ಮಂಗಳವಾರ, ಮಾರ್ಚ್ 25, 2008

ಕನ್ನಡ ಕನ್ನಡ ಕನ್ನಡವೆಂದುಲಿ...

ಮಾರ್ಚ್ ೧೬ ರ ಬ್ಲಾಗರ್ಸ್ ಮೀಟಿಗೆ ಹೋಗಿ ಬಂದಾಗಿನಿಂದ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ನನಗೆ ಹೇಳಬೇಕೆನಿಸುತ್ತಿರುವುದನ್ನು ಹೇಳಿಬಿಡುತ್ತೇನೆ. ಅಲ್ಲಿಗೆ ಬಂದಿದ್ದ ಪ್ರೊ. ಕೀ. ರಂ. ನಾಗರಾಜ್ ಅವರಿಂದ ವ್ಯಕ್ತವಾದ ಅಭಿಪ್ರಾಯದ ಸಾರಾಂಶ ಹೀಗಿದೆ:
ಒಂದು ಭಾಷೆ ಜನಬಳಕೆಗೆ ಸರಿಹೊಂದುವಂತಾಗಲು ಅದರಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಿರಬೇಕು. ಉದಾಹರಣೆಗೆ ಕೇವಲ ೨೬ ಅಕ್ಷರಗಳನ್ನು ಹೊಂದಿರುವ ಇಂಗ್ಲಿಷ್ ಇಂದು ವಿಶ್ವದಾದ್ಯಂತ ಮಾತನಾಡಲ್ಪಡುತ್ತಿದೆ. ಕನ್ನಡದಲ್ಲಿ ಅನವಶ್ಯಕವಾದ ಅನೇಕ ಅಕ್ಷರಗಳಿವೆ. ಎಲ್ಲ ಮಹಾಪ್ರಾಣಗಳೂ ಅನಾವಶ್ಯಕವಾಗಿವೆ. ಇನ್ನೂ ಕೆಲವು ಅಕ್ಷರಗಳೂ ಕೂಡ ನಿರುಪಯುಕ್ತವಾಗಿವೆ. ಎಲ್ಲ ಸೇರಿ ಇಂತಹ ೧೭ ಅಕ್ಷರಗಳಿವೆ. ಯಾವ ಪದಗಳಲ್ಲಿ ಮಹಾಪ್ರಾಣಗಳಿವೆಯೋ ಅವು ಕನ್ನಡ ಪದಗಳಲ್ಲ, ಬೇರೆ ಭಾಷೆಯಿಂದ ಬಂದ ಪದಗಳು. ಹೀಗಾಗಿ ಈ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕು.
ಮೊದಲ ನೋಟಕ್ಕೆ ಅವರ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತದೆ. ಮಹಾಪ್ರಾಣಾಕ್ಷರಗಳು ಕನ್ನಡದ ಬಹುತೇಕ ಪದಗಳಲ್ಲಿಲ್ಲ. ಅವೇನಿದ್ದರೂ ಸಂಸ್ಕೃತ ಪದಗಳಲ್ಲಿ ಬರುವಂಥವು. ಇವುಗಳೆಲ್ಲವನ್ನು ಬಳಸುವ ಅಗತ್ಯವಿಲ್ಲ. ಹಾಗಾಗಿ ಕನ್ನಡ ವರ್ಣಮಾಲೆಯಿಂದ ೧೭ ಅಕ್ಷರಗಳು (ಸುಮಾರು ಮೂರನೇ ಒಂದು ಭಾಗ) ಕಡಿಮೆಯಾದರೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಆದರೆ ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.

ಇರಲಿ, ಆ ೧೭ ಅಕ್ಷರಗಳನ್ನು ತೆಗೆದಿದ್ದಾರೆ ಎಂದುಕೊಂಡರೆ, ಸಂಸ್ಕೃತ ಶಬ್ದಗಳನ್ನು ಹೇಗೆ ಬರೆಯುತ್ತಾರೆ? ಒಂದೊಂದು ಅಕ್ಷರಕ್ಕೂ ಬೆಲೆ ಕೊಡುವ ಸಂಸ್ಕೃತ ಪದಗಳನ್ನು ಸಂಕ್ಷೇಪಿಸಿದ ಕನ್ನಡ ವರ್ಣಮಾಲೆಯ ಸಹಾಯದಿಂದ ಬರೆಯುವುದು ಅಸಾಧ್ಯ. ಸಂಸ್ಕೃತ ಪದಗಳು ಕನ್ನಡ ಪದಗಳನ್ನು ಮರೆಸಿವೆ ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಉಪಯೋಗಿಸದೆ ಮಾತನಾಡುವುದು ಸಾಧ್ಯವೇ? ನಾವು ಬೇಡ ಬೇಡವೆಂದರೂ ನಮಗೇ ಗೊತ್ತಿಲ್ಲದೆ ನೂರಾರು ಪರಭಾಷೆಯ ಪದಗಳನ್ನು ನಾವು ಉಪಯೋಗಿಸುತ್ತೇವೆ. ನಾವು ದಿನನಿತ್ಯ ಬಳಸುವ ಸೂರ್ಯ, ಚಂದ್ರ, ವಿಮಾನ ಮುಂತಾದವುಗಳಿಗೆ ಅಚ್ಚ ಕನ್ನಡದ ಪದಗಳು (ನೇಸರ, ತಿಂಗಳು, ಗಾಳಿತೇರು) ಎಷ್ಟೊಂದು ಜನರಿಗೆ ತಿಳಿದೇ ಇಲ್ಲ. ಇನ್ನು ನೀರು, ಚಿತ್ತಾರ ಇಂತಹ ಪದಗಳನ್ನು ತದ್ಭವಗಳು ಎಂದು ಕನ್ನಡಕ್ಕೆ ಇಳಿಸಿಬಿಡುತ್ತೇವೆ. (ಇವುಗಳಿಗೆ ಅಚ್ಚ ಕನ್ನಡ ಪದಗಳು ನನಗೂ ತಿಳಿದಿಲ್ಲ, ನಿಮಗೆ ತಿಳಿದಿದ್ದರೆ ತಿಳಿಸಿ). ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ. ಅಷ್ಟಕ್ಕೂ ಸಂಸ್ಕೃತ ಪದಗಳನ್ನು ಉಪಯೋಗಿಸಬಾರದು ಎಂದೇನಿದೆ? ಇಂಗ್ಲಿಷ್ ಸಹ ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆದೇ ಬೆಳೆದಿರುವುದು (ಉದಾ: ಮಾತೃ -> Mother, ಪಿತೃ -> Father, ಭ್ರಾತೃ -> Brother), ಅಲ್ಲವೇ? ಮನುಷ್ಯನೇ ಆಗಲಿ ಭಾಷೆಯೇ ಆಗಲಿ ಬೆಳೆಯುವುದು ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವವಿದ್ದಾಗ ಮಾತ್ರ. ಇದು ನನ್ನದು ಅದು ನಿನ್ನದು ಎಂಬ ಸಂಕುಚಿತ ಮನೋಭಾವದಿಂದಲ್ಲ.

ಕನ್ನಡ ಮಾತನಾಡುವವರು/ಮಾತನಾಡಬೇಕಾದವರು ಯಾರು? ನಾವು ತಾನೆ? ಬೆಂಗಳೂರಿನಲ್ಲಿ "ತಮಿಳ್ ತೆರಿಮಾ" ಎಂದು ಕೇಳಿದರೆ "ತೆರಿದು" ಎನ್ನುವ ಕನ್ನಡಿಗರು ಸಿಗುತ್ತಾರೆಯೇ ಹೊರತು "ಇಲ್ಲ" ಎನ್ನುವವರೆಷ್ಟು ಮಂದಿ? ಕನ್ನಡ ವರ್ಣಮಾಲೆಯನ್ನು ಅಳಿಸಬೇಕೋ ಅಥವಾ ಉಳಿಸಿ, ಬೆಳೆಸಬೇಕೋ ಎಂಬುದು ನಮ್ಮ ನಿಮ್ಮ ವಿಚಾರಕ್ಕೆ ಬಿಟ್ಟ ವಿಷಯ. "ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!

ಅನುಲೇಖ: ಇಲ್ಲಿ ನಾನು ಬರೆದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಲೇಖನದ ಹಿಂದೆ ಯಾರಿಗೂ ನೋವುಂಟು ಮಾಡುವ ಇರಾದೆಯಿಲ್ಲ. ಹಾಗೇನಾದರೂ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.

ಸೋಮವಾರ, ಮಾರ್ಚ್ 24, 2008

ಒಗ್ಗಟ್ಟು - ಧೈರ್ಯ

ಒಗ್ಗಟ್ಟಿಲ್ಲಿ ಬಲವಿದೆ ಎಂಬುದು ನಮಗೆಲ್ಲ ತಿಳಿದಿರುವ ಮಾತು. ಅದಕ್ಕೊಂದು ಉತ್ತಮ ಉದಾಹರಣೆ (YouTubeನಲ್ಲಿ ಅತ್ಯುತ್ತಮ ಪ್ರಾತ್ಯಕ್ಷಿಕೆ ಬಹುಮಾನ ಪಡೆದಿದೆ):


ಆದರೆ ಕೇವಲ ಒಗ್ಗಟ್ಟಿದ್ದರೆ ಸಾಲದು, ಧೈರ್ಯ ಕೂಡ ಮುಖ್ಯ ಎನ್ನಲು ಇನ್ನೊಂದು ಉದಾಹರಣೆ:


ನೀವೇನಂತೀರಾ?

ಸೋಮವಾರ, ಮಾರ್ಚ್ 17, 2008

ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ

ಬೆಂಗಳೂರಿಗೆ ಬಂದ ಮೇಲೆ ಭಾನುವಾರಕ್ಕೊಂದು ಅರ್ಥ ಬಂದಿದೆ (ಹಾಗಂತ ಅನರ್ಥ ನಿಂತಿದೆ ಎಂದಲ್ಲ). ಸಣ್ಣವನಿದ್ದಾಗ ಆಟ ಆಡುವ ದಿನವಾಗಿದ್ದ ಭಾನುವಾರ ಕಾಲೇಜಿಗೆ ಹೋಗುವಾಗ ಎಂದರೆ ರೆಕಾರ್ಡ್ ಬರೆಯುವ, ಅಸೈನ್ಮೆಂಟ್ಸ್ ಮಾಡುವ ದಿನವಾಗಿತ್ತು. ಈಗ ಹಾಗಲ್ಲ ಭಾನುವಾರ ಅಂದ್ರೆ ವೀಕೆಂಡು :) ಆದರೂ ಕೆಲವು ಸಲ "ಬಟ್ಟೆ ಹರಿಯೋ ಅಷ್ಟು" (ಅದು ದಾವಣಗೆರೆಯ ನುಡಿಗಟ್ಟು.. ನಿಮಗೆ ಅರ್ಥ ಆಗ್ಲಿಲ್ವಾ? ಆಗೋದು ಬೇಡ ಬಿಡಿ) ಕೆಲಸ ಇರುತ್ತೆ.

ಆ ಕೆಲಸಗಳೇನೇ ಇರಲಿ, ಹೇಗಾದರು ಮಾಡಿ ಬೆಂಗಳೂರು ಸುತ್ತೋದು ನನ್ನ ಪದ್ಧತಿ. ನಾನೇನೂ ಎಂಜಿ ರೋಡು, ಬ್ರಿಗೇಡ್ ರೋಡು ಸುತ್ತೋದಿಲ್ಲ. ಫ್ರೆಂಡ್ಸ್ ನ ಮೀಟ್ ಮಾಡಿ ಬರೋದು, ಯಾವುದಾದರು ಸ್ಥಳಗಳಿಗೆ ಭೇಟಿ ಕೊಡೋದು ಹೀಗೆ... ಇತ್ತಿಚಿಗೆ (ಅಂದರೆ ಇದನ್ನು ಬರೆದಾದ ಮೇಲೆ) ಇನ್ನೊಂದು ಚಟ ಅಂಟಿಕೊಂಡಿದೆ... ಸಿನಿಮಾ ನೋಡೋದು (ಇಲ್ಲಿ ಸಿನಿಮಾ ನೋಡೋದಕ್ಕಿಂತ ಗೆಳೆಯರ ಭೇಟಿಯೇ ಮುಖ್ಯ ಅನ್ನೋದು ಬೇರೆ ವಿಷಯ).

ಹೋದ ವಾರವಷ್ಟೇ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದರಿಂದ ಈ ವಾರ ಎಲ್ಲಿಗೂ ಹೋಗುವ ಯೋಚನೆ ಇರಲಿಲ್ಲ. (ಕನ್ಫ್ಯೂಸ್ ಆಗ್ಬೇಡಿ, ನನಗಿನ್ನು ೨೨ ವರ್ಷ... ತೀರ್ಥಯಾತ್ರೆ ಬಗ್ಗೆ ಇನ್ಯಾವಾಗಲಾದ್ರೂ ಬರೀತೀನಿ. ಆದರೆ ಇದಕ್ಕೂ ಸಂದೀಪನ ತೀರ್ಥಯಾತ್ರೆಗೂ ಇರುವ ಸಂಬಂಧ ನಂದಿಬೆಟ್ಟಕ್ಕಷ್ಟೇ ಸೀಮಿತ). ಇನ್ನೇನಪ್ಪಾ ಮಾಡೋದು ಅಂತ ಶನಿವಾರ ಮಧ್ಯಾಹ್ನ ಹೀಗೇ ಬ್ರೌಸ್ ಮಾಡ್ತಾ ಕುಳಿತಿದ್ದೆ. ಸುಶ್ರುತನ ಮೌನಗಾಳದಲ್ಲಿ ಆ ಸಂಜೆ, ನಾವೆಲ್ಲ ಸೇರ್ತಿದೀವಿ... ಅಂತ ಬರೆದಿದ್ದನ್ನು ನೋಡಿದೆ. ಈ ಬಾರಿ ಸರಿಯಾಗಿ ಕಲಿತು ವಡಪ್ಪೆಯ ಎಡವಟ್ಟುಗಳು ಮರುಕಳಿಸದಂತೆ ಮಾಡುತ್ತಿದ್ದಾನೆ ಎಂದುಕೊಂಡೆ. ಊಹುಂ, ಅದಲ್ಲ ವಿಷಯ. ಕನ್ನಡ ಬ್ಲಾಗರ್ಸ್ ಮೀಟ್!

ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬ್ಲಾಗರ್ಸ್ ಮೀಟ್ ನಡೆದಿತ್ತು ಎಂಬ ಸುದ್ದಿ ನನಗೆ ಬಂದಿತ್ತು. ಅದು ಹೇಗೆ ನನ್ನ ಕಣ್ಣು ತಪ್ಪಿಸಿತೋ ನಾ ಕಾಣೆ. ಮೊದಲೇ ಗೊತ್ತಾಗಿದ್ದಿದ್ದರೆ ಹೋಗಿರುತ್ತಿದ್ದೇನೋ ಏನೋ. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಕನ್ನಡ ಬ್ಲಾಗರ್ಸ್ ಮೀಟ್ಗಾದ್ರೂ ಹೋಗಲೇ ಬೇಕು, ಆಗಿಂದಾಗ್ಗೆ ಅಂತರ್ಜಾಲದಲ್ಲಿ ನೋಡುವ ಹೆಸರಿನ ವ್ಯಕ್ತಿಗಳು ಯಾರಿರಬಹುದು? ಹೇಗಿರಬಹುದು? ಎಂಬ ಜಿಜ್ಞಾಸೆಯೊಂದಿಗೆ ಹೋಗುವ ನಿರ್ಧಾರಕ್ಕೆ ಬಂದೆ.

ಅಂತೆಯೇ ಭಾನುವಾರ ಬೆಂಗಳೂರಿನ ಪೂರ್ವಕ್ಕೊಂದು ಪ್ರದಕ್ಷಿಣೆ ಹಾಕಿ ದಕ್ಷಿಣಕ್ಕೆ ಹೊರಟೆ. Indian Institute of World Cultures ಎಲ್ಲಿದೆ ಎಂದು ಅವರಿವರನ್ನು ಕೇಳುತ್ತ ಹಾಗೂ ಹೀಗೂ ನಾಲ್ಕೂವರೆಗೆ ತಲುಪಿದೆ. ಮೊದಲಿಗೆ ಅಪರಿಚಿತ ಸ್ಥಳದಂತೆ ಕಂಡು ಬಂದರೂ ಐದೇ ನಿಮಿಷದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದರಿಂದ ಯು.ಬಿ.ಪವನಜ, ಹರಿಪ್ರಸಾದ್ ನಾಡಿಗ್, ಅಬ್ದುಲ್ ರಶೀದ್ ಅವರ ಅನುಭವಗಳು, ಅಭಿಪ್ರಾಯಗಳು, ಸಲಹೆಗಳನ್ನು ಕೇಳುತ್ತ ಕುಳಿತೆ. ಮಧ್ಯ ಚಹಾ ವಿರಾಮದಲ್ಲಿ ಕೆಲವರು ಪರಿಚಯವಾದರು. ಚಹಾನಂತರದ ಚರ್ಚೆ, ಅಭಿಪ್ರಾಯ ಹಂಚಿಕೆಗಳಲ್ಲಿ ಇನ್ನೂ ಕೆಲವರು ಪರಿಚಯವಾದರು. ಎಸ್ ಕೆ ಶ್ಯಾಮಸುಂದರ್ ಅವರ ಮಾತುಗಳು ಓದುಗರನ್ನು ಯೋಚಿಸುವಂತೆ ಮಾಡಲು ಸಫಲವಾಯಿತು.

ಅಂತರ್ಜಾಲದಲ್ಲಿ ಕನ್ನಡ ಬೆಳೆದು ಬಂದ ಬಗೆ, ತಂತ್ರಜ್ಞಾನದಲ್ಲಿ ಕನ್ನಡ ಈಗ ಯಾವ ಹಂತದಲ್ಲಿದೆ, ಇನ್ನೂ ಏನೆಲ್ಲ ಕೆಲಸಗಳು ಬಾಕಿ ಇವೆ, ಬ್ಲಾಗಿಗರ ಸಂಖ್ಯೆ ಏಕೆ ಕಡಿಮೆ ಇದೆ ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು ಬಹಳ ಸಂತಸ ನೀಡಿತು. ಆದರೆ ಇವೆಲ್ಲಾ ಸಂತಸಗಳ ನಡುವೆ ಒಂದು ದುಃಖ ಮಾತ್ರ ಉಳಿದುಹೋಯಿತು. ಬಂದಿದ್ದ ಎಲ್ಲ ಬ್ಲಾಗಿಗರ ಪರಿಚಯವಾಗಲಿಲ್ಲವಲ್ಲ ಎಂಬುದೇ ಆ ದುಃಖ. ಕೇವಲ ೩ ಘಂಟೆಗಳಲ್ಲಿ ನೂರಾರು ಜನರ ವೈಯಕ್ತಿಕ ಪರಿಚಯ ಕಷ್ಟವಾಗುತ್ತಿತ್ತೆನ್ನುವುದು ನಿಜ. ಆದರೆ ಮುಂದಿನ ಬಾರಿ ನಾವು ಭೇಟಿಯಾದಾಗ ಎಲ್ಲರ ಪರಿಚಯಕ್ಕೆಂದೇ ಒಂದಷ್ಟು ಸಮಯ ಮೀಸಲಿರಿಸಿ ಎಲ್ಲ ಬ್ಲಾಗಿಗರನ್ನೂ ಪರಿಚಯಸ್ಥರನ್ನಾಗಿ ಮಾಡುವ ಜವಾಬ್ದಾರಿ ಸಂಘಟಕರ ಮೇಲಿದೆ.

ಒಟ್ಟಿನಲ್ಲಿ ಈ ಭಾನುವಾರ ಬ್ಲಾಗಿಗರನ್ನು, ಬ್ಲಾಗುಗಳನ್ನು ಓದಿ ಸಂತಸ ಪಡುವವರನ್ನು ಒಂದೆಡೆ ಸೇರಿಸಲು ಒಂದು ವೇದಿಕೆಯಾಯಿತು. ಇದಕ್ಕಾಗಿ "ಪ್ರಣತಿ" ತಂಡದವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅಲ್ಲದೆ ಇದು ಕೇವಲ ವೇದಿಕೆಯಾಗಿ ಉಳಿಯದೆ ಅಂತರ್ಜಾಲದಲ್ಲಿ ಕನ್ನಡದ ಮಹಾಕಾವ್ಯಕ್ಕೆ ಮುನ್ನುಡಿಯಾಗಲಿ ಎಂದು ಆಶಿಸುವೆ.

ಇತರರ ಅನಿಸಿಕೆಗಳು: