ಶುಕ್ರವಾರ, ಸೆಪ್ಟೆಂಬರ್ 28, 2007

ಪ್ರೇಮದ ಕಡಲಲ್ಲಿ, ನೆನಪಿನ ದೋಣಿಯಲಿ.......

ಈಗ ಎಲೆಕ್ಷನ್ ಸಮಯ. ಎಲ್ಲಿ ನೋಡಿದರಲ್ಲಿ ಬ್ಯಾನರುಗಳು, ಪೊಸ್ಟರ್‌ಗಳು ಬೀದಿ ತುಂಬ ಕಾಣುತ್ತವೆ. ಹೀಗಿರುವಾಗ ನಾನು ನನ್ನ ಅಜ್ಜಿಯ ಮನೆಗೆ ಒಂದು ಮಧ್ಯಾಹ್ನ ಹೋದೆ. ಆ ಬೀದಿ ತುಂಬ ಜನ ಸೇರಿದ್ದರು. ನಾನು ಆಶ್ಚರ್ಯದಿಂದ ನೋಡುತ್ತ ಅಜ್ಜಿಯ ಮನೆ ಹೊಕ್ಕೆ. ಅಲ್ಲಿದ್ದ ನನ್ನ ಅಜ್ಜಿಯನ್ನು ಕೇಳಿದೆ 'ಯಾಕೆ ತುಂಬ ಜನ ಬೀದಿಯಲ್ಲಿದ್ದಾರೆ?' ಎಂದು. ಅಜ್ಜಿಯು ಚಿತ್ರನಟ ಶ್ರೀನಾಥ್ ಬಂದಿದ್ದಾರೆ ನಮ್ಮ ಪಕ್ಕದ ಮನೆಗೆ ಎಂದು ಹೇಳಿ ಅವರನ್ನು ಭೇಟಿ ಮಾಡಲು ಹೋದರು. ನನಗೆ ಚಿತ್ರನಟರೆಂದರೆ ಕಡಿಮೆ ಆಸಕ್ತಿ, ಆದ್ದರಿಂದ ನಾನು ಅವರನ್ನು ಭೇಟಿ ಮಾಡಲು ಹೋಗಲಿಲ್ಲ. ನನ್ನ ಬಾಲ್ಯ ಸ್ನೇಹಿತೆ (ಎದುರು ಮನೆಯ ಹುಡುಗಿ) ಬಂದು ನನ್ನನ್ನು ಬಲವಂತದಿಂದ ಎಳೆದುಕೊಂಡು ಶ್ರೀನಾಥ್ ರನ್ನು ಭೇಟಿಮಾಡಲು ಕರೆದುಕೊಂಡು ಹೋದಳು. ನೆರೆಮನೆಯಲ್ಲಿ ಜನ ಜಂಗುಳಿ ನೆರೆದಿತ್ತು.

ಶ್ರೀನಾಥ್ ತಮ್ಮ ಪಕ್ಷದ ಪರ ಪ್ರಚಾರ ಮಾಡಲು ಬಂದಿದ್ದರು. ನಮ್ಮ ಪಕ್ಕದ ಮನೆಯವರು ಆಪ್ತರಾಗಿದ್ದರಿಂದ ಶ್ರೀನಾಥ್ ಅವರೊಂದಿಗೆ ಕೆಲ ಸಮಯ ಮಾತನಾಡಲು ಅವಕಾಶ ಸಿಕ್ಕಿತು. ನನ್ನ ಅಜ್ಜಿಯು ಮತ್ತು ನನ್ನ ಸ್ನೇಹಿತೆ ವಟ ವಟನೆ ಮಾತನಾಡಲು ಶುರು ಮಾಡಿದರು ಶ್ರೀನಾಥ್ ರ ಅಭಿನಯವನ್ನು ಹೊಗಳಲು ಪ್ರಾರಂಭಿಸಿದರು. ನಾನು ಇದನ್ನೆಲ್ಲಾ ಸುಮ್ಮನೆ ಕೂತು ಕೇಳುತ್ತಿದ್ದೆ. ನಂತರ ನಾನು, ಅಜ್ಜಿ ಮತ್ತು ಗೆಳತಿ ಅವರ ಹಸ್ತಾಕ್ಷರ ಪಡೆದು ನಮ್ಮ ಮನೆಗೆ ಹೊರಟೆವು. ನನ್ನ ಸ್ನೇಹಿತೆ ಶ್ರೀನಾಥ್ ತುಂಬ ಚೆಲುವ ಅಲ್ಲವ, ನೋಡಲು ತುಂಬ ಕಲರ್ ಇದಾನೆ, ಆದರೆ ಟಿವಿಯಲ್ಲಿ ಸ್ವಲ್ಪ ಕಪ್ಪಗೆ ಕಾಣುತ್ತಾನೆ ಯಾಕೆ ಎಂದು ನನ್ನನ್ನು ಕೇಳಿದಳು... ಅವಳು ಈ ರೀತಿಯ ಬುದ್ಧಿವಂತಿಕೆಯ ಪ್ರಶ್ನೆ ಕೇಳುವುದು ಸರ್ವೇಸಾಮಾನ್ಯ. ಎಂದಿನಂತೆ ನಾನು ಕೂಡ ಆ ಪ್ರಶ್ನೆಗೆ ಒಂದು ನಗೆ ಬೀರಿದೆ. ಅವಳಿಗೆ ಬೇಕಾದ ಉತ್ತರ ಸಿಕ್ಕವಳಂತೆ ಮುಗುಳ್ನಕ್ಕಳು. ಇನ್ನು ನಾವು ನಮ್ಮ ಅಜ್ಜಿ ಮನೆಯ ಕಾಂಪೌಡ್ ಒಳಗೆ ನಿಂತು ನಮ್ಮ ಎಂದಿನ ಮಾತುಗಳನ್ನು ಪ್ರಾರಂಭಿಸಿದೆವು.

ಸ್ವಲ್ಪ ಹೊತ್ತಿನಲ್ಲೆ ಬೀದಿ ತುಂಬ ಜನಸ್ತೋಮ, ಕೆಲ ಹೆಂಗಳೆಯರು ಪ್ರಣಯರಾಜನ ಗೀತೆಗಳನ್ನು ಉವಾಚ ಮಾಡಲು ಶುರು ಮಾಡಿಯೇ ಬಿಟ್ಟರು. ಅವರ ಆ ನೃತ್ಯ ಹಾಗೂ ಹಾಡುವ ಶೈಲಿ ನೋಡಿ ನನ್ನ ಗೆಳತಿ ಹಾಗು ನಾನು ನಗೆಗಡಲಿನಲ್ಲಿ ತೇಲಿದೆವು. ಆಗ ಯಾರೋ ಒಬ್ಬ 'ಸ್ನೇಹದ ಕಡಲಲ್ಲಿ...' ಎನ್ನುವುದರ ಬದಲು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ' ಎಂದು ರಾಗ ಎಳೆದ.... ನಾನು ಪ್ರೇಮಿಯಂತೆ ನನ್ನ ಗೆಳತಿಯ ಕಡೆ ನೋಡಿದೆ... ಅವಳು ನಾಚಿ ನೀರಾದಳು... ನಾನು ಮುಗುಳ್ನಕ್ಕೆ. ಇದೆಲ್ಲಾ ನಡೆಯುತ್ತಿರುವಾಗ ಅಜ್ಜಿ ಒಳಗೆ ಅಡುಗೆ ಮನೆ ಕೆಲಸದಲ್ಲಿ ಮಗ್ನರಾಗಿದ್ದರು ಹಾಗೂ ಎದುರು ಮನೆಯ ಗೆಳತಿಯ ತಂದೆ ತಾಯಿ ಕೂಡ ಹೊರಗೆ ಬರಲಿಲ್ಲ. ಇನ್ನು ನಮ್ಮ ಪ್ರಣಯರಾಜ ಶ್ರೀನಾಥ್ ಹೊರಡುವ ಸಮಯ ಬಂದಿತು. ನನ್ನ ಅಜ್ಜಿಯನ್ನು ಹೊರಬರಲು ಕರೆದು ನಾನೂ ಹೊರಬಂದೆ. ಮನೆಗೆ ಹೋಗಿ ನನ್ನ ಗೆಳತಿ ಕೂಡ ತನ್ನ ತಾಯಿಯೊಂದಿಗೆ ಹೊರಬಂದಳು. ಪ್ರಣಯರಾಜ ತನ್ನ ಕಾರನ್ನು ಏರಿ ಹೊರಟು ನಮ್ಮ ಕಡೆಗೂ ಕೈ ಬೀಸಿ ಧನ್ಯವಾದಗಳನ್ನು ಅರ್ಪಿಸುತ್ತಾ ನನ್ನ ಅಜ್ಜಿಗೆ ಎರಡೂ ಕೈಗಳಿಂದ ನಮಸ್ಕರಿಸಿದರು. ಆಗ ಅಜ್ಜಿಯ ಮುಖದಲ್ಲಿ ಕಡಲು ಉಕ್ಕಿದಂತೆ ನಗು ಉಕ್ಕಿ ಹರಿಯಿತು. ಅವರು ಹೋದ ನಂತರ ನಾನು ಎದುರು ಮನೆಯ ಕಟ್ಟೆ ಮೇಲೆ ನಿಂತಿದ್ದ ಗೆಳತಿಯನ್ನು ನೋಡಿ ಮುಗುಳ್ನಕ್ಕು ಮನೆಯ ಒಳ ಬಂದೆ. ಆಗ ನನ್ನ ಬಿಸಿನೆಸ್ ಹೃದಯ ಒಂದೇ ಹಾಡನ್ನು ಹಾಡುತ್ತಿತ್ತು 'ಪ್ರೇಮದ ಕಡಲಲ್ಲಿ... ನೆನಪಿನ ದೋಣಿಯಲಿ... ಪಯಣಿಗ ನಾನಮ್ಮ'!!

ನಾನು ಪ್ರಣಯರಾಜನಿಗೆ ಹೃದಯದಿಂದಲೇ ವಂದಿಸಿದೆ.

ಕಾಮೆಂಟ್‌ಗಳಿಲ್ಲ: