*****
ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.
ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.
ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.
ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****
ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?