ಶುಕ್ರವಾರ, ಅಕ್ಟೋಬರ್ 17, 2008

ಮನಸ್ಸಿದ್ದರೆ ಮಾರ್ಗ

ವಿಶ್ವವೇ ಕಾತರದಿಂದ ಆತನತ್ತ ನೋಡುತ್ತಿದೆ. ಆತನ ಒಂದು, ಒಂದೇ ಒಂದು, ಕಾರ್ಯ ಆತನನ್ನು ಅದ್ಭುತ ಹೀರೋ ಆಗಿಸಬಲ್ಲುದು. ಕೊಂಚ ಎಚ್ಚರ ತಪ್ಪಿದರೂ ಸಾಕು, ಸ್ವಲ್ಪ ಗುರಿ ತಪ್ಪಿದರೂ ಸಾಕು, ಆತನ ವೈಫಲ್ಯ ಪೂರ್ತಿ ದೇಶದ ಮಾನ ತೆಗೆಯಬಲ್ಲುದು. ಜಗತ್ತಿಗೆ ಆತ ಒಬ್ಬ ಫ್ಲಾಪ್ ವ್ಯಕ್ತಿ ಎಂದೆನಿಸಿಬಿಡುತ್ತಾನೆ. ಅಷ್ಟೇ ಅಲ್ಲ, ಇಡೀ ಕೂಟಕ್ಕೇ ಕಪ್ಪು ಚುಕ್ಕಿಯಾಗಿ ಉಳಿದುಬಿಡುತ್ತದೆ... ಆತನಿಗೂ ಅದರ ಅರಿವಿದೆ. ಆತ ಹಿಂಜರಿಯಲಿಲ್ಲ, ಕಂಗೆಡಲಿಲ್ಲ. "ಧೈರ್ಯಂ ಸರ್ವತ್ರ ಸಾಧನಂ" ಎನ್ನುವುದನ್ನು ಅರಿತು, ಯಾವುದೇ ರೀತಿಯ ದುಗುಡಕ್ಕೆ ಒಳಗಾಗದೇ ತನ್ನ ಪಾಲಿಗೆ ಬಂದ ಕೆಲಸವನ್ನು ಶ್ರದ್ಧೆಯಿಂದ ಮಾಡಿದ. ಆತ ಗುರಿ ತಪ್ಪಲಿಲ್ಲ. ನೆರೆದಿದ್ದ ಸಾವಿರಾರು ಜನರ ನಿರೀಕ್ಷೆಯನ್ನು, ತನ್ನ ನಾಡಿನವರು ತನ್ನ ಮೇಲಿಟ್ಟ ಭರವಸೆಯನ್ನು, ಆತ ಹುಸಿ ಮಾಡಲಿಲ್ಲ. ಇಡೀ ಜಗತ್ತೇ ಆತನ ಸಾಧನೆಯನ್ನು ಕೊಂಡಾಡಿತು. ಆ ಕಾರ್ಯಕ್ರಮ "ನ ಭೂತೋ ನ ಭವಿಷ್ಯತಿ" ಎಂದೆನಿಸಿ ಇತಿಹಾಸದ ಸುವರ್ಣಾಕ್ಷರಗಳಲ್ಲಿ ದಾಖಲಾಯಿತು.

ನಾನು ಹೇಳುತ್ತಿರುವುದು ಯಾವುದರ ಬಗ್ಗೆ ಎಂದು ಈಗಾಗಲೇ ನಿಮಗೆ ಗೊತ್ತಾಗಿರಬಹುದು. ಅದು ೧೯೯೨ರ ಜುಲೈ ೨೫ರಂದು ಬಾರ್ಸಿಲೋನಾದಲ್ಲಿ ನಡೆದ ಓಲಿಂಪಿಕ್ ಕ್ರೀಡಾಕೂಟದ ಉದ್ಘಾಟನಾ ಸಮಾರಂಭ. ಆಂಟೋನಿಯೋ ರೆಬೋಲ್ಲೋ ಎಂಬ ಪ್ಯಾರಾಲಿಂಪಿಕ್ ಬಿಲ್ಲುಗಾರ ತನಗೆ ನೀಡಿದ್ದ ಕೆಲಸವನ್ನು ಅಚ್ಚುಕಟ್ಟಾಗಿ ಮಾಡಿ, ಆ ದಿನವನ್ನು ಅವಿಸ್ಮರಣೀಯವಾಗಿಸಿದ್ದ.

ಸ್ಪೇನ್ ಹೇಳಿ ಕೇಳಿ ಶೂರರ ನಾಡು. ಗೂಳಿಕಾಳಗ ಅಲ್ಲಿನ ರಾಷ್ಟ್ರೀಯ ಕ್ರೀಡೆ. ಅಂಥ ದೇಶದಲ್ಲಿ ಓಲಿಂಪಿಕ್ ಕ್ರೀಡೆ ಆಯೋಜಿಸಿದರೆ ಏನಾದರೂ ಥ್ರಿಲ್ ಇರುವುದು ಬೇಡವೇ? ಹಾಗಾಗಿ ಬಾಣದಿಂದ ಜ್ಯೋತಿ ಬೆಳಗಿಸುವ ಅಭೂತಪೂರ್ವ ಉಪಾಯಕ್ಕೆ ಸಮಾರಂಭದ ಹೊಣೆ ಹೊತ್ತಿದ್ದ ಸಮಿತಿ ಮಣೆ ಹಾಕಿತು. ಅಕಸ್ಮಾತ್ ಆ ಬಾಣವೇನಾದರೂ ಗುರಿ ತಪ್ಪಿದ್ದರೆ ಸ್ಪೇನಿಗೆ ಪ್ರಪಂಚದೆದುರು ಆಗುತ್ತಿದ್ದ ಅವಮಾನ ಅಷ್ಟಿಷ್ಟಲ್ಲ. ಇದನ್ನು ಸಮಿತಿ ಗಮನಿಸಲಿಲ್ಲವೆಂದೇನಲ್ಲ, ಕಷ್ಟಸಾಧ್ಯವಾದುದನ್ನು ಸಾಧಿಸುವ ಆತ್ಮವಿಶ್ವಾಸ ಅವರಲ್ಲಿತ್ತು, ಅಷ್ಟೆ.

೨೦೦ ಜನ ಬಿಲ್ಗಾರರನ್ನು ಇದಕ್ಕಾಗಿ ಆಯ್ಕೆ ಮಾಡಲಾಯಿತು. ಅವರಿಗೆ ಬೇರೆ ಬೇರೆ ಹವಾಮಾನಗಳಲ್ಲಿ, ಬೇರೆ ಬೇರೆ ಸಮಯದಲ್ಲಿ ತರಬೇತಿ ನೀಡಿ ಅಭ್ಯಾಸ ಮಾಡಿಸಲಾಯಿತು. ಗಾಳಿ ಹೆಚ್ಚಾಗಿರುವ ಸೂರ್ಯೋದಯದ ವೇಳೆಯಲ್ಲಿ ಸಹ ಅಭ್ಯಾಸ ನಡೆಯುತ್ತಿತ್ತು. ಅಷ್ಟೇ ಅಲ್ಲದೆ ಕೃತಕವಾಗಿ ವಿವಿಧ ಹವಾಮಾನ ಪರಿಸ್ಥಿತಿ, ಗಾಳಿಯ ಚಲನೆ ಮುಂತಾದವನ್ನು ಸೃಷ್ಟಿಸಲು ಯಂತ್ರಗಳನ್ನು ಬಳಸಲಾಯಿತು. ಅಭ್ಯಾಸದ ತೀವ್ರತೆ ಎಷ್ಟಿತ್ತೆಂದರೆ ಅವರಿಗೆ ಬೆರಳುಗಳನ್ನು ಸುಡುತ್ತಿದ್ದ ಬಾಣಗಳನ್ನು ಕೊಟ್ಟು ಸಹ ತರಬೇತಿ ನೀಡಲಾಯಿತು. ಎಷ್ಟೇ ಆದರೂ ಜಗತ್ತಿನೆದುರು ತಲೆ ಎತ್ತಿ ನಿಲ್ಲುವ ಅಥವಾ ಬಗ್ಗಿಸಿ ನಿಲ್ಲುವ ಪ್ರಶ್ನೆಯಲ್ಲವೇ?

ಸಮಾರಂಭಕ್ಕಿಂತ ಸ್ವಲ್ಪ ಮುಂಚೆ ೪ ಜನರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು. ಆದರೆ ಜ್ಯೋತಿ ಬೆಳಗುವ ಗೌರವ ಯಾರಿಗೆ ದಕ್ಕುತ್ತದೆ ಎಂಬುದನ್ನು ಗೌಪ್ಯವಾಗಿಡಲಾಗಿತ್ತು. ಜ್ಯೋತಿ ಬೆಳಗಿಸಲು ಕೇವಲ ೨ ಘಂಟೆ ಇರುವಾಗ ಆಂಟೋನಿಯೋ ಆಯ್ಕೆ ಆಗಿರುವ ವಿಷಯವನ್ನು ಅವರಿಗೆ ತಿಳಿಸಲಾಯಿತು.



ಮುಂದೆ ನಡೆದದ್ದು ನಮ್ಮ ಕಣ್ಣೆದುರಿಗೆ ಇದೆ. ಯಾವುದೇ ಕ್ರೀಡಾ ಸಮಾರಂಭವನ್ನು ತೆಗೆದುಕೊಂಡರೂ ಇಂಥದ್ದೊಂದನ್ನು ಮೀರಿಸಲು ಸಾಧ್ಯವಿಲ್ಲ ಎಂಬಂಥ ಘಟನೆ ನಡೆಯಿತು. ಪ್ರತೀಕ್ಷೆಯ ಉತ್ತುಂಗದಲ್ಲಿ ತುದಿಗಾಲಲ್ಲಿ ಕುಳಿತಿದ್ದ ಕ್ರೀಡಾಂಗಣದ ಪ್ರೇಕ್ಷಕರನ್ನು ಆವರಿಸಿದ್ದ ನೀರವತೆ ದೀಪ ಉರಿಯಲಾರಂಭಿಸಿದ ಕ್ಷಣಮಾತ್ರದಲ್ಲಿ ಹಷೋದ್ಗಾರವಾಗಿ ಮಾರ್ಪಟ್ಟಿತು.

ಇಷ್ಟೇ ಆಗಿದ್ದರೆ ಬರೆಯುವಂಥದ್ದು ಏನೂ ಇರುತ್ತಿರಲಿಲ್ಲವೇನೋ.. ಆದರೆ...

ಕೇವಲ ಎಂಟು ತಿಂಗಳಿದ್ದಾಗ ಆಂಟೋನಿಯೋಗೆ ಪೋಲಿಯೋ ಆಗಿತ್ತು. ಎರಡೂ ಕಾಲುಗಳಲ್ಲಿನ ಬಲ ಕುಂದಿತ್ತು. ಬಲಗಾಲು ಬಹುಪಾಲು ಸ್ವಾಧೀನ ಕಳೆದುಕೊಂಡಿತ್ತು. "ನನಗೆ ಸವಾಲೆನಿಸುವ ಕೆಲಸ ಮಾಡಬಯಸುತ್ತೇನೆ" ಎಂದು ಹೇಳುತ್ತಿದ್ದ ಅವನ ಕಾಲಿನಲ್ಲಿ ಬಲವಿಲ್ಲದಿದ್ದರೇನಾಯಿತು, ಕೈ ಮತ್ತು ನಿಖರ ಗುರಿ ಬೇಕಾದ ಬಿಲ್ವಿದ್ಯೆ ಒಲಿದಿತ್ತು.

antonio-rebollo
ಆಂಟೋನಿಯೋ ರೆಬೋಲ್ಲೋ

ಮುಂದೆ ಆಂಟೋನಿಯೋ ಅಂಗವಿಕಲರ ಕ್ರೀಡಾಕೂಟವಾದ ಪ್ಯಾರಾಲಿಂಪಿಕ್ಸ್ ನಲ್ಲಿ ಸ್ಪೇನ್ ದೇಶವನ್ನು ಪ್ರತಿನಿಧಿಸಿ ಪದಕಗಳನ್ನು ಗೆದ್ದ. ವಿಪರ್ಯಾಸವೆಂದರೆ ಎರಡು ಬಾರಿ (೧೯೮೪ ನ್ಯೂಯಾರ್ಕ್, ೧೯೯೨ ಬಾರ್ಸಿಲೋನಾ) ಬೆಳ್ಳಿ ಹಾಗೂ ಒಂದು ಬಾರಿ (೧೯೮೮, ಸಿಯೋಲ್) ಕಂಚು ಗೆದ್ದ ಆತ ಒಂದು ಬಾರಿಯೂ ಚಿನ್ನ ಗೆಲ್ಲಲಿಲ್ಲ. ಆದರೆ ಆತ ಅದಕ್ಕಿಂತಲೂ ಹೆಚ್ಚಿನದನ್ನು ಸಾಧಿಸಿದ್ದ. ಆಂಟೋನಿಯೋ ರೆಬೋಲ್ಲೋ ಹೆಸರನ್ನು ಜನ ಮರೆಯಬಹುದು. ಆದರೆ ಆತ ಬೆಳಗಿಸಿದ ಜ್ಯೋತಿ ಮಾತ್ರ ನೋಡಿದವರ ಮನದಂಗಳದಲ್ಲಿ ಅಚ್ಚಳಿಯದೆ ಇರುತ್ತದೆ. ಮನಸ್ಸಿದ್ದರೆ ಮಾರ್ಗ ಅಲ್ಲವೇ?

ಮಂಗಳವಾರ, ಅಕ್ಟೋಬರ್ 7, 2008

ವಿಹಂಗಮ ನೋಟ

ಗಾಳಿ ಜೋರಾಗುತ್ತಿದೆ... ಕ್ಷಣ-ಕ್ಷಣಕ್ಕೂ ಎತ್ತರೆತ್ತರಕ್ಕೇರುತ್ತಿದ್ದೇನೆ... ನನ್ನೊಡನಿದ್ದ ಗೆಳೆಯರೆಲ್ಲ ಕುಬ್ಜರಾಗುತ್ತಿದ್ದಾರೆ. ನಾ ನಡೆದು ಬಂದ ದಾರಿ ಕೇವಲ ಒಂದು ಗೆರೆಯಂತೆ ಕಾಣುತ್ತಿದೆ... ಎಷ್ಟೋ ದೂರದಲ್ಲಿರುವ ಕೆರೆಯೊಂದು ಪಕ್ಕದಲ್ಲಿರುವಂತೆ ಭಾಸವಾಗುತ್ತಿದೆ... "ನೀಲಿ ಬಾನಲಿ ತೇಲಿ ಹೋದೆನು ನಾನು ಈ ದಿನ..." ಎಂಬ ಗೀತೆ ನೆನಪಿಗೆ ಬರುತ್ತಿದೆ... ಒಂದೇ ಮಾತಿನಲ್ಲಿ ಹೇಳಬೇಕೆಂದರೆ ಇದೊಂದು "ವಿಹಂಗಮ ನೋಟ".

ಪ್ರಮುಖ ಕಾರ್ಯಕ್ರಮಗಳಲ್ಲಿ ವೀಕ್ಷಕ ವಿವರಣೆಕಾರರು ಈ ಪದಪುಂಜ ಉಪಯೋಗಿಸುವುದನ್ನು ನಾವೆಲ್ಲ ಕೇಳಿದ್ದೇವೆ. ಆದರೆ ಅನುಭವಿಸಿದ್ದೇವಾ? ವಿಮಾನದಲ್ಲಿ ಹೋಗುವಾಗ ಮೋಡದ ಮೇಲೆ ಹಾರುವ ಮನುಷ್ಯ ತಾನು ಕುಳಿತಲ್ಲಿಂದಲೇ ಕಿಟಕಿಯಿಂದ ನೋಡಿ ಖುಷಿ ಪಡಬಹುದೇ ಹೊರತು ತಾನೇ ಹಾರುವ ಕನಸನ್ನು ಸಾಕಾರಗೊಳಿಸಿಕೊಳ್ಳಲಾದೀತಾ? ಬಹುಶಃ ಇರಲಿಕ್ಕಿಲ್ಲ. ಆದರೆ ಮೊನ್ನೆ ಶನಿವಾರ ನಾನು ಅಂಥ ಒಂದು ಅನುಭವ ಪಡೆದೆ.

ಮೊನ್ನೆ ಶನಿವಾರ ಮೈಂಡ್-ಟ್ರೀಯ ಟ್ರೆಕ್ಕಿಂಗ್ ಕ್ಲಬ್ ಹಾಗೂ ಕೇರ್-ಇಂಡಿಯಾದ ಸಹಭಾಗಿತ್ವದಲ್ಲಿ ಹೊಸಕೋಟೆಯ ಬಳಿ ಪ್ಯಾರಾಸೇಲಿಂಗ್ ಆಯೋಜಿಸಲಾಗಿತ್ತು. ತಮ್ಮ ಗೆಳೆಯರನ್ನು ಕರೆದುಕೊಂಡು ಬರಬಹುದೆಂದು ಹೇಳಿದ್ದ ಕಾರಣ ಪ್ರವೀಣ ಈಮೇಲ್ ಕಳಿಸಿ ತಿಳಿಸಿದ್ದ. ಸರಿ, ಬರುತ್ತೇನೆ ಎಂದು ಹಿಂದೆ ಮುಂದೆ ನೋಡದೆ ಹೇಳಿದ್ದೆ.

ಸ್ಥಳ ಕೇವಲ ೧೫ ಕಿಲೋಮೀಟರ್ ದೂರದ ಹೊಸಕೋಟೆಯ ಬಳಿ ಎಂದು ತಿಳಿಸಲಾಗಿದ್ದ ಕಾರಣ ಬಸ್ಸಿನಲ್ಲಿಯೇ ಹೋಗುವುದೆಂದು ನಿರ್ಧರಿಸಿದ್ದೆವು. ಶನಿವಾರ ಬೆಳಿಗ್ಗೆ ಪ್ರವೀಣ, ಅರ್ಚನಾ ಮಾರ್ಕೆಟ್ಟಿನಿಂದ ಬಸ್ ಹತ್ತಿ ಮೊದಲೇ ಹೊರಟಿದ್ದರು. ಅಣ್ಣ-ತಮ್ಮ (ವಿನಯ್-ವಿಜಯ್... ಅವರನ್ನು ನಾವು ಕರೆಯುವುದೇ ಹಾಗೆ) ಎಂದಿನಂತೆ ಬೇಗ ಹೊರಡುತ್ತೇವೆ ಎಂದು ಹೇಳಿ ಲೇಟಾಗಿ ಹೊರಟಿದ್ದರು. ನಾನು ಅವರೆಲ್ಲ ಹೊರಟ ಮೇಲೆ ತಿಂಡಿ ತಿಂದು ಹೊರಟೆ.

ಕೆ.ಆರ್.ಪುರಂ ಬೆಂಗಳೂರಿನ ತುದಿ ಎಂದುಕೊಂಡಿದ್ದ ನನಗೆ ಆಶ್ಚರ್ಯ ಕಾದಿತ್ತು. ಹೋದಷ್ಟೂ ಹಳ್ಳಿಗಳು ಸಿಗುತ್ತಲೇ ಇದ್ದವು. ನಾಲ್ಕೈದು ಸ್ಟಾಪ್ ಆದ ಮೇಲೆ ಪ್ರವೀಣನಿಂದ ಫೋನು..

ಪ್ರವೀಣ: ಎಲ್ಲಿದೀಯ?
ನಾನು: ಬಸ್ಸಲ್ಲಿ.. ಯಾವೂರು ಅಂತ ಗೊತ್ತಿಲ್ಲ.
ಪ್ರವೀಣ: ನಾವು ಹೊಸಕೋಟೆಗೆ ಬಂದಿದೀವಿ... ಆದರೆ ಆ ಪ್ಲೇಸ್ ಇರೋದು ಇನ್ನೂ ಹಿಂದೆ, ಅದ್ಯಾವ್ದೋ ಬೂದಿಗೆರೆ ಕ್ರಾಸ್ ಅಂತೆ.
ನಾನು: ಸರಿ, ಇಳ್ಕೋತೀನಿ.

ಅಷ್ಟರಲ್ಲಿ ಬಸ್ ನಿಂತಿತ್ತು. ಬಹಳ ಜನ ಇಳಿದುಕೊಳ್ಳುತ್ತಿದ್ದರು. ಪಕ್ಕದಲ್ಲಿದ್ದವನನ್ನು ಬೂದಿಗೆರೆ ಕ್ರಾಸ್ ಯಾವುದು ಎಂದು ಕೇಳಿದೆ. ಇದೇ ಬೂದಿಗೆರೆ ಕ್ರಾಸ್ ಅಂದ. ಬಸ್ ಆಗಲೇ ಹೊರಡಲು ಸಿದ್ಧವಾಗಿತ್ತು. ರೈಲಿನಿಂದ ಹಾರಿರುವವರಿಗೆ (ಆ ಕಥೆ ಇನ್ನೂ ಬರೆದಿಲ್ಲ; ಬಹುಶಃ ಬರೆಯುವುದೂ ಇಲ್ಲ) ಬಸ್ಸಿನಿಂದ ಹಾರುವುದು ಕಷ್ಟವೇ? ತಕ್ಷಣ ಹಾರಿಕೊಂಡೆ. ಎಲ್ಲರಿಗಿಂತ ಕೊನೆಗೆ ಹೊರಟು ಮೊದಲು ಅಲ್ಲಿಗೆ ಹೋಗಿ ಸೇರಿದ್ದೆ. ಎರಡು ಸ್ಟಾಪ್ ಮುಂದೆ ಹೋಗಿದ್ದ ಅಣ್ಣ-ತಮ್ಮ ಐದು ನಿಮಿಷಗಳಲ್ಲಿ ಬಂದರು. ಅದಾಗಿ ಒಂದು ನಿಮಿಷಕ್ಕೆ ಪ್ರವೀಣ-ಅರ್ಚನಾ ಸೇರಿಕೊಂಡರು.

ಸುತ್ತ-ಮುತ್ತ ಎಲ್ಲಿ ನೋಡಿದರೂ ಯಾವುದೇ ಪ್ಯಾರಾಶೂಟ್ ಕಾಣುತ್ತಿರಲಿಲ್ಲ. ಪ್ಯಾರಾಶೂಟ್ ನಿಂದ ಹಾರುವ ಜಾಗವೂ ಅದಾಗಿರಲಿಲ್ಲ. ಅಲ್ಲಿ ಯಾರನ್ನೋ ಕೇಳಿದೆವು. ಆದರೆ ಅವರಿಗೆ ಅದರ ಬಗ್ಗೆ ತಿಳಿದೇ ಇರಲಿಲ್ಲ. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಾಗ ಪ್ರವೀಣ ಯಾರಿಗೋ ಫೋನ್ ಮಾಡಿ ದಾರಿ ಕೇಳಿದ. ಅದರಂತೆ ಅದೇ ಕ್ರಾಸಿನಲ್ಲಿ ಸುಮಾರು ೨ ಕಿಲೋಮೀಟರ್ ನಡೆಯಬೇಕಿತ್ತು. ಸ್ವಲ್ಪ ಚಾರಣವೂ ಇರಲಿ ಎಂದು ಐದೂ ಜನ ಸೇರಿ ನಡೆಯಲಾರಂಭಿಸಿದೆವು.

Long walk to Parasailing

ಎರಡಾಯಿತು, ಮೂರಾಯಿತು... ಊಹೂಂ.. ಎಷ್ಟು ಕಿಲೋಮೀಟರ್ ನಡೆದರೂ ಯಾವ ಪ್ಯಾರಾಶೂಟ್ ಕೂಡ ಕಾಣುತ್ತಿಲ್ಲ!! ಅಲ್ಲಿ ಸಿಕ್ಕಿದವರ್ಯಾರಿಗೂ ಅದರ ಬಗ್ಗೆ ತಿಳಿದಿರಲೂ ಇಲ್ಲ. ಅಷ್ಟರಲ್ಲಿ ತಿಂಡಿ ತಿನ್ನಬೇಕೆಂದು ಯಾವುದೋ ಒಂದು ಸಣ್ಣ ಅಂಗಡಿಗೆ ಹೋಗಿ ಚಿತ್ರಾನ್ನ ತಿಂದು ಮುಂದೆ ಹೊರಟೆವು. ಇನ್ನೇನು ಮಾಡುವುದು ಎಂದು ಯೋಚಿಸುತ್ತಿರುವಷ್ಟರಲ್ಲಿ ಸಂದೀಪ ಹಿಂದೆ ಅಲ್ಲಿಗೆ ಹೋಗಿದ್ದು ನೆನಪಾಯಿತು. ಅವನಿಗೆ ಫೋನಾಯಿಸಿದೆ. ಅವನು ಗುಂಡಿ-ಹಂಪಿನಿಂದ ಹಿಡಿದು ಪ್ಯಾರಾಶೂಟ್ ಹಾರುವ ಜಾಗದವರೆಗೆ ಕಣ್ಣಿಗೆ ಕಟ್ಟುವಂತೆ ದಾರಿ ವಿವರಿಸಿದ. ಅವನ ಮಾತು ಮುಂದೆ ಅಲ್ಲಿಗೆ ಹೋಗುವವರಿಗೆ ಬೇಕಾಗಬಹುದೇನೋ:

"ಹೊಸಕೋಟೆ ರೋಡಿನಲ್ಲಿ ಬೂದಿಗೆರೆ ಕ್ರಾಸ್ ಬರ್ತು. ಅಲ್ಲಿ ಎಡಕ್ಕೆ ತಿರುಗು. ಸುಮಾರು ದೂರ ಹೋದ ಮೇಲೆ ಬಾಲ್ಡ್ವಿನ್ ಸ್ಕೂಲ್ ಸಿಗ್ತು. ಅದೇ ದಾರೀಲಿ ಮುಂದೆ ಹೋಗು. ದೊಡ್ಡ ಹಂಪು ಬತ್ತು. ಮುಂದೆ ಹೋಗು. ಇನ್ನೊಂದು ಹಂಪು ಬತ್ತು. ಅಷ್ಟರಲ್ಲಿ ಒಂದು ಊರು ಬರ್ತು. ಹಂಗೆ ಸುಮಾರು ಮೂರು-ನಾಲ್ಕು ಹಂಪು ಸಗ್ತು. ಅಷ್ಟೊತ್ತಿಗೆ ಊರು ದಾಟಿರ್ತು. ಅದಾದಮೇಲೆ ಆಂಡ್ರೂ ವುಡ್ಕ್ರಾಫ್ಟ್ ಅಂತೆಂತೋ ಸಿಗ್ತು. ಅಲ್ಲಿ ಬಲಕ್ಕೆ ತಿರುಗು. ಅದೊಂದ್ ಸಣ್ಣ ರಸ್ತೆ. ಹಂಗೆ ಮುಂದೆ ಹೋದ್ರೆ ಒಂಥರಾ ಡೆಡ್ ಎಂಡ್ ಸಿಗ್ತು. ಆದ್ರೆ ಅದು ಡೆಡ್ ಎಂಡ್ ಅಲ್ಲ.. ಅಲ್ಲಿ ಬಲಕ್ಕೆ ತಿರುಗು. ಒಂದು ಮಡ್ ರೋಡ್ ಸಿಗ್ತು. ಅದೇ ದಾರೀಲಿ ಸೀದಾ ಹೋದ್ರೆ ಫೀಲ್ಡ್ ಸಿಗ್ತು.. ಅಲ್ಲೇ ಅವು ಪ್ಯಾರಾಸೇಲಿಂಗ್ ನಡ್ಸ್ತ. ನಿಂಗ ನಡ್ಕಂಡು ಬರಕ್ಕಾಗಿತ್ತಿಲ್ಲೆ... ಬೈಕ್ ತಗಂಡ್ ಹೋಗಕ್ಕಾಗಿತ್ತು..."

ನನಗೆ ತಿಳಿದಂತೆ ಸಂದೀಪ ಅಲ್ಲಿಗೆ ಹೋಗಿದ್ದು ಮಾರ್ಚ್ ೨೦೦೭ರಲ್ಲಿ. ಅಂದರೆ ಸುಮಾರು ಒಂದೂವರೆ ವರ್ಷದ ಹಿಂದೆ. ಆದರೆ ಆತ ಹೇಳಿದ ದಾರಿ ಮಾತ್ರ ಎಳ್ಳಷ್ಟೂ ತಪ್ಪಿರಲಿಲ್ಲ. ಭೇಷ್ ದೋಸ್ತ!!!

ಅಷ್ಟರಲ್ಲಿ ದಾರಿ ದೂರವಿದೆ ಎಂದು ತಿಳಿದ ಪ್ರವೀಣ ಈ ಕಾರ್ಯಕ್ರಮದ ಮುಂದಾಳತ್ವ ವಹಿಸಿದ್ದ ಮೈಂಡ್-ಟ್ರೀಯ ರವಿ ಎಂಬುವವರಿಗೆ ಫೋನ್ ಮಾಡಿ ಬಂದು ಕರೆದುಕೊಂಡು ಹೋಗುವಂತೆ ತಿಳಿಸಿದ್ದ. ಅವರು ತಮ್ಮ ಕಾರನ್ನು ತಂದು ಕರೆದುಕೊಂಡು ಹೋದರು. ನಾವು ಅಲ್ಲಿಗೆ ಹೋಗಿ ಮುಟ್ಟುವಷ್ಟರಲ್ಲಿ ೧೦ ಘಂಟೆಯಾಗಿತ್ತು. ನಡೆದುಕೊಂಡೇ ಹೋಗಿದ್ದರೆ ಖಂಡಿತ ಮಧ್ಯಾಹ್ನದ ಒಳಗೆ ನಾವು ಅಲ್ಲಿರುತ್ತಿರಲಿಲ್ಲ.

ನಂತರ ಅಲ್ಲಿ ನಮ್ಮ ಹೆಸರು ನೋಂದಾಯಿಸಿ ಕಾಯುತ್ತಾ ಕುಳಿತೆವು. ನಾವೇ ಕಡೆಗೆ ಹೋಗಿದ್ದರಿಂದ ನಾವು ತುಸು ಹೆಚ್ಚೇ ಕಾಯಬೇಕಾಯಿತು. ಅದಾದ ನಂತರ ಒಬ್ಬೊಬ್ಬರಾಗಿ ಹಾರಾಟ ನಡೆಸಿದೆವು.

Parasailing

ಮೊದಲಿಗೆ ಒಂದು ಜಾಕೆಟ್, ನಂತರ ಹೆಲ್ಮೆಟ್, ನಂತರ ಪ್ಯಾರಾಶೂಟ್... ಹೀಗೆ ಎಲ್ಲವನ್ನೂ ತೊಡಿಸಿ ಆದ ಮೇಲೆ ಮಾರುತಿ ಜಿಪ್ಸಿಯೊಂದರಲ್ಲಿ ಎಳೆಯುತ್ತಿದ್ದರು. ನಾಲ್ಕೈದು ಹೆಜ್ಜೆ ನಾವೂ ಓಡಬೇಕು. ಪ್ಯಾರಾಶೂಟ್ ಮೇಲೇರುತ್ತದೆ. ನಂತರ ನಾನು ಮೇಲೆ ತಿಳಿಸಿದಂತೆ ವಿಹಂಗಮ ನೋಟ. ಇದನ್ನು ಅನುಭವಿಸಿಯೇ ತಿಳಿಯಬೇಕು. ಸುಮಾರು ೧೦೦-೧೫೦ ಅಡಿ ಮೇಲೆ ಇರಬಹುದು (ಆಯೋಜಕರು ೩೦೦ ಅಡಿ ಎತ್ತರ ಎಂದು ಹೇಳುತ್ತಾರೆ, ಆದರೆ ಅದು ನಮಗಂತೂ ರಿಯಲಿಸ್ಟಿಕ್ ಅಂತ ಅನಿಸಲಿಲ್ಲ). ಎರಡು ನಿಮಿಷ ಹಕ್ಕಿಯಂತೆ ಬಾನಿನಲ್ಲಿ ಹಾರಾಡಿದ ಮೇಲೆ ಮತ್ತೆ ಭೂಮಿಗೆ. ಒಟ್ಟಿನಲ್ಲಿ ಒಂದು ಅಪೂರ್ವ ಅನುಭವ ನಮ್ಮದಾಗಿತ್ತು.


ಪ್ರತಿ ಶನಿವಾರ, ಭಾನುವಾರ ಅಲ್ಲಿ ಪ್ಯಾರಾಸೇಲಿಂಗ್ ಆಯೋಜಿಸುತ್ತಾರಂತೆ. ಒಬ್ಬರಿಗೆ ೩೫೦/- ರೂಪಾಯಿಗಳು. ನೀವೂ ಅಲ್ಲಿಗೆ ಹೋಗುವುದಾದರೆ ಸ್ವಂತ ವಾಹನ ತೆಗೆದುಕೊಂಡು ಸಂದೀಪ ಹೇಳಿದ ದಾರಿ ಅನುಸರಿಸಿ ಹೋಗುವುದು ಒಳ್ಳೆಯದು. ಬಿ.ಎಂ.ಟಿ.ಸಿ. ಬಸ್ಸಿನಲ್ಲಿಯೇ ಹೋಗುವುದಾದರೆ "ಬೂದಿಗೆರೆ" ಬಸ್ಸಿಗೆ ಹೋಗಬಹುದು. ೩೧೬ ಸೀರೀಸ್ ನ ಕೆಲವು ಬಸ್ಸುಗಳು ಹೋಗುತ್ತವೆ. ಮಂಡೂರಿಗಿಂತ ಸ್ವಲ್ಪ ಮುಂದೆ ಬಲಕ್ಕೆ ಹೋಗುವ ಕ್ರಾಸಿನಲ್ಲಿ ಇಳಿದುಕೊಳ್ಳಬೇಕು.

ಹೆಚ್ಚಿನ ಫೋಟೋಗಳಿಗಾಗಿ ಇಲ್ಲಿ ನೋಡಿ