ಬಿಂಬಿಸುವ ಆಚರಣೆ ಎಲ್ಲಿಹುದು,
ಸ್ವಂತ ಸಂಸ್ಕೃತಿಯ ಪರಿಭಾಷೆ ಎನಿಸುವ ನಡತೆ ಎಲ್ಲಿಹುದು,
ಒಗ್ಗಟ್ಟ ಬಲವು ಮೆರೆಸುವ ಆ ಏಕಮತವೆಲ್ಲಿಹುದು,
ಸಹನೆಯ ಸರಿಯಾದ ಅರ್ಥವೆಲ್ಲಿಹುದು,
ಪ್ರಶ್ನಿಸು ನಿನ್ನನೊಮ್ಮೆ ನೀ,
ತಿರುಗಿ ನೋಡೊಮ್ಮೆ ವೀರ ಮನಗಳ ನಡೆದ ದಾರಿಯನು,
ಗುರಿಯೊಂದೆ ಬದುಕಿನಲಿ,
ಬಲವೊಂದು ಮುಷ್ಟಿಯಲಿ,
ಕಠಿಣ ದಾರಿಯ ಕರಗಿಸಿ,
ರಕ್ತದೋಕುಳಿಯ ಹರಿಸಿ,
ಎಲ್ಲಿರುವರಲ್ಲಿಂದ ಸ್ವಂತ ಜೀವನ ಮರೆತು,
ಸ್ವಾತಂತ್ರ ಪಡೆದ ವೀರ ಜನತೆಯರತ್ತ,
ಈ ಮಾತೃಭೂಮಿಯ ಮುದ್ದಿನ ಕಂದಗಳತ್ತ.
ಪ್ರಶ್ನಿಸೊಮ್ಮೆ ನಿನ್ನ ನೀ,
ಎಲ್ಲಿರುವೆವು ಇಂದು ನಾವು ಸ್ವಾತಂತ್ರ್ಯದ ಅರ್ಥದಲಿ...

ಸೋಮವಾರ, ಆಗಸ್ಟ್ 8, 2011

ಬರಬಾರದೇ ಒಮ್ಮೆ

ಬರಬಾರದೇ ಒಮ್ಮೆ
ಕಳೆದು ಹೋದ ನನ್ನ ಬಾಲ್ಯ
ತರಬಾರದೇ ಒಮ್ಮೆ
ಮೊಗದಿ ಮುಗ್ಧ ನಗುವಿನ ಲಾಸ್ಯ |ಪ|

ಮರ ಕೋತಿ ಕಣ್ಣಾ ಮುಚ್ಚಾಲೆ
ಕಳ್ಳ ಪೊಲೀಸ್ ರಾಜ ರಾಣಿ
ನಾಗರ ಪಂಚಮಿಗೆ ಉಯ್ಯಾಲೆ
ಮಳೆ ಬಂದರೆ ಕಾಗದ ದೋಣಿ |೧|

ಯಾರಿಗೆ ಬೇಕು ತೆಂಗಿನ ಕಾಯಿ
ಬೇಕಿದ್ದಿದ್ದು ಕೇವಲ ಕರಟ
ಬಯ್ತಾ ಇದ್ರೂ ತಂದೆ ತಾಯಿ
ಆಡ್ತಾ ಇದ್ದೆ ಲಗೋರಿ ಆಟ |೨|

ಇದ್ದರಾಯ್ತು ಬಾಲು ಬ್ಯಾಟು
ಇಲ್ದೇ ಹೋದರೆ ಚಿನ್ನಿ ದಾಂಡು
ಬೇಕೇ ಇಲ್ಲ ಗರಿಗರಿ ನೋಟು
ಅದು ಕೇವಲ ಕಾಗದ ತುಂಡು |೩|