ಗುರುವಾರ, ಆಗಸ್ಟ್ 14, 2008

ನಮ್ಮ ನಾಡ ಯೋಧರು...

Indian army in Kashmir

ಧೀರ ವೀರ ಶೂರರು ನಮ್ಮ ನಾಡ ಯೋಧರು
ದೇಶವನ್ನು ಪೊರೆವರು ಸ್ವಹಿತವನ್ನು ನೋಡರು

ಜೊತೆಗೆ ಇಲ್ಲ ಬಂಧು-ಬಳಗ-ಅಕ್ಕ-ತಂಗಿ-ಅಪ್ಪ-ಅಮ್ಮ
ಸ್ವಾರ್ಥರಹಿತ ರಕ್ಷಕರಿಗೆ ಜನರೇ ಇಲ್ಲಿ ಅಣ್ಣ-ತಮ್ಮ
ಹತ್ತಬೇಕು ಗುಡ್ಡ ಬೆಟ್ಟ, ಅಲೆಯಬೇಕು ಕಾಡು-ಮೇಡು
ಇವರು ಕೂಡ ಸುಖವ ಬಯಸೆ ಹೇಗೆ ಹೇಳಿ ನಮ್ಮ ಪಾಡು?

ಗಡಿವಲಯದ ದಾಳಿಕೋರ ವೈರಿಗಳಿಗೆ ಕಲಿಗಳು
ಹೃದಯವಂತ ಮನುಜರು ಮನುಷ್ಯರೂಪಿ ಹುಲಿಗಳು
ಚಳಿಯೆ ಇರಲಿ ಮಳೆಯೆ ಇರಲಿ ಧಗೆಯೆ ಇರಲಿ ದುಡಿವರು
ನಾಡಿಗಾಗಿ ತಮ್ಮ ಪ್ರಾಣ ಲೆಕ್ಕಿಸದೇ ಮಡಿವರು

ಅಕಾಲಮೃತ್ಯು ಪಾತ್ರರಾದ ಶತ-ಶತಾದಿ ಹುತಾತ್ಮರು
ದೇಶ ಸೇವೆ ಈಶ ಸೇವೆ ಎಂದರಿತ ಮಹಾತ್ಮರು
ಪ್ರಾಣವನ್ನು ತೆತ್ತರು ಸುರಿಸಿ ತಮ್ಮ ನೆತ್ತರು
ಮತ್ತೆ ಮರಳಿ ಬಾರರಿವರು ನಾವು ಎಷ್ಟೆ ಅತ್ತರು

Indian army at Kargil


ಪ್ರತಿ ವರ್ಷ ನಮ್ಮ ದೇಶ ಸ್ವತಂತ್ರವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಸ್ವಾತಂತ್ರ್ಯ ತಂದು ಕೊಟ್ಟವರ, ಆ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹಗಲಿರುಳೆನ್ನದೆ ದೇಶ ಕಾಯುವ ಸೈನಿಕರ ಬಗ್ಗೆ ಕೂಡ ಯೋಚಿಸುವುದು ಒಳಿತಲ್ಲವೇ?

ಎಲ್ಲರಿಗೂ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

4 ಕಾಮೆಂಟ್‌ಗಳು:

ಸಂದೀಪ್ ಕಾಮತ್ ಹೇಳಿದರು...

ಬೋಲೋ ಭಾರತ್ ಮಾತಾ ಕಿ ಜೈ........

ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು...

-ಸಂದೀಪ್ ಕಾಮತ್

ವಿ.ರಾ.ಹೆ. ಹೇಳಿದರು...

ಜೈ ಜವಾನ್.

ನಾವು ಇಲ್ಲಿ ಅದಿಲ್ಲ ಇದಿಲ್ಲ ಹಾಗಿಲ್ಲ ಹೀಗಿಲ್ಲ ಎಂದು ಕೊರಗುತ್ತೇವೆ. ಆದರೆ ಸೈನಿಕರು ಎಂತೆಂತಾ ಪರಿಸ್ಥಿತಿಯಲ್ಲೂ ದೇಶ ಕಾಯುವ ಕೆಲಸ ಮಾಡುತ್ತಿರುತ್ತಾರಲ್ಲ. ಅವರೇ ನಿಜವಾದ ಹೀರೋಗಳು.

sunaath ಹೇಳಿದರು...

ನಮ್ಮ ನಾಳೆಗಾಗಿ ಅವರು ತಮ್ಮ ಈ ದಿನವನ್ನು ಬಲಿಕೊಡುತ್ತಾರೆ.

Harisha - ಹರೀಶ ಹೇಳಿದರು...

@ಸಂದೀಪ್, ಜೈ...

@ವಿಕಾಸ್, ನಿಜ. ಯಾರ್ಯಾರನ್ನೋ ಹೀರೋ, ಸೂಪರ್ ಹೀರೋ ಅಂತ ಗೌರವಿಸುತ್ತೆವೆ, ಪೂಜಿಸ್ತುತ್ತೇವೆ. ಇಂಥವರು ಮಾಡಿದ ತ್ಯಾಗ, ಬಲಿದಾನ ಮಾಧ್ಯಮಗಳ ಯಾವುದೋ ಒಂದು ಮೂಲೆಯಲ್ಲಿ ಬಂದು ಹೋಗಿಬಿಡುತ್ತದೆ.

@ಸುನಾಥ್, ಹೌದು. ಅವರ ನಾಳೆಗಾಗಿ ನಾವು ಇಂದು ಪ್ರಾರ್ಥಿಸುವುದು ನಮ್ಮ ಧರ್ಮವಾಗುತ್ತದೆ.