ಸೋಮವಾರ, ಸೆಪ್ಟೆಂಬರ್ 29, 2008

ಶ್ವಾನ ಪುರಾಣ

ನಾಯಿಯಷ್ಟು ಕೃತಜ್ಞ ಪ್ರಾಣಿ ಇನ್ನೊಂದಿಲ್ಲ. ಯಾರೋ ಒಬ್ಬ ಹೇಳಿದಂತೆ ತನಗಿಂತಲೂ ಹೆಚ್ಚು ತನ್ನ ಒಡೆಯನನ್ನು ಪ್ರೀತಿಸುವ ಪ್ರಾಣಿ ನಾಯಿಯೊಂದೇ. ಇಂತಿಪ್ಪ ನಾಯಿ ಕೆಲವೊಮ್ಮೆ ತನ್ನ ಕುಚೇಷ್ಟೆಗಳಿಂದ irritate ಮಾಡುವುದೂ ಇದೆ.

ಬೆಳಿಗ್ಗೆ ಎದ್ದು ಅಮ್ಮ ದೇವರ ಸ್ತುತಿ ಮಾಡುತ್ತಾ ಬಾಗಿಲಿಗೆ ರಂಗೋಲಿ ಹಾಕಿ ಒಳಗೆ ಹೋಗುತ್ತಾಳೆ. ಹೋಗಿ ಮತ್ತೆ ಹೊರಬರುವಷ್ಟರಲ್ಲಿ ರಂಗೋಲಿಯ ಮೇಲೆ ನಾಯಿಯೊಂದು ಬಂದು ಮಲಗಿರುತ್ತದೆ! "ಥತ್ ಹೊಲಸು ನಾಯಿ" ಎಂದು ಬಯ್ಯುತ್ತಾ ಅದನ್ನು ಓಡಿಸಿ ಒಳಗೆ ಹೋಗುವಷ್ಟರಲ್ಲಿ ಮತ್ತೆ ಹಾಜರ್!! ಇದಕ್ಕೆ ನಿಜವಾದ ಕಾರಣ ಏನು ಎಂಬುದು ತಿಳಿದಿಲ್ಲವಾದರೂ ನನಗೆ ಯಾರೋ ಹಿರಿಯರು ಹೇಳಿದಂತೆ ರಂಗೋಲಿ ನಾಯಿಗಳಿಗೆ ಮಣೆ ಹಾಕಿಟ್ಟಂತೆ ಕಂಡು ಬರುವುದಂತೆ. ಅದೇ ಕಾರಣಕ್ಕೆ ಅವು ಅಲ್ಲಿ ಬಂದು ಆಸೀನವಾಗುವುದಂತೆ.

ಅಪ್ಪನ ಪೂಜೆ ಕೊನೆಯ ಹಂತಕ್ಕೆ ಬಂದಿರುತ್ತದೆ. ಮಂಗಳಾರತಿಯ ಸಮಯ ಅಪ್ಪ ಆರತಿ ಘಂಟೆ ಬಾರಿಸಲಾರಂಭಿಸಿದಾಗ ನಾನು ಹೋಗಿ ಜಾಗಟೆ ಬಾರಿಸುತ್ತೇನೆ. ಇದ್ದಕ್ಕಿದ್ದಂತೆ ಹೊರಗೆ ನಾಯಿಗಳ ಬೊಗಳಾಟ ಶುರುವಾಗುತ್ತದೆ. ಒಂದು ನಾಯಿ "ಊಽಽಽಽ" ಎಂದು ಬಾಯ್ತೆರೆಯುವುದೇ ತಡ, ಎಲ್ಲಿರುತ್ತವೆಯೋ ಏನೋ, ಊರಿನ ಎಲ್ಲಾ ನಾಯಿಗಳೂ ಒಮ್ಮೆಲೇ ದೇವರಿಗೆ ಸೇವೆ ಮಾಡಲಾರಂಭಿಸುತ್ತವೆ. ಅಪ್ಪನ ಪೂಜೆ ಮುಗಿದರೂ ಅವುಗಳ ಶಂಖಸೇವೆ ಮುಗಿದಿರುವುದಿಲ್ಲ.

ಸಣ್ಣವನಿದ್ದಾಗ ನನಗೆ ವಿಪರೀತ ನಾಯಿಮರಿಗಳ ಹುಚ್ಚಿತ್ತು. ವಿಪರ್ಯಾಸವೆಂಬಂತೆ ಅಕ್ಕಪಕ್ಕದ ಮನೆಯ ನಾಯಿಗಳೂ ನಮ್ಮ ಮನೆಯ ಸರಹದ್ದಿಗೆ ಬಂದೇ ಮರಿ ಹಾಕುತ್ತಿದ್ದವು. ಪಾಪ, ಅವಕ್ಕೇನು ಗೊತ್ತು, ನಾನು ಆಟ ಆಡಿಸುವ ನೆಪದಲ್ಲಿ ಮರಿಗಳನ್ನು ಗೋಳು ಹೊಯ್ದುಕೊಳ್ಳುತ್ತೇನೆ ಎಂದು!! ಕೆಲವೊಂದು ಬಾರಿ ಅವುಗಳನ್ನು ತೀರಾ ಹಿಂಸಿಸಿದ್ದೂ ಇದೆ.

ನಾಯಿಯೊಂದು ಮರಿ ಹಾಕಿ ಇನ್ನೂ ೨ ತಿಂಗಳಾಗಿತ್ತು. ಅವುಗಳಿಗೆ ಇನ್ನೂ ಸರಿಯಾಗಿ ಓಡಲೂ ಬರುತ್ತಿರಲಿಲ್ಲ; ನನ್ನ ಕೈಗೆ ಸಿಕ್ಕಿಬಿಡುತ್ತಿದ್ದವು. ನಮ್ಮ ಮನೆಯಲ್ಲಿ ಮನೆಯ ಕಟ್ಟೆಯಿಂದ ಬಾವಿ ಕಟ್ಟೆಗೆ ೨ ಅಡಿ ಅಷ್ಟೇ. ಆದರೆ ಆ ನಾಯಿ ಮರಿಗೆ ಅದನ್ನು ಹಾರಿ ದಾಟಲು ಬರುತ್ತಿರಲಿಲ್ಲ. ಅದನ್ನು ಕಲಿಸುವುದು ಬೇಡವೇ! ಅದಕ್ಕೆ ಸರಪಳಿ ಹಾಕಿ ಎಳೆದು ಆ ಕಡೆಯಿಂದ ಈ ಕಡೆಗೆ ಹಾರುವಂತೆ ಮಾಡಲು ಹೋಗಿ, ಅದು ಕೆಳಗೆ ಬಿದ್ದು, ಅದರ ಮೂತಿಗೆ ಪೆಟ್ಟಾಗಿ, "ಕುಂಯ್ಯ್" ಎಂದು ಕೂಗಿ, ಅಮ್ಮ ಬಂದು "ಅದು ದೊಡ್ಡಾದ ಮೇಲೆ ತಾನೇ ಹಾರದ್ನ ಕಲೀತು, ಬಿಡು ಅದನ್ನ" ಎಂದು ಕೂಗಿದರೂ ಕೇಳದೆ, ನನ್ನೊಳಗಿನ ದ್ರೋಣಾಚಾರ್ಯನಿಗೆ ಇದೊಂದು ಸವಾಲೆಂಬಂತೆ ಸ್ವೀಕರಿಸಿ, ಇನ್ನೂ ಒಂದು ಹತ್ತಿಪ್ಪತ್ತು ಬಾರಿ ಪ್ರಯತ್ನಿಸಿ, ಸೋತು, "ಮಳ್ಳ್ ನಾಯಿ ಮರಿ. ಇಷ್ಟ್ ದೂರ ಹಾರಲೂ ಬರ್ತಿಲ್ಲೆ" ಎಂದು ಶಪಿಸುತ್ತಾ ಇನ್ನೊಂದು ನಾಯಿ ಮರಿಗೆ ಟ್ರೇನಿಂಗ್ ಶುರು ಮಾಡುತ್ತಿದ್ದೆ. ಈಗ ನೆನೆಸಿಕೊಂಡರೆ ನಗು ಬರುತ್ತದೆ, ಪಶ್ಚಾತ್ತಾಪವೂ ಆಗುತ್ತದೆ. ಪಾಪ, ಎರಡು ತಿಂಗಳ ಮರಿಗಳು... ಏನೇನೋ ಮಾಡುತ್ತಿದ್ದೆ. ಒಮ್ಮೆ ದೊಡ್ಡ ನಾಯಿಯೊಂದರ ಬೆನ್ನ ಮೇಲೆ ಕುಳಿತು ಸವಾರಿ ಮಾಡಿದ್ದೂ ಇದೆ! ಪುಣ್ಯಕ್ಕೆ ಕಚ್ಚಿರಲಿಲ್ಲ!!

"ಕುನ್ನಿಗೆ ಕೆಲಸವಿಲ್ಲ, ಕೂರಲು ತೆರಪಿಲ್ಲ" ಎಂದು ಒಂದು ಗಾದೆಯಿದೆ. ಏನೂ ಕೆಲಸವಿಲ್ಲದಿದ್ದರೂ ನಾಯಿಗಳು ಸುಮ್ಮನೆ ಕೂರುವುದಿಲ್ಲ. ಎಲ್ಲೆಲ್ಲೋ ಸುತ್ತುತ್ತಿರುತ್ತವೆ. ಒಂದು ಸಾರಿ ಊರಿನಿಂದ ಹರಿಹರಕ್ಕೆ ಹೊರಟಿದ್ದೆವು. ನಾಯಿ ಮರಿಯೊಂದು ಮೊದಲ ಬಾರಿ ತನ್ನ ತಾಯಿಯೊಂದಿಗೆ ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿತ್ತು. "ನಾಯಿಗೆ ಅಡ್ಡ ಜಂಬರ ಬಂದ ಹಾಗೆ" ಎನ್ನುವ ಇನ್ನೊಂದು ಗಾದೆಯಿದೆ. ನಮ್ಮನ್ನು ಬಸ್ ಸ್ಟ್ಯಾಂಡಿಗೆ ಕಳಿಸಲು ಬಂದಿದ್ದ ಆ ಮರಿಯ ತಾಯಿ ಏನನ್ನೋ ಮೂಸುತ್ತಾ, ಹೋಗುವ ದಾರಿ ಬಿಟ್ಟು ಎಲ್ಲೋ ಹೋಗಿಬಿಟ್ಟಿತು. ಆದರೆ ಮರಿ ನಮ್ಮ ಜೊತೆಯೇ ಬಂದಿತು. ಬಸ್ ಸ್ಟ್ಯಾಂಡಿಗೆ ಹೋಗಿ ನಾವು ಮುಟ್ಟಿದರೂ ಅದರ ತಾಯಿಯ ಸುಳಿವಿಲ್ಲ. ಬಸ್ ಬಂದಿತು. ನಾವು ಹತ್ತಿದೆವು. ಸುಮ್ಮನೆ ಮನೆಗೆ ಹೋಗುವ ಬದಲು ಆ ಮರಿ ಬಸ್ ಹಿಂದೆಯೇ ಓಡಿ ಬರಲಾರಂಭಿಸಿತು. ಬಸ್ಸಿನಲ್ಲಿದ್ದ ನನಗೆ ಸಂಕಟ. ಸುಮಾರು ಒಂದು ಕಿಲೋಮೀಟರ್ ನಮ್ಮ ಬಸ್ಸನ್ನೇ ಹಿಂಬಾಲಿಸಿತು. "ಮನೆಗೆ ಹೇಗೆ ತಿರುಗಿ ಹೋಗುತ್ತದೆ? ಅದಕ್ಕೆ ಮನೆ ದಾರಿ ಗೊತ್ತಿಲ್ಲ, ದಾರಿ ತಪ್ಪುತ್ತದೆ" ಎಂದು ಜೋರಾಗಿ ಬಸ್ಸಿನಲ್ಲಿಯೇ ಅತ್ತು ರಾದ್ಧಾಂತ ಮಾಡಿದ್ದೆ. ಅವುಗಳಿಗೆ ವಾಸನೆಯಿಂದಲೇ ಬಂದ ದಾರಿ ತಿಳಿಯುತ್ತದೆ, ಅಳಬೇಡ ಎಂದು ಅಮ್ಮ ಹೇಳಿದರೂ ನಂಬಿರಲಿಲ್ಲ. ಹರಿಹರಕ್ಕೆ ಹೋದ ಕೂಡಲೇ ಊರಿನಲ್ಲಿದ್ದ ಅತ್ತೆಗೆ ಅಮ್ಮನಿಂದ ಪತ್ರ ಬರೆಸಿದ್ದೆ, ಮನೆಗೆ ನಾಯಿ ಮರಿ ವಾಪಸ್ ಬಂದಿದೆಯೋ ಇಲ್ಲವೋ ಎಂದು. ವಾರದ ನಂತರ ಉತ್ತರ ಬಂದಿತ್ತು, ಮರಿ ಸುರಕ್ಷಿತವಾಗಿ ಮನೆ ಸೇರಿದೆ ಎಂದು. ಆಗಲೇ ನನಗೆ ಸಮಾಧಾನವಾಗಿದ್ದು.

ನಾಯಿ ಮರಿ


ಒಂದು ಕಪ್ಪು ನಾಯಿ ಮರಿ. ನಾನು ಅದನ್ನು ಎಷ್ಟು ಹಚ್ಚಿಕೊಂಡಿದ್ದೆನೋ, ಅದೂ ನನ್ನನ್ನು ಅಷ್ಟೇ ಹಚ್ಚಿಕೊಂಡಿತ್ತು. ನನ್ನ, ನಾಯಿ ಮರಿಯ ಸಂಬಂಧ ಎಷ್ಟು ಗಾಢವಾಗಿತ್ತೆಂದರೆ ದಿನವೂ ಎದ್ದು ಮೊದಲು ನಾನು ಮಾಡುತ್ತಿದ್ದ ಕೆಲಸ ಬಚ್ಚಲ ಮನೆಯ ಬಳಿ ಹೋಗಿ ಅಲ್ಲಿ ಅಡಿಕೆ ಸಿಪ್ಪೆಯ ಬುಟ್ಟಿಯೊಂದರಲ್ಲಿ ಮಲಗಿರುತ್ತಿದ್ದ ಆ ನಾಯಿ ಮರಿ ನೋಡುವುದು. ಆಮೇಲೆ ಮುಖ ತೊಳೆದುಬಂದು ದೇವರಿಗೆ ಕೈ ಮುಗಿಯುತ್ತಿದ್ದೆ. ಹೀಗಿರುವಾಗ ಒಂದು ದಿನ ಬೆಳಿಗ್ಗೆ ಅಲ್ಲಿ ಬುಟ್ಟಿಯೂ ಇರಲಿಲ್ಲ, ಮರಿಯೂ ಇರಲಿಲ್ಲ. "ಅಮ್ಮಾ" ಎಂದು ಕೂಗಿದೆ. "ನಾಯಿ ಮರಿ ಎಲ್ಲಿ" ಎಂದು ಕೇಳಿದೆ. "ನಾಯಿ ಮರಿ ಸತ್ ಹೋತು, ಅಂಗಳದಲ್ಲಿದ್ದು" ಎಂದಾಗ ಅಲ್ಲಿಗೆ ಓಡಿದೆ. ಅದನ್ನು ನೋಡಿದ ಕೂಡಲೇ ಅಳು ಬಂದಿತು. ಅಳುವಷ್ಟೂ ಅತ್ತು, ಅದನ್ನು ನಮ್ಮ ಮನೆಯ ಆಳೊಬ್ಬ ಹೋಗಿ ತೋಟದಲ್ಲಿ ಗುಂಡಿ ತೋಡಿ ಹೂತು ಬರುವವರೆಗೂ ಅದರೊಂದಿಗಿದ್ದು ಶ್ರದ್ಧಾಂಜಲಿ ಅರ್ಪಿಸಿದ್ದೆ. ಅದಾದ ನಂತರ ಎಷ್ಟೋ ಬಂಧುಗಳು ಮಡಿದಿದ್ದಾರೆ, ಆದರೆ ನಾನು ಆ ನಾಯಿ ಮರಿ ಸತ್ತಾಗ ಅತ್ತಷ್ಟು ಎಂದೂ ಅತ್ತಿಲ್ಲವೇನೋ.

ಈಗ ಇವೆಲ್ಲ ಯಾವುದೋ ಕಾಲದ ನೆನಪಿನಂತೆ ಕಾಡುತ್ತವೆ. ನನಗೂ ನಾಯಿಗಳಿಗೂ ಈಗ ಅಷ್ಟಕ್ಕಷ್ಟೇ. ಬೆಂಗಳೂರಿನಲ್ಲಿ ಈಗ ತುಂಬಿಕೊಂಡಿರುವುದು ಸಾಫ್ಟ್‍ವೇರ್ ಇಂಜಿನಿಯರ್‌ಗಳು ಮತ್ತು ಬೀದಿ ನಾಯಿಗಳು. ಸಾಫ್ಟ್‍ವೇರ್ ಇಂಜಿನಿಯರ್‌ಗಳಿಗೆ ರಾತ್ರಿ client interaction ಇರುವಂತೆಯೇ ನಮ್ಮ ಮನೆಯ ಬಳಿ ದಿನಾ ರಾತ್ರಿ ೧೨:೩೦ ಕ್ಕೆ conference ಮಾಡುವ ನಾಯಿಗಳೂ ನಿದ್ದೆ ಮಾಡುವುದಿಲ್ಲ; ಮಾಡಲೂ ಬಿಡುವುದಿಲ್ಲ. ಬಹುಶಃ ಅವುಗಳ client ಕೂಡ ಅಮೇರಿಕಾದಲ್ಲಿರಬೇಕು...

ಸೋಮವಾರ, ಸೆಪ್ಟೆಂಬರ್ 22, 2008

ಮಳೆಗಾಲದ ಒಂದು ಸಂಜೆ...

ಮಳೆಗಾಲದ ಒಂದು ಸಂಜೆ. ಅಮ್ಮ ಮಾಡಿದ್ದ ಬಿಸಿ ಬಿಸಿ ಬೋಂಡ ತಿನ್ನುತ್ತಾ ಕಾಫಿ ಹೀರುತ್ತಾ ಜಗಲಿಯಲ್ಲಿ ಕೂತು ತಳಿಗಳ ಮೂಲಕ ಹೊರಗೆ ಒಂದೇ ಸಮನೆ ಸುರಿಯುತ್ತಿದ್ದ ಮಳೆಯನ್ನು ನೋಡುತ್ತಿದ್ದೆ. ಮನಸ್ಸು ನಾಲ್ಕು ವರ್ಷ ಹಿಂದಕ್ಕೆ ಕರೆದೊಯ್ದಿತು.
***

ಎರಡನೇ ಸೆಮಿಸ್ಟರ್ ಇಂಜಿನಿಯರಿಂಗ್ ಓದುತ್ತಿದ್ದ ಸಮಯ. ಮೇ ತಿಂಗಳು. ೧೫ ದಿನದಲ್ಲಿ ಪರೀಕ್ಷೆ ಇದ್ದರೂ ಅರ್ಧ ಸಿಲೆಬಸ್ ಕೂಡ ಮುಗಿದಿರಲಿಲ್ಲ. ಶನಿವಾರ ಸ್ಪೆಷಲ್ ಕ್ಲಾಸ್ ಇಟ್ಟಿದ್ದರು. ಬಹಳಷ್ಟು ಮಂದಿ ಚಕ್ಕರ್ ಹಾಕಿದ್ದರು. ಇದ್ದವರು ನಾವೇ ೮ ಹುಡುಗರು, ೫ ಹುಡುಗಿಯರು. ನನ್ನನ್ನು ಮತ್ತು ಮೂವರು ಹುಡುಗಿಯರನ್ನು ಬಿಟ್ಟರೆ ಉಳಿದವರೆಲ್ಲ ಹಾಸ್ಟೆಲ್ ನಲ್ಲಿ ಇದ್ದವರು.

ಮನೆಯಲ್ಲಿ ಕೂತು ಓದಲಾಗದ ನಾನು ಪಾಠವನ್ನಾದರೂ ಕೇಳೋಣ ಎಂದು ಹೋಗಿದ್ದೆ. ಪಾಠವೇನೂ ಅಷ್ಟೊಂದು ಆಸಕ್ತಿದಾಯಕವಾಗಿರಲಿಲ್ಲ. ಸುಮ್ಮನೆ ಲೆಕ್ಚರರ್ ಹೇಳಿದ್ದನ್ನು ಕೇಳುತ್ತಾ, ನೋಟ್ಸ್ ಗೀಚುತ್ತಾ ಕುಳಿತಿದ್ದೆ. ಹೊರಗೆ ಆಚಾನಕ್ ಮಳೆ ಸುರಿಯಲಾರಂಭಿಸಿತು. ಸುಮಾರು ಮುಕ್ಕಾಲು ಘಂಟೆ ಕಳೆದ ಮೇಲೆ ಕ್ಲಾಸ್ ಮುಗಿಯಿತು. ಎಲ್ಲರೂ ಹೊರಗೆ ಬಂದೆವು. ಬೇಸಿಗೆಯಲ್ಲಿ ಮಳೆ ಬರುವುದನ್ನು ಯಾರೂ ನಿರೀಕ್ಷಿಸಿರಲಿಲ್ಲ. ಯಾರ ಬಳಿಯೂ ಕೊಡೆ ಇರಲಿಲ್ಲ. ಕಾಲೇಜಿನ ಹಿಂದೇ ಹಾಸ್ಟೆಲ್ ಇದ್ದಿದ್ದರಿಂದ ೭ ಜನ ಹುಡುಗರೂ ಬೇಗ ಓಡಿ ಹೋಗಿ ರೂಮ್ ಸೇರಿಕೊಂಡುಬಿಟ್ಟರು. ೨ ಹುಡುಗಿಯರೂ ಅದೇ ಕೆಲಸ ಮಾಡಿದರು. ಉಳಿದ ಮೂವರು ಹುಡುಗಿಯರಲ್ಲಿ ಒಬ್ಬಳ ಬಳಿ ಸ್ಕೂಟಿ ಇತ್ತು. ಆಕೆ ತನ್ನ ಮನೆಯ ಬಳಿಯೇ ಇದ್ದ ಇನ್ನೊಬ್ಬಳನ್ನು ಕರೆದುಕೊಂಡು ಹೋಗಿಬಿಟ್ಟಳು. ಉಳಿದವರಿಬ್ಬರೇ: ನಾನು ಮತ್ತು ಆಕೆ.

ಹುಡುಗಿಯರನ್ನು ಕಂಡರೆ ನನಗೆ ಅದೆಂಥದೋ ಸಂಕೋಚವಿತ್ತು. ಎತ್ತಲೋ ನೋಡುತ್ತಾ ಸುಮ್ಮನೆ ನಿಂತಿದ್ದೆ. ೫ ನಿಮಿಷ ಆಕೆಯೂ ಸುಮ್ಮನೆ ನಿಂತಿದ್ದಳು. ಮೌನ ಆಕೆಗೆ ಬೇಸರ ತರಿಸಿರಬೇಕು. ಟೈಮ್ ಎಷ್ಟು ಎಂದು ಕೇಳಿದಳು. ಆಕೆಯತ್ತ ತಿರುಗಿ ೪:೪೦ ಎಂದೆ. ಆಕೆಯ ಮುಖದಲ್ಲಿ ಏನೋ ಒಂದು ರೀತಿಯ ಚಿಂತೆ ಕಂಡು ಬಂದಿತ್ತು. ಎರಡು ನಿಮಿಷ ಮೌನ. ಮನೆ ಎಲ್ಲಿ ಎಂದು ಕೇಳಿದಳು. ಉತ್ತರಿಸಿ ಮತ್ತೆ ಸುಮ್ಮನಾದೆ. ಮತ್ತೆ ಎರಡು ನಿಮಿಷ ಮೌನ. ಆಕೆ ಮೇಲಿಂದ ಮೇಲೆ ಪ್ರಶ್ನಿಸುತ್ತಿದ್ದರೂ ಮೆಕ್ಯಾನಿಕಲ್ ಆಗಿ ಉತ್ತರಿಸಿ ಸುಮ್ಮನೆ ಇದ್ದರೆ ತಪ್ಪಾದೀತೆಂದು ಆಕೆಯ ಮನೆಯ ಬಗ್ಗೆ ಕೇಳಿದೆ. ಇಲ್ಲೇ ವಿದ್ಯಾನಗರ ಎಂದಳು. ಕ್ಲಾಸ್ ಒಳಗೆ ಹೋಗಿ ಬೆಂಚ್ ಮೇಲೆ ಕುಳಿತು ಮಾತನಾಡೋಣ ಎಂಬಂತೆ ಸನ್ನೆ ಮಾಡಿದಳು. ಎಂದೂ ಹುಡುಗಿಯರ ಜೊತೆ ಸುಖಾಸುಮ್ಮನೆ ಮಾತನಾಡಿರಲಿಲ್ಲ. ಆಕೆ ಕರೆದ ಮೇಲೆ ಹೋಗಿ ಕೂರದೆ ಬೇರೆ ವಿಧಿಯಿರಲಿಲ್ಲ. ಸರಿ ಎಂದು ಹೋಗಿ ಕುಳಿತೆ.

ಆಕೆಯೇ ಮಾತು ಆರಂಭಿಸಿದಳು. ತನ್ನ ಮನೆಯ ಬಗ್ಗೆ, ತಾನು ಓದಿದ ಬಗ್ಗೆ, ತನಗೆ ಇಷ್ಟವಿರದಿದ್ದರೂ ಮನೆಯಲ್ಲಿ ಇಂಜಿನಿಯರಿಂಗಿಗೆ ಸೇರಿದ ಬಗ್ಗೆ... ಹೀಗೇ ಒಂದು ಘಂಟೆಯಾದರೂ ಕಳೆದಿರಬೇಕು. ಬಹುಶಃ ಆಕೆಯ ಮನಸ್ಸಿನಲ್ಲಿ ಇದ್ದಿದ್ದನ್ನು ಹೊರ ಹಾಕಲು ಆಕೆಗೆ ಯಾರಾದರೂ ಬೇಕಿತ್ತೇನೋ.

ಆಕೆ ಅಷ್ಟೊಂದು ಹೇಳುತ್ತಿದ್ದರೂ ನಾನು ಕೇಳುತ್ತಿದ್ದೆ ಬಿಟ್ಟರೆ ತಿರುಗಿ ಏನೂ ಕೇಳಿರಲಿಲ್ಲ. ಆಕೆ ನನ್ನ ಬಗ್ಗೆಯೂ ಏನೂ ಕೇಳಿರಲಿಲ್ಲ. ನನ್ನ ಮೌನ ಆಕೆಗೆ ಏನು ಅನಿಸಿಕೆ ಮೂಡಿಸಿತೋ. ಮಳೆ ಕಡಿಮೆಯಾಗಿದೆ ಹೋಗೋಣವೆ ಎಂದಳು. ಇಬ್ಬರೂ ಎದ್ದು ಹೊರಟೆವು.

ಸುಮ್ಮನೆ ಇಷ್ಟೊತ್ತು ಬೋರ್ ಹೊಡೆಸಿದೆನಾ ಎಂದು ಕೇಳಿದಳು. ಇಲ್ಲ ಎಂದು ಗೋಣಾಡಿಸಿದೆ. ಏನಾದರೂ ಹೇಳಿಕೊಳ್ಳುವುದಿದ್ದರೆ ಸಂಕೋಚವಿಲ್ಲದೆ ಹೇಳಿಕೊಳ್ಳಬಹುದೆಂದು ತಿಳಿಸಿದೆ. ಸರಿ ಎಂದು ಮುಗುಳ್ನಕ್ಕಳು. ಆಕೆಯ ಮುಖ ಮೊದಲಿಗಿಂತ ಸ್ವಲ್ಪ ನಿರಾಳವಾಗಿದ್ದಂತೆ ಕಂಡು ಬಂದಿತು. ಪರಿಚಯ ಆಗಲೇ ಸ್ನೇಹಕ್ಕೆ ತಿರುಗಿತ್ತು.

ಆ ದಿನ ರಾತ್ರಿ ಮಲಗಿದಾಗ ನಿದ್ದೆ ಬರಲಿಲ್ಲ. ಆಕೆಯ ಇತಿಹಾಸವೇ ಮನಸ್ಸಿನಲ್ಲಿ ಮತ್ತೆ ಮತ್ತೆ ಕಣ್ಣ ಮುಂದೆ ಬರುತ್ತಿತ್ತು. ವ್ಯವಸ್ಥೆಯ ಮೇಲೆ ಕೋಪ ಉಕ್ಕುತ್ತಿತ್ತು.

ಪಿ.ಯು.ಸಿಯಲ್ಲಿ ಪಿ.ಸಿ.ಬಿ ೯೬% ತೆಗೆದಿದ್ದಳು. ಮೆಡಿಕಲ್ ಗೆ ಹೋಗಿ ಒಂದು ಉತ್ತಮ ವೈದ್ಯೆಯಾಗಬೇಕೆಂಬುದು ಆಕೆಯ ಆಸೆಯಾಗಿತ್ತು. ಕಚೇರಿಯೊಂದರಲ್ಲಿ ಕ್ಲರ್ಕ್ ಆಗಿದ್ದ ಆಕೆಯ ತಂದೆಗೆ ಬರುತ್ತಿದ್ದುದು ೫,೫೦೦ ರೂ. ಸಂಬಳ. ಅದರಲ್ಲೇ ಆಕೆ, ಆಕೆಯ ಇಬ್ಬರು ತಮ್ಮಂದಿರು, ಒಬ್ಬಳು ತಂಗಿ - ಹೀಗೆ ೫ ಜನರ ಸಂಸಾರ ನಡೆಯಬೇಕಿತ್ತು. ತಾಯಿ ತೀರಿಕೊಂಡು ೩ ವರ್ಷ ಆಗಿತ್ತಂತೆ. ಮನೆಯನ್ನು ನಡೆಸಿಕೊಂಡು ಹೋಗುವ ಜವಾಬ್ದಾರಿಯೂ ಆಕೆಯ ಮೇಲೆ ಬಿದ್ದಿತ್ತು. ಸರ್ಕಾರ-ಖಾಸಗಿ ಕಾಲೇಜುಗಳ ಜಗಳದಿಂದಾಗಿ ಮೆಡಿಕಲ್ ಸೀಟು ಕೈಗೆಟುಕದಂತಾಗಿತ್ತು.

ಮತ್ತೆ ಆಕೆ ಸಿಕ್ಕಿದ್ದು ಮಂಗಳವಾರ. ಸೋಮವಾರ ತಮ್ಮನಿಗೆ ಏನೋ ಆಗಿದ್ದು ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಳಂತೆ. ಅದಾದ ಮೇಲೆ ಪರೀಕ್ಷೆ, ರಜೆ ಬಂದಿದ್ದರಿಂದ ಮತ್ತೆ ೨ ತಿಂಗಳು ಆಕೆ ಸಿಗಲೇ ಇಲ್ಲ.

ಮೂರನೆಯ ಸೆಮಿಸ್ಟರ್ ಪ್ರಾರಂಭವಾದ ಮೇಲೆ ಆಕೆಯದು ಬೇರೆ ಬ್ರಾಂಚ್ ಆಗಿದ್ದರಿಂದ ಬೇರೆ ಎಲ್ಲಿಯೋ ಇರುತ್ತಿದ್ದಳು. ಆಗಾಗ ಅಲ್ಲಲ್ಲಿ ಕಂಡಾಗ ಮುಗುಳ್ನಗುತ್ತಿದ್ದಳು. ಒಮ್ಮೆ ರೀಡಿಂಗ್ ರೂಮಿನಲ್ಲಿ ಸಿಕ್ಕಾಗ ತನ್ನ ತಂದೆಗೆ ಬಡ್ತಿ ಸಿಕ್ಕಿದೆಯೆಂದೂ, ಮನೆಯ ಪರಿಸ್ಥಿತಿ ಸ್ವಲ್ಪ ಸುಧಾರಿಸಿದೆಯೆಂದೂ ತಿಳಿಸಿದ್ದಳು. ನಂತರ ಎಷ್ಟೋ ದಿನಗಳ ಕಾಲ ನನ್ನ ಕಣ್ಣಿಗೆ ಬಿದ್ದಿರಲಿಲ್ಲ.

ಬಹಳ ದಿನಗಳ ಮೇಲೆ ಹೀಗೇ ನಾವು ಹುಡುಗರು ಮಾತನಾಡಿಕೊಳ್ಳುತ್ತಿದ್ದಾಗ ಆಕೆಯ ವಿಷಯ ಬಂದಿತು. ಆಕೆ ಇಂಜಿನಿಯರಿಂಗ್ ಅನ್ನು ಬಿಟ್ಟುಬಿಟ್ಟಿದ್ದಳಂತೆ. ತಮ್ಮನನ್ನು ಒಳ್ಳೆಯ ಕಾಲೇಜಿಗೆ ಸೇರಿಸಲು ಹಣ ಬೇಕಿದ್ದರಿಂದ ಎಲ್ಲಿಯೋ ಬಟ್ಟೆ ಅಂಗಡಿಯಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದಳಂತೆ...

ಹೌದು, ಸ್ವಲ್ಪ ದಿನಗಳ ಹಿಂದೆ ತಮ್ಮ ಎಸ್.ಎಸ್.ಎಲ್.ಸಿ ಯಲ್ಲಿ ೯೭% ತೆಗೆದಿದ್ದಾನೆ ಎಂದು ಹೇಳಿ ಸ್ವೀಟ್ ಕೊಟ್ಟು ಖುಷಿ ಪಟ್ಟಿದ್ದಳು. ಈಗ ಅದೇ ತಮ್ಮನಿಗಾಗಿ ತನ್ನ ವಿದ್ಯಾಭ್ಯಾಸ ತ್ಯಜಿಸಿದ್ದಳು. ಅದೇ ಕೊನೆ, ಅದಾದ ಮೇಲೆ ಆಕೆ ನನಗೆ ಕಾಣಲೇ ಇಲ್ಲ.
***

"ಕುಡ್ದಾಗಿದ್ರೆ ಲೋಟ ತಂದು ಕೈಸಾಲೆಲ್ಲಿ ಇಡು" ಎಂದು ಅಮ್ಮ ಕೂಗಿದಾಗಲೇ ವಾಸ್ತವಕ್ಕೆ ಮರಳಿದ್ದು. ಕಾಫಿ ತಣ್ಣಗಾಗಿತ್ತು. ಮಳೆ ನಿಂತಿತ್ತು. ಕಣ್ಣಿನಲ್ಲಿ ಹನಿ ಮೂಡಿತ್ತು.

ಮಂಗಳವಾರ, ಸೆಪ್ಟೆಂಬರ್ 16, 2008

ಮರೆಯಲಾಗದ ತೂತುಕುಡಿ ಎಕ್ಸ್​ಪ್ರೆಸ್!

ಇದು ಕಳೆದ ತಿಂಗಳು ನಾನು ನನ್ನ ಗೆಳೆಯರೊಂದಿಗೆ ಹೋಗಿ ಬಂದ ಪ್ರವಾಸ ಕಥನ.

ಮತ್ತದೇ ಏಕತಾನತೆಯಿಂದ ಬೇಸರವಾಗಿತ್ತು. ಮುಂದಿನ ಪಯಣಕ್ಕೆ ಸ್ಥಳ ಹುಡುಕಾಟ ಪ್ರಾರಂಭವಾಗಿತ್ತು. ಕಾಲೇಜಿನಲ್ಲಿದ್ದಾಗ ಜೋಗ ಪ್ರವಾಸ ತಪ್ಪಿಸಿಕೊಂಡಿದ್ದ ವಿಜಯ್-ವಿನಯ್ ಗೆ ಈಗ ಅಲ್ಲಿಗೆ ಹೋಗುವ ತೆವಲು ಬಂದುಬಿಟ್ಟಿತ್ತು. ಮಳೆಗಾಲ ಆಗಷ್ಟೆ ಆರಂಭವಾಗಿದ್ದರಿಂದ ಲಿಂಗನಮಕ್ಕಿ ಇನ್ನೂ ತುಂಬಿರಲಿಲ್ಲ. ಜೋಗದಲ್ಲಿ ನೀರಿರದಿದ್ದರೆ ಮಳೆಯಲ್ಲಿ ನೆನೆಯಲು ಅಲ್ಲಿಗೆ ಹೋದಂತಾಗುವುದಿಲ್ಲವೇ? ಹಾಗಾಗಿ ಗುಡ್ಡಬೆಟ್ಟ ಸುತ್ತುವುದು, ದೊಡ್ಡ ಜಲಪಾತಗಳಿಗೆ ಹೋಗುವುದು ಬೇಡ ಎಂಬುದು ನನ್ನ ಅಭಿಪ್ರಾಯವಾಗಿತ್ತು. ಸುಮಾರು ಗೂಗ್ಲಿಂಗ್ ಮಾಡಿ ರಂಗನತಿಟ್ಟು, ಬಲಮುರಿಗೆ ಹೋಗಿ ಬಂದರೆ ಹೇಗೆ ಎಂದು ಕೇಳಿ ಕೆಲವರಿಗೆ ಮೇಲ್ ಕಳಿಸಿದೆ. ಒಂದರ್ಧ ಘಂಟೆಯಲ್ಲಿ ಸಕಾರಾತ್ಮಕ ಉತ್ತರ ಬಂತು. ಪ್ರವಾಸ ಇಷ್ಟ ಪಡುವವರೇ ಹಾಗೆ, ತಕ್ಷಣ ಓಕೆ ಅಂದುಬಿಡುತ್ತಾರೆ...

ನಾನು, ವಿಜಯ್, ವಿನಯ್ ಸ್ಥಳ ನಿರ್ಧರಿಸಿದೆವು. ಚಂದ್ರಕಾಂತ ಮತ್ತು ಅವನ ತಮ್ಮ ಕೂಡ ಬರಲೊಪ್ಪಿದರು. ಗುರುವಾರ ಸಂಜೆ ಕೆಲವರಿಗೆ ಫೋನ್ ಮಾಡಿ ತಿಳಿಸಿದೆವು. ಸೋಮ ಬರುತ್ತೇನೆಂದ. ಪ್ರವೀಣ ಊರಿಗೆ ಹೋಗಬೇಕಾದ್ದರಿಂದ ಬರಲಾಗುವುದಿಲ್ಲವೆಂದ. ಅಷ್ಟಕ್ಕೆ ಬಿಡಬಾರದೇ... ರಂಗನತಿಟ್ಟಿನಲ್ಲಿ ನೀರು ಹೆಚ್ಚಾಗಿ ಬೋಟಿಂಗಿಗೆ ಬಿಡುತ್ತಿಲ್ಲ ಎಂದು ತಲೆಯಲ್ಲಿ ಹುಳ ಬಿಟ್ಟ. ಏನೇ ಆದರೂ ಅಲ್ಲಿಗೆ ಹೋಗುವುದೆಂದು ನಿರ್ಧರಿಸಿಬಿಟ್ಟಿದ್ದೆವು. ಸಂತೋಷ್ ಜೊತೆ ಚಾಟ್ ಮಾಡುತ್ತಿದ್ದ ನಾನು ಅವನನ್ನೂ ಕೇಳಿದೆ. ಅವನು ಕ್ಷಣವೂ ಯೋಚಿಸದೆ ಬರುತ್ತೇನೆ ಎಂದಿದ್ದು ನೋಡಿ ನನಗೂ ಆಶ್ಚರ್ಯವಾಯಿತು. ಬೆಂಗಳೂರು ಎಲ್ಲರ ಮೇಲೂ ತನ್ನ ಪ್ರಭಾವ ಬೀರಿದೆ ಎಂದುಕೊಂಡೆ. ಇನ್ನೂ ಕೆಲವರಿಗೆ ಏನೇನೋ ತೊಂದರೆಗಳಿದ್ದವಾದ್ದರಿಂದ ಬರಲಾಗುವುದಿಲ್ಲ ಎಂದರು.

ಸರಿ, ಶನಿವಾರ ಬೆಳಿಗ್ಗೆ ೬:೩೦ ರ ರೈಲಿನಲ್ಲಿ ಹೋಗುವುದು ಎಂದು ಎಲ್ಲರಿಗೂ ತಿಳಿಸಿದೆವು. "೫ ಘಂಟೆಗೆ ಮನೆ ಬಿಟ್ಟುಬಿಡು, ಬಸ್ ಸಿಕ್ಕಿ ಅಲ್ಲಿಗೆ ಬರುವಷ್ಟರಲ್ಲಿ ೬ ಆಗಿರುತ್ತದೆ" ಎಂದು ವಿನಯ್ ತನ್ನ ಲಾಜಿಕ್ ಮಂಡಿಸಿದ. ಇಂಡಿಯನ್ ಸ್ಟ್ಯಾಂಡರ್ಡ್ ಟೈಮ್ ನನಗೂ ಗೊತ್ತು. ಆದರೆ ಹ್ಞೂ ಎನ್ನಲು ನನ್ನ ಗಂಟೇನು ಹೋಗಬೇಕು? ಸರಿ ಎಂದು ೫ ಕ್ಕೆ ೫ ನಿಮಿಷ ಇರುವಾಗ ಅಲಾರಂ ಇಟ್ಟು ಮಲಗಿದೆ.

ಬೆಳಿಗ್ಗೆ ಎದ್ದು ಇನ್ನೂ ಬಾತ್‌ರೂಮ್‌ಗೆ ಹೋಗಿದ್ದೆನಷ್ಟೇ.. ಮೊಬೈಲ್ ಹೊಡೆದುಕೊಳ್ಳಲಾರಂಭಿಸಿತು. ಹೊರಗೆ ಬರುವಂತಿಲ್ಲವಲ್ಲ!! ಎಲ್ಲ ಮುಗಿಸಿ ಹೊರ ಬರುವಷ್ಟರಲ್ಲಿ ೫:೧೫ ಆಗಿತ್ತು. ತಿರುಗಿ ಫೋನ್ ಮಾಡಿದೆ. ಅವರಿನ್ನೂ ರೆಡಿಯಾಗುತ್ತಿದ್ದರು. ಸಂತೋಷನಿಗೆ ಆರಾಮ್ ಇಲ್ಲ, ಹಾಗಾಗಿ ಬರುವುದಿಲ್ಲ ಎಂದು ತಿಳಿಯಿತು.

ಅಂತೂ ಇಂತೂ ೫:೪೫ ಸುಮಾರಿಗೆ ಬಸ್ ಹತ್ತಿ ಮತ್ತೆ ಫೋನ್ ಮಾಡಿದೆ. ಆಗಷ್ಟೆ ಅವರೆಲ್ಲ ಮನೆ ಬಿಟ್ಟಿದ್ದರು. ಸಿ.ವಿ.ರಾಮನ್ ನಗರದಿಂದ ಮೆಜೆಸ್ಟಿಕ್‌ಗೆ ಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆ ಬೇಕು. ರೈಲು ಸಿಕ್ಕ ಹಾಗೆ! ಕರ್ಮಕಾಂಡ ಎಂದುಕೊಳ್ಳುತ್ತಾ ಸೋಮನಿಗೆ ಫೋನ್ ಮಾಡಿದರೆ ಎತ್ತುತ್ತಲೇ ಇಲ್ಲ ಆಸಾಮಿ!!

ನಾನು ಮೆಜೆಸ್ಟಿಕ್‌ಗೆ ಹೋಗಿ ರೈಲಿನ ಬಗ್ಗೆ ವಿಚಾರಿಸಿದೆ. ೬:೩೦ಕ್ಕೆ ಒಂದು, ೭:೦೦ಕ್ಕೆ ಒಂದು ರೈಲಿರುವುದು ತಿಳಿಯಿತು. ಅಷ್ಟರಲ್ಲಿ ಸೋಮ ಬಂದ. ಉಳಿದ ನಾಲ್ವರು ಇನ್ನೂ ಬರಬೇಕಾಗಿದ್ದರಿಂದ ಮೊದಲ ರೈಲಿನ ಆಸೆ ಬಿಟ್ಟೆವು. ಸೋಮ ನಾನು ಟಿಕೆಟ್ ತೆಗೆಸಲು ಸಾಲಿನಲ್ಲಿ ನಿಂತಿದ್ದಾಗ ವಿಜಯ್-ವಿನಯ್-(ಚಂದ್ರ)ಕಾಂತ-ಪ್ರಶಾಂತರ ಆಗಮನವಾಯಿತು. ಶ್ರೀರಂಗಪಟ್ಟಣಕ್ಕೆ ಟಿಕೆಟ್ ತೆಗೆಸಿ ಪ್ಲಾಟ್‌ಫಾರ್ಮ್ ಹುಡುಕುವಷ್ಟರಲ್ಲಿ ರೈಲು ಬಂದಿತು.

ಅದೇ ತೂತುಕುಡಿ (Tuticorin) ಎಕ್ಸ್​​ಪ್ರೆಸ್.

ಶ್ರೀರಂಗಪಟ್ಟಣದ ರೈಲ್ವೇ ಸೇತುವೆಯ ಮೇಲೆ
ಪಟ್ಟಣದ ರೈಲ್ವೇ ಸೇತುವೆಯ ಮೇಲೆ...

ಮೆಜೆಸ್ಟಿಕ್‌ನಲ್ಲಿ ರೈಲು ನಿಂತಿದ್ದಾಗ ಮೀನಿನ ಕೆಟ್ಟ ವಾಸನೆ ಹೊಡೆಯುತ್ತಿದ್ದುದನ್ನು ಬಿಟ್ಟರೆ ಏನೂ ತೊಂದರೆಯಾಗಲಿಲ್ಲ. ರೈಲಿನಲ್ಲಿಯೇ ತಿಂಡಿ ತಿಂದೆವು. ಮೂರೂವರೆ ತಾಸಿನ ಪಯಣದ ನಂತರ ಟಿಪ್ಪು ಸುಲ್ತಾನನ ರಾಜಧಾನಿ ಶ್ರೀರಂಗಪಟ್ಟಣ ಬಂತು. ಅಲ್ಲಿ ಇಳಿದು ಆಚೆ-ಈಚೆ ನೋಡಿದೆವು. ರೈಲಿನ ಬ್ರಿಡ್ಜ್ ಕಂಡಿತು. ರೈಲು ಹೋದ ಮೇಲೆ ಅದರ ಹಿಂದೆ ನಾವೂ ಹೋದೆವು. ಅಲ್ಲಿನ ನೋಟ ಸುಂದರವಾಗಿತ್ತು. ರಂಗನತಿಟ್ಟಿಗೆ ಹೋಗುವ ದಾರಿಯನ್ನು ಕೇಳಿ ನಮ್ಮ ಚಾರಣ ಆರಂಭಿಸಿದೆವು.

ರಂಗನತಿಟ್ಟು
ರಂಗನತಿಟ್ಟಿನಲ್ಲಿ...

ಹರಟುತ್ತಾ ನಡೆಯುತ್ತಿದ್ದರೆ ದಾರಿ ಸವೆಸಿದ್ದೆ ತಿಳಿಯುವುದಿಲ್ಲ. ಬಹುಬೇಗ ೪ ಕಿಲೋಮೀಟರ್ ನಡೆದಿದ್ದೆವು. ರಂಗನತಿಟ್ಟು ಬಂದಿತ್ತು. ಎಲ್ಲರೂ ಟಿಕೆಟ್ ತೆಗೆದುಕೊಂಡು ಒಳಗೆ ಹೋದೆವು. ಬೋಟಿಂಗ್ ನಡೆಯುತ್ತಿತ್ತು. ನದಿಯಲ್ಲಿ ನೀರು ಹೆಚ್ಚುತ್ತಿತ್ತು. ನಾವು ಬೋಟಿಂಗಿಗೆ ಈಗ ಹೋಗುವುದೋ ನಂತರ ಹೋಗುವುದೋ ಎಂದು ಯೋಚಿಸುತ್ತಾ ಹೋಗುವಷ್ಟರಲ್ಲಿ ಅಲ್ಲಿನ ಸಿಬ್ಬಂದಿ "ಹೋಗುವುದಾದರೆ ಬೇಗ ಹೋಗಿ, ನೀರು ಹೆಚ್ಚುತ್ತಿದೆ. ಸದ್ಯದಲ್ಲೇ ಬೋಟಿಂಗ್ ನಿಲ್ಲಿಸುತ್ತಾರೆ" ಎಂದರು.

ಅಂಬಿಗ ನಾ ನಿನ್ನ ನಂಬಿದೆ
ಅಂಬಿಗ ನಾ ನಿನ್ನ ನಂಬಿದೆ...

ಸದ್ಯ ಸಿಕ್ಕಿತಲ್ಲ ಬೋಟಿಂಗ್ ಎಂಬ ಖುಷಿಯಲ್ಲಿ ಮೊದಲು ಬೋಟಿಂಗ್ ಮುಗಿಸಿದೆವು. ಇದ್ದ ಒಂದು ೧೦ ಬಗೆಯ ಪಕ್ಷಿಗಳನ್ನು, ಮೊಸಳೆಗಳನ್ನು ನೋಡಿ ದಡಕ್ಕೆ ಬಂದೆವು. ಹೊರಡುವಾಗ ಇದ್ದಿದ್ದಕ್ಕಿಂತ ಹೆಚ್ಚು ನೀರು ಬಂದಿತ್ತು. ನಮ್ಮದೇ ಕಡೆಯ ದೋಣಿ.. ನೀರಿನ ಸೆಳೆತ ಹೆಚ್ಚಿದ್ದರಿಂದ ಅದಾದ ನಂತರ ಯಾರನ್ನೂ ಬಿಡಲಿಲ್ಲ. ನಮ್ಮ ಅದೃಷ್ಟವನ್ನು ಮೆಚ್ಚಿಕೊಳ್ಳುತ್ತಾ ಮುಂದೆ ನಡೆದೆವು. ಬೋಟಿಂಗ್ ಇಲ್ಲ ಎಂದು ಹಿಂದಿನ ದಿನ ಹುಳ ಬಿಟ್ಟಿದ್ದ ಪ್ರವೀಣನಿಗೆ ಸೋಮನಿಂದ ಫೋನಾಯಣ. ಪಕ್ಷಿಗಳನ್ನು, ಬೋಟಿಂಗ್ ನಲ್ಲಿ ಬಂದ ಮಜವನ್ನು ಸ್ವಲ್ಪ ಹೆಚ್ಚೇ ಎಂಬಂತೆ ವರ್ಣಿಸಿ ಆದಷ್ಟೂ ಆತನ ಹೊಟ್ಟೆ ಉರಿಸಿದ್ದಾಯಿತು.

ನಂತರ ಅಲ್ಲಿಯೇ ಊಟ ಮುಗಿಸಿ ನದಿಯ ಪಕ್ಕದಲ್ಲಿದ್ದ ಕುಟೀರದಲ್ಲಿ ಕುಳಿತೆವು. ನದಿಯ ಜುಳು-ಜುಳು ನಾದ ಹಿತವಾಗಿತ್ತು. ವಿಜಯ ಅಲ್ಲೇ ನದಿಯ ಪಕ್ಕದಲ್ಲಿ ತಾನೊಂದು ಮನೆ ಕಟ್ಟಿದರೆ ಹೇಗೆ ಎಂದು ಮನಸ್ಸಿನಲ್ಲೇ ಮಂಡಿಗೆ ತಿನ್ನಲಾರಂಭಿಸಿದ. ಸ್ವಲ್ಪ ಹೊತ್ತು ಸುಧಾರಿಸಿಕೊಂಡು ಮರಳಿ ಶ್ರೀರಂಗಪಟ್ಟಣಕ್ಕೆ ಹೊರಟೆವು. ನಮ್ಮ ಬದುಕಿನ ಬಗ್ಗೆ ಹರಟುತ್ತಾ ಅಲ್ಲಲ್ಲಿ ನಿಲ್ಲುತ್ತಾ ಅಂತೂ ಪಟ್ಟಣ ತಲುಪಿದೆವು.

ಅಲ್ಲಿ ಹೋಗಿ ಬಲಮುರಿ ಎಷ್ಟು ದೂರ ಎಂದು ಕೇಳಿದರೆ ೧೯ ಕಿ.ಮೀ. ಎಂದು ಹೇಳಬೇಕೆ? ಸಮಯ ಸುಮಾರು ೩ ಆಗಿತ್ತು. ಸೋಮನಿಗೆ ಬೇರೆ ದಾವಣಗೆರೆಗೆ ಹೋಗಬೇಕಿತ್ತು. ಇನ್ನೇನು ಮಾಡುವುದು? ಸರಿ ಶ್ರೀರಂಗಪಟ್ಟಣವನ್ನೇ ನೋಡಿ ಹೋದರಾಯಿತು ಎಂದು ಎರಡು ರಿಕ್ಷಾಗಳನ್ನು ಹಿಡಿದು ಹೊರಟೆವು.

ಕರ್ನಲ್ ಬೈಲಿಯ ಕಾರಾಗೃಹ
ಕರ್ನಲ್ ಬೈಲಿಯ ಕಾರಾಗೃಹದಲ್ಲಿ ಅಣ್ಣ-ತಮ್ಮ

ಟಿಪ್ಪು ಮಡಿದ ಜಾಗ, ಅವನ ಕಾರಾಗೃಹ ಮುಂತಾದ ಸ್ಥಳಗಳನ್ನು ನೋಡಿ ಮುಂದೆ ಹೋದೆವು. ಅವನ ಬೇಸಿಗೆ ಅರಮನೆಯಾಗಿದ್ದ ದರಿಯಾ ದೌಲತ್ ಈಗ ವಸ್ತುಸಂಗ್ರಹಾಲಯವಾಗಿದೆ. ನಾಣ್ಯಗಳು, ಖಡ್ಗಗಳು, ಚಿತ್ರಗಳು, ಬಂದೂಕುಗಳು ಹೀಗೆ ಎಲ್ಲವನ್ನೂ ನೋಡುತ್ತಾ ಹೊರಬರಲು ಏನಿಲ್ಲವೆಂದರೂ ಮುಕ್ಕಾಲು ಘಂಟೆಯಾಗಿರಬೇಕು. ಅಲ್ಲೇ ಸುತ್ತಲಿರುವ ಉದ್ಯಾನದಲ್ಲಿ ಸ್ವಲ್ಪ ಸಮಯ ಕೂತು ಟಿಪ್ಪು ಸುಲ್ತಾನ್, ಆತನ ತಾಯಿ, ತಂದೆ ಹೈದರಾಲಿ ಮತ್ತಿತರನ್ನು ಹೂತಿರುವ ಜಾಗವಾದ ಗುಂಬಜ್ ಗೆ ಹೋಗಿ, ಸುಂದರ ಗುಮ್ಮಟವನ್ನೂ ಟಿಪ್ಪುವಿನ ಸಮಾಧಿಯನ್ನೂ ನೋಡಿ ಮುಂದೆ ಸಂಗಮಕ್ಕೆ ಹೋದೆವು.

ಶ್ರೀರಂಗಪಟ್ಟಣದ ಜುಮ್ಮಾ ಮಸೀದಿ
ಜುಮ್ಮಾ ಮಸೀದಿ

ದರಿಯಾ ದೌಲತ್ - ಸಂಗ್ರಹಾಲಯವಾಗಿರುವ ಟಿಪ್ಪುವಿನ ಬೇಸಿಗೆ ಅರಮನೆ
ಈಗ ಸಂಗ್ರಹಾಲಯವಾಗಿರುವ ಟಿಪ್ಪುವಿನ ಬೇಸಿಗೆ ಅರಮನೆ... ದರಿಯಾ ದೌಲತ್

ಟಿಪ್ಪು ಮತ್ತು ಇತರರ ಗೋರಿಗಳಿರುವ ಗುಂಬಜ್
ಟಿಪ್ಪು ಮತ್ತು ಇತರರ ಗೋರಿಗಳಿರುವ ಗುಂಬಜ್

ಗೋರಿಗಳಿರುವ ಸುಂದರ ಗುಮ್ಮಟ
ಸುಂದರ ಗುಮ್ಮಟ

ಹೇಮಾವತಿ, ಅರ್ಕಾವತಿ ಕಾವೇರಿ, ಕಾವೇರಿಯ ಕವಲಾದ ಪಶ್ಚಿಮ ವಾಹಿನಿ ಮತ್ತು ಲೋಕಪಾವನಿ ನದಿಗಳ ಸಂಗಮ. ಅಲ್ಲಿ ತೆಪ್ಪದಲ್ಲಿ ಒಂದು ಸುತ್ತು ಹೋಗಿ ಬಂದೆವು. ಅಲ್ಲಿಂದ ನೇರವಾಗಿ ರಂಗನಾಥ ಸ್ವಾಮಿಯ ದರ್ಶನಕ್ಕೆಂದು ದೇವಸ್ಥಾನಕ್ಕೆ ಹೋದೆವು. ಸಮಯ ೬ ಘಂಟೆಯಾಗಿತ್ತು. ಸೋಮ ಮೈಸೂರಿಗೆ ಹೋಗುವ ರೈಲು ಸಿಗಲಿ ಎಂದು ಪ್ರಾರ್ಥಿಸಿಕೊಂಡ.

ನಮ್ಮನ್ನು ಹಳಿ ತಪ್ಪಿಸಿದ ರೈಲು
ನಮ್ಮನ್ನು ಹಳಿ ತಪ್ಪಿಸಿದ ರೈಲು

ಎಲ್ಲ ಸ್ಥಳಗಳ ಭೇಟಿ ಮುಗಿಸಿ ರೈಲ್ವೆ ನಿಲ್ದಾಣಕ್ಕೆ ಹೋಗುವಷ್ಟರಲ್ಲಿ ಮೈಸೂರಿಗೆ ಹೋಗುವ ರೈಲು ಹೋಗಿಬಿಟ್ಟಿತ್ತು. ಸೋಮ ಸುಮಾರು ಎರಡು ಕಿಲೋಮೀಟರ್ ದೂರದ ಬಸ್ ನಿಲ್ದಾಣಕ್ಕೆ ಹೋಗಿ ಬಸ್ ಹಿಡಿಯಬೇಕಿತ್ತು. ಆದರೆ ಸದ್ಯದಲ್ಲೇ ಬೆಂಗಳೂರಿಗೆ ಹೋಗುವ ರೈಲು ಬರಲಿದೆ ಎಂದು ತಿಳಿಯಿತು. ತಡಮಾಡದೆ ಅದರಲ್ಲಿ ಹೋಗುವುದು ಎಂದು ನಿರ್ಧರಿಸಿದೆವು. ವಿಜಯ ಕೆ.ಆರ್.ಪುರಂ ಗೆ ಟಿಕೆಟ್ ತೆಗೆಸೋಣ ನಮ್ಮೆಲ್ಲರ ಮನೆಗೂ ಹತ್ತಿರವಾಗುತ್ತದೆ ಎಂದ. ಸೋಮನಿಗೆ ಟಾಟಾ ಹೇಳಿ ಕೆ.ಆರ್.ಪುರಂಗೆ ಟಿಕೆಟ್ ತೆಗೆಸಿದೆವು. ಅಷ್ಟರಲ್ಲಿ ರೈಲು ಬಂದು ನಿಂತುಬಿಟ್ಟಿತ್ತು. ಆಹಾ! ಎಲ್ಲರೂ ರೈಲಿಗೆ ಕಾದರೆ ಇಲ್ಲಿ ರೈಲೇ ನಮಗಾಗಿ ಕಾದಿತ್ತು. ನಾವು ಒಳಗೆ ಹೋಗಿ ಕುಳಿತುಕೊಳ್ಳುವಷ್ಟರಲ್ಲಿ ನಿಧಾನವಾಗಿ ಹೊರಟಿತು.

ನಾವು ಬೆಳಿಗ್ಗೆ ಬಂದಿದ್ದ ಅದೇ ತೂತುಕುಡಿ ಎಕ್ಸ್​​‌ಪ್ರೆಸ್.

ಮುಂದೆ ೯ ಘಂಟೆಗೆ ಕೆ.ಆರ್.ಪುರಂ, ೯:೩೦ ಗೆ ಮನೆ ಎನ್ನುತ್ತಾ ಚಂದ್ರಕಾಂತ ನಿದ್ದೆಗೆ ಶರಣಾದ. ಉಳಿದ ನಾವು ನಾಲ್ಕು ಜನ ಮಧ್ಯ ಮಧ್ಯ ಹರಟುತ್ತಾ, ತಿನ್ನುತ್ತಾ, ಹಾಡು ಕೇಳುತ್ತಾ ಸಮಯ ಕಳೆದೆವು. ೯:೩೦ ರ ಸುಮಾರಿಗೆ ರೈಲು ಮೆಜೆಸ್ಟಿಕ್ ತಲುಪಿತು. ಆದರೆ ನಾವು ಟಿಕೆಟ್ ತೆಗೆಸಿದ್ದು ಕೆ.ಆರ್.ಪುರಕ್ಕಲ್ಲವಾ.. ಹಾಗೆ ರೈಲು ಹೊರಡುವುದನ್ನೇ ಕಾಯುತ್ತಾ ಕುಳಿತೆವು. ಎಷ್ಟೆಂದರೂ ರಾಜಧಾನಿಯ ನಿಲ್ದಾಣವಲ್ಲವೇ? ಅರ್ಧ ಘಂಟೆ ರೈಲು ಅಲ್ಲೇ ನಿಂತಿತು. ಅಂತೂ ೧೦:೦೫ ರ ಸುಮಾರಿಗೆ 'ಬೆಂಗಳೂರು ಸಿಟಿ' ಬಿಟ್ಟೆವು. ನಂತರ ೧೫ ನಿಮಿಷದಲ್ಲಿ ಕಂಟೋನ್ಮೆಂಟ್ ನಿಲ್ದಾಣ. ಕೆ.ಆರ್.ಪುರ ನಿಲ್ದಾಣ ಯಾವಾಗ ಬರುತ್ತದೆ ಎಂದು ಯಾರಿಗೂ ತಿಳಿದಿರಲಿಲ್ಲ. ಎಲ್ಲರೂ ಬ್ಯಾಗುಗಳನ್ನು ಹೆಗಲಿಗೇರಿಸಿಕೊಂಡು ಬಾಗಿಲ ಬಳಿ ಹೋಗಿ ಹೊರಗೆ ನೋಡುತ್ತಾ ನಿಂತೆವು. ಅಲ್ಲೆಲ್ಲೋ ಓಲ್ಡ್ ಮದ್ರಾಸ್ ರೋಡ್ ಕಂಡಿತು. ಬೈಯಪ್ಪನಹಳ್ಳಿ ನಿಲ್ದಾಣದ ಬಳಿ ರೈಲು ನಿಧಾನವಾಗಲು ಪ್ರಾರಂಭಿಸಿತು. ಮರಳಿ ಗೂಡಿಗೆ ಬಂದೆವಲ್ಲ ಎಂದು ಎಲ್ಲರೂ ನಿಟ್ಟುಸಿರಿಟ್ಟೆವು. ಅದೋ ಬಿಗ್ ಬಜಾರ್.. ಅದೋ RMZ... ಅದೋ.. ಯಾವಾಗಲೂ ಟ್ರಾಫಿಕ್ ಜಾಮ್ ಮಾಡಿ ಎಲ್ಲರನ್ನೂ ಕಾಡುವ ಬ್ರಿಡ್ಜ್! ಇನ್ನೇನು ಕೆ.ಆರ್.ಪುರಂ ಬಂದೇ ಬಿಟ್ಟಿತು... ಓಹ್! ಇಲ್ಲ... ರೈಲು ಬಲಕ್ಕೆ ತಿರುಗುತ್ತಿದೆ.. ನಾವು ಆ ಬ್ರಿಡ್ಜ್ ಮೇಲೆ ಹೋಗುತ್ತಿದ್ದೇವೆ! ಪಕ್ಕದಲ್ಲಿ ಬಾಟಾ ಶೋರೂಂ ಕಾಣುತ್ತಿದೆ!! ಒಬ್ಬರ ಮುಖ ಇನ್ನೊಬ್ಬರು ನೋಡಿಕೊಂಡೆವು. ಕೆ.ಆರ್.ಪುರಂನ ಕೇಬಲ್ ಬ್ರಿಡ್ಜ್ ನಮ್ಮನ್ನು ಅಣಕಿಸುತ್ತಿತ್ತು.. ನಾವೆಲ್ಲ ಕನ್​​ಫ್ಯೂಸ್ ಆಗಿದ್ದರೆ ಕಾಂತ .. "ಅಲ್ನೋಡ್ರೋ ನಮ್ಮನೆ ದಾರಿ... ನಮ್ಮನೆ... ಹೊಯ್ತಲ್ಲೋ.. ನೋಡಿದ್ರಾ" ಎಂದ... ಅಣ್ಣ-ತಮ್ಮಂದಿರ (ಜೊತೆಗೆ ಅದಕ್ಕೆ ಒಪ್ಪಿದ ನಮ್ಮ) ಐಡಿಯಾ ಎಂದಿನಂತೆ ಮತ್ತೆ ಕೈಕೊಟ್ಟಿತ್ತು.

ತೂತುಕುಡಿ ಎಕ್ಸ್​​ಪ್ರೆಸ್ ಹತ್ತಿ ನಾವು ದಾರಿ ತಪ್ಪಿದ್ದೆವು.

ರೈಲು ಕ್ಷಣ-ಕ್ಷಣಕ್ಕೂ ವೇಗ ಪಡೆದುಕೊಳ್ಳುತ್ತಿತ್ತು. ಏನಾಗುತ್ತಿದೆ ಎಂದು ತಿಳಿಯುವಷ್ಟರಲ್ಲಿ ಬೆಂಗಳೂರಿನಿಂದ ಸುಮಾರು ದೂರ ಹೋಗಿಬಿಟ್ಟಿದ್ದೆವು. ಮುಂದಿನ ಸ್ಟಾಪ್ ಎಲ್ಲಿದೆ ಎಂದು ಗೊತ್ತಿಲ್ಲ!! ತಮಿಳುನಾಡಿಗೆ ಹೊರಟಿದ್ದರಿಂದ ಹೊಸೂರು ಇರಬಹುದು ಎಂದು ಊಹಿಸಿದೆ. ಮನಸ್ಸಿನಲ್ಲೇ ಸರಿಯಾಗಿ ಮಾಹಿತಿ ಕೊಡದೆ ಶ್ರೀರಂಗಪಟ್ಟಣದಲ್ಲಿ ನಮಗೆ ಕೆ.ಆರ್.ಪುರಕ್ಕೆ ಟಿಕೆಟ್ ಕೊಟ್ಟವನನ್ನು ಶಪಿಸಿದೆವು. ನಮಗೆ ಚಿಂತೆಯಾಗಿದ್ದರೆ ಕಾಂತ ಮತ್ತೆ "ನೀನು ಕರ್ನಾಟಕದಿಂದ ಹೊರಗಡೆ ಯಾವಾಗಾದ್ರೂ ಹೋಗಿದೀಯ? ಇವತ್ತು ಹೋಗಬಹುದು" ಎಂದ. ಹಾಕಿ ತದುಕುವಷ್ಟು ಸಿಟ್ಟು ಬಂದಿತ್ತು. ಆದರೆ ತದುಕಲಿಲ್ಲ. ಚೈನ್ ಎಳೆಯುವ ಯೋಚನೆ ಕೂಡ ಬಂದಿತ್ತು. ಆದರೆ ಅದು ತಪ್ಪು ಎಂದು ತಿಳಿದಿದ್ದರಿಂದ ತೆಪ್ಪಗೆ ನಿಂತೆವು... ನಿಂತೆವು?... ಹೌದು.. ಕೂರಲು ಜಾಗವಿರಲಿಲ್ಲ.

ಸುಮಾರು ೨೫ ನಿಮಿಷ ಹಾಗೇ ಹೋಗಿ ರೈಲು ಅದ್ಯಾವುದೋ ಜಾಗದಲ್ಲಿ ನಿಧಾನಿಸಿ ನಿಂತಿತು. ಅದನ್ನೇ ಕಾಯುತ್ತಿದ್ದ ನಾವು ಐದೂ ಮಂದಿ ಹಾರಿಕೊಂಡೆವು. ಯಾವುದೋ ಹಳ್ಳಿಯಿರಬೇಕು.. ಪ್ಲಾಟ್‌ಫಾರ್ಮ್ ಇರಲಿಲ್ಲ. ಅಲ್ಲಿದ್ದ ನಿಲ್ದಾಣದಲ್ಲಿ "ಕಾರ್ಮಿಲ್ಲರಾಂ" ಎಂದು ಕನ್ನಡದಲ್ಲೇ ಬರೆದಿದ್ದರು. ಸದ್ಯ ಇನ್ನೂ ಕರ್ನಾಟಕ ಬಿಟ್ಟಿಲ್ಲ ಎಂದು ನಮಗೆ ಸಂತೋಷವಾದರೆ ಕಾಂತ "ಛೆ, ತಮಿಳುನಾಡು ನೋಡುವ ಅವಕಾಶ ತಪ್ಪಿಹೋಯಿತು" ಎಂದು ಗೊಣಗಿಕೊಂಡ. ಹಾಗೇ ಸ್ಟೇಷನ್ ನ ಒಳಗೆ ಹೋದಾಗ ಒಬ್ಬ ಸ್ಟೇಷನ್ ಮಾಸ್ಟರ್ ಕಂಡ. ವಿಜಯ ಆತನನ್ನೇ ವಿಚಾರಿಸಿದ. ಆತ "ಈಗ ನಿಮಗೆ ಬಸ್ ಸಿಗುವುದಿಲ್ಲ.. ೯:೧೫ ಕ್ಕೆ ಕೊನೆಯ ಬಸ್.. ರೈಲು ಇರುವುದು ಬೆಳಿಗ್ಗೆಯೇ.. ಹೀಗೇ ಹೋಗಿ, ಮೇನ್ ರೋಡ್ ಸಿಗುತ್ತೆ.. ಟೆಂಪೋ ಲಾರಿ ಏನಾದರೂ ಸಿಗಬಹುದು" ಎಂದು ಹೇಳಿ ಕಳುಹಿಸಿದ. ಇವನು ಗೋಣಾಡಿಸಿಕೊಂಡು ಬಂದ. ನಾಲ್ಕು ಹೆಜ್ಜೆ ಇಡುವಷ್ಟರಲ್ಲಿ ೩ ದಾರಿಗಳು ಎದುರಾದವು. ಎತ್ತ ಹೋಗಬೇಕೆಂದು ತಿಳಿದಿರಲಿಲ್ಲ. ಮತ್ತೆ ವಿಜಯ ತಿರುಗಿ ಹೋಗಿ ಕೇಳಿಕೊಂಡು ಬಂದ. ಹಾಗೇ ಸುಮಾರು ೧ ಕಿಲೋಮೀಟರ್ ನಡೆದೆವು. ಯಾವುದೋ ಒಂದು ಹೈವೇ ಸಿಕ್ಕಿತು. ಹತ್ತೂಮುಕ್ಕಾಲು ಘಂಟೆಯಾಗಿತ್ತು. ಒಂದು ಅಂಗಡಿಯೂ ತೆರೆದಿರಲಿಲ್ಲ. ನಾವು ಕೈ ಮಾಡಿದ ಯಾವ ವಾಹನಗಳೂ ನಿಲ್ಲಲಿಲ್ಲ. ಅಲ್ಲಿ ಚಲಿಸುತ್ತಿದ್ದ ವಾಹನಗಳನ್ನು ಬಿಟ್ಟರೆ ಒಬ್ಬನೇ ಒಬ್ಬ ನರಪಿಳ್ಳೆಯ ಸುಳಿವೂ ಇಲ್ಲ!!

ಹಾಗೇ ಏನಾದರೂ ಯಾರಾದರೂ ಸಿಗಬಹುದೆಂದು ಮುಂದೆ ನಡೆಯುತ್ತಾ ಹೋದೆವು. ನಮ್ಮ ಅದೃಷ್ಟಕ್ಕೆ ಅಲ್ಲೊಂದು ಹೋಟೆಲ್ ಬಾಗಿಲು ಹಾಕಿ ಅದರ ಕೆಲಸಗಾರರು ಹೋಗುತ್ತಿದ್ದರು. ಅವರ ಬಳಿ ಅದು ಯಾವ ಸ್ಥಳ ಎಂದು ಕೇಳಿದೆವು. ಅದು ಸರ್ಜಾಪುರ ರಸ್ತೆಯ ದೊಡ್ಡಕನ್ನಳ್ಳಿ ಎಂಬ ಊರಾಗಿತ್ತು. ಅಲ್ಲಿ ಶುರುವಾಯಿತು ನಮ್ಮ ಪರದಾಟ. ಯಾವ ವಾಹನಗಳನ್ನೂ ನಿಲ್ಲಿಸುತ್ತಿಲ್ಲ, ಕ್ಯಾಬ್​ಗಳು ಕಾಣುತ್ತಿಲ್ಲ... ಏನು ಮಾಡುವುದೆಂದು ಯೋಚಿಸುತ್ತಿರುವಾಗ ಅಣ್ಣ ತಮ್ಮಂದಿರ ವಿಚಾರ ಲಹರಿ ಎತ್ತೆತ್ತಲೋ ಸಾಗಿತ್ತು. ಮಲ್ಲಿಗೆ (ಮಲ್ಲಿ=ಮಲ್ಲಿಕಾರ್ಜುನ) ಕಾಲ್ ಮಾಡಿ ಆ ಸ್ಥಳದ ಅಕ್ಷಾಂಶ, ರೇಖಾಂಶ (latitude, longitude) ವಿಚಾರಿಸಿದರು. ಕರ್ಮಕಾಂಡ! ಅದರ ಜೊತೆ ಬಿ.ಎಂ.ಟಿ.ಸಿ ಬಸ್ ಸಂಖ್ಯೆ, ಅವುಗಳ ವೇಳಾಪಟ್ಟಿ ಎಲ್ಲಾ ವಿಚಾರಿಸಿದ್ದಾಯಿತು... ಅವನ್ನೆಲ್ಲ ತಿಳಿದುಕೊಂಡು ಏನು ಮಾಡಿದರೋ ಗೊತ್ತಿಲ್ಲ.

ಅಷ್ಟರಲ್ಲಿ ಅಲ್ಲೊಂದು ಕ್ಯಾಬ್ ಕಂಡಿತು. ಹೋಗಿ ವಿಚಾರಿಸಿದೆ. ೫೦೦ ರೂ ಹೇಳಿದ. ಸುಮ್ಮನೆ ಹೋಗಬಹುದಿತ್ತು. ಆದರೆ ಚಂದ್ರಕಾಂತನ ಚೌಕಾಶಿ ವ್ಯಾಪಾರಕ್ಕೆ ಬೇಸತ್ತು ಆ ಶೀಘ್ರಕೋಪಿ (short-tempered) ಡ್ರೈವರ್ ಹೋಗಿಯೇ ಬಿಟ್ಟ.

ಸರಿ ಇನ್ನೇನು ಮಾಡುವುದು ಎನ್ನುತ್ತಾ ಆಚೀಚೆ ನೋಡುತ್ತಿರುವಾಗ ವಿನಯನಿಗೆ ಒಂದು (ನಿಜಕ್ಕೂ) ಒಳ್ಳೆಯ ಉಪಾಯ ಹೊಳೆಯಿತು. ತನ್ನ ಆಫೀಸಿನ ಕ್ಯಾಬ್​​ಗೆ ಕರೆ ಮಾಡಿ ಕರೆಸಿದ. ಆ ಕ್ಯಾಬ್ ಡ್ರೈವರ್​​ಗೆ ನಾವೆಲ್ಲಿದ್ದೇವೆ ಎಂದು ತಿಳಿದಿರಲಿಲ್ಲ (ಅಸಲಿಗೆ ನಮಗೇ ತಿಳಿದಿರಲಿಲ್ಲ). ಆದರೂ ಕಷ್ಟ ಪಟ್ಟು ಅಲ್ಲಿಗೆ ಹುಡುಕಿಕೊಂಡು ಬಂದ. ಅವನಿಗೆ ಥ್ಯಾಂಕ್ಸ್ ಹೇಳಲೇ ಬೇಕು.

ಬಾಂಬ್ ದಾಳಿಯಿಂದ ಕಂಗೆಟ್ಟಿದ್ದ ಬೆಂಗಳೂರಿನಲ್ಲಿ ಪೊಲೀಸರ ಕಾಟ ಬೇರೆ. ಹಾಗಾಗಿ ಒಂದು ಇಂಡಿಕಾದಲ್ಲಿ ಐದು ಜನ ಹೇಗೋ ಅಡ್ಜಸ್ಟ್ ಮಾಡಿಕೊಂಡು ಕುಳಿತುಕೊಂಡೆವು. ಅಂತೂ ಬೆಂಗಳೂರಿಗೆ ಸುರಕ್ಷಿತವಾಗಿ ಬಂದು ಮುಟ್ಟಿದೆವು.

ನಾವು ಹತ್ತಿದ್ದ ತೂತುಕುಡಿ ಎಕ್ಸ್​​ಪ್ರೆಸ್ ಮರೆಯಲಾಗದ ಒಂದು ಅನುಭವ ತಂದಿತ್ತು.

ಶನಿವಾರ, ಸೆಪ್ಟೆಂಬರ್ 13, 2008

ಜೀವಕ್ಕೆ ಬೆಲೆಯೆಲ್ಲಿದೆ?

ಹೈದರಾಬಾದ್, ಜೈಪುರ, ಬೆಂಗಳೂರು, ಅಹ್ಮದಾಬಾದ್, ದೆಹಲಿ...

ಇದಕ್ಕೆ ಕೊನೆಯೆಂದು? ಎಲ್ಲಿ?

ಮೊನ್ನೆ ೯/೧೧. ಅದು ಆಗಿ ೭ ವರ್ಷಗಳಾಗಿವೆ. ವಿಶ್ವದಾದ್ಯಂತ ಅದನ್ನು ನೆನಪಿಟ್ಟುಕೊಂಡು ಶೋಕ ಆಚರಿಸುತ್ತಾರೆ. ಭಾರತದಲ್ಲಿ ಲೆಕ್ಕವಿಲ್ಲದಷ್ಟು ದಾಳಿಗಳಲ್ಲಿ ಲೆಕ್ಕ ತಪ್ಪುವಷ್ಟು ಜನ ಮಡಿದಿದ್ದಾರೆ. ಯಾರೂ ಅದರ ಬಗ್ಗೆ ತಲೆ ಕೆಡಿಸಿಕೊಳ್ಳುವುದಿಲ್ಲ. ಜನ ತಮ್ಮ ಸುತ್ತಮುತ್ತ ಏನಾದರೂ ಆದರೆ ಎಲ್ಲೂ ಹೋಗದೆ ಮನೆಯಲ್ಲಿ ಕುಳಿತುಕೊಳ್ಳುತ್ತಾರೆ. ಬೇರೆಡೆ ಆದ ದಾಳಿಗಳಿಗೂ ಇವರಿಗೂ ಸಂಬಂಧವೇ ಇರುವುದಿಲ್ಲ. ೧೧೫ ಕೋಟಿ ಜನರಲ್ಲಿ ೧೫ ಜನ ಸತ್ತರೆ ಯಾರಿಗೆ ಏನು ನಷ್ಟ ಎಂಬ ಧೋರಣೆಯೆ? ಸತ್ತವರೇನು ನಮ್ಮ ನೆಂಟರಲ್ಲ ಎಂಬ ಭಾವನೆಯೆ?

೨೦೦೫ರ ಡಿಸೆಂಬರ್ ೨೮ರಂದು ಭಾರತೀಯ ವಿಜ್ಞಾನ ಮಂದಿರದ (IISc) ಮೇಲೆ ನಡೆದ ಮೇಲೆ ಅಲ್ಲಿನ ಸೆಕ್ಯುರಿಟಿ ಹೆಚ್ಚಿಸುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ ಅಲ್ಲಿಗೆ ಹೋದರೆ ನಿಮ್ಮನ್ನು ಕೇಳುವವರೆ ಇರುವುದಿಲ್ಲ. ವಾಹನ ತೆಗೆದುಕೊಂಡು ಹೋದರೆ ತಡೆದು ನಿಲ್ಲಿಸುತ್ತಾರೆ. ನೀವು ಏನೇ ಹೇಳಿ, ಒಳಗೆ ಬಿಡುತ್ತಾರೆ, ಹೆಚ್ಚೆಂದರೆ ಒಂದು ಎಂಟ್ರಿ ಮಾಡಿ ಎನ್ನುತ್ತಾರೆ; ಮುಗಿಯಿತು. ಮುಂದೆಲ್ಲೂ ಯಾರೂ ಏನನ್ನೂ ಕೇಳುವುದಿಲ್ಲ. ಕನಿಷ್ಠ ಒಂದು ಸಣ್ಣ ಸಾಫ್ಟ್‌‍ವೇರ್ ಕಂಪೆನಿಯಲ್ಲಿ ಇರುವ ಭದ್ರತಾ ವ್ಯವಸ್ಥೆ ಕೂಡ ಇಲ್ಲ.

೨೦೦೧ರ ಡಿಸೆಂಬರ್ ೧೩ರಂದು ಭಾರತದ ಸಂಸತ್ತಿನ ಮೇಲೆ ದಾಳಿ ನಡೆದಾಗ ಹಾಗೆ, ಹೀಗೆ, ಪ್ರಜಾಪ್ರಭುತ್ವಕ್ಕಾದ ಅವಮಾನ ಎಂದ ರಾಜಕೀಯ ಪಕ್ಷಗಳು ಮಾಡಿದ್ದೇನು? ಅಂಥ ಕೆಲಸ ಮಾಡಿ ಸಿಕ್ಕಿ ಬಿದ್ದವರಿಗೇ ಶಿಕ್ಷೆ ಕೊಡಲು ಹಿಂದೆ ಮುಂದೆ ನೋಡುವ ಭ್ರಷ್ಟ ಸರ್ಕಾರಗಳಿಂದ ಏನನ್ನು ತಾನೇ ನಿರೀಕ್ಷಿಸಲಾದೀತು? ಇನ್ನು ಜನರಾದರೂ ಏನು ಮಾಡಲಾದೀತು?

ಇನ್ನೊಬ್ಬರನ್ನು ಕೊಲ್ಲಿ, ಹಿಂಸಿಸಿ ಎಂದು ಯಾವ ಧರ್ಮವೂ ಹೇಳುವುದಿಲ್ಲ. ಆದರೂ ಇಂತಹ ಕೃತ್ಯಗಳನ್ನು ಏಕೆ ಮಾಡುತ್ತಾರೆ ಎಂಬುದೇ ತಿಳಿಯುವುದಿಲ್ಲ. War doesn't decide who's right; it decides who's left ಎಂದು ಎಲ್ಲೋ ಕೇಳಿದ ನೆನಪು... ಜೀವಕ್ಕೆ ಬೆಲೆಯೇ ಇಲ್ಲವೆ?