ಮಂಗಳವಾರ, ಜುಲೈ 29, 2008

ನಾನೊಬ್ಬ ಮೂರ್ಖ

ರೆಡ್ ಸಿಗ್ನಲ್ ಬಿದ್ದಿದೆ. ಫ್ರೀ ಲೆಫ್ಟ್ ಇಲ್ಲವೆಂದು ಬೋರ್ಡು ಹಾಕಿದ್ದಾರೆ. ಸಿಗ್ನಲ್ ಹಸಿರಾಗಲು ಕಾಯುತ್ತಾ ನಿಂತಿದ್ದೇನೆ. ನನ್ನ ಹಿಂದಿಂದ ಬಂದ ಒಬ್ಬ ನನ್ನ ಪಕ್ಕ ನಿಲ್ಲಿಸಿದ. ಆಚೀಚೆ ನೋಡಿದ. ಯಾರೂ ಪೋಲೀಸರಿಲ್ಲ. ವಾಹನಗಳೂ ಬರುತ್ತಿಲ್ಲ. ತನ್ನ ಪಾಡಿಗೆ ಎಡ ರಸ್ತೆಗೆ ತಿರುಗಿ ಹೋಗಿಬಿಟ್ಟ. ನಾನಿನ್ನೂ ಕಾಯುತ್ತಲೇ ಇದ್ದೇನೆ...
ನಾನೊಬ್ಬ ಮೂರ್ಖ.

ವೇಗವಾಗಿ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಸಿಗ್ನಲ್ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡಿದೆ. ಇದ್ದ ಬಲವನ್ನೆಲ್ಲಾ ಹಾಕಿ ಬ್ರೇಕ್ ತುಳಿದು ಬೈಕ್ ನಿಲ್ಲಿಸಿದೆ. ಅಷ್ಟರಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದೆ. ನನ್ನ ಹಿಂದಿನಿಂದ ಬಂದ ಇನ್ನೊಬ್ಬ ಇನ್ನೂ ಹಸಿರು ದೀಪವೆ ಇದೆಯೇನೋ ಎಂಬಂತೆ ಮುಂದಕ್ಕೆ ನಡೆದ. ಏನೂ ಆಗಲಿಲ್ಲ. ಆತ ಮುಂದೆ ನಡೆದ. ಮತ್ತೆ ನನ್ನ ಸರತಿ ಬರಲು ನಾನಿನ್ನೂ ೬ ನಿಮಿಷ ಕಾಯಬೇಕು...
ನಾನೊಬ್ಬ ಮೂರ್ಖ.

ಆಫೀಸಿನಿಂದ ಹೊರಗೆ ಬಂದೆ. ನನಗೆ ಹೋಗಬೇಕಾಗಿರುವುದು ಬಲಕ್ಕೆ. ಆದರೆ ಮಧ್ಯ ಡಿವೈಡರ್ ಇರುವುದರಿಂದ ಯೂ-ಟರ್ನ್ ಸಿಗುವವರೆಗೂ ಎಡಕ್ಕೆ ಹೋಗಿ ಅಲ್ಲಿ ತಿರುಗಿಸಿಕೊಂಡು ಬರಬೇಕು. ಏನಿಲ್ಲವೆಂದರೂ ೫ ನಿಮಿಷ ತಗುಲುತ್ತದೆ. ಇರಲಿ ಎಂದು ಎಡಕ್ಕೆ ಹೊರಳುತ್ತೇನೆ. ಅಲ್ಲಿ ಸಿಗ್ನಲ್ ಬಿದ್ದಿದೆ. ಅದೆಲ್ಲ ಮುಗಿದು ಮರಳಿ ಆಫೀಸಿನ ಮುಂದೆ ಬರುವಷ್ಟರಲ್ಲಿ ೧೦ ನಿಮಿಷವಾಗಿದೆ. ನನ್ನ ಸಹೋದ್ಯೋಗಿ, ಆಗಷ್ಟೆ ಹೊರಗೆ ಬಂದವನು ರಾಜಾರೋಷವಾಗಿ ಬಲಕ್ಕೆ ತಿರುಗಿ ಸ್ವಲ್ಪವೇ ದೂರದಲ್ಲಿ ಇರುವ ಕ್ರಾಸಿಂಗ್ ನಲ್ಲಿ ರಸ್ತೆ ದಾಟಿ ನನ್ನನ್ನು ಸೇರಿಕೊಂಡಿದ್ದಾನೆ. ನಾನು ಏನಿಲ್ಲವೆಂದರೂ ಒಂದೈದು ರೂಪಾಯಿ ಪೆಟ್ರೋಲ್ ಕಳೆದುಕೊಂಡೆ. ಆತ ಉಳಿಸಿದ...
ನಾನೊಬ್ಬ ಮೂರ್ಖ.

ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೆ ವಾಹನಗಳು ನಿಂತಿವೆ. ನಾನು ಕಾರನ್ನು ಅವುಗಳ ಹಿಂದೆ ನಿಲ್ಲಿಸಿದೆ. ನನ್ನ ಹಿಂದಿಂದ ಬಂದ ರಿಕ್ಷಾದವನೊಬ್ಬ ನಿಂತಿದ್ದ ಎಲ್ಲ ವಾಹನಗಳನ್ನೂ ಓವರ್ಟೇಕ್ ಮಾಡಿ ಗೇಟಿನ ಬಳಿ ಹೋಗಿ ನಿಲ್ಲಿಸಿದ. ಅವನ ಹಿಂದೆ ಇನ್ನೊಬ್ಬ ಕಾರಿನವನೂ ಅಲ್ಲೇ ಹೋಗಿ ನಿಲ್ಲಿಸಿದ. ರೈಲು ಹೋಯಿತು. ಗೇಟ್ ತೆಗೆದಾಗ ಮುಂದಿನಿಂದ ಬರುವ ವಾಹನಗಳಿಗೆ ಜಾಗವಿರಲಿಲ್ಲ. ಹಾಗಾಗಿ ಆ ರಿಕ್ಷಾ ಮತ್ತು ಕಾರಿನವರನ್ನೇ ಮೊದಲು ಬಿಡಲಾಯಿತು. ನನ್ನ ಮುಂದಿದ್ದ ಎಲ್ಲಾ ವಾಹನಗಳೂ ಹಳಿ ದಾಟಿ ನಾನು ದಾಟುವಷ್ಟರಲ್ಲಿ ೧೫ ನಿಮಿಷ ಆಯಿತು. ನಾನೂ ಆ ರಿಕ್ಷಾದವನಂತೆ ಮಾಡಬಹುದಿತ್ತೇನೋ, ಆದರೆ ಮಾಡಲಿಲ್ಲ...
ನಾನೊಬ್ಬ ಮೂರ್ಖ.

ಟ್ರಾಫಿಕ್ ಜಾಮ್ ಆಗಿದೆ. ಹಿಂದಿನಿಂದ ಅಂಬ್ಯುಲೆನ್ಸ್ ಒಂದು ಶಬ್ದ ಮಾಡುತ್ತಾ ಬರುತ್ತಿದೆ. ಹೇಗಾದರೂ ಅದಕ್ಕೆ ಜಾಗ ಮಾಡಿಕೊಡಬೇಕೆಂದು ಇದ್ದಿದ್ದರಲ್ಲೇ ಸ್ವಲ್ಪ ಆಚೀಚೆ ಸರಿದು ಅಂಬ್ಯುಲೆನ್ಸ್ ಗೆ ಜಾಗ ಮಾಡಿ ಕೊಟ್ಟೆ. ಅಷ್ಟರಲ್ಲಿ ಯಾರೋ ಒಬ್ಬ ಪಕ್ಕದಲ್ಲಿದ್ದವನು ಬೇಕೆಂದಲೇ ಅಂಬ್ಯುಲೆನ್ಸ್ ನ ಮುಂದಕ್ಕೆ ಬಂದು ನಿಂತ. ಅವನು ಸರಿಯುವವರೆಗೂ ಅಂಬ್ಯುಲೆನ್ಸ್ ಚಲಿಸುವಂತಿಲ್ಲ. ಟ್ರಾಫಿಕ್ ಪೋಲಿಸ್ ಅವನು ನಿಂತಿದ್ದ ಲೇನ್ ಅನ್ನು ಮೊದಲು ಬಿಟ್ಟು ಅಂಬ್ಯುಲೆನ್ಸ್ ಗೆ ಜಾಗ ಮಾಡಿಕೊಟ್ಟ. ಆತ ಟ್ರಾಫಿಕ್ ಜಾಮ್ ನಿಂದ ನಿಮಿಷ ಮಾತ್ರದಲ್ಲಿ ಹೊರಗೆ ಹೋದ. ನಾನಿನ್ನೂ ಇಲ್ಲೇ ನಿಂತಿದ್ದೇನೆ...
ನಾನೊಬ್ಬ ಮೂರ್ಖ.

ನಾನೆಂದು ಈ ಮೂರ್ಖತನದಿಂದ ಪಾರಾಗುತ್ತೇನೆ? ನನಗೆ ಬುದ್ಧಿ ಬರುವುದು ಯಾವಾಗ?

ಶನಿವಾರ, ಜುಲೈ 26, 2008

ಆರು ಹಿತವರೋ ಎನಗೆ

ಏಪ್ರಿಲ್ ನಲ್ಲಿ ನಡೆದ ವಿಷಯ. ಏನನ್ನೋ ತರಲು ಬ್ರಿಗೇಡ್ ರೋಡಿಗೆ ಹೋಗಬೇಕಾಗಿತ್ತು. ಟ್ರಿನಿಟಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದೆ. ಎದುರಿನಿಂದ ಒಬ್ಬ ವ್ಯಕ್ತಿ ಕುಂಟುತ್ತಾ ಬರುತ್ತಿದ್ದ. ಪೋಲಿಯೋ ಆಗಿದ್ದಿರಬೇಕು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದನೋ ಏನೋ, ನಡೆದಾಡಲು ಕಷ್ಟ ಪಡುತ್ತಿದ್ದ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್... ಐ ಡೋಂಟ್ ಹ್ಯಾವ್ ಮನಿ. ಪ್ಲೀಸ್ ಗಿವ್ ೧೦ ರುಪೀಸ್" ಎಂದು ಕೇಳಿದ. ನೋಡಿ ಕನಿಕರ ಮೂಡಿತು. ಹತ್ತು ರೂಪಾಯಿ ತೆಗೆದು ಕೊಟ್ಟೆ.

ಸುಮಾರು ಹದಿನೈದು ದಿನಗಳು ಕಳೆದಿರಬಹುದು. ಭಾನುವಾರವಾಗಿದ್ದರಿಂದ ಮಧ್ಯಾಹ್ನದ ಅಡಿಗೆಗೆ ತರಕಾರಿ ತರಲು ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿ ಬರುತ್ತಿದ್ದೆ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್..." ಎಂಬ ಧ್ವನಿ ಕೇಳಿತು. ಅದೇ ವ್ಯಕ್ತಿ! ಎಲಾ ಇವನ! ದುಡ್ಡು ಕಳೆದುಕೊಂಡು ಮೆಜೆಸ್ಟಿಕ್ಕಿಗೆ ಹೋಗುವುದು ಇವನ ಖಾಯಂ ಉದ್ಯೋಗ!! "ಸ್ವಲ್ಪ ದಿನದ ಹಿಂದೆ ಎಂ.ಜಿ.ರೋಡಿನಲ್ಲಿ ಸಿಕ್ಕಿ ಇದೇ ಕಥೆ ಹೇಳಿದ್ದೆಯಲ್ಲಾ" ಎಂದು ಗದರಿದೆ. ಅವನು ಕಕ್ಕಾಬಿಕ್ಕಿಯಾದವನಂತೆ ಕಂಡ. ಮತ್ತೇನೂ ಕೇಳದೆ ಹಾಗೇ ಮುಂದೆ ಹೋಗಿಬಿಟ್ಟ.

ಕಳೆದ ತಿಂಗಳು ಐ.ಟಿ.ಪಿ.ಎಲ್ ಪಕ್ಕದಲ್ಲಿರುವ ನಮ್ಮ ಆಫೀಸಿನ ಮುಂದೆ ನಡೆದು ಬರುತ್ತಿದ್ದೆ. ಅದೇ ವ್ಯಕ್ತಿ ಮತ್ತೆ ಕಂಡ. ಅವನಿಗೆ ನನ್ನ ಗುರುತು ಹೇಗೆ ಸಿಕ್ಕೀತು? "ಸಾರ್.." ಎಂದು ತನ್ನ ವರಸೆ ಆರಂಭಿಸಿದ. ಆದರೆ ಆತ ತನ್ನ ಬಾಯಿ ತೆಗೆಯುವಷ್ಟರಲ್ಲಿಯೇ ಅವನನ್ನು ಸುಮ್ಮನಿರಿಸಿ, ಮತ್ತೆ ಮತ್ತೆ ನನಗೇ ಗಂಟು ಬೀಳುತ್ತೀಯಾ ಎಂದು ಬೈದು ಮುಂದೆ ಹೋದೆ. ಕಾಲು ಹೀಗಾಗಿದ್ದರೂ ಈ ರೀತಿ ಜನರಿಗೆ ಸುಳ್ಳು ಹೇಳಿ ದುಡ್ಡು ಕೀಳುತ್ತಾರಲ್ಲಾ ಎಂದೆನಿಸಿತು.

ಅದಾದ ಮೇಲೆ ನನಗವನು ಕಂಡಿಲ್ಲ. ಆದರೆ ಯಾರೇ ಬೇಡುತ್ತಿರುವವರು ಕಂಡರೂ ಆತ ನನ್ನ ಮನಸ್ಸಿನಲ್ಲಿ ಪ್ರತ್ಯಕ್ಷವಾಗುತ್ತಾನೆ.

***

ಸ್ವಲ್ಪ ದಿನಗಳ ಹಿಂದೆ ರಾತ್ರಿ ಡೈರಿ ಸರ್ಕಲ್ ಬಳಿ ಬಸ್ ಕಾಯುತ್ತಾ ನಿಂತಿದ್ದೆ. ಯಾರೋ ಒಬ್ಬ ಬಂದು "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದ. ಹೌದೆಂದು ತಲೆಯಾಡಿಸಿದೆ. ಮಹಾರಾಷ್ಟ್ರದಿಂದ ಬಂದಿದ್ದಾಗಿಯೂ ತನ್ನ ಪರ್ಸ್ ಅನ್ನು ಯಾರೋ ಕದ್ದಿದ್ದಾರೆಂದೂ, ಈಗ ಇರಲು-ಉಣ್ಣಲು ದುಡ್ಡಿಲ್ಲವೆಂದೂ ತನ್ನ ಕಥೆ ಹೇಳಿದ. ತನಗೇನೂ ದುಡ್ಡು ಬೇಡ, ತನ್ನ ಮಗನಿಗೆ ಊಟಕ್ಕೆ ದುಡ್ಡು ಕೊಟ್ಟುಬಿಡಿ ಎಂದು ತನ್ನ ಮಗನನ್ನು ತೋರಿಸಿದ. ಅವನ ಹೆಂಡತಿಯೂ ಜೊತೆಯಲ್ಲಿದ್ದಳು. ಆಕೆಯೂ ದೀನವಾದ ಮುಖದಿಂದ ಬೇಡಿದಳು. ಆದರೆ ಹಿಂದಿನ ಅನುಭವದಿಂದಲೋ ಏನೋ, ಕೊಡುವುದಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಅವನು ಹೋದ ಮೇಲೆ ಏನೇನೋ ಯೋಚನೆಗಳು ಬಂದವು. ಅವನು ನಿಜವಾಗಿಯೂ ದುಡ್ಡು ಕಳೆದುಕೊಂಡವನಾಗಿದ್ದರೆ...? ಯಾರೋ ಸುಳ್ಳು ಹೇಳಿ ಭಿಕ್ಷೆ ಎತ್ತಿದ್ದರಿಂದಾಗಿ ನಿಜವಾಗಿ ಕಷ್ಟದಲ್ಲಿರುವವರೂ ಏನನ್ನೂ ಪಡೆಯಲಾಗುವುದಿಲ್ಲವಲ್ಲ ಎನಿಸಿತು.

ಮರುದಿನ ಆಫೀಸಿನಿಂದ ಮನೆಗೆ ಬರುವಾಗ ಸಂಜೆ ಮನೆಯ ಬಳಿ ಪಾನೀಪುರಿ ತಿನ್ನುತ್ತಾ ನಿಂತಿದ್ದೆ. ಹಿಂದಿನ ದಿನ ಕಂಡಿದ್ದ ಅದೇ ವ್ಯಕ್ತಿ ಅಲ್ಲಿಗೆ ಬರಬೇಕೆ? ಅವನ ಹೆಂಡತಿಯೂ ಮಗನೂ ಜೊತೆಗಿದ್ದರು. "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದಾಗ "ನಿನ್ನೆ ಡೈರಿ ಸರ್ಕಲ್ ನಲ್ಲಿ ಸಿಕ್ಕಿದ್ಯಲ್ಲಾ" ಎಂದೆ. ಕನ್ನಡದಲ್ಲಿ ನಾನು ಹೇಳಿದ್ದು ಅವನಿಗೆ ತಿಳಿಯಿತೋ ಬಿಟ್ಟಿತೋ, ಆದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ. ಅಲ್ಲಿ ಪಾನೀಪುರಿ ತಿನ್ನಲು ಬಂದವರೆಲ್ಲಾ ನನ್ನನ್ನೇ ನೋಡಲಾರಂಭಿಸಿದರು. ಅವರಲ್ಲೊಬ್ಬ "ಅವನು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ" ಎಂದ. ಆಗ ಆ ವ್ಯಕ್ತಿಯ ಪುರಾಣವನ್ನು ಅಲ್ಲಿದ್ದವರಿಗೆ ತಿಳಿಸಿದೆ. "ಹೀಗೆ ಭಿಕ್ಷೆ ಕೇಳುವವರು ಬಹಳ ಜನರಿದ್ದಾರೆ" ಎಂದು ಕೆಲವರು ಗೊಣಗಿಕೊಂಡರು.

***

ಬೆಂಗಳೂರಿನಲ್ಲಿ ಗೆಳೆಯರು, ಸಂಬಂಧಿಗಳು ಬೇಕೆಂದರೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಇವರು ಮತ್ತೆ ಮತ್ತೆ ನನಗೇ ಸಿಗುತ್ತಾರೆ ಎಂದರೆ ಅದೇನು ವಿಧಿವಿಲಾಸವೋ ಕಾಕತಾಳೀಯವೋ?

ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದೇ ತಿಳಿಯುವುದಿಲ್ಲ. ಆರು ಹಿತವರೋ ಎನಗೆ...