ಬುಧವಾರ, ಅಕ್ಟೋಬರ್ 14, 2009

ದೀಪಾವಳಿಗೆ... ಅದಕ್ಕೂ ಮುಂಚೆ...

"ದೀಪ್ ದೀಪ್ ದೀವಳಿಗ್ಯೋ... ಹಬ್ಬಕ್ಕೊಂದ್ ಹೋಳಿಗ್ಯೋ..." ಎಂದು ಕೂಗುತ್ತ ಊರ ಮುಂದೆ ಸಾಗಬೇಕು. ಹಚ್ಚಿಕೊಂಡು ತಂದ ಆರುತ್ತಿರುವ ಬೆಂಕಿಯ ಕೋಲುಗಳನ್ನು ರಸ್ತೆಬದಿಯಲ್ಲಿಯೋ, ಬೇಲಿ ಗೂಟಗಳಿಗೋ ಸಿಕ್ಕಿಸಬೇಕು. ಕೋಲು ಆರುವಷ್ಟರಲ್ಲಿ ಇನ್ನೊಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಎಲ್ಲ ಕೋಲುಗಳೂ ಖಾಲಿಯಾಗುವವರೆಗೂ ಹೀಗೇ ಕೂಗುತ್ತ ಸಾಗಬೇಕು. ಯಾರು ಜೋರಾಗಿ ಕೂಗುತ್ತಾರೋ ಅವರ ಹಬ್ಬದ ಸಡಗರ ಹೆಚ್ಚು ಎಂಬ ಭಾವನೆ. ಅಲ್ಲಿಗೆ ದೀಪಾವಳಿ ಮುಗಿಯುತ್ತದೆ. ಅದಕ್ಕೂ ಮುಂಚೆ...

ಅಡಿಕೆಮರದ ದಬ್ಬೆಯಾಗಲಿ ಅಥವಾ ನೇರವಾದ ಮರದ ಟೊಂಗೆಗಳಿಂದಾಗಲಿ ಸುಮಾರು ಎರಡರಿಂದ ಮೂರಡಿ ಉದ್ದದ ಕೋಲುಗಳನ್ನು ಮಾಡಿ ತುದಿಗೆ ಬಟ್ಟೆ ಸುತ್ತಿ ಅದನ್ನು ಎಣ್ಣೆಯಲ್ಲಿ ಅದ್ದಿಕೊಂಡು ಸಿದ್ಧಪಡಿಸಿಕೊಳ್ಳಬೇಕು. ದೀಪಾವಳಿಯ ಪೂಜೆಯ ಕಡೆಯ ಅಂಗವಾಗಿ ಮನೆದೇವರಿಗೆ ಮಹಾ ಮಂಗಳಾರತಿ ಮಾಡಿ ಅದೇ ದೀಪದಿಂದ ಒಂದೆರಡು ಕೋಲುಗಳನ್ನು ಹೊತ್ತಿಸಿಕೊಳ್ಳಬೇಕು. ಈ ವರ್ಷದ ಹಬ್ಬವನ್ನು ಬೀಳ್ಕೊಟ್ಟು ಕಳುಹಿಸಿ ಬರಲು ಹೊರಡಬೇಕು. ಅದಕ್ಕೂ ಮುಂಚೆ...

ಬೆಳಿಗ್ಗೆ ಎದ್ದು ಕೊಟ್ಟಿಗೆಯನ್ನು ತೊಳೆದು ಶುಭ್ರಗೊಳಿಸಿ, ಸಿಂಗರಿಸಿ, ದನ-ಕರುಗಳ ಮೈ ತೊಳೆಯಬೇಕು. ಒಂದು ಲೋಟಕ್ಕೆ ಮಧ್ಯದಲ್ಲಿ ಒಂದು ದಾರ ಕಟ್ಟಿ ಕೆಂಪು-ಬಿಳಿ ಬಣ್ಣದಲ್ಲಿ ಅದ್ದಿ ಗೋವುಗಳ ಮೇಲೆ ಗೋಪಾದಗಳನ್ನು ಮೂಡಿಸಬೇಕು. ದೊಡ್ಡ ಹಸುಗಳ ಕೋಡುಗಳಿಗೆ ಬಣ್ಣ ಬಳಿಯಬೇಕು. ಕರುಗಳ ಕೊರಳಿಗೆ ಗಂಟೆ ಕಟ್ಟಿ ಸಂಭ್ರಮಿಸಬೇಕು. ಗೋವಿನ ಉಪಕಾರಗಳನ್ನು ಸ್ಮರಿಸುತ್ತ ಗೋಪೂಜೆ ಮಾಡಬೇಕು. ಗೋಗ್ರಾಸ ನೀಡಬೇಕು. ಪೂಜೆಯಾದ ಮೇಲೆ ಗೋವುಗಳನ್ನು ಮೇಯಲು ಬಿಟ್ಟು ಜಾಗಟೆ, ಗಂಟೆ ಮೊದಲಾದವುಗಳನ್ನು ಬಾರಿಸಬೇಕು. ಆ ಸದ್ದಿಗೆ ಬೆದರಿ ಓಡುವ ಅವುಗಳ ಜೊತೆ ನಾನೂ ಓಡಬೇಕು. ಸಿಂಗರಿಸಿದ ಎತ್ತಿನ ಗಾಡಿಗಳಲ್ಲಿ ಕೂತು "ರೇಸ್"ನಲ್ಲಿ ಭಾಗವಹಿಸಬೇಕು.

"ಬಲ್ಲೇಳು ಬಲಿವೀಂದ್ರನು ರಾಯ ಬಂದಾನು ತನ್ನ ರಾಜ್ಯಕೆ..." ಎಂದು ಜ್ಯೋತಿ ಹಿಡಿದು ನಡುರಾತ್ರಿಯಲ್ಲಿ ಹಾಡುತ್ತ ಮನೆ-ಮನೆಗೆ ಬರುವ ಹಬ್ಬಾಡುವವರನ್ನು ಸ್ವಾಗತಿಸಬೇಕು. "ಜಾನ್ಪೂರ್ಣಂ ಜಗಂಜ್ಯೋತಿ... ನಿರ್ಮಲವಾದ ಮನವೇ ಕರ್ಪೂರದಾರತಿ..." ಎಂದು ಅವರು ಹಾಡುವ ಅರ್ಥಪೂರ್ಣ ಪದ್ಯಗಳನ್ನು ಗಮನವಿಟ್ಟು ಆಲಿಸಬೇಕು. ಅವರು ತಂದ ಜ್ಯೋತಿಯಿಂದ ನಮ್ಮ ಮನೆಯ ದೀಪವನ್ನೂ ಬೆಳಗಿಕೊಳ್ಳಬೇಕು. ಅವರ ಜ್ಯೋತಿಗೆ ಎಣ್ಣೆಯನ್ನು ಹಾಕಬೇಕು. ಅವರಿಗೆ ಯಥೋಚಿತ ಅಡಿಕೆ-ಅಕ್ಕಿ-ದುಡ್ಡನ್ನು ದಾನ ಮಾಡಬೇಕು. ಅದಕ್ಕೂ ಮುಂಚೆ...

ನರಕ ಚತುರ್ದಶಿಯಂದು ಬೆಳಿಗ್ಗೆ ಬೇಗ ಎದ್ದು ಮೈ, ಕೈ, ಕಿವಿಗೆಲ್ಲ ಎಣ್ಣೆ ಹಾಕಿಕೊಳ್ಳಬೇಕು. ಹಿಂದಿನ ದಿನ ರಾತ್ರಿ ತುಂಬಿಸಿಟ್ಟ ಬಚ್ಚಲ ಮನೆಯ ಹಂಡೆಯ ಬಿಸಿ ಬಿಸಿಯಾದ ನೀರಿನಲ್ಲಿ ಹಚ್ಚಿಕೊಂಡಿದ್ದ ಎಣ್ಣೆಯೆಲ್ಲ ಹೋಗುವಂತೆ ಸ್ನಾನ ಮಾಡಬೇಕು. ದೇವರ ಮನೆ, ವಾಸ್ತು ಕಂಬ, ವಾಸ್ತು ಬಾಗಿಲು, ಒರಳು, ಒನಕೆ, ಒಲೆ, ಅಕ್ಕಿ ಮರಿಗೆ, ಬಾವಿ, ಬಚ್ಚಲು, ತುಳಸಿ, ದುಡ್ಡಿನ ಪೆಟ್ಟಿಗೆ - ಹೀಗೆ ಮುಖ್ಯವಾದ ಕಡೆಗಳಲ್ಲಿ ಎಲೆ, ಅಡಿಕೆ, ಹಿಂಗಾರ, ಪಚ್ಚೆ ತೆನೆ ಇಡಬೇಕು. ಎಲ್ಲ ಕಡೆಯಲ್ಲಿಯೂ ಪೂಜೆ ಮಾಡಿ, ಆರತಿ ಮಾಡಿ, ಸುಖ-ಸಮೃದ್ಧಿಗಳು ನೆಲೆಸಲಿ ಎಂದು ದೇವರಲ್ಲಿ ಪ್ರಾರ್ಥಿಸಬೇಕು. ಬಲೀಂದ್ರನನ್ನು ಪೂಜಿಸಬೇಕು. ಅದಕ್ಕೂ ಮುಂಚೆ...

"ದೊಡ್ಹಬ್ಬ" ದೀಪಾವಳಿಗೆ ಊರಿಗೆ ಹೋಗಬೇಕು! ಅದಕ್ಕೂ ಮುಂಚೆ... ಎಲ್ಲರಿಗೂ ಬೆಳಕಿನ ಹಬ್ಬ ದೀಪಾವಳಿಯ ಶುಭಾಶಯಗಳು.

ಗುರುವಾರ, ಅಕ್ಟೋಬರ್ 1, 2009

ಮನಸಿನ ಕನಸು

ಬಾನಲಿ ಸುಂದರ ಚಂದಿರನೋಟ
ನಿಲ್ಲದ ಕಾಲವ ಸೂಚಿಸಿದೆ
ಮೈಮರೆಸುವ ಈ ನಿನ್ನಯ ನೋಟ
ಚಂದಿರನನ್ನೂ ನಾಚಿಸಿದೆ

ಗುಡುಗಿನ ಜೊತೆಗೆ ಮಿಂಚಿನ ಆಟ
ಭೂಮಿಗೆ ಮಳೆಯನು ಸುರಿಸುತಿದೆ
ಮಿಂಚಿನ ನೋಟದ ನಿನ್ನೊಡನಾಟ
ನನ್ನಲಿ ಪ್ರೀತಿಯ ಹರಿಸುತಿದೆ

ನಡೆಸುವೆ ನಾನು ಬಲು ಹುಡುಕಾಟ
ಮರೆಯಾದರೆ ನೀನೊಂದೊಪ್ಪೊತ್ತು
ಹಗಲಿರುಳೆನ್ನದೆ ನಿನ್ನದೆ ಕಾಟ
ಕಾರಣ ವಯಸ್ಸಿದು ಇಪ್ಪತ್ತು!

ಒಲವಿನ ದಾಹ, ಸ್ನೇಹದ ಕೂಟ
ಸೋತಿತು ಹೇಗೋ ಈ ಮನಸು
ಬಾರದು ನಿದ್ದೆ, ರುಚಿಸದು ಊಟ
ಮನದಲಿ ಬರಿ ನಿನದೇ ಕನಸು

ಶುಕ್ರವಾರ, ಸೆಪ್ಟೆಂಬರ್ 18, 2009

ಮರಳಿ ಮರೆಯಾಗಿ...

ಬಾಳ ದೋಣಿ ಅಂಬಿಗರಿಲ್ಲದೆ ಅನಾಥವಾಗಿ ಬರೋಬ್ಬರಿ ಏಳು ತಿಂಗಳಾಯಿತು. ಕೆಲಸದ ಒತ್ತಡ, ಬರೆಯಬೇಕೆಂದರೂ ಬೇಡವೆನ್ನುವ ಮನಸು, ಓದುವುದರಲ್ಲೂ ಕಂಡುಬಂದ ನಿರಾಸಕ್ತಿ - ಹೀಗೆ.. ಕಾರಣಗಳು ಹಲವಾರು. ಇಲ್ಲಿಯವರೆಗೆ ನಡೆದಿದ್ದನ್ನು ಸಂಕ್ಷಿಪ್ತವಾಗಿ ಹೇಳಿಕೊಳ್ಳುವ ಬಯಕೆ:
  • ಫೆಬ್ರುವರಿಯಲ್ಲಿ ಬೆಂಗಳೂರಿನ ಸಮೀಪವಿರುವ ಸ್ಕಂಧಗಿರಿಗೆ ಹೋಗಿದ್ದೆವು. ಆದರೆ ನಾವು ಹೋದ ದಿನ ಮೋಡವೇ ಇಲ್ಲದೆ ನನಗೆ ಮತ್ತೆ ನಿರಾಸೆಯಾಯಿತು.
  • ಮಾರ್ಚಿನಲ್ಲಿ ಊರಿನಿಂದ ಬರುವಾಗ ಬಸ್ಸಿನಲ್ಲಿ "ದಟ್ಸ್-ಕನ್ನಡ"ದ ಶ್ಯಾಮಸುಂದರ್ ಅವರನ್ನು ಭೇಟಿಯಾಗಿದ್ದೆ. ಬ್ಲಾಗಿಗರ ಕೂಟ ನಡೆದು ಅಂದಿಗೆ ಸರಿಯಾಗಿ ಒಂದು ವರ್ಷವಾಗಿತ್ತು. ಇಬ್ಬರೂ ಅದನ್ನು ನೆನಪಿಸಿಕೊಂಡೆವು.
  • ಏಪ್ರಿಲ್ ನಲ್ಲಿ ಸ್ನೇಹಿತರೆಲ್ಲ ಸೇರಿ ಕೇರಳದ ವಯನಾಡಿಗೆ ಹೋಗಿದ್ದೆವು. ಅದೊಂದು ಅಭೂತಪೂರ್ವ ಅನುಭವ.
  • ಈಗ ಸುಮಾರು ಎರಡು ತಿಂಗಳಿನಿಂದ ಸಂಪೂರ್ಣವಾಗಿ ಲಿನಕ್ಸ್ ಅನ್ನೇ ಉಪಯೋಗಿಸುತ್ತಿದ್ದೇನೆ. ವಿಂಡೋಸ್ ಇಲ್ಲದೆಯೇ ಎಲ್ಲ ಕೆಲಸಗಳನ್ನೂ ಮಾಡುತ್ತಿದ್ದೇನೆ. ಈ ಲೇಖನವನ್ನು ಬರೆಯುತ್ತಿರುವುದೂ ಉಬುಂಟು ಲಿನಕ್ಸ್ ನಲ್ಲಿಯೇ. ಆರಂಭದಲ್ಲಿ ಕನ್ನಡ ಬಳಸುವಲ್ಲಿ ಸ್ವಲ್ಪ ತೊಡಕಾದಾಗ ಸಹಕರಿಸಿದ ಓಂ ಶಿವಪ್ರಕಾಶ್ ಅವರಿಗೆ ಧನ್ಯವಾದಗಳು.
  • ಮುಂಚೆ ಸೌಹಾರ್ದಯುತವಾಗಿದ್ದ ಕನ್ನಡ ಬ್ಲಾಗ್ ಲೋಕಕ್ಕೆ ಈಗ ಗುಂಪುಗಾರಿಕೆ ತಲೆದೋರಿದಂತೆ ಕಾಣುತ್ತಿದೆ. (ಇದು ನನ್ನ ಸ್ವಂತ ಅನಿಸಿಕೆ ಮಾತ್ರ) ಇದು ನಿಜವಾಗಿದ್ದರೆ ನಿಜಕ್ಕೂ ಇದೊಂದು ಅಪಾಯಕಾರಿ ಬೆಳವಣಿಗೆ.
  • ಸಾವಿರದಷ್ಟು ಬ್ಲಾಗ್ ಬರಹಗಳನ್ನು ಓದುವುದು ಬಾಕಿ ಇದೆ. ಎಂದು ಓದಿ ಮುಗಿಸುವೆನೋ ತಿಳಿದಿಲ್ಲ. ಬ್ಲಾಗ್ ಓದುವಲ್ಲಿ, ಬರೆಯುವಲ್ಲಿ ಈಗೆರಡು ವರ್ಷಗಳ ಹಿಂದೆ ಇದ್ದ ಆಸಕ್ತಿ, ಹುರುಪು ಈಗ ಉಳಿದಿಲ್ಲ.

ಭಾನುವಾರ, ಫೆಬ್ರವರಿ 15, 2009

ಧರಣಿ ಮಂಡಲ ಮಧ್ಯದೊಳಗೆ.. ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ...

ಸತ್ಯ ಹರಿಶ್ಚಂದ್ರನ ಕಥೆ ಹೇಳಿದ ನಂತರ ಮೇಷ್ಟ್ರು ಇದರ ನೀತಿ ಏನು ಎಂದು ಕೇಳಿದ್ದಕ್ಕೆ ಒಬ್ಬ "ನಾವು ಸತ್ಯ ಹೇಳಬಾರದು. ಹೇಳಿದರೆ ಹೆಂಡತಿಯನ್ನು ಮಾರುವ, ಸ್ಮಶಾನ ಕಾಯುವ ಪರಿಸ್ಥಿತಿ ಬರುತ್ತದೆ" ಎಂದನಂತೆ. ಇದು ಒಂದು ಜೋಕ್ ಎಂದು ಕಾಣಬಹುದು. ಆದರೆ ನಮ್ಮ ಇಂದಿನ ಮನಃಸ್ಥಿತಿ ಆ ಹುಡುಗನ ಮನಃಸ್ಥಿತಿಗಿಂತ ಭಿನ್ನವಾಗಿಲ್ಲ. ನಾನು ಸುಳ್ಳು ಹೇಳಲ್ಲ ಅಂತ ಯಾರಾದ್ರೂ ಅಂದರೆ "ಆಹಾ.. ಗೊತ್ತು.. ಹರಿಶ್ಚಂದ್ರನ ಮೊಮ್ಮಗ ನೀನು" ಎನ್ನುತ್ತೇವೆ. ಹರಿಶ್ಚಂದ್ರ ತಾನು ಯಾಕಾದ್ರೂ ಸತ್ಯ ಹೇಳಿದ್ನೋ ಅಂದ್ಕೋಬೇಕು. ಪಾಪ!

ಸತ್ಯಕ್ಕೆ ಎಷ್ಟು ಶಕ್ತಿಯಿದೆ ಎಂಬುದನ್ನು ಮನವರಿಕೆ ಮಾಡಿಸುವ ಪುಣ್ಯಕೋಟಿಯ ಕಥೆಯನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಭಾವಪೂರ್ಣವಾಗಿರುವ ಈ ಹಾಡು ಪ್ರತಿ ಬಾರಿ ಕೇಳಿದಾಗಲೂ ನಮ್ಮನ್ನು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಸತ್ಯವನ್ನೇ ಹೇಳುವಂತೆ ಪ್ರೇರೇಪಿಸುತ್ತದೆ. (ಇದನ್ನು ಓದುವುದಕ್ಕಿಂತಲೂ ಕೇಳುವುದೇ ಚೆನ್ನ)

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲು ಒಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ

ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದಾ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ
ಕಾಮಧೇನು ಬಾರೆ ಎಂದು
ಪ್ರೇಮದಿ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುದಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದುವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದೀ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮಾ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ:

सत्यं ब्रूयात् प्रियं ब्रूयात् न ब्रूयात् सत्यमप्रियं ।
प्रियं च नानृतं ब्रूयात् एषः धर्मः सनातनः ॥

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ ||

ಸತ್ಯವನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು, ಪ್ರಿಯವಾಗಿದ್ದರೂ ಅಸತ್ಯವಾಗಿದ್ದನ್ನು ಹೇಳಬಾರದು - ಇದು ಸನಾತನ ಧರ್ಮ. ಸನಾತನ ಧರ್ಮ ಏಕೆ ಬೇಕು ಎಂದು ಕೇಳಲ್ಪಡುತ್ತಿರುವ ಈ ಸಮಯದಲ್ಲಿ ಈ ಸುಭಾಷಿತ ಅಪ್ರಸ್ತುತ ಎಂದು ಕಾಣುತ್ತದೆ; ಇರಲಿ.

"ಎಲ್ಲಿದೀಯೋ? ಬೇಗ ಬಾ" ಅಂತ ಗೆಳೆಯ ಹೇಳಿದ್ದಕ್ಕೆ ಇನ್ನೂ ಹೊರಟೇ ಇರದಿದ್ದರೂ "ಐದೇ ನಿಮಿಷ... ಆನ್ ದ ವೇ.. ಇಂಥಲ್ಲಿ ಇರು, ಬಂದೆ" ಅಂತೀರಿ. ಬಟ್ಟೆ ಹಾಕಿಕೊಂಡು, ರೆಡಿಯಾಗಿ ಅಲ್ಲಿಗೆ ಹೋಗುವಷ್ಟರಲ್ಲಿ ಅರ್ಧ ಘಂಟೆ ಕಳೆದಿರುತ್ತದೆ. ನಿಮಗಾಗಿ ಅಲ್ಲಿ ಕಾದ ನಿಮ್ಮ ಗೆಳೆಯ ಆ ಕ್ಷಣವೇ ನಿರ್ಧರಿಸುತ್ತಾನೆ: ನಿಮ್ಮ ಐದು ನಿಮಿಷ ಅಂದರೆ ಅರ್ಧ ಘಂಟೆ. ಇದರ ಬದಲು "ನಾನು ಇನ್ನೂ ಹೊರಟಿಲ್ಲ, ಬರೋದು ಅರ್ಧ ಘಂಟೆ ಆಗುತ್ತೆ" ಎಂದು ಹೇಳಿದರೆ ಅವನು ಆ ಅರ್ಧ ಘಂಟೆಯಲ್ಲಿ ಮಾಡಿಕೊಳ್ಳಬಹುದಾದ ಚಿಕ್ಕ ಕೆಲಸಗಳೇನಾದರೂ ಇದ್ದರೆ ಮುಗಿಸಿಕೊಳ್ಳಬಹುದು. ಆತನಿಗೆ ನಿಮ್ಮ ಮೇಲಿನ ಗೌರವವೂ ಉಳಿಯುತ್ತದೆ. ಅಲ್ಲವೇ?

ಭಿಕ್ಷುಕನೊಬ್ಬ ಬಂದು "ಸಾರ್ ಎರಡು ದಿನದಿಂದ ಏನೂ ತಿಂದಿಲ್ಲ" ಅಂತಾನೆ. ನೀವು "ಚಿಲ್ಲರೆ ಇಲ್ಲ ಹೋಗಯ್ಯ" ಅಂತೀರಿ. ಎರಡೂ ಸುಳ್ಳು ಅಂತ ಇಬ್ಬರಿಗೂ ಗೊತ್ತು. ಇಬ್ಬರ ಬೆನ್ನಿಗೂ ಹುಸಿನುಡಿಯ ಪಾಪ ಅಂಟಿಕೊಂಡಿದ್ದು ಬಿಟ್ಟರೆ ಇದರಿಂದ ಯಾರಿಗೆ ಏನು ಲಾಭವಾಯಿತು?

"ಅದರಿಂದ ಈಗೇನಾಯ್ತು? ಇವನ್ನೆಲ್ಲ ಸುಳ್ಳು ಅಂತ ನೀನಂದ್ಕೊಂಡ್ರೆ ಅಷ್ಟೇ, ಬದುಕಕ್ಕೇ ಆಗಲ್ಲ" ಅಂತ ನನಗೆ ಬುದ್ಧಿ ಹೇಳಿರುವವರು ಸಾಕಷ್ಟಿದ್ದಾರೆ. ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಾಗುತ್ತದೆ. ಅದನ್ನು ಮುಚ್ಚಿ ಹಾಕಲು ಮತ್ತೊಂದು, ಹೀಗೆ ಸುಳ್ಳು ಎಂಬುದು ಕೊನೆಯಿಲ್ಲದ ಸರಪಳಿಯಂತೆ. ಸುಳ್ಳು ಹೇಳಿದಷ್ಟೂ ಆತ್ಮಶಕ್ತಿ ಕುಸಿಯುತ್ತಾ ಹೋಗುತ್ತದೆ, ಆತ್ಮಸಾಕ್ಷಿ (ಇರುವವರಿಗೆ) ಚುಚ್ಚುತ್ತದೆ. ಹಾಗಾದರೆ ಸುಳ್ಳು ಅನಿವಾರ್ಯವೇ? ತಮಾಷೆಗೂ ಒಂದು ಚಿಕ್ಕ ಸುಳ್ಳೂ ಹೇಳದೆ ಒಂದು ದಿನ ಜೀವನ ಸಾಗಿಸುವುದು ಕೂಡ ಸಾಧ್ಯವಿಲ್ಲವೇ?

ಅನುಲೇಖ: ೧೨ ವರ್ಷ ಕೇವಲ ಸತ್ಯವನ್ನೇ ನುಡಿದರೆ ಮುಂದೆ ಆ ವ್ಯಕ್ತಿ ಹೇಳಿದ್ದೆಲ್ಲ ಸತ್ಯವಾಗುತ್ತದಂತೆ. ಪ್ರಯತ್ನಿಸೋಣವೇ?

ಶನಿವಾರ, ಜನವರಿ 3, 2009

ಹೊಸ ವರ್ಷ...

ಇಂದು ಅಪರ್ಣಾ ಅವರ ಬ್ಲಾಗ್ ಓದುತ್ತಿರುವಾಗ ವಿಜಯ ಕರ್ನಾಟಕದಲ್ಲಿ ಜನವರಿ ಒಂದರಂದು ಬಂದ ಷಡಕ್ಷರಿಯವರ ಲೇಖನದ ಬಗ್ಗೆ ಮಾಹಿತಿ ಸಿಕ್ಕಿತು. ನಾವು ನಿಜ ಜೀವನದಲ್ಲಿ ಅಳವಡಿಸಿಕೊಳ್ಳಬಹುದಾದ ಸಣ್ಣ ಸೂಚನೆಗೆಳನ್ನು ನೀಡಿದ್ದಾರೆ. ಇದನ್ನು ಎಲ್ಲರೂ ತಮ್ಮ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡರೆ ಒಳ್ಳೆಯದು ಎನಿಸಿದ್ದರಿಂದ ಇಲ್ಲಿ ಬರೆಯುತ್ತಿದ್ದೇನೆ. ಚಿತ್ರವನ್ನು ಕ್ಲಿಕ್ ಮಾಡಿದರೆ ದೊಡ್ಡದಾಗಿ ಕಾಣುತ್ತದೆ:

ವಿಜಯ ಕರ್ನಾಟಕ

ಮತ್ತೆ ಹೊಸ ವರ್ಷ ಬಂದಿದೆ. ಎಲ್ಲರೂ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವಾಗಲೇ ಗುವಾಹತಿಯಲ್ಲಿ ಬಾಂಬ್ ದಾಳಿಯಾಗಿದೆ. ಹೊಸ ವರ್ಷದ ಪ್ರಯುಕ್ತ ಕಛೇರಿಯಲ್ಲಿ ಆಯೋಜಿಸಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಗೆಲುವು, ಬಹುದಿನಗಳಿಂದ ಬಯಸಿದ್ದ ಕೊಡಚಾದ್ರಿಯ ಚಾರಣದ ಯೋಜನೆಗೆ ಗೆಳೆಯರ ಸಹಮತಿಯೊಂದಿಗೆ ಅಂತಿಮ ರೂಪ.. ಹೀಗೆ ಕಳೆದ ಮೂರು ದಿನಗಳಂತೂ ನನ್ನ ಪಾಲಿಗೆ ಶುಭವಾಗಿಯೇ ಇವೆ.

ನಾನು ಇನ್ನು ಮುಂದೆ TechnoTweak.comನಲ್ಲಿ ಕೂಡ ಬರೆಯಲಿದ್ದೇನೆ. ತಂತ್ರಜ್ಞಾನಕ್ಕೆ ಸಂಬಂಧಿಸಿದ ಲೇಖನಗಳನ್ನು ಬರೆಯುವ ಆಶಯವಿದೆ.

Better late than never ಎನ್ನುತ್ತಾರೆ. ಎಲ್ಲರಿಗೂ ಹೊಸ ವರ್ಷದ ಹಾರ್ದಿಕ ಶುಭಾಶಯಗಳು.