ಭಾನುವಾರ, ಫೆಬ್ರವರಿ 15, 2009

ಧರಣಿ ಮಂಡಲ ಮಧ್ಯದೊಳಗೆ.. ಸುಳ್ಳೇ ಸುಳ್ಳು ಈ ಭೂಮಿ ಮ್ಯಾಲೆ...

ಸತ್ಯ ಹರಿಶ್ಚಂದ್ರನ ಕಥೆ ಹೇಳಿದ ನಂತರ ಮೇಷ್ಟ್ರು ಇದರ ನೀತಿ ಏನು ಎಂದು ಕೇಳಿದ್ದಕ್ಕೆ ಒಬ್ಬ "ನಾವು ಸತ್ಯ ಹೇಳಬಾರದು. ಹೇಳಿದರೆ ಹೆಂಡತಿಯನ್ನು ಮಾರುವ, ಸ್ಮಶಾನ ಕಾಯುವ ಪರಿಸ್ಥಿತಿ ಬರುತ್ತದೆ" ಎಂದನಂತೆ. ಇದು ಒಂದು ಜೋಕ್ ಎಂದು ಕಾಣಬಹುದು. ಆದರೆ ನಮ್ಮ ಇಂದಿನ ಮನಃಸ್ಥಿತಿ ಆ ಹುಡುಗನ ಮನಃಸ್ಥಿತಿಗಿಂತ ಭಿನ್ನವಾಗಿಲ್ಲ. ನಾನು ಸುಳ್ಳು ಹೇಳಲ್ಲ ಅಂತ ಯಾರಾದ್ರೂ ಅಂದರೆ "ಆಹಾ.. ಗೊತ್ತು.. ಹರಿಶ್ಚಂದ್ರನ ಮೊಮ್ಮಗ ನೀನು" ಎನ್ನುತ್ತೇವೆ. ಹರಿಶ್ಚಂದ್ರ ತಾನು ಯಾಕಾದ್ರೂ ಸತ್ಯ ಹೇಳಿದ್ನೋ ಅಂದ್ಕೋಬೇಕು. ಪಾಪ!

ಸತ್ಯಕ್ಕೆ ಎಷ್ಟು ಶಕ್ತಿಯಿದೆ ಎಂಬುದನ್ನು ಮನವರಿಕೆ ಮಾಡಿಸುವ ಪುಣ್ಯಕೋಟಿಯ ಕಥೆಯನ್ನು ನಾವೆಲ್ಲರೂ ಕೇಳಿಯೇ ಇರುತ್ತೇವೆ. ಭಾವಪೂರ್ಣವಾಗಿರುವ ಈ ಹಾಡು ಪ್ರತಿ ಬಾರಿ ಕೇಳಿದಾಗಲೂ ನಮ್ಮನ್ನು ಎಷ್ಟೇ ಕಠಿಣ ಪರಿಸ್ಥಿತಿಯಲ್ಲೂ ಸತ್ಯವನ್ನೇ ಹೇಳುವಂತೆ ಪ್ರೇರೇಪಿಸುತ್ತದೆ. (ಇದನ್ನು ಓದುವುದಕ್ಕಿಂತಲೂ ಕೇಳುವುದೇ ಚೆನ್ನ)

ಧರಣಿ ಮಂಡಲ ಮಧ್ಯದೊಳಗೆ
ಮೆರೆಯುತಿಹ ಕರ್ಣಾಟ ದೇಶದೊ
ಳಿರುವ ಕಾಳಿಂಗನೆಂಬ ಗೊಲ್ಲನ
ಪರಿಯ ನಾನೆಂತು ಪೇಳ್ವೆನು

ಗಿರಿಗಳೆಡೆಯಲಿ ಅಡವಿ ನಡುವೆ
ತುರುವ ದೊಡ್ಡಿಯ ಮಾಡಿಕೊಂಡು
ಮೆರೆವ ಕಾಳಿಂಗನೆಂಬ ಗೊಲ್ಲನ
ಸಿರಿಯ ನಾನೆಂತು ಪೇಳ್ವೆನು

ಗೊಲ್ಲದೊಡ್ಡಿಯೊಳಿರುವ ಹಸುಗಳು
ಎಲ್ಲ ಬೆಟ್ಟದ ಮೇಲೆ ಮೇಯುತ
ಹುಲ್ಲು ಒಳ್ಳೆಯ ನೀರ ಕುಡಿಯುತ
ಅಲ್ಲಿ ಮೆರೆದುವರಣ್ಯದಿ

ಕರುಗಳನು ನೆನೆನೆನೆದು ಹಸುಗಳು
ಕೊರಳ ಘಂಟೆ ಢಣಿರು ಢಣಿರನೆ
ಪರಿದು ಲಂಘಿಸಿ ಚಿಮ್ಮಿ ನೆಗೆಯುತ
ಮರಳಿ ಬಂದವು ದೊಡ್ಡಿಗೆ

ತಮ್ಮ ತಾಯನು ಕಂಡು ಕರುಗಳು
ಅಮ್ಮಾ ಎಂದು ಕೂಗಿ ನಲಿಯುತ
ಸುಮ್ಮಾನದೊಳು ಮೊಲೆಯನುಂಡು
ನಿರ್ಮಲದೊಳು ಇದ್ದವು

ಉದಯ ಕಾಲದೊಳೆದ್ದು ಗೊಲ್ಲನು
ನದಿಯ ಸ್ನಾನವ ಮಾಡಿಕೊಂಡು
ಮುದದಿ ತಿಲಕವ ಹಣೆಯೊಳಿಟ್ಟು
ಚದುರ ಶಿಖೆಯನು ಹಾಕಿದ

ಎಳೆಯ ಮಾವಿನ ಮರದ ಕೆಳಗೆ
ಕೊಳಲನೂದುತ ಗೊಲ್ಲ ಗೌಡನು
ಬಳಸಿ ನಿಂದಾ ತುರುಗಳನ್ನು
ಬಳಿಗೆ ಕರೆದನು ಹರುಷದಿ

ಗಂಗೆ ಬಾರೇ ಗೌರಿ ಬಾರೇ
ತುಂಗಭದ್ರೆ ತಾಯಿ ಬಾರೇ
ಕಾಮಧೇನು ಬಾರೆ ಎಂದು
ಪ್ರೇಮದಿ ಗೊಲ್ಲ ಕರೆದನು

ಗೊಲ್ಲ ಕರೆದಾ ಧ್ವನಿಯ ಕೇಳಿ
ಎಲ್ಲ ಪಶುಗಳು ಬಂದು ನಿಂತು
ಚೆಲ್ಲಿ ಸೂಸಿ ಹಾಲು ಕರೆಯಲು
ಅಲ್ಲಿ ತುಂಬಿತು ಬಿಂದಿಗೆ

ಹಬ್ಬಿದಾ ಮಲೆ ಮಧ್ಯದೊಳಗೆ
ಅರ್ಬುದಾನೆಂದೆಂಬ ವ್ಯಾಘ್ರನು
ಅಬ್ಬರಿಸಿ ಹಸಿ ಹಸಿದು ಬೆಟ್ಟದ
ಕಿಬ್ಬಿಯೊಳು ತಾನಿದ್ದನು

ಸಿಡಿದು ರೋಷದಿ ಮೊರೆಯುತಾ ಹುಲಿ
ಘುಡುಘುಡಿಸಿ ಭೋರಿಡುತ ಛಂಗನೆ
ತುಡುಕಲೆರಗಿದ ರಭಸಕಂಜಿ
ಚೆದರಿ ಹೋದುವು ಹಸುಗಳು

ಪುಣ್ಯಕೋಟಿ ಎಂಬ ಹಸುವು
ತನ್ನ ಕಂದನ ನೆನೆದುಕೊಂಡು
ಮುನ್ನ ಹಾಲನು ಕೊಡುವೆನೆನುತ
ಚೆಂದದೀ ತಾ ಬರುತಿರೆ

ಇಂದೆನಗೆ ಆಹಾರ ಸಿಕ್ಕಿತು
ಎಂದು ಬೇಗನೆ ದುಷ್ಟ ವ್ಯಾಘ್ರನು
ಬಂದು ಬಳಸಿ ಅಡ್ಡಗಟ್ಟಿ
ನಿಂದನಾ ಹುಲಿರಾಯನು

ಮೇಲೆ ಬಿದ್ದು ನಿನ್ನನೀಗಲೆ
ಬೀಳಹೊಯ್ವೆನು ನಿನ್ನ ಹೊಟ್ಟೆಯ
ಸೀಳಿ ಬಿಡುವೆನು ಎನುತ ಕೋಪದಿ
ಖೂಳ ವ್ಯಾಘ್ರನು ಕೂಗಲು

ಒಂದು ಬಿನ್ನಹ ಹುಲಿಯೆ ಕೇಳು
ಕಂದನಿರುವನು ದೊಡ್ಡಿಯೊಳಗೆ
ಒಂದು ನಿಮಿಷದಿ ಮೊಲೆಯ ಕೊಟ್ಟು
ಬಂದು ಸೇರುವೆನಿಲ್ಲಿಗೆ

ಹಸಿದ ವೇಳೆಗೆ ಸಿಕ್ಕಿದೊಡವೆಯ
ವಶವ ಮಾಡದೆ ಬಿಡಲು ನೀನು
ನುಸುಳಿ ಹೋಗುವೆ ಮತ್ತೆ ಬರುವೆಯ
ಹುಸಿಯನಾಡುವೆಯೆಂದಿತು

ಸತ್ಯವೇ ನಮ್ಮ ತಾಯಿ ತಂದೆ
ಸತ್ಯವೇ ನಮ್ಮ ಬಂಧು ಬಳಗ
ಸತ್ಯ ವಾಕ್ಯಕೆ ತಪ್ಪಿ ನಡೆದರೆ
ಮೆಚ್ಚನಾ ಪರಮಾತ್ಮನು

ಕೊಂದು ತಿನ್ನುವೆನೆಂಬ ಹುಲಿಗೆ
ಚೆಂದದಿಂದ ಭಾಷೆಯಿತ್ತು
ಕಂದ ನಿನ್ನನು ನೋಡಿ ಹೋಗುವೆ
ನೆಂದು ಬಂದೆನು ದೊಡ್ಡಿಗೆ

ಅಮ್ಮಾ ನೀನು ಸಾಯಲೇಕೆ
ನನ್ನ ತಬ್ಬಲಿ ಮಾಡಲೇಕೆ
ಸುಮ್ಮನಿಲ್ಲಿಯೆ ನಿಲ್ಲೆನುತ್ತ
ಅಮ್ಮನಿಗೆ ಕರು ಹೇಳಲು

ಕೊಟ್ಟ ಭಾಷೆಗೆ ತಪ್ಪಲಾರೆನು
ಕೆಟ್ಟ ಯೋಚನೆ ಮಾಡಲಾರೆನು
ನಿಷ್ಠೆಯಿಂದಲಿ ಪೋಪೆನಲ್ಲಿಗೆ
ಕಟ್ಟಕಡೆಗಿದು ಖಂಡಿತ

ಆರ ಮೊಲೆಯನು ಕುಡಿಯಲಮ್ಮ?
ಆರ ಸೇರಿ ಬದುಕಲಮ್ಮ?
ಆರ ಬಳಿಯಲಿ ಮಲಗಲಮ್ಮ?
ಆರು ನನಗೆ ಹಿತವರು?

ಅಮ್ಮಗಳಿರ ಅಕ್ಕಗಳಿರ
ನಮ್ಮ ತಾಯೊಡಹುಟ್ಟುಗಳಿರ
ನಿಮ್ಮ ಕಂದನೆಂದು ಕಾಣಿರಿ
ತಬ್ಬಲಿಯನೀ ಕರುವನು

ಮುಂದೆ ಬಂದರೆ ಹಾಯಬೇಡಿ
ಹಿಂದೆ ಬಂದರೆ ಒದೆಯಬೇಡಿ
ಕಂದ ನಿಮ್ಮವನೆಂದು ಕಾಣಿರಿ
ತಬ್ಬಲಿಯನೀ ಕರುವನು

ಕಟ್ಟಕಡೆಯಲಿ ಮೇಯಬೇಡ
ಬೆಟ್ಟದೊತ್ತಿಗೆ ಹೋಗಬೇಡ
ದುಷ್ಟವ್ಯಾಘ್ರನು ಹೊಂಚುತಿರುವನು
ನಟ್ಟನಡುವಿರು ಕಂದನೆ

ತಬ್ಬಲಿಯು ನೀನಾದೆ ಮಗನೆ
ಹೆಬ್ಬುಲಿಯ ಬಾಯನ್ನು ಹೊಗುವೆನು
ಇಬ್ಬರಾ ಋಣ ತೀರಿತೆಂದು
ತಬ್ಬಿಕೊಂಡಿತು ಕಂದನ

ಗೋವು ಕರುವನು ಬಿಟ್ಟು ಬಂದು
ಸಾವಕಾಶವ ಮಾಡದಂತೆ
ಗವಿಯ ಬಾಗಿಲ ಸೇರಿನಿಂತು
ತವಕದಲಿ ಹುಲಿಗೆಂದಿತು

ಖಂಡವಿದೆ ಕೋ ಮಾಂಸವಿದೆ ಕೋ
ಗುಂಡಿಗೆಯ ಬಿಸಿ ರಕ್ತವಿದೆ ಕೋ
ಚಂಡ ವ್ಯಾಘ್ರನೆ ನೀನಿದೆಲ್ಲವ
ನುಂಡು ಸಂತಸದಿಂದಿರು

ಪುಣ್ಯಕೋಟಿಯ ಮಾತ ಕೇಳಿ
ಕಣ್ಣ ನೀರನು ಸುರಿಸಿ ನೊಂದು
ಕನ್ನೆಯಿವಳನು ಕೊಂದು ತಿಂದರೆ
ಮೆಚ್ಚನಾ ಪರಮಾತ್ಮನು

ಎನ್ನ ಒಡಹುಟ್ಟಕ್ಕ ನೀನು
ನಿನ್ನ ಕೊಂದು ಏನ ಪಡೆವೆನು
ಎನ್ನುತಾ ಹುಲಿ ಹಾರಿ ನೆಗೆದು
ತನ್ನ ಪ್ರಾಣವ ಬಿಟ್ಟಿತು

ಸಂಸ್ಕೃತದಲ್ಲಿ ಒಂದು ಶ್ಲೋಕವಿದೆ:

सत्यं ब्रूयात् प्रियं ब्रूयात् न ब्रूयात् सत्यमप्रियं ।
प्रियं च नानृतं ब्रूयात् एषः धर्मः सनातनः ॥

ಸತ್ಯಂ ಬ್ರೂಯಾತ್ ಪ್ರಿಯಂ ಬ್ರೂಯಾತ್ ನ ಬ್ರೂಯಾತ್ ಸತ್ಯಮಪ್ರಿಯಮ್ |
ಪ್ರಿಯಂ ಚ ನಾನೃತಂ ಬ್ರೂಯಾತ್ ಏಷಃ ಧರ್ಮಃ ಸನಾತನಃ ||

ಸತ್ಯವನ್ನು ಹೇಳಬೇಕು, ಪ್ರಿಯವಾದದ್ದನ್ನು ಹೇಳಬೇಕು, ಅಪ್ರಿಯವಾದ ಸತ್ಯವನ್ನು ಹೇಳಬಾರದು, ಪ್ರಿಯವಾಗಿದ್ದರೂ ಅಸತ್ಯವಾಗಿದ್ದನ್ನು ಹೇಳಬಾರದು - ಇದು ಸನಾತನ ಧರ್ಮ. ಸನಾತನ ಧರ್ಮ ಏಕೆ ಬೇಕು ಎಂದು ಕೇಳಲ್ಪಡುತ್ತಿರುವ ಈ ಸಮಯದಲ್ಲಿ ಈ ಸುಭಾಷಿತ ಅಪ್ರಸ್ತುತ ಎಂದು ಕಾಣುತ್ತದೆ; ಇರಲಿ.

"ಎಲ್ಲಿದೀಯೋ? ಬೇಗ ಬಾ" ಅಂತ ಗೆಳೆಯ ಹೇಳಿದ್ದಕ್ಕೆ ಇನ್ನೂ ಹೊರಟೇ ಇರದಿದ್ದರೂ "ಐದೇ ನಿಮಿಷ... ಆನ್ ದ ವೇ.. ಇಂಥಲ್ಲಿ ಇರು, ಬಂದೆ" ಅಂತೀರಿ. ಬಟ್ಟೆ ಹಾಕಿಕೊಂಡು, ರೆಡಿಯಾಗಿ ಅಲ್ಲಿಗೆ ಹೋಗುವಷ್ಟರಲ್ಲಿ ಅರ್ಧ ಘಂಟೆ ಕಳೆದಿರುತ್ತದೆ. ನಿಮಗಾಗಿ ಅಲ್ಲಿ ಕಾದ ನಿಮ್ಮ ಗೆಳೆಯ ಆ ಕ್ಷಣವೇ ನಿರ್ಧರಿಸುತ್ತಾನೆ: ನಿಮ್ಮ ಐದು ನಿಮಿಷ ಅಂದರೆ ಅರ್ಧ ಘಂಟೆ. ಇದರ ಬದಲು "ನಾನು ಇನ್ನೂ ಹೊರಟಿಲ್ಲ, ಬರೋದು ಅರ್ಧ ಘಂಟೆ ಆಗುತ್ತೆ" ಎಂದು ಹೇಳಿದರೆ ಅವನು ಆ ಅರ್ಧ ಘಂಟೆಯಲ್ಲಿ ಮಾಡಿಕೊಳ್ಳಬಹುದಾದ ಚಿಕ್ಕ ಕೆಲಸಗಳೇನಾದರೂ ಇದ್ದರೆ ಮುಗಿಸಿಕೊಳ್ಳಬಹುದು. ಆತನಿಗೆ ನಿಮ್ಮ ಮೇಲಿನ ಗೌರವವೂ ಉಳಿಯುತ್ತದೆ. ಅಲ್ಲವೇ?

ಭಿಕ್ಷುಕನೊಬ್ಬ ಬಂದು "ಸಾರ್ ಎರಡು ದಿನದಿಂದ ಏನೂ ತಿಂದಿಲ್ಲ" ಅಂತಾನೆ. ನೀವು "ಚಿಲ್ಲರೆ ಇಲ್ಲ ಹೋಗಯ್ಯ" ಅಂತೀರಿ. ಎರಡೂ ಸುಳ್ಳು ಅಂತ ಇಬ್ಬರಿಗೂ ಗೊತ್ತು. ಇಬ್ಬರ ಬೆನ್ನಿಗೂ ಹುಸಿನುಡಿಯ ಪಾಪ ಅಂಟಿಕೊಂಡಿದ್ದು ಬಿಟ್ಟರೆ ಇದರಿಂದ ಯಾರಿಗೆ ಏನು ಲಾಭವಾಯಿತು?

"ಅದರಿಂದ ಈಗೇನಾಯ್ತು? ಇವನ್ನೆಲ್ಲ ಸುಳ್ಳು ಅಂತ ನೀನಂದ್ಕೊಂಡ್ರೆ ಅಷ್ಟೇ, ಬದುಕಕ್ಕೇ ಆಗಲ್ಲ" ಅಂತ ನನಗೆ ಬುದ್ಧಿ ಹೇಳಿರುವವರು ಸಾಕಷ್ಟಿದ್ದಾರೆ. ಒಂದು ಸುಳ್ಳು ಹೇಳಿದರೆ ಅದನ್ನು ಮುಚ್ಚಿ ಹಾಕಲು ಇನ್ನೊಂದು ಸುಳ್ಳು ಹೇಳಬೇಕಾಗುತ್ತದೆ. ಅದನ್ನು ಮುಚ್ಚಿ ಹಾಕಲು ಮತ್ತೊಂದು, ಹೀಗೆ ಸುಳ್ಳು ಎಂಬುದು ಕೊನೆಯಿಲ್ಲದ ಸರಪಳಿಯಂತೆ. ಸುಳ್ಳು ಹೇಳಿದಷ್ಟೂ ಆತ್ಮಶಕ್ತಿ ಕುಸಿಯುತ್ತಾ ಹೋಗುತ್ತದೆ, ಆತ್ಮಸಾಕ್ಷಿ (ಇರುವವರಿಗೆ) ಚುಚ್ಚುತ್ತದೆ. ಹಾಗಾದರೆ ಸುಳ್ಳು ಅನಿವಾರ್ಯವೇ? ತಮಾಷೆಗೂ ಒಂದು ಚಿಕ್ಕ ಸುಳ್ಳೂ ಹೇಳದೆ ಒಂದು ದಿನ ಜೀವನ ಸಾಗಿಸುವುದು ಕೂಡ ಸಾಧ್ಯವಿಲ್ಲವೇ?

ಅನುಲೇಖ: ೧೨ ವರ್ಷ ಕೇವಲ ಸತ್ಯವನ್ನೇ ನುಡಿದರೆ ಮುಂದೆ ಆ ವ್ಯಕ್ತಿ ಹೇಳಿದ್ದೆಲ್ಲ ಸತ್ಯವಾಗುತ್ತದಂತೆ. ಪ್ರಯತ್ನಿಸೋಣವೇ?

16 ಕಾಮೆಂಟ್‌ಗಳು:

Ittigecement ಹೇಳಿದರು...

ಒಂದೂ ಸುಳ್ಳನ್ನು ಹೇಳದೆ ಇಂದಿನ ಕಾಲದಲ್ಲಿ ಬದಕಲು ಸಾಧ್ಯ ಇಲ್ಲ..
ಇದು ನನ ಅನಿಸಿಕೆ...

ಅಷ್ಟೊಂದು ನಗ್ನರಾಗಿ ಇರುವದು ಬಹಳ ಕಷ್ಟ..

ಹಾಡು.. ಲೇಖನ ತುಂಬಾ.. ತುಂಬಾ ಚೆನ್ನಾಗಿ ಬಂದಿದೆ..

ಅಭಿನಂದನೆಗಳು..

shivu.k ಹೇಳಿದರು...

ಹರೀಶ್,

ನಾನು ಮೂರನೆ ಕ್ಲಾಸಿನಲ್ಲಿ ಕಲಿತ ಗೋವಿನ ಹಾಡನ್ನು ಕೇಳಿಸಿದಿರಿ....ಮತ್ತೆ ಸತ್ಯ ಸುಳ್ಳುಗಳ ಬಗ್ಗೆ ಒಂದು ಉತ್ತಮ ಲೇಖನ.

ನಿಮ್ಮ ಐದು ನಿಮಿಷ ಅಂದರೆ ಅರ್ಧ ಘಂಟೆ. ಇದರ ಬದಲು "ನಾನು ಇನ್ನೂ ಹೊರಟಿಲ್ಲ, ಬರೋದು ಅರ್ಧ ಘಂಟೆ ಆಗುತ್ತೆ" ಎಂದು ಹೇಳಿದರೆ ಅವನು ಆ ಅರ್ಧ ಘಂಟೆಯಲ್ಲಿ ಮಾಡಿಕೊಳ್ಳಬಹುದಾದ ಚಿಕ್ಕ ಕೆಲಸಗಳೇನಾದರೂ ಇದ್ದರೆ ಮುಗಿಸಿಕೊಳ್ಳಬಹುದು. ಆತನಿಗೆ ನಿಮ್ಮ ಮೇಲಿನ ಗೌರವವೂ ಉಳಿಯುತ್ತದೆ. ಅಲ್ಲವೇ?

ಈ ವಿಚಾರದಲ್ಲಿ ನಾನು ನೇರ ಹೇಳಿದರೆ ಇಷ್ಟೇ ಸಮಯಕ್ಕೆ ಬರುತ್ತೇನೆ ಅಂತ ಹೇಳುತ್ತೇನೆ...ಮತ್ತು ಬೇರೆಯವರಿಂದಲೂ ಹಾಗೆ ನಿರೀಕ್ಷಿಸುತ್ತೇನೆ...ಸುಮ್ಮನೆ ಐದು ಹತ್ತು ನಿಮಷ ಅಂತ ಹೇಳುವುದಿಲ್ಲ...


ಭಿಕ್ಷುಕನೊಬ್ಬ ಬಂದು "ಸಾರ್ ಎರಡು ದಿನದಿಂದ ಏನೂ ತಿಂದಿಲ್ಲ" ಅಂತಾನೆ. ನೀವು "ಚಿಲ್ಲರೆ ಇಲ್ಲ ಹೋಗಯ್ಯ" ಅಂತೀರಿ. ಎರಡೂ ಸುಳ್ಳು ಅಂತ ಇಬ್ಬರಿಗೂ ಗೊತ್ತು.
ಈ ವಿಚಾರದಲ್ಲಿ ನನಗೆ ಒ೦ದು ನಂಬಿಕೆ ಇದ್ದರೆ ಕೊಟ್ಟು ನಮ್ಮ ಪಾಪ ಕಳೆದುಕೊಳ್ಳಬೇಕು ಅನ್ನುವುದಕ್ಕಿಂತ ಅವನಿಗೆ ಕೊಡುವ ಅವಕಾಶ ಸಿಕ್ಕಿತ್ತಲ್ಲ....ಅಂತ ಸಂತೋಷ ಪಡುವುದು ಹೇಗೆ ಅನ್ನುವುದನ್ನು ನಾನು ಅನೇಕ ಅದ್ಯಾತ್ಮಿಕ ಕ್ಲಾಸ್ ಗಳಲ್ಲಿ ಹೋಗಿ ಕಲಿತಿದ್ದೇನೆ.....ಇವತ್ತು ಬೆಳಿಗ್ಗೆ ಒಂದು ಒಳ್ಳೆಯ ಬರಹ ಓದುವ ಅವಕಾಶ ಸಿಕ್ಕಿದ್ದಕ್ಕೆ ಥ್ಯಾಂಕ್ಸ್..

Ashok Uchangi ಹೇಳಿದರು...

ಮಹಾಭಾರತ ಯುದ್ದದಲ್ಲಿ ಒಂದು ಸುಳ್ಳಾಡಿದ್ದಕ್ಕೆ ಯುದ್ದಿಷ್ಠಿರ ಸ್ವರ್ಗಕ್ಕೆ ಹೋಗುವದಾರಿಯಲ್ಲಿ ನರಕದ ಬಾಗಿಲಿನ ಮುಂದೆಯೇ ಸಾಗಿದನಂತೆ...
ಒಂದು ಸುಳ್ಳಾಡಿದರೂ ನರಕದ ದರ್ಶನ ತಪ್ಪುತ್ತರಲಿಲ್ಲ!
ಇಂದು....
ಅಶೋಕ ಉಚ್ಚಂಗಿ

Harisha - ಹರೀಶ ಹೇಳಿದರು...

ಪ್ರಕಾಶಣ್ಣ, ಮೇಲ್ನೋಟಕ್ಕೆ ಸುಳ್ಳು ಹೇಳದೆ ಬದುಕಲು ಸಾಧ್ಯವಿಲ್ಲದಂತೆ ಕಾಣಬಹುದು. ಆದರೆ ಪ್ರಯತ್ನಪಟ್ಟರೆ ಇದು ಅಸಾಧ್ಯವೇನಲ್ಲ.

"ಸತ್ಯಕ್ಕೆ ಸಾವಿಲ್ಲ, ಸುಳ್ಳಿಗೆ ಸುಖವಿಲ್ಲ" ಅನ್ನೋ ಮಾತಿನ ಹಾಗೆ..
"ಬೀಸೊ ದೊಣ್ಣೆ ತಪ್ಪಿಸಿಕೊಂಡರೆ ನೂರು ವರ್ಷ ಆಯಸ್ಸು" ಅಂತ ಸದ್ಯಕ್ಕೆ ಸುಳ್ಳು ಹೇಳಿದರೂ ಇಂದಲ್ಲ ನಾಳೆ ಮತ್ತೆ ಸತ್ಯ ಹೊರಗೆ ಬಂದೆ ಬರುತ್ತದೆ..
ಆಗ ಇರೋ ಮರ್ಯಾದೆ ಕೂಡ ಹೋಗುತ್ತೆ.. "ಅಡಿಕೆಗೆ ಹೋದ ಮಾನ ಆನೆ ಕೊಟ್ಟರೂ ಬಾರದು" ಅನ್ನೋ ರೀತಿ..
ಅದಕ್ಕಿಂತ ನಿಜ ಹೇಳೋದು ಒಳ್ಳೇದಲ್ವಾ?
ಚರ್ಚೆ ಹುಟ್ಟುಹಾಕಿದ್ದಕ್ಕೆ ಧನ್ಯವಾದಗಳು :-)


ಶಿವೂ ಅವರೇ, ನನಗೂ ಈ ಪದ್ಯ ಬಹಳ ಇಷ್ಟ.. ಪ್ರತಿ ಬಾರಿ ಕೇಳಿದಾಗಲೂ ಕಣ್ಣಂಚಿನಲ್ಲಿ ನೀರು ಜಿನುಗುತ್ತದೆ.

ನಿಮ್ಮ ಅಭಿಪ್ರಾಯವನ್ನು ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು.

ನಾನೂ ನಿಮ್ಮ ಹಾಗೆ.. ಇಂತಿಷ್ಟು ಹೊತ್ತಿಗೆ ಬರುತ್ತೇನೆ ಅಂತ ಹೇಳಿಬಿಡ್ತೀನಿ. ನಮ್ಮಿಂದ ಅವ್ರಿಗೆ ಯಾಕೆ ತೊಂದ್ರೆ ಕೊಡ್ಬೇಕು ಆಲ್ವಾ?

ಇನ್ನು ಭಿಕ್ಷುಕರ ವಿಷಯ ಬಂದರೆ ನನ್ನ ನಿಲುವು ನಿಮ್ಮದಕ್ಕಿಂತ ತುಸು ಭಿನ್ನ. ಇದಕ್ಕೆ ಕಾರಣ ನನಗೆ, ಸಂದೀಪನಿಗೆ, ವಿನಯನಿಗೆ ಆದಂತಹ ಅನುಭವಗಳು. ನಿಜವಾಗಲೂ ಕೈಲಾಗದವರಿದ್ದರೆ ಸಹಾಯ ಮಾಡೋಣ. ಆದರೆ ಸುಮ್ಮನೆ ಸೋಮಾರಿತನದಿಂದ ಬೇಡುವವರಿಗೆ ಸಹಾಯ ಮಾಡಿದರೆ ಅದು ಉಪಕಾರವಾಗುವುದಿಲ್ಲ, ಅಪಕಾರವಾಗುತ್ತದೆ. ಅಲ್ಲವೇ?


ಅಶೋಕ್, ಇಂದು.. ನರಕದ ಬಾಗಿಲು ನೋಡಲೂ ಆಗುವುದಿಲ್ಲ... ಉದ್ದನೆಯ ಸರತಿ ಸಾಲಿರುತ್ತೆ! ಪ್ರತಿಕ್ರಿಯೆಗೆ ಧನ್ಯವಾದಗಳು.. ಬರುತ್ತಿರಿ :-)

Pramod ಹೇಳಿದರು...

ಸತ್ಯ ಹೇಳ್ಬೇಕು, ಅಪ್ರಿಯ ಸತ್ಯವನ್ನು ಹೇಳ್ಬಾರ್ದು. ಸತ್ಯ ಹೇಳಿದ್ರೆ ಪ್ರಾಮಾಣಿಕ, ಇವನನ್ನು ನ೦ಬಬಹುದು ಎ೦ಬ ಭರವಸೆ ಮೂಡಿಸುತ್ತದೆ. "ಧರಣಿ ಮಂಡಲ ಮಧ್ಯದೊಳಗೆ.." ತು೦ಬಾ ಜನರ ಫೇವರಿಟ್ ಪದ್ಯ ಇದು.

sunaath ಹೇಳಿದರು...

ಹರೀಶ,
ನಾನು ಪ್ರಾಥಮಿಕ ಶಾಲೆಯಲ್ಲಿ ಕಲಿತಂತಹ ನನ್ನ ಮೆಚ್ಚಿನ ಪದ್ಯವಿದು.ಹಾಗಂತ ಸುಳ್ಳಾಡದೆ ಇರಲು ಇಲ್ಲಿಯವರೆಗೂ ಸಾಧ್ಯವಾಗಿಲ್ಲ.
ಮನುಷ್ಯ ಸುಳ್ಳಾಡುವದು ತೊಂದರೆಯಿಂದ ತಪ್ಪಿಸಿಕೊಳ್ಳಲು ತಾನೆ? ಆದರೆ, ಅದರಿಂದ ಬೇರೆಯವರಿಗೆ ತೊಂದರೆ ಆಗಬಾರದು.

ವಿ.ರಾ.ಹೆ. ಹೇಳಿದರು...

ಸುಮ್ನೆ ಸುಳ್ಳು ಹೇಳಕ್ಕೋಗಲ್ಲ. ಈ ಸುಳ್ಳಾಡದೇ ಇರೋ ಕೆಲ್ಸ ಸತ್ಯವಾಗ್ಲೂ ಆಗಲ್ಲ. ಬೇರೆಯವರಿಗೆ ಕೇಡು ಬಗೆಯುವಂತಹ ಸುಳ್ಳಾಡದಿದ್ದರೆ ಸದ್ಯಕ್ಕೆ ಒಳ್ಳೇದು.

Harisha - ಹರೀಶ ಹೇಳಿದರು...

ಪ್ರಮೋದ್, ನಿಜ.. ಸತ್ಯವೇ ನಮ್ಮ ಬಗ್ಗೆ ಇರುವ ನಂಬಿಕೆಯನ್ನು ಹೆಚ್ಚಿಸಬಹುದೇ ಹೊರತು ಸುಳ್ಳಲ್ಲ.. ಈ ಪದ್ಯ ನಿಮ್ಮ ಫೇವರಿಟ್ ಕೂಡ ಅಂತ ಕೇಳಿ ಸಂತೋಷವಾಯ್ತು.. ಪ್ರತಿಕ್ರಿಯೆಗೆ ಧನ್ಯವಾದಗಳು, ಬರುತ್ತಿರಿ.. :-)

ಸುನಾಥಂಕಲ್.. ನೀವೇ ಹೀಗಂದ್ರೆ ಹೇಗೆ? ಸುಳ್ಳು ಹೇಳಿ ಸದ್ಯಕ್ಕೆ ತೊಂದರೆಯಿದೆ ತಪ್ಪಿಸಿಕೊಂಡರೂ ಮುಂದೆ ಮತ್ತೆ ಅದು ನಮ್ಮ ಕೊರಳಿಗೇ ಬಂದು ಸುತ್ತಿಕೊಳ್ಳೋದಿಲ್ವೆ? "ಸತ್ಯಮೇವ ಜಯತೇ" ಅಂತ ಗೊತ್ತಿದ್ದೂ ಸುಳ್ಳು ಹೇಳಿ ಯಾಕೆ ಸೋಲಬೇಕು?

ವಿಕಾಸ್, ಪ್ರತಿ ದಿನ ಮೌನ ವ್ರತ ಮಾಡಿದ್ರೆ? ಸುಳ್ಳು ಹೇಳೋದೇ ಬೇಕಾಗಲ್ಲ!

ಅಂತರ್ವಾಣಿ ಹೇಳಿದರು...

ಹರಿ,
ಈ ಹಾಡನ್ನು ರೇಡಿಯೋದಲ್ಲಿ ಕೇಳಿದಾಗಲೆಲ್ಲ ಅಳುತ್ತೀನಿ ಮಾರಾಯ.

ಬರಿ ಸತ್ಯ ಹೇಳಿಕೊಂಡು ಬಾಳ ಬಹುದು. ಅದೇನು ಕಷ್ಟ ಅಲ್ಲ.

ಅನಾಮಧೇಯ ಹೇಳಿದರು...

vikaas hEliddakke nanna sahamatavide

Sushrutha Dodderi ಹೇಳಿದರು...

ಈ ಕಾವ್ಯದ ಬಗ್ಗೆ ಜೋಗಿ ಒಂದು ಅತ್ಯದ್ಭುತ ವಿಮರ್ಶೆ ಬರೆದಿದ್ದರು. ಅವರ ’ಜಾನಕಿ ಕಾಲಂ’ ಪುಸ್ತಕದ ಮೊದಲ ಸಂಪುಟದಲ್ಲಿ ಅದು ಇದೆ. ಓದಿಲ್ಲದಿದ್ದರೆ ಓದಿ.

Harisha - ಹರೀಶ ಹೇಳಿದರು...

ಜಯ್, ಸತ್ಯ ಹೇಳಿ ಬದುಕಬಹುದು ಎಂಬ ವಿಶ್ವಾಸ ಇತ್ತಿದ್ದಕ್ಕೆ ಧನ್ಯವಾದಗಳು!

ವಿಜಯ್, ವಿಕಾಸ್ ಆದ್ರೆ ಮೌನ ವ್ರತ ಅದು ಇದು ಅಂತ ಕಾಲ ತಳ್ಳಬಹುದು.. ನೀವೂ ಹಾಗೆ ಮಾಡ್ತೀರಾ?

ಸುಶ್, ಮಾಹಿತಿಗೆ ಥ್ಯಾಂಕ್ಸು :-) ಅಂದ ಹಾಗೆ, ನೀನು ಸುಳ್ಳಿನ ಪರವಾಗೋ ಸತ್ಯದ ಪರವಾಗೋ?

ಮನಸ್ವಿ ಹೇಳಿದರು...

ಸತ್ಯವಂತರಿಗಿದು ಕಾಲವಲ್ಲ......... :(
ಪ್ರಯತ್ನ ಮಾಡ್ಲಕ್ಕು ಆದರೂ.. ಸತ್ಯಕ್ಕೆ ಜಯವಾಗಲಿ, ಧರಣಿ ಮಂಡಲ ಮಧ್ಯದೊಳಗೆ ಹಾಡನ್ನು ಮತ್ತೆ ನೆನಪಿಸಿದ್ದಕ್ಕೆ, ದ್ವನಿ ಮುದ್ರಿಕೆಯ ಕೊಂಡಿ ಕೊಟ್ಟಿದ್ದಕ್ಕೆ ಧನ್ಯವಾದಗಳು

ಸುಧೇಶ್ ಶೆಟ್ಟಿ ಹೇಳಿದರು...

ಹೌದಲ್ವೇ.... ಕೆಲವೊಮ್ಮೆ ಅಗತ್ಯ ಇಲ್ಲದಿದ್ದರೂ ನೀವು ಉದಾಹರಿಸಿದ ಸುಳ್ಳುಗಳನ್ನು ನಾವು ಹೇಳುತ್ತಿರುತ್ತೇವೆ. ಹೌದು... ಅವನ್ನು ಕಡಿಮೆ ಮಾಡಿಕೊಳ್ಳಬೇಕಾದುದು ಒಳ್ಳೆಯ ಅಭ್ಯಾಸವೇ... ನಾನು ಪ್ರಯತ್ನಿಸುತ್ತೇನೆ.

ಸಣ್ಣವನಿರುವಾಗ ಈ ಕಥೆಯನ್ನು ಕೇಳಿದಾಗ ಕಣ್ಣಿನಲ್ಲಿ ನೀರು ತು೦ಬಿತ್ತು.

ಚಿ೦ತನೆಗೆ ಹಚ್ಚುವ ಬರಹ ಹರೀಶ್....

Harisha - ಹರೀಶ ಹೇಳಿದರು...

ಆದಿತ್ಯ, ನೀ ಪ್ರಯತ್ನ ಪಟ್ಟು ಸ್ವಲ್ಪವಾದರೂ ಸಫಲವಾದರೆ ನಾನು ಬರ್ದಿದ್ದು ಸಾರ್ಥಕ :-)

ಸುಧೇಶ್, ಹೌದು ಸುಧೇಶ್.. ಯಾವುದೇ ಲಾಭವಿಲ್ಲದ ಸುಳ್ಳು ಹೇಳುವ ಜನರನ್ನು ನೋಡಿದಾಗ ನನಗೆ ಪಾಪ ಅನಿಸುತ್ತದೆ.... ಪ್ರತಿಕ್ರಿಯಿಗೆ ಧನ್ಯವಾದಗಳು :-)

Ittigecement ಹೇಳಿದರು...

ಹರೀಷ್...

ಏನಾದ್ರೂ ಬರಿ ಮಾರಾಯಾ...!