ಮಂಗಳವಾರ, ಮೇ 27, 2008

ನಿರ್ಣಯ

ಇಂದು ಮಿಂಚಂಚೆಯಲ್ಲಿ ಬಂದ ಒಂದು ಕಥೆಯನ್ನು ಇಲ್ಲಿ ಬರೆಯುತ್ತಿದ್ದೇನೆ.

*****

ಒಂದು ಸಣ್ಣ ಪಟ್ಟಣದಲ್ಲಿ ಒಬ್ಬನು ಒಂದು ಮದ್ಯದಂಗಡಿಯನ್ನು (ಬಾರ್) ತೆರೆಯಲು ನಿರ್ಧರಿಸಿದ. ಆತ ತನ್ನ ಅಂಗಡಿಗೆ ಆಯ್ದುಕೊಂಡಿದ್ದ ಸ್ಥಳ ಒಂದು ದೇವಸ್ಥಾನದ ಎದುರಿನಲ್ಲಿತ್ತು. ಸಹಜವಾಗಿಯೇ ಇದು ಆ ದೇವಸ್ಥಾನದ ಆಡಳಿತ ಮಂಡಳಿಯ ಹಾಗೂ ಭಕ್ತರ ವಿರೋಧಕ್ಕೆ ಕಾರಣವಾಯಿತು. ಅವನ ಅಂಗಡಿಯನ್ನು ಮುಚ್ಚಿಸಬೇಕೆಂದು ಪ್ರತಿಭಟನೆಯೂ, ಅವನ ವ್ಯಾಪಾರಕ್ಕೆ ಹಾನಿಯಾಗಲೆಂದು ಪ್ರಾರ್ಥನೆಗಳೂ ಪ್ರಾರಂಭವಾದವು.

ದಿನಗಳುರುಳಿದವು. ಪಟ್ಟು ಬಿಡದ ಆ ವ್ಯಕ್ತಿಯ ಅಂಗಡಿಯು ಕಟ್ಟಿ ಮುಗಿಯುವ ಹಂತಕ್ಕೆ ಬಂದಿತ್ತು. ಅಂಗಡಿ ತೆರೆಯಲು ಇನ್ನು ಸ್ವಲ್ಪ ದಿನಗಳು ಉಳಿದಿವೆ ಎನ್ನುವಾಗ ಬಲವಾದ ಸಿಡಿಲು ಬಡಿದು ಆ ಕಟ್ಟಡ ಧ್ವಂಸವಾಯಿತು.

ದೇವಸ್ಥಾನದ ಜನರು ತಮ್ಮ ಅಭೀಷ್ಟ ಈಡೇರಿದವರಂತೆ ಕಂಡು ಬಂದರು. ಆದರೆ ಅವರ ಸಂತೋಷ ಅಲ್ಪಕಾಲದ್ದಾಗಿತ್ತು. ಆ ವ್ಯಕ್ತಿ ದೇವಸ್ಥಾನದ ಮಂಡಳಿಯ ಮೇಲೆ ಮೊಕದ್ದಮೆ ದಾಖಲಿಸಿದ. ಪ್ರತ್ಯಕ್ಷವಾಗಿಯೋ, ಪರೋಕ್ಷವಾಗಿಯೋ ದೇವಸ್ಥಾನದವರ ಸಾಂಘಿಕ ಪ್ರಾರ್ಥನೆಯೇ ತನ್ನ ಅಂಗಡಿಯ ನಾಶಕ್ಕೆ ಕಾರಣವೆಂಬುದು ಅವನ ಆಪಾದನೆಯಾಗಿತ್ತು.

ನ್ಯಾಯಾಲಯದ ಪ್ರಶ್ನೆಗೆ ಉತ್ತರವಾಗಿ ದೇವಾಲಯದ ಮಂಡಳಿಯು ಈ ಪ್ರಕರಣಕ್ಕೆ ತಾನು ಹೊಣೆಯಲ್ಲವೆಂದೂ, ತಮ್ಮ ಪ್ರಾರ್ಥನೆಗಳಿಗೂ ಆ ಕಟ್ಟಡದ ನಾಶಕ್ಕೂ ಯಾವುದೇ ಸಂಬಂಧವಿಲ್ಲವೆಂದೂ ವಾದಿಸಿತು. ಹೀಗೆ ಬಂದ ವಾದ-ಪ್ರತಿವಾದಗಳೆರಡನ್ನೂ ಅಭ್ಯಸಿಸಿದ ನ್ಯಾಯಾಧೀಶರ ತೀರ್ಪು ಹೀಗಿತ್ತು:
ಈ ಪ್ರಕರಣದ ಬಗ್ಗೆ ಏನು ನಿರ್ಧಾರ ತೆಗೆದುಕೊಳ್ಳಬೇಕು ಎಂದು ಇನ್ನೂ ನಿರ್ಧರಿಸಿಲ್ಲ. ಆದರೆ ದಾಖಲೆಗಳ ಮೂಲಕ ತಿಳಿದುಬರುವುದೇನೆಂದರೆ ಇಲ್ಲಿ ಇರುವವರು ಇಬ್ಬರು: ಪ್ರಾರ್ಥನೆಯ ಸಾಮರ್ಥ್ಯದಲ್ಲಿ ಬಲವಾಗಿ ನಂಬಿರುವ ಅಂಗಡಿಯ ಮಾಲೀಕ ಹಾಗೂ ಅದರಲ್ಲಿ ಒಂದಿನಿತೂ ನಂಬಿಕೆಯಿರದ ದೇವಾಲಯದ ಮಂದಿ.
*****

ಈ ಕಥೆಯನ್ನು ಕೇಳಿದರೆ ನಿಮಗೇನೆನಿಸುತ್ತದೆ?

ಸೋಮವಾರ, ಮೇ 26, 2008

ಅತಿ ಬುದ್ಧಿವಂತಿಕೆ ಹುಟ್ ದರಿದ್ರ!


ಮಾಜಿ ಪ್ರಧಾನಿಯ (ಅಲಿಯಾಸ್ ಅಸ್ಲಿ ಮಣ್ಣಿನ ಮಗ!) ಫೋಟೋ ನೋಡಿ ನಮ್ಮ ಅಜ್ಜಿ ಹೇಳಿದ ಮೇಲಿನ ಗಾದೆ ಮಾತು ಹಾಗೆ ನೆನಪಾಯಿತು!

ಶನಿವಾರ, ಮೇ 3, 2008

ಜೋಗದ ಸಿರಿ ಬೆಳಕಿನಲ್ಲಿ ಮಬ್ಬಾದ ಜಲಪಾತ

ವಿಶ್ವದ ಅತಿ ಎತ್ತರದ ಜಲಪಾತ ಯಾವುದು ಎಂದು ಯಾರನ್ನಾದರೂ ಕೇಳಿ ನೋಡಿ. ಬಹುತೇಕ ಜನರು ಏಂಜೆಲ್ ಎಂದು ಹೇಳುತ್ತಾರೆ. ಅದೇ ಒಬ್ಬ ಭಾರತೀಯನನ್ನುಈ ದೇಶದ ಅತಿ ಎತ್ತರದ ಜಲಪಾತ ಯಾವುದೆಂದು ಕೇಳಿ. ನಿಮಗೆ ಸರಿ ಉತ್ತರ ನೀಡುವವರು ಸಾವಿರಕ್ಕೊಬ್ಬರು ಸಿಕ್ಕರೂ ನೀವು ಅದೃಷ್ಟವಂತರೇ. ಇದೇನಪ್ಪ ಹೀಗೆ ಹೇಳ್ತಿದೀನಿ ಅಂದ್ಕೊಂಡ್ರಾ? ನಮ್ಮ ಕರ್ನಾಟಕದವ್ರಿಗೆನೋ ಗೊತ್ತಿರಬಹುದು. ಆದರೆ ನಾನು ಹೇಳಿದ್ದು ಭಾರತೀಯರ ಬಗ್ಗೆ. ಕರ್ನಾಟಕದವ್ರಲ್ವ, ನೀವೇ ಹೇಳಿ, ಯಾವುದು ಆ ಜಲಪಾತ? ಆಹ ಇದೆಂಥ ಪ್ರಶ್ನೆ ಅಷ್ಟು ಪ್ರಸಿದ್ಧ ಜಲಪಾತ ನಂಗೊತ್ತಿಲ್ದೆ ಏನು ಅಂತಿದೀರ? ಇರ್ಲಿ ಹೇಳ್ಬಿಡಿ... ಊಹುಂ ಕೇಳ್ಲಿಲ್ಲ.. ಸ್ವಲ್ಪ ಜೋರಾಗಿ ಹೇಳಿ... ಆಂ.. ಜೋಗ್ ಫಾಲ್ಸ್ ಅಂದ್ರಾ?
ಜೋಗದ ಸಿರಿ ಬೆಳಕಿನಲ್ಲಿ
ತುಂಗೆಯ ತೆನೆ ಬಳುಕಿನಲ್ಲಿ
ಸಹ್ಯಾದ್ರಿಯ ಲೋಹದದಿರ
ಉತ್ತುಂಗದ ನಿಲುಕಿನಲ್ಲಿ
ನಿತ್ಯಹರಿದ್ವರ್ಣ ವನದ
ತೇಗ ಗಂಧ ತರುಗಳಲ್ಲಿ
ನಿತ್ಯೋತ್ಸವ ತಾಯಿ ನಿತ್ಯೋತ್ಸವ

ಎಂಥ ಮಧುರ ಗೀತೆ ಅಲ್ವ? ಹಮ್.. ಅದಿರ್ಲಿ, ನೀವ್ ಹೇಳಿದ ಉತ್ತರ ತಪ್ಪು! ಅದ್ಕೇ ಹೇಳಿದ್ದು ಸಾವಿರಕ್ಕೊಬ್ಬರೂ ಸಿಗಲ್ಲ ಅಂತ. ಜೋಗ ನೋಡಕ್ಕೆ ಸುಂದರವಾಗಿರಬಹುದು, ಜಗತ್ಪ್ರಸಿದ್ಧ ಇರಬಹುದು, ಅದರ ಬಗ್ಗೆ ಕೆ.ಎಸ್. ನಿಸ್ಸಾರ್ ಅಹಮದ್ ಅವರು ಅದ್ಭುತವಾಗಿ ವರ್ಣಿಸಿ ಕವಿತೆ ಬರ್ದಿರಬಹುದು, ಮುಂಗಾರು ಮಳೆಯಲ್ಲಿ ಅಭೋ ಎನಿಸುವಂತೆ ಚಿತ್ರಿಸಿರಬಹುದು. ಹಾಗಂತ ಅದೇ ಎತ್ತರದ್ದು ಅನ್ನೋಕಾಗುತ್ತಾ? ನೀವೇ ಹೇಳಿ.

ಜೋಗ ಅಲ್ದೇ ಹೋದ್ರೆ ಮತ್ತಿನ್ಯಾವ ಜಲಪಾತ ಅದು ಅಂತಿದೀರಾ? ಹಾಗೆ ಬನ್ನಿ ದಾರಿಗೆ; ಅದರ ಹೆಸರು ಕುಂಚಿಕಲ್ ಜಲಪಾತ ಅಂತ, ನಂಗೂ ಗೊತ್ತಿರ್ಲಿಲ್ಲ; ಹೀಗೇ ಗೂಗ್ಲಿಂಗ್ ಮಾಡ್ತಿರ್ಬೇಕಾದ್ರೆ ಸಿಗ್ತು. ಕೆಟ್ಟ ಕುತೂಹಲ ನೋಡಿ, ಮತ್ತಷ್ಟು ವಿವರ ಹುಡುಕಿದೆ. ವಿಕಿಪೀಡಿಯಾದಲ್ಲಿ ಆಗುಂಬೆಯ ಹತ್ರ ಇದೆ, ವರಾಹಿ ನದಿಯ ಜಲಪಾತ ಅಂತ ಗೊತ್ತಾಯ್ತು. ಮ್ಯಾಪ್ ನೋಡಿದೆ. ಹೊಸಂಗಡಿ ಮತ್ತು ಮಾಸ್ತಿಕಟ್ಟೆ ಮಧ್ಯೆ ಎಲ್ಲೋ ಬರುತ್ತೆ ಅಂತ ತಿಳೀತು. ಹಾಗೆ ಒಂದು ಫೋಟೋ ಇದ್ರೆ ನೋಡೋಣ ಅಂತ ಗೂಗಲ್ ಇಮೇಜ್ ಸರ್ಚ್ ಮಾಡಿದ್ರೆ ಹೇಳ್ಕೊಳ್ಳಕ್ಕಾದ್ರೂ ಒಂದೇ ಒಂದು ಫೋಟೋ ಸಿಗ್ಬಾರ್ದಾ?? (ನನ್ನದೊಂದು ವಿನಂತಿ: ಕುಂಚಿಕಲ್ ಜಲಪಾತದ ಚಿತ್ರ ನಿಮ್ಮಲ್ಲಿ ಯಾರ ಬಳಿಯಾದರೂ ಇದ್ದರೆ ದಯವಿಟ್ಟು ವಿಕಿಪೀಡಿಯಾದಲ್ಲಿ ಸೇರಿಸಿ)

ಹೋಗಲಿ, ಇದಕ್ಕೆ ಕಾರಣ ಏನಿರಬಹುದು? ೧೪೯೩ ಅಡಿ ಎತ್ತರದಿಂದ ಧುಮ್ಮಿಕ್ಕುವ ಭಾರತದ ಅತಿ ಎತ್ತರದ ಜಲಪಾತದ ಹೆಸರನ್ನೇ ಎಷ್ಟೋ ಜನ ಕೇಳಿಲ್ಲ ಅಂದ ಮೇಲೆ ನಮ್ಮ ಸರ್ಕಾರ ಏನ್ ಮಾಡ್ತಿದೆ? ಜೋಗಕ್ಕಾದ್ರೆ ಸುಮಾರು ೧ ಕಿಲೋಮೀಟರ್ ದೂರದವರೆಗೆ ರಾಷ್ಟ್ರೀಯ ಹೆದ್ದಾರಿ ಇದೆ. ಕುಂಚಿಕಲ್ಲಿಗೆ? ಮೊದಲೇ ಘಾಟಿ ಹತ್ರ ಇರೋ ಜಾಗ, ಅಂಥದ್ರಲ್ಲಿ ರಸ್ತೆ ಬೇರೆ ಸರಿ ಇಲ್ಲ ಅಂದ್ರೆ ಯಾರ್ ಹೋಗ್ತಾರೆ ಹೇಳಿ? ಇನ್ನು ಚಾರಣಕ್ಕೆ ಹೋಗುವವರಿಗಾದರೂ ಆ ಸ್ಥಳದ ಬಗ್ಗೆ ಮಾಹಿತಿ ಬೇಡವೆ? ಕರ್ನಾಟಕ ಪ್ರವಾಸೋದ್ಯಮ ಇಲಾಖೆಯ ದೃಷ್ಟಿಗೆ ಇನ್ನೂ ಕುಂಚಿಕಲ್ ಜಲಪಾತ ಬಿದ್ದಿಲ್ವೆ? ನಮ್ಮ ಸುತ್ತಮುತ್ತಲಿನ ಸ್ಥಳಗಳು ನಮಗೇ ಗೊತ್ತಿಲ್ಲದಿದ್ದರೆ ಇತರರಿಗೆ ತಿಳಿಯುವುದಾದರೂ ಹೇಗೆ? ಜೋಗದ ಸಿರಿ ಬೆಳಕಿನಲ್ಲಿ ಇಂಥ ಎಷ್ಟೋ ಜಲಪಾತಗಳು ಮಬ್ಬಾಗಿವೆ. ಇಷ್ಟು ಸುಂದರ ಪರಿಸರವನ್ನು ಇಲ್ಲೇ ಇಟ್ಟುಕೊಂಡು ಪ್ರವಾಸಕ್ಕೆಂದು ಯೂರೋಪ್, ಅಮೇರಿಕಾ, ಸ್ವಿಝರ್ಲೆಂಡ್ ಗೆ ಹೋಗಿ ಬರುವ ಐಷಾರಾಮಿಗಳಿಗೆ ಏನು ಹೇಳಬೇಕು? ಹಿತ್ತಲ ಗಿಡ ಮದ್ದಲ್ಲ ಎಂಬುದು ಸುಳ್ಳಲ್ಲ! ಏನಂತೀರಾ?

ಶುಕ್ರವಾರ, ಏಪ್ರಿಲ್ 18, 2008

ಮನ್ನಣೆ

ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದ ಸೋನಿಯಾ ಔರ್ ಸಾನಿಯಾ ಎಂಬ ಲೇಖನ ನೋಡಿ ನನಗೆ ಈ ಘಟನೆ ನೆನಪಾಯಿತು.

*****

ಅದೊಂದು ಶಾಲೆ. ಅಲ್ಲೊಂದು ಕಂಠಪಾಠ ಸ್ಪರ್ಧೆ. ಭಾಗವಹಿಸಲು ಇಷ್ಟವಿದ್ದವರು ತಮ್ಮ ತರಗತಿಯ ಪಠ್ಯದಲ್ಲಿರುವ ನಿಗದಿಪಡಿಸಿದ ಕನ್ನಡ ಅಥವಾ ಹಿಂದೀ ಪದ್ಯವನ್ನು ಬಾಯಿಪಾಠ ಮಾಡಿ ಹೇಳಬೇಕಾಗಿತ್ತು. ಚೆನ್ನಾಗಿ ಹಾಡು ಹೇಳುವವರಿಗೆ ಸರಿಯಾಗಿ ಕಂಠಪಾಠ ಮಾಡಲು ಕಷ್ಟವಾಗುತ್ತಿತ್ತು; ಕಂಠಪಾಠ ಮಾಡಲು ಎತ್ತಿದ ಕೈ ಎನ್ನುವಂಥವರಿಗೆ ಹಾಡಲು ಬರುತ್ತಿರಲಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆ ಪೈಪೋಟಿ ಏರ್ಪಟ್ಟಿತ್ತು.

ಹೀಗಿರುವಾಗ ಆ ದಿನ ಬಂದೇ ಬಿಟ್ಟಿತು. ಪ್ರೇಕ್ಷಕರಾಗಿ ಎಲ್ಲರೂ ಜಮಾಯಿಸಿದರು. ಎಲ್ಲ ಶಿಕ್ಷಕ-ಶಿಕ್ಷಕಿಯರೂ ಬಂದು ಸೇರಿದರು. ಒಬ್ಬೊಬ್ಬರಾಗಿ ಬಂದು ಪದ್ಯಗಳನ್ನು ತಮಗೆ ತಿಳಿದಷ್ಟು ಚೆನ್ನಾಗಿ ಹೇಳಲಾರಂಭಿಸಿದರು. ಕೆಲವರಿಗೆ ಸಭಾಕಂಪದಿಂದಾಗಿ ಕಲಿತಿದ್ದ ಪದ್ಯ ಮರೆತು ಹೋಯಿತು. ಕೆಲವರು ಕಲಿತಿದ್ದೇ ಸುಳ್ಳು ಎನ್ನುವಂತೆ ಹೇಳಿ ಹೋದರು. ಇನ್ನೂ ಕೆಲವರು ಪದ್ಯಕ್ಕೆ ರಾಗ ಹಾಕುವ ಭರದಲ್ಲಿ ಪದ್ಯ ಮರೆತರು. ಕೆಲವರಿಗೆ ಪದ್ಯ ಹೇಳುತ್ತ ಹೇಳುತ್ತ ನಿಗದಿಪಡಿಸಿದ್ದ ಸಮಯ ಹೋಗಿದ್ದೇ ತಿಳಿಯಲಿಲ್ಲ.

ಹೀಗೇ ಸಾಗುತ್ತಿತ್ತು ಸ್ಪರ್ಧೆ... ಒಬ್ಬ ಬಾಲಕ ಪದ್ಯವೊಂದನ್ನು ಕಥೆ ಹೇಳಿದಂತೆ ಹೇಳಿ ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದ. ಶಾಲೆಯಲ್ಲಿ ಹಾಡು ಹೇಳಲು ಪ್ರಸಿದ್ಧವಾಗಿದ್ದ ಒಬ್ಬ ಬಾಲಕಿ ಬಂದಳು. ಅವಳ ಸುಶ್ರಾವ್ಯವಾದ ಕಂಠಕ್ಕೆ ಎಲ್ಲರೂ ತಲೆದೂಗಲಾರಂಭಿಸಿದರು. ತೃತೀಯ ಭಾಷೆಯನ್ನಾಗಿ ಸಂಸ್ಕೃತವನ್ನು ತೆಗೆದುಕೊಂಡಿದ್ದರೂ ಹಿಂದಿಯ "ಮೇರಾ ನಯಾ ಬಚಪನ್" ಪದ್ಯವನ್ನು ಆಕೆ ಹೇಳಿದ ಪರಿ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಆದರೆ ಸಮಯಾಭಾವದಿಂದ ಆಕೆಗೆ ಕೂಡ ಎರಡೇ ಸೊಲ್ಲು ಹೇಳಲು ಸಮಯ ಸಿಕ್ಕಿತು.

ಮರುದಿನ ತರಗತಿಗೆ ಬಂದ ಮುಖ್ಯೋಪಾಧ್ಯಾಯರು ಕೇಳಿದರು: "ನಿನ್ನೆ ಯಾಕೆ ಎಷ್ಟೊಂದು ಜನ ಭಾಗವಹಿಸಿರಲಿಲ್ಲ?" ಎಲ್ಲರಿಂದ ಮೌನವೇ ಉತ್ತರವಾಗಿತ್ತು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆಯುತ್ತಿದ್ದವರೂ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಪದ್ಯ ಕಂಠಪಾಠ ಮಾಡಲು ಬರಲಿಲ್ಲ ಎನ್ನುವುದು ಯಾರೂ ನಂಬದ ವಿಷಯವಾಗಿತ್ತು. ಆಗ ಮುಖ್ಯೋಪಾಧ್ಯಾಯರು ವಿವರಿಸಿದರು: "ಹಾಡುವುದು, ಭಾಗವಹಿಸುವುದು ಮುಖ್ಯವೇ ಹೊರತು ಗೆಲ್ಲುವುದಲ್ಲ. ನಿನ್ನೆ ಇದ್ದಿದ್ದು ಹಾಡು ಹೇಳುವ ಸ್ಪರ್ಧೆಯಲ್ಲ; ಕಂಠಪಾಠ ಸ್ಪರ್ಧೆ. ಅದರಲ್ಲಿ ನೀವು ಪದ್ಯವನ್ನು ಕಲಿತು ಹೇಳುತ್ತೀರಿ ಎನ್ನುವುದು ಮುಖ್ಯವೇ ಹೊರತು ನೀವು ಎಷ್ಟು ರಾಗವಾಗಿ ಹಾಡುತ್ತೀರಿ ಎನ್ನುವುದಲ್ಲ".

ಉತ್ತಮವಾಗಿ, ಸಂಪೂರ್ಣವಾಗಿ ಹಾಡು ಹೇಳಿದ್ದ ಒಬ್ಬ ಬಾಲಕಿಗೆ ಪ್ರಥಮ ಬಹುಮಾನ ಬಂದಿತ್ತು. ಕಥೆಯಂತೆ ಹೇಳಿ ಹೋಗಿದ್ದ ಬಾಲಕನಿಗೆ ಎರಡನೆಯ ಬಹುಮಾನ ಬಂದಿದ್ದರೆ, ರಾಗವಾಗಿ ಹೇಳಿದ್ದ ಆ ಹುಡುಗಿಗೆ ಮೂರನೆಯ ಬಹುಮಾನ ಬಂದಿತ್ತು. ಎಲ್ಲರಿಗೂ ಆಶ್ಚರ್ಯ! ನಿಜಕ್ಕೂ ರಾಗಕ್ಕಿಂತ ಕಂಠಪಾಠವೇ ಬಹುಮಾನದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸರಿಯಾಗಿ ಪದ್ಯ ಬಂದರೂ ಭಾಗವಹಿಸಿರದಿದ್ದವರ ಮುಖ ಬಾಡಿತ್ತು.

*****

ಹಾಗೆ ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಶಾಲೆಯ ಹೆಸರು ಮೈಸೂರು ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ಟ್ (ಎಂ.ಕೆ.ಇ. ಟಿ/ಎಂಕೆಟಿ). ಹರಿಹರದಲ್ಲಿ ಯಾವ ಶಾಲೆ ಒಳ್ಳೆಯದು ಎಂದು ಯಾರನ್ನೇ ಕೇಳಿದರೂ ತೋರಿಸುತ್ತಿದ್ದ ಶಾಲೆ. ನಮಗೇನು ಗೊತ್ತು ಅದರ ಬೆಲೆ? ನಮ್ಮ ಬಾಯಲ್ಲಿ ಎಂಕೆಟಿ ಎಂಬುದು "ಮಂಡಕ್ಕಿ ಖಾರ ಟೀ" ಆಗಿತ್ತು. ಏನೇ ಇರಲಿ, ಪ್ರತಿಭೆಯನ್ನು ಗುರುತಿಸುತ್ತಿದ್ದ, ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಂಥ ಶಾಲೆಯಲ್ಲಿ ಓದಿದ್ದಕ್ಕೆ ನನಗೆ ಹೆಮ್ಮೆಯಿದೆ.

ಬುಧವಾರ, ಏಪ್ರಿಲ್ 2, 2008

ಹುದ್ಧಾರ ಹಾಗೋದು ಈಗೆ...

ಈಗಷ್ಟೇ ನಡೆದಿದ್ದು. ಇರುವುದನ್ನು ಇರುವ ಹಾಗೇ ಹಾಕಿದ್ದೇನೆ (ಹೆಸರು ಮಾತ್ರ ತೆಗೆದಿದ್ದೇನೆ).
6:19 PM Friend: namaskara....................
me: namaskara
Friend: hen guru samachara............
6:21 PM me: "hen" -- yaava language alli?
Friend: yavudadaru ayetu........................
6:22 PM me: kannadadalli henu andre taleli beleyuttalla.. adu..
6:23 PM Friend: gotilla...
oh nate dt henu stupid......
k hellideyo wt r u dng
6:24 PM me: hellideyo andre enu?
Friend: ayyo i'm asking n which place u r in now
me: i'm in my room
6:25 PM Friend: istu bega hoda ..........
me: bandu ondu ghante aaytu
6:29 PM Friend: hen ketta krlasa madthedeyo room alli

hoge henu ketta kelasa madthedeyo..................
me: henu?
6:30 PM Friend: kannada hartha hagalva
me: artha aagiddakke keliddu.. enu henu madhya iro difference artha maadko..
6:32 PM Friend: hanadru thilko......answer madu aste.........
6:33 PM k gunda going to home ..........................msg u tom k....................bye dumma................

ನೀವೇ ಏಳಿ, ಈಗಾದ್ರೆ ಕನ್ನಡ ಹುದ್ಧಾರ ಹಾಗುತ್ತಾ?