ಬುಧವಾರ, ಅಕ್ಟೋಬರ್ 24, 2012

ಬೆಳದಿಂಗಳ ಬೇಗೆ

ಸರಿಯಿದೆಯೆ ಈ ಕ್ರಮ ಹೇಳೆಲೋ ಚಂದ್ರಮ
ಪರಿತಾಪದಲ್ಲಿಯೂ ನಿನಗೇಕೆ ಸಂಭ್ರಮ

ಚೆಲುವಿನ ಹೂವು ಕೂಡ ಕಪ್ಪಾಗಿ ಕಂಡಿದೆ
ಮಿನುಗುವ ತಾರೆಯೂ ಮಂಕಾಗಿ ಹೋಗಿದೆ
ಏಕೊ ಏನೊ ನನ್ನ ಸಖಿಯ ಮುಖ ಬಾಡಿದೆ
ಅದರಿಂದ ನನ್ನ ಮನದಿ ಬೇಸರವು ಮೂಡಿದೆ

ಮತ್ತೆ ಮತ್ತೆ ಕೇಳುವಂಥ ಮಾಧುರ್ಯದ ದನಿ
ಕೇಳದಂತೆ ಆಗಿದೆ ಮೌನವಾಗಿ ಕೂತಿದೆ
ತಿರುಗಿ ತಿರುಗಿ ನೋಡುವಂಥ ಸೌಂದರ್ಯದ ಖನಿ
ಧುಮ್ಮಿಕ್ಕಿ ಹರಿದಿದೆ ಧಾರೆಯಾಗಿ ಕಂಬನಿ

ಕಾರಣವೆ ಸಿಗದ ರೀತಿ ಮನಸಿನಲ್ಲಿ ತತ್ತರ
ಬೆಳದಿಂಗಳು ಕೂಡ ನನಗೆ ಬೇಗೆಯಾಗಿ ಹೋಗಿದೆ
ನನ್ನ ಮನದ ಪ್ರಶ್ನೆಯ ಕೇಳಿ ನಿನ್ನ ಹತ್ತಿರ
ಕಾದು ಕುಳಿತೆ ಚಂದ್ರಮ ಬರಲಿ ನಿನ್ನ ಉತ್ತರ

6 ಕಾಮೆಂಟ್‌ಗಳು:

ಈಶ್ವರ ಹೇಳಿದರು...

ಹರಿ, ಚೆನ್ನಾಗಿದೆ. ಚಂದ್ರಮನಲ್ಲಿ ಕೇಳುವ ಪ್ರಶ್ನೆ ಯಾವುದಾದರೂ ಚಂದ್ರಮುಖಿಯಲ್ಲಿ ಕೇಳಬಹುದಿತ್ತು.

Harisha - ಹರೀಶ ಹೇಳಿದರು...

ಚಂದ್ರಮುಖಿಯ ಮುಖ ಬಾಡಿರುವುದರಿಂದಲೇ ಅಲ್ಲವೆ ಪ್ರಶ್ನೆ ಕೇಳುವ ಪರಿಸ್ಥಿತಿ ಒದಗಿದ್ದು? ಅದಕ್ಕೇ ಚಂದ್ರನಲ್ಲಿ ಕೇಳಿದೆ‌ :)

prashasti ಹೇಳಿದರು...

ಮಸ್ತೈತ್ರಿ ಹರೀಶ್ ಭಾಯ್.. ಭಾಳ ಸಮಯ ಆದ್ಮೇಲೆ ಬರ್ಯಕ್ ಹತ್ತೀರಿ.. ಏನ್ಸಮಚಾರ ? :ಫ್

sunaath ಹೇಳಿದರು...

ಹರೀಶ,
ಚಂದ್ರಮುಖಿಯ ನಗೆಬೆಳದಿಂಗಳೇ ನಿಮ್ಮ ಪರಿತಾಪಕ್ಕೆ ಪರಿಹಾರವಾಗಲಿದೆ!

ಸೋಮಶೇಖರ ಹುಲ್ಮನಿ ಹೇಳಿದರು...

ಹರೀಶ
ಯಾಕೋ ನಿನ್ನ ವಿರಹ ವೇದನೆ ಜಾಸ್ತಿ ಆಗಿರೋ ತರ ಕಾಣ್ತಿದೆ
ಬೇಗ ಚಂದ್ರಮುಖಿಯ ಮನವೊಲಿಸಿ ಮನದ ಬೇಗೆ ಕಮ್ಮಿ ಮಾಡಿಕೊ ...
ಚೆನ್ನಾಗಿದೆ ಕಣೋ

ಅನಾಮಧೇಯ ಹೇಳಿದರು...

Chennagide guruve