ಬುಧವಾರ, ಏಪ್ರಿಲ್ 2, 2008

ಹುದ್ಧಾರ ಹಾಗೋದು ಈಗೆ...

ಈಗಷ್ಟೇ ನಡೆದಿದ್ದು. ಇರುವುದನ್ನು ಇರುವ ಹಾಗೇ ಹಾಕಿದ್ದೇನೆ (ಹೆಸರು ಮಾತ್ರ ತೆಗೆದಿದ್ದೇನೆ).
6:19 PM Friend: namaskara....................
me: namaskara
Friend: hen guru samachara............
6:21 PM me: "hen" -- yaava language alli?
Friend: yavudadaru ayetu........................
6:22 PM me: kannadadalli henu andre taleli beleyuttalla.. adu..
6:23 PM Friend: gotilla...
oh nate dt henu stupid......
k hellideyo wt r u dng
6:24 PM me: hellideyo andre enu?
Friend: ayyo i'm asking n which place u r in now
me: i'm in my room
6:25 PM Friend: istu bega hoda ..........
me: bandu ondu ghante aaytu
6:29 PM Friend: hen ketta krlasa madthedeyo room alli

hoge henu ketta kelasa madthedeyo..................
me: henu?
6:30 PM Friend: kannada hartha hagalva
me: artha aagiddakke keliddu.. enu henu madhya iro difference artha maadko..
6:32 PM Friend: hanadru thilko......answer madu aste.........
6:33 PM k gunda going to home ..........................msg u tom k....................bye dumma................

ನೀವೇ ಏಳಿ, ಈಗಾದ್ರೆ ಕನ್ನಡ ಹುದ್ಧಾರ ಹಾಗುತ್ತಾ?

ಮಂಗಳವಾರ, ಮಾರ್ಚ್ 25, 2008

ಕನ್ನಡ ಕನ್ನಡ ಕನ್ನಡವೆಂದುಲಿ...

ಮಾರ್ಚ್ ೧೬ ರ ಬ್ಲಾಗರ್ಸ್ ಮೀಟಿಗೆ ಹೋಗಿ ಬಂದಾಗಿನಿಂದ ಒಂದು ವಿಷಯ ನನ್ನ ಮನಸ್ಸಿನಲ್ಲಿ ಕೊರೆಯುತ್ತಿದೆ. ನನಗೆ ಹೇಳಬೇಕೆನಿಸುತ್ತಿರುವುದನ್ನು ಹೇಳಿಬಿಡುತ್ತೇನೆ. ಅಲ್ಲಿಗೆ ಬಂದಿದ್ದ ಪ್ರೊ. ಕೀ. ರಂ. ನಾಗರಾಜ್ ಅವರಿಂದ ವ್ಯಕ್ತವಾದ ಅಭಿಪ್ರಾಯದ ಸಾರಾಂಶ ಹೀಗಿದೆ:
ಒಂದು ಭಾಷೆ ಜನಬಳಕೆಗೆ ಸರಿಹೊಂದುವಂತಾಗಲು ಅದರಲ್ಲಿನ ಅಕ್ಷರಗಳ ಸಂಖ್ಯೆ ಕಡಿಮೆಯಿರಬೇಕು. ಉದಾಹರಣೆಗೆ ಕೇವಲ ೨೬ ಅಕ್ಷರಗಳನ್ನು ಹೊಂದಿರುವ ಇಂಗ್ಲಿಷ್ ಇಂದು ವಿಶ್ವದಾದ್ಯಂತ ಮಾತನಾಡಲ್ಪಡುತ್ತಿದೆ. ಕನ್ನಡದಲ್ಲಿ ಅನವಶ್ಯಕವಾದ ಅನೇಕ ಅಕ್ಷರಗಳಿವೆ. ಎಲ್ಲ ಮಹಾಪ್ರಾಣಗಳೂ ಅನಾವಶ್ಯಕವಾಗಿವೆ. ಇನ್ನೂ ಕೆಲವು ಅಕ್ಷರಗಳೂ ಕೂಡ ನಿರುಪಯುಕ್ತವಾಗಿವೆ. ಎಲ್ಲ ಸೇರಿ ಇಂತಹ ೧೭ ಅಕ್ಷರಗಳಿವೆ. ಯಾವ ಪದಗಳಲ್ಲಿ ಮಹಾಪ್ರಾಣಗಳಿವೆಯೋ ಅವು ಕನ್ನಡ ಪದಗಳಲ್ಲ, ಬೇರೆ ಭಾಷೆಯಿಂದ ಬಂದ ಪದಗಳು. ಹೀಗಾಗಿ ಈ ಅಕ್ಷರಗಳನ್ನು ಕನ್ನಡ ವರ್ಣಮಾಲೆಯಿಂದ ತೆಗೆಯಬೇಕು.
ಮೊದಲ ನೋಟಕ್ಕೆ ಅವರ ಮಾತಿನಲ್ಲಿ ಹುರುಳಿದೆ ಎಂದೆನಿಸುತ್ತದೆ. ಮಹಾಪ್ರಾಣಾಕ್ಷರಗಳು ಕನ್ನಡದ ಬಹುತೇಕ ಪದಗಳಲ್ಲಿಲ್ಲ. ಅವೇನಿದ್ದರೂ ಸಂಸ್ಕೃತ ಪದಗಳಲ್ಲಿ ಬರುವಂಥವು. ಇವುಗಳೆಲ್ಲವನ್ನು ಬಳಸುವ ಅಗತ್ಯವಿಲ್ಲ. ಹಾಗಾಗಿ ಕನ್ನಡ ವರ್ಣಮಾಲೆಯಿಂದ ೧೭ ಅಕ್ಷರಗಳು (ಸುಮಾರು ಮೂರನೇ ಒಂದು ಭಾಗ) ಕಡಿಮೆಯಾದರೆ ಕನ್ನಡ ಕಲಿಯುವುದು ಸುಲಭವಾಗುತ್ತದೆ. ಆದರೆ ವಿಚಾರ ಮಾಡಿ ನೋಡಿ: ಇಂಗ್ಲಿಷಿಗಿಂತ ಎರಡಕ್ಷರ ಕಡಿಮೆ ಹೊಂದಿರುವ ಗ್ರೀಕ್ ಭಾಷೆ ಏಕೆ ಹೆಚ್ಚಾಗಿ ಬಳಕೆಯಲ್ಲಿಲ್ಲ? ೨೦೦೦೦ಕ್ಕೂ ಹೆಚ್ಚು ಅಕ್ಷರಗಳನ್ನು ಹೊಂದಿರುವ ಜಪಾನೀ ಭಾಷೆ ಇನ್ನೂ ಹೇಗೆ ಬಳಕೆಯಲ್ಲಿದೆ? ಅದಕ್ಕೂ ಹೆಚ್ಚು ಅಕ್ಷರಗಳಿರುವ ಚೀನೀ ಭಾಷೆ ಹೇಗೆ ಪ್ರಪಂಚದಲ್ಲೇ ಅತಿ ಹೆಚ್ಚು ಜನರು ಮಾತನಾಡುವ ಭಾಷೆಯಾಗಿದೆ? ಇವೆಲ್ಲವನ್ನು ಗಮನಿಸಿದರೆ ಒಂದು ಅಂಶ ಸ್ಪಷ್ಟ: ಒಂದು ಭಾಷೆಯ ಬಳಕೆಗೂ, ಅದರಲ್ಲಿನ ವರ್ಣಮಾಲೆಗೂ ಯಾವ ಸಂಬಂಧವೂ ಇಲ್ಲ.

ಇರಲಿ, ಆ ೧೭ ಅಕ್ಷರಗಳನ್ನು ತೆಗೆದಿದ್ದಾರೆ ಎಂದುಕೊಂಡರೆ, ಸಂಸ್ಕೃತ ಶಬ್ದಗಳನ್ನು ಹೇಗೆ ಬರೆಯುತ್ತಾರೆ? ಒಂದೊಂದು ಅಕ್ಷರಕ್ಕೂ ಬೆಲೆ ಕೊಡುವ ಸಂಸ್ಕೃತ ಪದಗಳನ್ನು ಸಂಕ್ಷೇಪಿಸಿದ ಕನ್ನಡ ವರ್ಣಮಾಲೆಯ ಸಹಾಯದಿಂದ ಬರೆಯುವುದು ಅಸಾಧ್ಯ. ಸಂಸ್ಕೃತ ಪದಗಳು ಕನ್ನಡ ಪದಗಳನ್ನು ಮರೆಸಿವೆ ನಿಜ. ಆದರೆ ಕನ್ನಡದಲ್ಲಿ ಸಂಸ್ಕೃತ ಪದಗಳನ್ನು ಉಪಯೋಗಿಸದೆ ಮಾತನಾಡುವುದು ಸಾಧ್ಯವೇ? ನಾವು ಬೇಡ ಬೇಡವೆಂದರೂ ನಮಗೇ ಗೊತ್ತಿಲ್ಲದೆ ನೂರಾರು ಪರಭಾಷೆಯ ಪದಗಳನ್ನು ನಾವು ಉಪಯೋಗಿಸುತ್ತೇವೆ. ನಾವು ದಿನನಿತ್ಯ ಬಳಸುವ ಸೂರ್ಯ, ಚಂದ್ರ, ವಿಮಾನ ಮುಂತಾದವುಗಳಿಗೆ ಅಚ್ಚ ಕನ್ನಡದ ಪದಗಳು (ನೇಸರ, ತಿಂಗಳು, ಗಾಳಿತೇರು) ಎಷ್ಟೊಂದು ಜನರಿಗೆ ತಿಳಿದೇ ಇಲ್ಲ. ಇನ್ನು ನೀರು, ಚಿತ್ತಾರ ಇಂತಹ ಪದಗಳನ್ನು ತದ್ಭವಗಳು ಎಂದು ಕನ್ನಡಕ್ಕೆ ಇಳಿಸಿಬಿಡುತ್ತೇವೆ. (ಇವುಗಳಿಗೆ ಅಚ್ಚ ಕನ್ನಡ ಪದಗಳು ನನಗೂ ತಿಳಿದಿಲ್ಲ, ನಿಮಗೆ ತಿಳಿದಿದ್ದರೆ ತಿಳಿಸಿ). ಅಚ್ಚ ಕನ್ನಡದಲ್ಲಿ ಹಾರೈಕೆಗಳನ್ನು ಹೇಳುವುದು ಅದೆಷ್ಟು ಮಂದಿಗೆ ತಿಳಿದಿದೆಯೋ ದೇವರೇ ಬಲ್ಲ. ಅಷ್ಟಕ್ಕೂ ಸಂಸ್ಕೃತ ಪದಗಳನ್ನು ಉಪಯೋಗಿಸಬಾರದು ಎಂದೇನಿದೆ? ಇಂಗ್ಲಿಷ್ ಸಹ ಇತರ ಭಾಷೆಗಳಿಂದ ಪದಗಳನ್ನು ಎರವಲು ಪಡೆದೇ ಬೆಳೆದಿರುವುದು (ಉದಾ: ಮಾತೃ -> Mother, ಪಿತೃ -> Father, ಭ್ರಾತೃ -> Brother), ಅಲ್ಲವೇ? ಮನುಷ್ಯನೇ ಆಗಲಿ ಭಾಷೆಯೇ ಆಗಲಿ ಬೆಳೆಯುವುದು ಎಲ್ಲರನ್ನೂ, ಎಲ್ಲವನ್ನೂ ಒಪ್ಪಿಕೊಳ್ಳುವ ವಿಶಾಲ ಮನೋಭಾವವಿದ್ದಾಗ ಮಾತ್ರ. ಇದು ನನ್ನದು ಅದು ನಿನ್ನದು ಎಂಬ ಸಂಕುಚಿತ ಮನೋಭಾವದಿಂದಲ್ಲ.

ಕನ್ನಡ ಮಾತನಾಡುವವರು/ಮಾತನಾಡಬೇಕಾದವರು ಯಾರು? ನಾವು ತಾನೆ? ಬೆಂಗಳೂರಿನಲ್ಲಿ "ತಮಿಳ್ ತೆರಿಮಾ" ಎಂದು ಕೇಳಿದರೆ "ತೆರಿದು" ಎನ್ನುವ ಕನ್ನಡಿಗರು ಸಿಗುತ್ತಾರೆಯೇ ಹೊರತು "ಇಲ್ಲ" ಎನ್ನುವವರೆಷ್ಟು ಮಂದಿ? ಕನ್ನಡ ವರ್ಣಮಾಲೆಯನ್ನು ಅಳಿಸಬೇಕೋ ಅಥವಾ ಉಳಿಸಿ, ಬೆಳೆಸಬೇಕೋ ಎಂಬುದು ನಮ್ಮ ನಿಮ್ಮ ವಿಚಾರಕ್ಕೆ ಬಿಟ್ಟ ವಿಷಯ. "ಶುಭದಿನ" ಎಂಬ ಸುಂದರ ಪದವನ್ನು "ಸುಬದಿನ" ಎಂದು ಬರೆದು ಹಾಳುಗೆಡವಲು ನನಗಂತೂ ಇಷ್ಟವಿಲ್ಲ... ನಲ್ನಾಳು... ಅರ್ಥವಾಗಲಿಲ್ಲವೇ? ಶುಭದಿನ!

ಅನುಲೇಖ: ಇಲ್ಲಿ ನಾನು ಬರೆದಿರುವುದು ನನ್ನ ವೈಯಕ್ತಿಕ ಅಭಿಪ್ರಾಯ. ಈ ಲೇಖನದ ಹಿಂದೆ ಯಾರಿಗೂ ನೋವುಂಟು ಮಾಡುವ ಇರಾದೆಯಿಲ್ಲ. ಹಾಗೇನಾದರೂ ಯಾರದ್ದಾದರೂ ಮನಸ್ಸಿಗೆ ನೋವಾಗಿದ್ದಲ್ಲಿ ದಯವಿಟ್ಟು ಕ್ಷಮೆಯಿರಲಿ.

ಸೋಮವಾರ, ಮಾರ್ಚ್ 24, 2008

ಒಗ್ಗಟ್ಟು - ಧೈರ್ಯ

ಒಗ್ಗಟ್ಟಿಲ್ಲಿ ಬಲವಿದೆ ಎಂಬುದು ನಮಗೆಲ್ಲ ತಿಳಿದಿರುವ ಮಾತು. ಅದಕ್ಕೊಂದು ಉತ್ತಮ ಉದಾಹರಣೆ (YouTubeನಲ್ಲಿ ಅತ್ಯುತ್ತಮ ಪ್ರಾತ್ಯಕ್ಷಿಕೆ ಬಹುಮಾನ ಪಡೆದಿದೆ):


ಆದರೆ ಕೇವಲ ಒಗ್ಗಟ್ಟಿದ್ದರೆ ಸಾಲದು, ಧೈರ್ಯ ಕೂಡ ಮುಖ್ಯ ಎನ್ನಲು ಇನ್ನೊಂದು ಉದಾಹರಣೆ:


ನೀವೇನಂತೀರಾ?

ಸೋಮವಾರ, ಮಾರ್ಚ್ 17, 2008

ಆದಿತ್ಯವಾರದ ಆ ಸಂಜೆ - ಕನ್ನಡ ಬ್ಲಾಗಿಗರ ಭೇಟಿ

ಬೆಂಗಳೂರಿಗೆ ಬಂದ ಮೇಲೆ ಭಾನುವಾರಕ್ಕೊಂದು ಅರ್ಥ ಬಂದಿದೆ (ಹಾಗಂತ ಅನರ್ಥ ನಿಂತಿದೆ ಎಂದಲ್ಲ). ಸಣ್ಣವನಿದ್ದಾಗ ಆಟ ಆಡುವ ದಿನವಾಗಿದ್ದ ಭಾನುವಾರ ಕಾಲೇಜಿಗೆ ಹೋಗುವಾಗ ಎಂದರೆ ರೆಕಾರ್ಡ್ ಬರೆಯುವ, ಅಸೈನ್ಮೆಂಟ್ಸ್ ಮಾಡುವ ದಿನವಾಗಿತ್ತು. ಈಗ ಹಾಗಲ್ಲ ಭಾನುವಾರ ಅಂದ್ರೆ ವೀಕೆಂಡು :) ಆದರೂ ಕೆಲವು ಸಲ "ಬಟ್ಟೆ ಹರಿಯೋ ಅಷ್ಟು" (ಅದು ದಾವಣಗೆರೆಯ ನುಡಿಗಟ್ಟು.. ನಿಮಗೆ ಅರ್ಥ ಆಗ್ಲಿಲ್ವಾ? ಆಗೋದು ಬೇಡ ಬಿಡಿ) ಕೆಲಸ ಇರುತ್ತೆ.

ಆ ಕೆಲಸಗಳೇನೇ ಇರಲಿ, ಹೇಗಾದರು ಮಾಡಿ ಬೆಂಗಳೂರು ಸುತ್ತೋದು ನನ್ನ ಪದ್ಧತಿ. ನಾನೇನೂ ಎಂಜಿ ರೋಡು, ಬ್ರಿಗೇಡ್ ರೋಡು ಸುತ್ತೋದಿಲ್ಲ. ಫ್ರೆಂಡ್ಸ್ ನ ಮೀಟ್ ಮಾಡಿ ಬರೋದು, ಯಾವುದಾದರು ಸ್ಥಳಗಳಿಗೆ ಭೇಟಿ ಕೊಡೋದು ಹೀಗೆ... ಇತ್ತಿಚಿಗೆ (ಅಂದರೆ ಇದನ್ನು ಬರೆದಾದ ಮೇಲೆ) ಇನ್ನೊಂದು ಚಟ ಅಂಟಿಕೊಂಡಿದೆ... ಸಿನಿಮಾ ನೋಡೋದು (ಇಲ್ಲಿ ಸಿನಿಮಾ ನೋಡೋದಕ್ಕಿಂತ ಗೆಳೆಯರ ಭೇಟಿಯೇ ಮುಖ್ಯ ಅನ್ನೋದು ಬೇರೆ ವಿಷಯ).

ಹೋದ ವಾರವಷ್ಟೇ ತೀರ್ಥಯಾತ್ರೆ ಮುಗಿಸಿಕೊಂಡು ಬಂದಿದ್ದರಿಂದ ಈ ವಾರ ಎಲ್ಲಿಗೂ ಹೋಗುವ ಯೋಚನೆ ಇರಲಿಲ್ಲ. (ಕನ್ಫ್ಯೂಸ್ ಆಗ್ಬೇಡಿ, ನನಗಿನ್ನು ೨೨ ವರ್ಷ... ತೀರ್ಥಯಾತ್ರೆ ಬಗ್ಗೆ ಇನ್ಯಾವಾಗಲಾದ್ರೂ ಬರೀತೀನಿ. ಆದರೆ ಇದಕ್ಕೂ ಸಂದೀಪನ ತೀರ್ಥಯಾತ್ರೆಗೂ ಇರುವ ಸಂಬಂಧ ನಂದಿಬೆಟ್ಟಕ್ಕಷ್ಟೇ ಸೀಮಿತ). ಇನ್ನೇನಪ್ಪಾ ಮಾಡೋದು ಅಂತ ಶನಿವಾರ ಮಧ್ಯಾಹ್ನ ಹೀಗೇ ಬ್ರೌಸ್ ಮಾಡ್ತಾ ಕುಳಿತಿದ್ದೆ. ಸುಶ್ರುತನ ಮೌನಗಾಳದಲ್ಲಿ ಆ ಸಂಜೆ, ನಾವೆಲ್ಲ ಸೇರ್ತಿದೀವಿ... ಅಂತ ಬರೆದಿದ್ದನ್ನು ನೋಡಿದೆ. ಈ ಬಾರಿ ಸರಿಯಾಗಿ ಕಲಿತು ವಡಪ್ಪೆಯ ಎಡವಟ್ಟುಗಳು ಮರುಕಳಿಸದಂತೆ ಮಾಡುತ್ತಿದ್ದಾನೆ ಎಂದುಕೊಂಡೆ. ಊಹುಂ, ಅದಲ್ಲ ವಿಷಯ. ಕನ್ನಡ ಬ್ಲಾಗರ್ಸ್ ಮೀಟ್!

ಒಂದು ತಿಂಗಳ ಹಿಂದಷ್ಟೇ ಬೆಂಗಳೂರಿನಲ್ಲಿ ಬ್ಲಾಗರ್ಸ್ ಮೀಟ್ ನಡೆದಿತ್ತು ಎಂಬ ಸುದ್ದಿ ನನಗೆ ಬಂದಿತ್ತು. ಅದು ಹೇಗೆ ನನ್ನ ಕಣ್ಣು ತಪ್ಪಿಸಿತೋ ನಾ ಕಾಣೆ. ಮೊದಲೇ ಗೊತ್ತಾಗಿದ್ದಿದ್ದರೆ ಹೋಗಿರುತ್ತಿದ್ದೇನೋ ಏನೋ. ಕಳೆದು ಹೋದ ಕಾಲಕ್ಕೆ ಚಿಂತಿಸಿ ಫಲವಿಲ್ಲ. ಕನ್ನಡ ಬ್ಲಾಗರ್ಸ್ ಮೀಟ್ಗಾದ್ರೂ ಹೋಗಲೇ ಬೇಕು, ಆಗಿಂದಾಗ್ಗೆ ಅಂತರ್ಜಾಲದಲ್ಲಿ ನೋಡುವ ಹೆಸರಿನ ವ್ಯಕ್ತಿಗಳು ಯಾರಿರಬಹುದು? ಹೇಗಿರಬಹುದು? ಎಂಬ ಜಿಜ್ಞಾಸೆಯೊಂದಿಗೆ ಹೋಗುವ ನಿರ್ಧಾರಕ್ಕೆ ಬಂದೆ.

ಅಂತೆಯೇ ಭಾನುವಾರ ಬೆಂಗಳೂರಿನ ಪೂರ್ವಕ್ಕೊಂದು ಪ್ರದಕ್ಷಿಣೆ ಹಾಕಿ ದಕ್ಷಿಣಕ್ಕೆ ಹೊರಟೆ. Indian Institute of World Cultures ಎಲ್ಲಿದೆ ಎಂದು ಅವರಿವರನ್ನು ಕೇಳುತ್ತ ಹಾಗೂ ಹೀಗೂ ನಾಲ್ಕೂವರೆಗೆ ತಲುಪಿದೆ. ಮೊದಲಿಗೆ ಅಪರಿಚಿತ ಸ್ಥಳದಂತೆ ಕಂಡು ಬಂದರೂ ಐದೇ ನಿಮಿಷದಲ್ಲಿ ಕಾರ್ಯಕ್ರಮ ಪ್ರಾರಂಭವಾಗಿದ್ದರಿಂದ ಯು.ಬಿ.ಪವನಜ, ಹರಿಪ್ರಸಾದ್ ನಾಡಿಗ್, ಅಬ್ದುಲ್ ರಶೀದ್ ಅವರ ಅನುಭವಗಳು, ಅಭಿಪ್ರಾಯಗಳು, ಸಲಹೆಗಳನ್ನು ಕೇಳುತ್ತ ಕುಳಿತೆ. ಮಧ್ಯ ಚಹಾ ವಿರಾಮದಲ್ಲಿ ಕೆಲವರು ಪರಿಚಯವಾದರು. ಚಹಾನಂತರದ ಚರ್ಚೆ, ಅಭಿಪ್ರಾಯ ಹಂಚಿಕೆಗಳಲ್ಲಿ ಇನ್ನೂ ಕೆಲವರು ಪರಿಚಯವಾದರು. ಎಸ್ ಕೆ ಶ್ಯಾಮಸುಂದರ್ ಅವರ ಮಾತುಗಳು ಓದುಗರನ್ನು ಯೋಚಿಸುವಂತೆ ಮಾಡಲು ಸಫಲವಾಯಿತು.

ಅಂತರ್ಜಾಲದಲ್ಲಿ ಕನ್ನಡ ಬೆಳೆದು ಬಂದ ಬಗೆ, ತಂತ್ರಜ್ಞಾನದಲ್ಲಿ ಕನ್ನಡ ಈಗ ಯಾವ ಹಂತದಲ್ಲಿದೆ, ಇನ್ನೂ ಏನೆಲ್ಲ ಕೆಲಸಗಳು ಬಾಕಿ ಇವೆ, ಬ್ಲಾಗಿಗರ ಸಂಖ್ಯೆ ಏಕೆ ಕಡಿಮೆ ಇದೆ ಹೀಗೆ ಬಹಳಷ್ಟು ವಿಷಯಗಳ ಬಗ್ಗೆ ತಿಳಿದುಕೊಂಡಿದ್ದು ಬಹಳ ಸಂತಸ ನೀಡಿತು. ಆದರೆ ಇವೆಲ್ಲಾ ಸಂತಸಗಳ ನಡುವೆ ಒಂದು ದುಃಖ ಮಾತ್ರ ಉಳಿದುಹೋಯಿತು. ಬಂದಿದ್ದ ಎಲ್ಲ ಬ್ಲಾಗಿಗರ ಪರಿಚಯವಾಗಲಿಲ್ಲವಲ್ಲ ಎಂಬುದೇ ಆ ದುಃಖ. ಕೇವಲ ೩ ಘಂಟೆಗಳಲ್ಲಿ ನೂರಾರು ಜನರ ವೈಯಕ್ತಿಕ ಪರಿಚಯ ಕಷ್ಟವಾಗುತ್ತಿತ್ತೆನ್ನುವುದು ನಿಜ. ಆದರೆ ಮುಂದಿನ ಬಾರಿ ನಾವು ಭೇಟಿಯಾದಾಗ ಎಲ್ಲರ ಪರಿಚಯಕ್ಕೆಂದೇ ಒಂದಷ್ಟು ಸಮಯ ಮೀಸಲಿರಿಸಿ ಎಲ್ಲ ಬ್ಲಾಗಿಗರನ್ನೂ ಪರಿಚಯಸ್ಥರನ್ನಾಗಿ ಮಾಡುವ ಜವಾಬ್ದಾರಿ ಸಂಘಟಕರ ಮೇಲಿದೆ.

ಒಟ್ಟಿನಲ್ಲಿ ಈ ಭಾನುವಾರ ಬ್ಲಾಗಿಗರನ್ನು, ಬ್ಲಾಗುಗಳನ್ನು ಓದಿ ಸಂತಸ ಪಡುವವರನ್ನು ಒಂದೆಡೆ ಸೇರಿಸಲು ಒಂದು ವೇದಿಕೆಯಾಯಿತು. ಇದಕ್ಕಾಗಿ "ಪ್ರಣತಿ" ತಂಡದವರಿಗೆ ಹೃತ್ಪೂರ್ವಕ ಕೃತಜ್ಞತೆಗಳು. ಅಲ್ಲದೆ ಇದು ಕೇವಲ ವೇದಿಕೆಯಾಗಿ ಉಳಿಯದೆ ಅಂತರ್ಜಾಲದಲ್ಲಿ ಕನ್ನಡದ ಮಹಾಕಾವ್ಯಕ್ಕೆ ಮುನ್ನುಡಿಯಾಗಲಿ ಎಂದು ಆಶಿಸುವೆ.

ಇತರರ ಅನಿಸಿಕೆಗಳು:

ಶುಕ್ರವಾರ, ಫೆಬ್ರವರಿ 1, 2008

ಅಪರಿಚಿತ ಹುಡುಗಿಯೊಂದಿಗೆ... (ಭಾಗ-೨)

ಮೊದಲನೆಯ ಭಾಗದಿಂದ ಮುಂದುವರೆದಿದೆ

ಏನಾದರೂ ಒಂದು ಉಪಾಯವನ್ನು ಹುಡುಕುವುದು ಅನಿವಾರ್ಯವಾಗಿತ್ತು. ಆಕೆ ಮತ್ತೆ ಮೊಬೈಲ್ ಕೇಳದಂತೆ ಮಾಡಬೇಕಿತ್ತು. ಯಾವುದೇ ಕರೆ ಬರದಂತೆ ಮೊಬೈಲ್ ಅನ್ನು ಆಫ್-ಲೈನ್ ಮೋಡಿಗೆ ಬದಲಾಯಿಸಿ ಕುಳಿತೆ. ಮನಸ್ಸು ಸ್ವಲ್ಪ ನಿರಾಳವಾಯಿತು. ಸುಮಾರು ಅರ್ಧ ಘಂಟೆ ಹೀಗೇ ಕಳೆದಿರಬಹುದು. ಇಷ್ಟು ಹೊತ್ತು ನನ್ನ ಮುಖದಲ್ಲಿದ್ದ ದುಗುಡ ಈಗ ಆಕೆಯ ಮುಖಕ್ಕೆ ಸ್ಥಳಾಂತರಗೊಂಡಂತೆ ಕಂಡುಬಂದಿತು. ಭರಮಸಾಗರದ ಹತ್ತಿರ ಬಂದಾಗ "ಫೋನ್ ಬಂತಾ" ಎಂದು ಕೇಳಿದಳು. "ಇಲ್ಲ" ಎಂದಷ್ಟೇ ಉತ್ತರಿಸಿ ಸುಮ್ಮನಾದೆ. ಆಕೆ ಅತ್ತಿತ್ತ ಯಾರನ್ನೋ ಹುಡುಕುತ್ತಿರುವಂತೆ ಕಂಡುಬಂದಿತು. ಭರಮಸಾಗರದಲ್ಲಿ ಬಸ್ ನಿಂತಾಗ ರಸ್ತೆಯ ಎರಡೂ ಬದಿಗೆ ನೋಡಿದಳು. ಯಾರೂ ಪರಿಚಯದವರು ಕಂಡಿರಲಿಕ್ಕಿಲ್ಲ. ಸುಮ್ಮನೆ ಕುಳಿತಳು. ಮುಖದಲ್ಲಿನ ಆತಂಕ ಕ್ಷಣಕ್ಷಣಕ್ಕೂ ಹೆಚ್ಚುತ್ತಿದ್ದುದು ಕಂಡುಬಂದಿತು. ಆದರೆ ಮತ್ತೆ ನನ್ನನ್ನು ಯೋಚಿಸುವಂತೆ ಮಾಡುವಲ್ಲಿ ಆಕೆಯ ಈ ವರ್ತನೆ ಸಫಲವಾಗಿತ್ತು.

ಅಲ್ಲಿ ಯಾರನ್ನು ಹುಡುಕುತ್ತಿರಬಹುದು? ಆಕೆಯ "ಅಣ್ಣ" ಭರಮಸಾಗರದಲ್ಲಿದ್ದಿರಬಹುದೆ? ಮತ್ತೆ ಮತ್ತೆ ಕರೆ ಮಾಡಿ ಬಸ್ಸಿನ ಬರುವಿಕೆಯನ್ನು ಗೊತ್ತುಪಡಿಸಿಕೊಳ್ಳುವ ಇಚ್ಛೆಯಿದ್ದಿರಬಹುದೆ? ಇವರ ಒಂದು ದೊಡ್ಡ ಗುಂಪೇ ಇರಬಹುದೆ? ಮನಸ್ಸು ಮತ್ತೆ ಕಲಸುಮೇಲೋಗರವಾಯಿತು.

ನಾನು ಹೋಗಬೇಕಾಗಿದ್ದಿದ್ದು ವೈಟ್‍ಫೀಲ್ಡಿನಲ್ಲಿರುವ ಭಾವನ ಮನೆಗೆ. ಬಸ್ಸು ಹೋಗುವಷ್ಟರಲ್ಲಿ ಸಂಜೆಯಾಗಿರುತ್ತದೆ. ಅಲ್ಲಿಗೆ ತಿಳಿಸುವುದು ಅನಿವಾರ್ಯವಾಗಿತ್ತು. ಸದ್ಯದ ಪರಿಸ್ಥಿತಿಯಲ್ಲಿ ನನ್ನ ಮೊಬೈಲ್‍ ಇದ್ದೂ ಇಲ್ಲದಂತಾಗಿದ್ದರಿಂದ ಅದೊಂದು ದೊಡ್ಡ ಸಮಸ್ಯೆಯೇ ಆಗಿ ಪರಿಣಮಿಸಿತು. ಹೀಗೇ ಯೋಚಿಸುವಷ್ಟರಲ್ಲಿ ಚಿತ್ರದುರ್ಗ ಸಮೀಪಿಸಿತ್ತು. ಬೆಂಗಳೂರಿಗೆ ಹೋಗುವಷ್ಟರಲ್ಲಿ ಮೊಬೈಲ್ ನನ್ನ ಬಳಿ ಇರುವುದೇ ಅನುಮಾನವಾಗಿದ್ದರಿಂದ ಇಲ್ಲೇ ಏನಾದರೂ ಮಾಡಬೇಕೆಂದು ನಿರ್ಧರಿಸಿದೆ. ಈಗಲೇ ತಿಳಿಸಿಬಿಡೋಣವೆಂದು ಚಿತ್ರದುರ್ಗದಿಂದ ಹೊರಟ ನಂತರ ಮತ್ತೆ ಜನರಲ್ ಮೋಡ್‍ಗೆ ಬದಲಾಯಿಸಿದೆ. ಒಂದೆರಡು ಸೆಕೆಂಡುಗಳಾಗಿರಬಹುದು... ಕರೆ ಬಂದಿತು! ಆಕೆಯ ’ಅಣ್ಣ’ನದು!!

ಅವಳ ಕೈಯಲ್ಲಿ ಮೊಬೈಲ್ ಕೊಟ್ಟು ಮತ್ತೆ ಸುಮ್ಮನೆ ಕುಳಿತೆ. ಮತ್ತೆ ಹರಟೆ ಹೊಡೆಯಲಾರಂಭಿಸಿದಳು. ಆದರೆ ಸುಮಾರು ಐದು ನಿಮಿಷಗಳಾಗುವಷ್ಟರಲ್ಲಿ ಸ್ಪೈಸ್ ನೆಟ್‍ವರ್ಕ್ ಪ್ರಭಾವದಿಂದ ಕಾಲ್ ಕಟ್ ಆಯಿತು. ಹಿಂದೆ ಮುಂದೆ ನೋಡದೆ ಮತ್ತೆ ಆಫ್‍ಲೈನ್ ಮೋಡ್‍ಗೆ ಬದಲಾಯಿಸಿದೆ. ಆಕೆಯೇ ಮಾತು ಆರಂಭಿಸಿದಳು:

"ನೀವು ಎಲ್ಲಿಂದ ಬರ್ತಾ ಇದೀರ?"
"ಹರಿಹರದಿಂದ"
"ಅದು ನಿಮ್ಮೂರಾ?"
"ಅಲ್ಲ. ನಮ್ಮ ನೇಟಿವ್ ಸಾಗರ"
"ಬೆಂಗಳೂರಲ್ಲಿ ಏನ್ ಮಾಡ್ತೀರ?"
"ನಾಡಿದ್ದು ಕೆಲಸಕ್ಕೆ ಜಾಯ್ನ್ ಆಗ್ಬೇಕು. ಅದ್ಕೆ ಹೊರ್ಟಿದೀನಿ"
"ಓಹ್ ಹೌದಾ, ಆಲ್ ದಿ ಬೆಸ್ಟ್"
"ಥ್ಯಾಂಕ್ಸ್"
...
...

ಆಕೆ ಅಷ್ಟೊಂದು ವಿಚಾರಿಸುತ್ತಿದ್ದಾಳೆ. ಯಾಕಿರಬಹುದು? ಯಾವುದಕ್ಕೂ ಅವಳ ಬಗ್ಗೆ ಸ್ವಲ್ಪ ಮಾಹಿತಿ ಪಡೆಯುವುದು ಒಳ್ಳೆಯದು ಎಂದು ನಾನೂ ಕೇಳಲಾರಂಭಿಸಿದೆ.

"ನಿಮ್ಮೂರು ದಾವಣಗೆರೆನಾ?"
"ಅಲ್ಲ, ರಾಣೆಬೆನ್ನೂರು"
"ಮತ್ತೆ ದಾವಣಗೆರೆಯಲ್ಲಿ ಹತ್ತಿದ್ರಲ್ಲ?"
"ಅಲ್ಲಿ ರಿಲೇಟಿವ್ಸ್ ಮನೆಗೆ ಬಂದಿದ್ದೆ"
"ರಾಣೆಬೆನ್ನೂರಿನಲ್ಲಿ ಏನ್ ಮಾಡ್ತೀರ?"
"ಸೆಕೆಂಡ್ ಇಯರ್ ಪಿ.ಯು.ಸಿ. ಮಾಡ್ತಿದೀನಿ. ಕಾಮರ್ಸ್"
"ಬೆಂಗಳೂರಿನಲ್ಲಿ ಯಾರಿದ್ದಾರೆ?"
"ನಮ್ಮಣ್ಣನ ಮನೆಗೆ ಹೋಗ್ತಿದೀನಿ"
"ನಿಮಗೆ ಈಗ ಕಾಲೇಜ್ ನಡೀತಿಲ್ವಾ?"
"ನಡೀತಿದೆ, ನಾಲ್ಕ್ ದಿನ ಅಣ್ಣನ ಮನೇಲಿದ್ದು ಬರ್ತೀನಿ"
...
...

ಕಾಲೇಜ್‍ಗೆ ಬಂಕ್ ಮಾಡಿ ಸುಮ್ಮನೆ ಅಣ್ಣನ ಮನೆಗೆ ಹೋಗಲು ಹೇಗೆ ಸಾಧ್ಯ? ಮೊದಲನೇ ಬಾರಿ ಒಬ್ಬಳೇ ಹೊರಟಿದ್ದೇನೆ ಎಂದು ಬೇರೆ ಹೇಳಿದ್ದಳು. ನನ್ನ ಮನಸ್ಸಿನಲ್ಲಿದ್ದ ಎಲ್ಲ ಊಹೆಗಳೂ ನಿಜವಾಗಿರುವಂತೆ ಕಂಡುಬಂದಿತು. ಹಾಗೇ ಹಿರಿಯೂರು ತಲುಪಿದೆವು. ಅಲ್ಲಿ ಯಾವುದೋ ಹೋಟೆಲ್ ಮುಂದೆ ಬಸ್ ನಿಲ್ಲಿಸಿ "ಇಪ್ಪತ್ ನಿಮಿಷ ಟೈಮ್ ಐತ್ರಿ" ಎಂದು ಹೇಳಿ ಕಂಡಕ್ಟರ್ ಇಳಿದುಹೋದ.

"ಏನಾದ್ರೂ ತೊಗೋತೀರಾ?"
"ಇಲ್ಲ"
"ಏನೂ ಬೇಡ್ವಾ?"
"ಬೇಡ"
"ನಾನೇನಾದ್ರೂ ತೊಗೋತೀನಿ"
"ಹೂಂ"

ಇಳಿದು ಹೋಗಿ ಸ್ಪ್ರೈಟ್ ತಂದು ಕುಡಿಯುತ್ತಾ ಕುಳಿತಳು. ನನಗೆ ಬೇಕೇ ಎಂದು ಮತ್ತೆ ವಿಚಾರಿಸಿದಳು. ಅಷ್ಟರಲ್ಲಿ ಯಾರೋ ಒಬ್ಬ ಹತ್ತಿ ನಾವು ಕುಳಿತಿದ್ದ ಸೀಟಿನಲ್ಲಿಯೇ ಕುಳಿತ. ಶಿರಾಕ್ಕೆ ಹೋಗುವವನಾಗಿದ್ದ.

ಸುಮಾರು ಇಪ್ಪತ್ತೈದು ಮೂವತ್ತು ವರ್ಷದವನಿರಬಹುದು. ಮಹಾ ವಾಚಾಳಿ. ಬಂದು ಸ್ವಲ್ಪ ಹೊತ್ತಿನಲ್ಲೇ ಆಕೆಯ ಜೊತೆ ಲೋಕಾಭಿರಾಮವಾಗಿ ಹರಟಲಾರಂಭಿಸಿದ. ಕೇಳಿದರೂ ಕೇಳದಂತೆ ಅವರ ಸಂಭಾಷಣೆಯನ್ನಾಲಿಸುತ್ತಾ ಕುಳಿತೆ. ನನಗೆ ಹೇಳಿದ್ದ ತನ್ನ ಪುರಾಣವನ್ನು ಪುನರಾವರ್ತಿಸಿದಳು. ನಂತರ ಅವನ ಮೊಬೈಲ್ ತೆಗೆದುಕೊಂಡು ಇಪ್ಪತ್ತು ನಿಮಿಷ ಅಣ್ಣನ ಜೊತೆ ಮಾತನಾಡಿದಳು. ಆಗ ನಾನು ನನ್ನ ಮೊಬೈಲನ್ನು ಮತ್ತೆ ಜನರಲ್ ಮೋಡಿಗೆ ಬದಲಾಯಿಸಿ ಕುಳಿತೆ. ಮತ್ತೆ ತನ್ನ ಪುರಾಣ ಮುಂದುವರೆಸಿ ಆಕೆಯ ಅಣ್ಣ ದೇವನಹಳ್ಳಿಯಲ್ಲಿರುವುದಾಗಿಯೂ ತುಮಕೂರಿಗೆ ಬರುತ್ತಿರುವುದಾಗಿಯೂ ತಿಳಿಸಿದಳು. ಅಲ್ಲದೇ ತುಮಕೂರಿನಲ್ಲಿಯೇ ಇಳಿಯುವ ನಿರ್ಧಾರಕ್ಕೆ ಬಂದಳು.

ಇಷ್ಟಾದರೂ ಆಕೆಯ ಮಾತಿನ ದಾಹ ತೀರಿರಲಿಲ್ಲ. ಮತ್ತೆ ಅವನ ಮೊಬೈಲ್ ತೆಗೆದುಕೊಂಡು ಮಾತನಾಡಲಾರಂಭಿಸಿದಳು. ಶಿರಾ ಸಮೀಪಿಸಿತ್ತು. ಮಾತನಾಡುತ್ತಲೇ ಇದ್ದಳು. ಬಸ್ ಸ್ಟ್ಯಾಂಡ್ ಬಂದಿತು. ಊಹುಂ. ಆಕೆಯೆ ಮಾತೂ ಇನ್ನೂ ಮುಗಿದಿರಲಿಲ್ಲ. ಆತ ಇಳಿಯಲೆಂದು ಎದ್ದು ಮೊಬೈಲಿಗಾಗಿ ಕಾಯುತ್ತಾ ನಿಂತ. ಆಗ ಇದ್ದಕ್ಕಿದ್ದಂತೆ ಮಾತು ಮುಗಿಸಿ ಮೊಬೈಲ್ ಹಿಂದಿರುಗಿಸಿದಳು.

ಮುಂದಿನ ಪ್ರಯಾಣಕ್ಕೆ ಮತ್ತೆ ನನ್ನ ಫೋನೇ ಆಕೆಯ ಸಾಥಿಯಾಯಿತು. ಐದೈದು ನಿಮಿಷಕ್ಕೊಮ್ಮೆ ಮಾತನಾಡಲಾರಂಭಿಸಿದಳು. ಪ್ರತಿ ಬಾರಿ ಹತ್ತು ನಿಮಿಷಕ್ಕಿಂತ ಫೋನ್ ಇಡುತ್ತಿರಲಿಲ್ಲ. ಸ್ವಲ್ಪ ಹೊತ್ತಿನಲ್ಲಿಯೇ ಆಕೆಯ ಅಣ್ಣ ಆಗಲೇ ತುಮಕೂರಿಗೆ ಬಂದು ಸೇರಿಯಾಗಿತ್ತು. ತುಮಕೂರಿನ ಹತ್ತಿರ ಬಂದಾಗ ನನಗೇನೋ ಆತಂಕ. ಅಷ್ಟರಲ್ಲಿ ಕಳ್ಳರನ್ನು ಬೆನ್ನಟ್ಟಿರುವ ಪೊಲೀಸರಂತೆ ಅಣ್ಣನಿಗೆ ದಾರಿಯ ಮಾಹಿತಿ ನೀಡಲಾರಂಭಿಸಿದಳು...

"ಈಗ ಹೈವೇಯಿಂದ ಬಲಕ್ಕೆ ತಿರುಗ್ತಾ ಇದೆ... ಆಗ್ಲೇ ತುಮಕೂರು ಬಂತು ಮಗಾ... ಇಲ್ಲಿ ಏನೂ ಕಾಣ್ತಾ ಇಲ್ಲ... ಇಲ್ಲಿ ಯಾವ್ದೋ ದೊಡ್ಡ ಅಂಗಡಿ ಇದೆ ಮಗಾ... ಷೋ ರೂಮ್ ಇದೆ ನೋಡು... ಹನುಮಂತನ ಸ್ಟ್ಯಾಚ್ಯೂ ಇದೆ... ಸಿಟಿ ಒಳಗೆ ಬಂದಿದೆ ಬಸ್ಸು... ನೀನೆಲ್ಲಿದೀಯಾ? ಮೆಡಿಕಲ್ ಷಾಪ್ ಹತ್ರಾನಾ? ವೈಟ್ ಕಲರ್ ಮಾರುತಿ ಆಮ್ನಿಯಲ್ಲಿದೀಯಾ? ಓಕೆ ಮಗಾ... ಇದ್ಯಾವ್ದೋ ದೊಡ್ಡ ಬಿಲ್ಡಿಂಗ್ ಹತ್ರ ಬರ್ತಾ ಇದೆ... ಬಸ್ ಸ್ಟ್ಯಾಂಡ್ ಹತ್ರ ಬಂತು... ಟರ್ನ್ ಆಗ್ತಾ ಇದೆ"

ನನ್ನ ಎದೆ ಎಷ್ಟು ಸಾಧ್ಯವೋ ಅಷ್ಟು ಜೋರಾಗಿ ಬಡಿದುಕೊಳ್ಳುತ್ತಿತ್ತು. ಬಸ್ ನಿಂತಿತು. ಆಕೆ ಮಾತು ನಿಲ್ಲಿಸಿದಳು. ಮೊಬೈಲ್ ಹಿಂದಿರುಗಿಸಿ "ಥ್ಯಾಂಕ್ಸ್" ಎಂದು ಹೇಳಿ ಇಳಿದುಹೋದಳು...

ಹೊರಗಡೆ ನೋಡಿದೆ. ಯಾರೂ ಕಾಣಿಸಲಿಲ್ಲ. ಯಾವ ಆಮ್ನಿ ಕೂಡ ಕಾಣಲಿಲ್ಲ. ಮುಂದೆ ಅವಳೆಲ್ಲಿಗೆ ಹೋದಳೋ, ಅವಳಣ್ಣ ಸಿಕ್ಕಿದನೋ ಇಲ್ಲವೋ ದೇವರೇ ಬಲ್ಲ. ನಾನಂತೂ ಬೆಂಗಳೂರು ತಲುಪಿದೆ. ನನ್ನ ಎಲ್ಲ್ಲಾ ಶಂಕೆಗಳೂ ಸುಳ್ಳಾಗಿದ್ದವು. ನನ್ನ ಮೊಬೈಲ್ ನನ್ನ ಕೈಯಲ್ಲಿ ಸುರಕ್ಷಿತವಾಗಿತ್ತು. ನಾನಂದುಕೊಂಡಂತೆ ಆಕೆ ಕಳ್ಳಿಯಾಗಿರಲಿಲ್ಲ.

*******

ಜೋ ದಿಖ್ತಾ ಹೈ, ಹಮ್ ಕೋ ಲಗ್ತಾ ಹೈ, ಹೈ... ಔರ್ ಜೋ ನಹೀ ದಿಖ್ತಾ, ಹಮ್ ಕೋ ಲಗ್ತಾ ಹೈ, ನಹೀ ಹೈ...
ಲೇಕಿನ್ ಕಭೀ ಕಭೀ ಜೋ ದಿಖ್ತಾ ಹೈ ವೋ ನಹೀ ಹೋತಾ ಹೈ ಔರ್ ಜೋ ನಹೀ ದಿಖ್ತಾ, ವೋ ಹೋತಾ ಹೈ.

"ತಾರೇ ಜಮೀನ್ ಪರ್" ಚಿತ್ರದಲ್ಲಿ ಇಶಾನ್ ನಂದಕಿಶೋರ್ ಅವಸ್ಥಿ ಎಂಬ ಮುಗ್ಧ ಬಾಲಕನ ಮೂಲಕ ಹೇಳಿಸಿರುವ ಈ ಮಾತಿಗೆ ಎಷ್ಟು ಅರ್ಥವಿದೆಯಲ್ಲವೆ? ನೀವೇನಾದರೂ "ತಾರೇ ಜಮೀನ್ ಪರ್" ಅನ್ನು (ಇನ್ನೂ) ನೋಡಿರದಿದ್ದರೆ ಮೊದಲು ಆ ಕೆಲಸ ಮಾಡಿ!!