ಮಂಗಳವಾರ, ಮೇ 27, 2008

ನಿರ್ಣಯ

ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

*****

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.

ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.

ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****

ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?

ಸೋಮವಾರ, ಮೇ 26, 2008

ಅತಿ ಬುದ್ಧಿವಂತಿಕೆ ಹುಟ್ ದರಿದ್ರ!


ಮಾಜಿ ಪ್ರಧಾನಿಯ (ಅಲಿಯಾಸ್ ಅಸ್ಲಿ ಮಣ್ಣಿನ ಮಗ!) ಫೋಟೋ ನೋಡಿ ನಮ್ಮ ಅಜ್ಜಿ ಹೇಳಿದ ಮೇಲಿನ ಗಾದೆ ಮಾತು ಹಾಗೆ ನೆನಪಾಯಿತು!

ಶನಿವಾರ, ಮೇ 3, 2008

ಜೋಗದ ಸಿರಿ ಬೆಳಕಿನಲ್ಲಿ ಮಬ್ಬಾದ ಜಲಪಾತ

ವಿಶ್ವದ ಅತಿ ಎತ್ತರದ ಜಲಪಾತ ಯಾವುದು ಎಂದು ಯಾರನ್ನಾದರೂ ಕೇಳಿ ನೋಡಿ. ಬಹುತೇಕ ಜನರು ಏಂಜೆಲ್ ಎಂದು ಹೇಳುತ್ತಾರೆ. ಅದೇ ಒಬ್ಬ ಭಾರತೀಯನನ್ನುಈ ದೇಶದ ಅತಿ ಎತ್ತರದ ಜಲಪಾತ ಯಾವುದೆಂದು ಕೇಳಿ. ನಿಮಗೆ ಸರಿ ಉತ್ತರ ನೀಡುವವರು ಸಾವಿರಕ್ಕೊಬ್ಬರು ಸಿಕ್ಕರೂ ನೀವು ಅದೃಷ್ಟವಂತರೇ. ಇದೇನಪ್ಪ ಹೀಗೆ ಹೇಳ್ತಿದೀನಿ ಅಂದ್ಕೊಂಡ್ರಾ? ನಮ್ಮ ಕರ್ನಾಟಕದವ್ರಿಗೆನೋ ಗೊತ್ತಿರಬಹುದು. ಆದರೆ ನಾನು ಹೇಳಿದ್ದು ಭಾರತೀಯರ ಬಗ್ಗೆ. ಕರ್ನಾಟಕದವ್ರಲ್ವ, ನೀವೇ ಹೇಳಿ, ಯಾವುದು ಆ ಜಲಪಾತ? ಆಹ ಇದೆಂಥ ಪ್ರಶ್ನೆ ಅಷ್ಟು ಪ್ರಸಿದ್ಧ ಜಲಪಾತ ನಂಗೊತ್ತಿಲ್ದೆ ಏನು ಅಂತಿದೀರ? ಇರ್ಲಿ ಹೇಳ್ಬಿಡಿ... ಊಹುಂ ಕೇಳ್ಲಿಲ್ಲ.. ಸ್ವಲ್ಪ ಜೋರಾಗಿ ಹೇಳಿ... ಆಂ.. ಜೋಗ್ ಫಾಲ್ಸ್ ಅಂದ್ರಾ?
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಎಂಥ ಮಧುರ ಗೀತೆ ಅಲ್ವ? ಹಮ್.. ಅದಿರ್ಲಿ, ನೀವ್ ಹೇಳಿದ ಉತ್ತರ ತಪ್ಪು! ಅದ್ಕೇ ಹೇಳಿದ್ದು ಸಾವಿರಕ್ಕೊಬ್ಬರೂ ಸಿಗಲ್ಲ ಅಂತ. ಜೋಗ ನೋಡಕ್ಕೆ ಸುಂದರವಾಗಿರಬಹುದು, ಜಗತ್ಪ್ರಸಿದ್ಧ ಇರಬಹುದು, ಅದರ ಬಗ್ಗೆ ಕೆ.ಎಸ್. ನಿಸ್ಸಾರ್ ಅಹಮದ್ ಅವರು ಅದ್ಭುತವಾಗಿ ವರ್ಣಿಸಿ ಕವಿತೆ ಬರ್ದಿರಬಹುದು, ಮುಂಗಾರು ಮಳೆಯಲ್ಲಿ ಅಭೋ ಎನಿಸುವಂತೆ ಚಿತ್ರಿಸಿರಬಹುದು. ಹಾಗಂತ ಅದೇ ಎತ್ತರದ್ದು ಅನ್ನೋಕಾಗುತ್ತಾ? ನೀವೇ ಹೇಳಿ.

ಜೋಗ ಅಲ್ದೇ ಹೋದ್ರೆ ಮತ್ತಿನ್ಯಾವ ಜಲಪಾತ ಅದು ಅಂತಿದೀರಾ? ಹಾಗೆ ಬನ್ನಿ ದಾರಿಗೆ; ಅದರ ಹೆಸರು ಕುಂಚಿಕಲ್ ಜಲಪಾತ ಅಂತ, ನಂಗೂ ಗೊತ್ತಿರ್ಲಿಲ್ಲ; ಹೀಗೇ ಗೂಗ್ಲಿಂಗ್ ಮಾಡ್ತಿರ್ಬೇಕಾದ್ರೆ ಸಿಗ್ತು. ಕೆಟ್ಟ ಕುತೂಹಲ ನೋಡಿ, ಮತ್ತಷ್ಟು ವಿವರ ಹುಡುಕಿದೆ. ವಿಕಿಪೀಡಿಯಾದಲ್ಲಿ ಆಗುಂಬೆಯ ಹತ್ರ ಇದೆ, ವರಾಹಿ ನದಿಯ ಜಲಪಾತ ಅಂತ ಗೊತ್ತಾಯ್ತು. ಮ್ಯಾಪ್ ನೋಡಿದೆ. ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮಧ್ಯೆ ಎಲ್ಲೋ ಬರುತ್ತೆ ಅಂತ ತಿಳೀತು. ಹಾಗೆ ಒಂದು ಫೋಟೋ ಇದ್ರೆ ನೋಡೋಣ ಅಂತ ಗೂಗಲ್ ಇಮೇಜ್ ಸರ್ಚ್ ಮಾಡಿದ್ರೆ ಹೇಳ್ಕೊಳ್ಳಕ್ಕಾದ್ರೂ ಒಂದೇ ಒಂದು ಫೋಟೋ ಸಿಗ್ಬಾರ್ದಾ?? (ನನ್ನದೊಂದು ವಿನಂತಿ: ಕುಂಚಿಕಲ್ ಜಲಪಾತದ ಚಿತ್ರ ನಿಮ್ಮಲ್ಲಿ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ವಿಕಿಪೀಡಿಯಾದಲ್ಲಿ ಸೇರಿಸಿ)

ಹೋಗಲಿ, ಇದಕ್ಕೆ ಕಾರಣ ಏನಿರಬಹುದು? ೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ ಭಾರತದ ಅತಿ ಎತ್ತರದ ಜಲಪಾತದ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ? ಜೋಗಕ್ಕಾದ್ರೆ ಸುಮಾರು ೧ ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್ ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ ಹೋಗುವವರಿಗಾದರೂ ಆ ಸ್ಥಳದ ಬಗ್ಗೆ ಮಾಹಿತಿ ಬೇಡವೆ? ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ ಇನ್ನೂ ಕುಂಚಿಕಲ್ ಜಲಪಾತ ಬಿದ್ದಿಲ್ವೆ? ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ ಗೊತ್ತಿಲ್ಲದಿದ್ದರೆ ಇತರರಿಗೆ ತಿಳಿಯುವುದಾದರೂ ಹೇಗೆ? ಜೋಗದ ಸಿರಿ ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು ಮಬ್ಬಾಗಿವೆ. ಇಷ್ಟು ಸುಂದರ ಪರಿಸರವನ್ನು ಇಲ್ಲೇ ಇಟ್ಟುಕೊಂಡು ಪ್ರವಾಸಕ್ಕೆಂದು ಯೂರೋಪ್, ಅಮೇರಿಕಾ, ಸ್ವಿಝರ್ಲೆಂಡ್ ಗೆ ಹೋಗಿ ಬರುವ ಐಷಾರಾಮಿಗಳಿಗೆ ಏನು ಹೇಳಬೇಕು? ಹಿತ್ತಲ ಗಿಡ ಮದ್ದಲ್ಲ ಎಂಬುದು ಸುಳ್ಳಲ್ಲ! ಏನಂತೀರಾ?