ಗುರುವಾರ, ಆಗಸ್ಟ್ 28, 2008

ಸುಭಾಷಿತಗಳು

ಒಳ್ಳೆಯ ಮಾತನ್ನು ಯಾರೇ ಹೇಳಲಿ, ಹೇಗೇ ಹೇಳಲಿ, ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಸಂಸ್ಕೃತದಲ್ಲಿ ಇಂಥ ಸೂಕ್ತಿಗಳ ಭಂಡಾರವೇ ಇದೆ. ಸುಭಾಷಿತಗಳ ಬಗ್ಗೆ ಹೀಗೆ ಹೇಳಲ್ಪಟ್ಟಿದೆ:

सुभाषितरसस्याग्रे सुधा भीता दिवं गता |

ಸುಭಾಷಿತರಸಸ್ಯಾಗ್ರೇ ಸುಧಾ ಭೀತಾ ದಿವಂ ಗತಾ |

ಅಂದರೆ, ಸುಭಾಷಿತದ ರಸದ ಮುಂದೆ ಅಮೃತವೂ ಕೂಡ ಹೆದರಿ ಸ್ವರ್ಗಕ್ಕೆ ಹೋಯಿತು ಎಂದು. ಸಂಸ್ಕೃತದಲ್ಲಿರುವ ಸಾವಿರಾರು ಸುಭಾಷಿತಗಳನ್ನು ಓದುತ್ತಾ ಹೋದಂತೆ ಇದು ಅತಿಶಯೋಕ್ತಿಯೆನಿಸದು.

ಭರ್ತೃಹರಿಯ ಶೃಂಗಾರ ಶತಕ, ನೀತಿ ಶತಕ, ವೈರಾಗ್ಯ ಶತಕ ಇವು ಒಂದಕ್ಕಿಂತ ಒಂದು ಚೆನ್ನಾಗಿವೆ. ಅಲ್ಲದೆ ಕಾಳಿದಾಸ, ಭಾಸ, ಮುಂತಾದ ಕವಿಗಳ ನಾಟಕ, ಕಾವ್ಯಗಳ ಮಧ್ಯೆ ಬರುವ ಸುಭಾಷಿತಗಳೂ ಅಮೂಲ್ಯ ನೀತಿಗಳನ್ನು ಹೇಳುತ್ತವೆ. ಅಲ್ಲದೆ ರಾಮಾಯಣ, ಮಹಾಭಾರತಗಳ ನಡುವೆ ಕೂಡ ಸುಭಾಷಿತಗಳು ಕಂಡುಬರುತ್ತವೆ.

ನನಗೆ ಕೆಲವು ಸುಭಾಷಿತಗಳು ಪ್ರಿಯವಾದವುಗಳು. ಬರೆಯಬೇಕೆಂದಾಗಲೆಲ್ಲ ಕೆಲವು ಸುಭಾಷಿತಗಳನ್ನು ಬರೆಯುತ್ತಿರುತ್ತೇನೆ...

ಸದ್ಯಕ್ಕೆ ನನ್ನ ಫೇವರಿಟ್ ಸುಭಾಷಿತ:

न चोरहार्यं न च राजहार्यं
न भ्रातृभाज्यं न च भारकारी |
व्यये कृते वर्धत एव नित्यं
विद्याधनं सर्वधनप्रधानम् ||

ನ ಚೋರ ಹಾರ್ಯಂ ನ ಚ ರಾಜ ಹಾರ್ಯಂ
ನ ಭ್ರಾತೃ ಭಾಜ್ಯಂ ನ ಚ ಭಾರಕಾರೀ |
ವ್ಯಯೇ ಕೃತೇ ವರ್ಧತ ಏವ ನಿತ್ಯಮ್
ವಿದ್ಯಾಧನಂ ಸರ್ವಧನಪ್ರಧಾನಂ ||

ಕಳ್ಳರಿಂದ ಕದಿಯಲಾಗದ, ರಾಜರಿಂದ ಕಸಿದುಕೊಳ್ಳಲಾಗದ, ಅಣ್ಣತಮ್ಮಂದಿರಲ್ಲಿ ಹಂಚಿಕೊಳ್ಳಲು ಬಾರದ, ಭಾರವಲ್ಲದ, ಖರ್ಚು ಮಾಡಿದಷ್ಟೂ ಹೆಚ್ಚಾಗುತ್ತಲೇ ಹೋಗುವ ವಿದ್ಯಾಧನವೇ ಎಲ್ಲ ಧನಗಳಲ್ಲಿ ಮುಖ್ಯವಾದುದು, ಉತ್ತಮವಾದುದು.

ಇವತ್ತು ಒಬ್ಬನ ಬಳಿ ೧ ಕೋಟಿ ರೂಪಾಯಿ ಇದೆ ಎಂದುಕೊಂಡರೆ ನಾಳೆ ಇರುವುದು ಅವನಿಗೇ ಅನುಮಾನ. ದರೋಡೆ ಆಗಬಹುದು, ಇನ್‌ಕಂ ಟ್ಯಾಕ್ಸ್ ದಾಳಿ ಆಗಬಹುದು ಅಥವಾ ಇನ್ನೇನೋ ಆಗಿ ಸರ್ಕಾರ ಎಮರ್ಜೆನ್ಸಿ ಘೋಷಿಸಿ ಮುಟ್ಟುಗೋಲು ಹಾಕಿಕೊಳ್ಳಬಹುದು. ಅದೇ ಸಂಪಾದಿಸಿದ ಜ್ಞಾನ ನಾಳೆ ಖಂಡಿತ ಇರುತ್ತದೆ. ಸಂಪಾದಿಸಿದ ದುಡ್ಡು ಇಡಲು ಜಾಗ ತಿನ್ನುತ್ತದೆ, ಭಾರವಾಗುತ್ತದೆ, ಆದರೆ ಇವತ್ತು ನಾನು ೨೦೦ ಪುಟ ಓದಿದೆ, ನನ್ನ ತಲೆ ೫೦ ಗ್ರಾಂ ಹೆಚ್ಚು ತೂಗುತ್ತಿದೆ ಎಂದು ಯಾರಾದರೂ ಹೇಳಲಾಗುತ್ತದೆಯೇ? ಊಹೂಂ, ಇಲ್ಲ. ಅಪ್ಪನ ಬಳಿ ೪ ಡಿಗ್ರಿ ಇದೆ. ನಾಳೆ ಮಕ್ಕಳು ಬೇರೆಯಾದರೆ ಅಣ್ಣನಿಗೆರಡು ಡಿಗ್ರಿ, ತಮ್ಮನಿಗೆರಡು ಡಿಗ್ರಿ ಇರಲಿ ಎನ್ನಲಾಗುತ್ತದೆಯೇ? ಇಲ್ಲ. ಅವರವರು ಸಂಪಾದಿಸಿದ್ದು ಅವರಿಗೆ. ಅಷ್ಟೆ ಅಲ್ಲ, ಬೇರೆ ಎಲ್ಲ ಸಂಪತ್ತುಗಳಿಗೆ ವ್ಯತಿರಿಕ್ತವಾಗಿ ವ್ಯಯಿಸಿದಷ್ಟೂ, ಬೇರೆಯವರಿಗೆ ಹಂಚಿದಷ್ಟೂ ಹೆಚ್ಚಾಗುವ ಏಕೈಕ ಸಂಪತ್ತು ಜ್ಞಾನಸಂಪತ್ತು. ಹಾಗಾಗಿಯೇ, ವಿದ್ಯಾಧನಂ ಸರ್ವಧನ ಪ್ರಧಾನಂ.

ವಿ. ಸೂ: ನನಗೆ ಸುಭಾಷಿತಗಳ ಬಗ್ಗೆ ಬರೆಯಲು ಪ್ರೇರೇಪಣೆಯಾದ ಹಂಸಾನಂದಿ ಅವರಿಗೆ ಧನ್ಯವಾದಗಳು :-)

ಗುರುವಾರ, ಆಗಸ್ಟ್ 14, 2008

ನಮ್ಮ ನಾಡ ಯೋಧರು...

Indian army in Kashmir

ಧೀರ ವೀರ ಶೂರರು ನಮ್ಮ ನಾಡ ಯೋಧರು
ದೇಶವನ್ನು ಪೊರೆವರು ಸ್ವಹಿತವನ್ನು ನೋಡರು

ಜೊತೆಗೆ ಇಲ್ಲ ಬಂಧು-ಬಳಗ-ಅಕ್ಕ-ತಂಗಿ-ಅಪ್ಪ-ಅಮ್ಮ
ಸ್ವಾರ್ಥರಹಿತ ರಕ್ಷಕರಿಗೆ ಜನರೇ ಇಲ್ಲಿ ಅಣ್ಣ-ತಮ್ಮ
ಹತ್ತಬೇಕು ಗುಡ್ಡ ಬೆಟ್ಟ, ಅಲೆಯಬೇಕು ಕಾಡು-ಮೇಡು
ಇವರು ಕೂಡ ಸುಖವ ಬಯಸೆ ಹೇಗೆ ಹೇಳಿ ನಮ್ಮ ಪಾಡು?

ಗಡಿವಲಯದ ದಾಳಿಕೋರ ವೈರಿಗಳಿಗೆ ಕಲಿಗಳು
ಹೃದಯವಂತ ಮನುಜರು ಮನುಷ್ಯರೂಪಿ ಹುಲಿಗಳು
ಚಳಿಯೆ ಇರಲಿ ಮಳೆಯೆ ಇರಲಿ ಧಗೆಯೆ ಇರಲಿ ದುಡಿವರು
ನಾಡಿಗಾಗಿ ತಮ್ಮ ಪ್ರಾಣ ಲೆಕ್ಕಿಸದೇ ಮಡಿವರು

ಅಕಾಲಮೃತ್ಯು ಪಾತ್ರರಾದ ಶತ-ಶತಾದಿ ಹುತಾತ್ಮರು
ದೇಶ ಸೇವೆ ಈಶ ಸೇವೆ ಎಂದರಿತ ಮಹಾತ್ಮರು
ಪ್ರಾಣವನ್ನು ತೆತ್ತರು ಸುರಿಸಿ ತಮ್ಮ ನೆತ್ತರು
ಮತ್ತೆ ಮರಳಿ ಬಾರರಿವರು ನಾವು ಎಷ್ಟೆ ಅತ್ತರು

Indian army at Kargil


ಪ್ರತಿ ವರ್ಷ ನಮ್ಮ ದೇಶ ಸ್ವತಂತ್ರವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಸ್ವಾತಂತ್ರ್ಯ ತಂದು ಕೊಟ್ಟವರ, ಆ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹಗಲಿರುಳೆನ್ನದೆ ದೇಶ ಕಾಯುವ ಸೈನಿಕರ ಬಗ್ಗೆ ಕೂಡ ಯೋಚಿಸುವುದು ಒಳಿತಲ್ಲವೇ?

ಎಲ್ಲರಿಗೂ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.