ಬುಧವಾರ 30 ಜನವರೀ 2013

ಉಡುಗೊರೆ

ಜನ್ಮದಿನಕೆ ಹೇಗೆ ನೀಡಲಿ 
ಉಡುಗೊರೆ

ಉಪಮೆ ರೂಪಕ ದೀಪಕಗಳಿಂದ 
ಅಲಂಕರಿಸಿದ ಕಾವ್ಯ ನೀಡಲೇ?
ನಿನ್ನಂತ ನಿರಾಭರಣ ಸುಂದರಿಗೆ 
ಅಲಂಕಾರಿಕ ಕಾವ್ಯವೇ!

ವಿಶಿಷ್ಟ  ಪದ ರಚನೆಗಳ ಕಾವ್ಯ 
ರಚಿಸಿ ಕೊಡಲೇ?
ನಿನ್ನ ಮಾತಿನ ಲಹರಿಯ 
ಮುಂದೆ ರೀತಿ ಕಾವ್ಯವೇ!

ವಿಶಿಷ್ಟ  ಅರ್ಥ ಹೊಳೆಯಿಸುವ 
ಪದ್ಯ ರಚಿಸಿ ಹೇಳಲೇ?
ನಿನ್ನ ಸ್ನೇಹ ನನ್ನ ಜೀವನಕ್ಕೆ ನೀಡಿದ 
ಅರ್ಥದ ಮುಂದೆ ಧ್ವನಿ ಕಾವ್ಯವೇ!

ಹೇಗೆ ಇರಲಿ ಕಾವ್ಯ 
ರಸದ ಪಾಕದಲ್ಲಿ ಅದ್ದಿ ಕೊಡಲೇ?   
ನಿನ್ನ ಸವಿ ಮಾತಿನ ಆಹ್ಲಾದತೆ ಮುಂದೆ 
ರಸ ಕಾವ್ಯವೇ!

ಇದೋ ತೆಗೆದುಕೋ 
ಔಚಿತ್ಯದ ಬಟ್ಟಲಲಿರುವ 
ರಸದ ಪಾಕದಲಿ ಅದ್ದಿದ 
ವಿಶಿಷ್ಟ ವಿನ್ಯಾಸದ ಅಲಂಕಾರಿಕ 
ಕಾವ್ಯ ಜಾಮೂನಿನ ಉಡುಗೊರೆ .

 

ಮಂಗಳವಾರ 29 ಜನವರೀ 2013

ನಿರಂತರ


          ಹರಿಯುತಿದೆ  ಜೀವನ ವಾಹಿನಿ 
          ನಿಂತಲ್ಲಿ ನಿಲ್ಲದೆ ,
          ನಿಲ್ಲು ಎಂದರೂ ನಿಲ್ಲದೇ 

           ನಿಲ್ಲುವುದಾದರೂ  ಎಷ್ಟು ದಿನ ?
            ಅಲ್ಲಲ್ಲ .....       ಎಷ್ಟು ಕ್ಷಣ?
          
         ನಿಲ್ಲುವುದಾದರು ಯಾರಿಗಾಗಿ 
         ನಿಲ್ಲುವುದಾದರು ಯಾತಕ್ಕಾಗಿ 

         ಪ್ರಶ್ನೆ 
         ಉತ್ತರವಿಲ್ಲ!
         ಹಾಗಾಗಿ ಅದು ನಿಲ್ಲುವುದಿಲ್ಲ 

        ನಾವಾದರೂ  ನಿಲ್ಲಬಹುದೇ?

        ಜೀವನ ವಾಹಿನಿಗೆ 
        ದಡವೂ ಇಲ್ಲ 
        ತಳವೂ ಇಲ್ಲ 
        ಹರಿಯುವುದು ನಿರಂತರ 
        ನಿಲ್ಲುವುದಾದರೂ ಎಲ್ಲಿ?

        ಜೀವನ ವಾಹಿನಿ ನಿಲ್ಲಲಾರದು 
         ನಾವೂ  ಕೂಡ ನಿಲ್ಲಬಾರದು.  
          
(ಗೆಳೆಯ ಹರೀಶನ ತಾಯಿ ವಿಧಿವಶರಾಗಿದ್ದು ದುರ್ದೈವದ ಸಂಗತಿ. ಅವರಿಗೆ ಈ ನನ್ನ ಕವನ ಅರ್ಪಣೆ )                                  
 

ಬುಧವಾರ 24 ಅಕ್ಟೋಬರ್ 2012

ಬೆಳದಿಂಗಳ ಬೇಗೆ

ಸರಿಯಿದೆಯೆ ಈ ಕ್ರಮ ಹೇಳೆಲೋ ಚಂದ್ರಮ
ಪರಿತಾಪದಲ್ಲಿಯೂ ನಿನಗೇಕೆ ಸಂಭ್ರಮ

ಚೆಲುವಿನ ಹೂವು ಕೂಡ ಕಪ್ಪಾಗಿ ಕಂಡಿದೆ
ಮಿನುಗುವ ತಾರೆಯೂ ಮಂಕಾಗಿ ಹೋಗಿದೆ
ಏಕೊ ಏನೊ ನನ್ನ ಸಖಿಯ ಮುಖ ಬಾಡಿದೆ
ಅದರಿಂದ ನನ್ನ ಮನದಿ ಬೇಸರವು ಮೂಡಿದೆ

ಮತ್ತೆ ಮತ್ತೆ ಕೇಳುವಂಥ ಮಾಧುರ್ಯದ ದನಿ
ಕೇಳದಂತೆ ಆಗಿದೆ ಮೌನವಾಗಿ ಕೂತಿದೆ
ತಿರುಗಿ ತಿರುಗಿ ನೋಡುವಂಥ ಸೌಂದರ್ಯದ ಖನಿ
ಧುಮ್ಮಿಕ್ಕಿ ಹರಿದಿದೆ ಧಾರೆಯಾಗಿ ಕಂಬನಿ

ಕಾರಣವೆ ಸಿಗದ ರೀತಿ ಮನಸಿನಲ್ಲಿ ತತ್ತರ
ಬೆಳದಿಂಗಳು ಕೂಡ ನನಗೆ ಬೇಗೆಯಾಗಿ ಹೋಗಿದೆ
ನನ್ನ ಮನದ ಪ್ರಶ್ನೆಯ ಕೇಳಿ ನಿನ್ನ ಹತ್ತಿರ
ಕಾದು ಕುಳಿತೆ ಚಂದ್ರಮ ಬರಲಿ ನಿನ್ನ ಉತ್ತರ

ಸೋಮವಾರ 23 ಎಪ್ರಿಲ್ 2012

ಹಳೇ ಮಳೆ

ಬಿಸಿಗಾಲದಲ್ಲಿ ಖಗ ನೀಲದಲ್ಲಿ
ಹಿಂಡಾಗಿ ಬಂತು ಮೋಡ
ಮಳೆ ಬರುವುದೆಂಬ ಹೊಸ ಆಸೆಯೊಂದು
ಮೂಡಿತ್ತು ಮನದಿ ನೋಡ

ಕರಿಮೋಡ ಸುತ್ತ ಬರೆದಾನ ಬೆಳ್ಳಿ
ಗೆರೆಯಲ್ಲಿ ಸೂರ್ಯ ಚಿತ್ರ
ಮನೆಯಲ್ಲೆ ನಿಂತು ಸೊಬಗನ್ನ ನೋಡಿ
ನಲಿದಿತ್ತು ಮಗುವು ಮಿತ್ರ

ಕೋಲ್ಮಿಂಚಿನಾಟ ನೋಡುತ್ತ ಕಂದ
ಕೇಳಿತ್ತು ಗುಡುಗು ಸಿಡಿಲ
ಹೌಹಾರಿ ಬೆದರಿ ಕ್ಷಣದಲ್ಲಿ ತಾನು
ಸೇರಿತ್ತು ತಾಯಿ ಮಡಿಲ

ಬಾನನ್ನು ತೊರೆದು ಭುವಿಯತ್ತ ಹೊರಟು
ಸುರಿದಿತ್ತು ಮೊದಲ ಮಳೆಯು
ನೀರಲ್ಲಿ ಮಿಂದು ನೆಲವೆಲ್ಲ ನೆನೆದು
ಪಸರಿತ್ತು ಕಂಪ ಇಳೆಯು

ಶುಕ್ರವಾರ 30 ಮಾರ್ಚ್ 2012

ಮರಳಿದ ನೆನಪು

ಬಾ, ಗೆಳತಿ ಇಂದು ನಿನ್ನ ನೆನಪು ಹಸಿಯಾಗಿದೆ
ಅಂದೇ ಹಣ್ಣಾಗಿ ಮಾಗಿದ ಒಲವ ನೀ ನಲ್ಲೆ ಮರೆತೆಯಾ
ನಾ ಮರೆಯಲಾರೆನು.. ಎಂದೂ ನೀ ಬಾರದಾದೆಯಾ

ಸೂತ್ರ ಕಟ್ಟಿ ಹಾರಿಬಿಟ್ಟ ಗಾಳಿಪಟವು ಕಂಡಿದೆ
ಜಾತ್ರೆ ಪೇಟೆಯಲ್ಲಿ ಸುತ್ತಿ ಬಂದ ನೆನಪು ಕಾಡಿದೆ
ರಾತ್ರಿ ಚಂದ್ರನಲ್ಲಿ ಕೂಡ ನಿನ್ನ ಮೊಗವೆ ಮೂಡಿದೆ
ಬಾ, ಗೆಳತಿ ನನ್ನ ಮನವು ನಿನ್ನ ಬಳಿ ಓಡಿದೆ

ನಾವೆಯಲ್ಲಿ ಕೂತು ಹೋದ ನದಿಯ ದಂಡೆ ಕಾದಿದೆ
ಭಾವ ತುಂಬಿ ನೀನು ನುಡಿದ ಮಾತಿನಿಂದ ಬೆಂದಿದೆ
ನೋವಿನಿಂದ ಬೀಳುಕೊಟ್ಟ ದಿನವ ನೆನೆದು ನೊಂದಿದೆ
ಬಾ, ಗೆಳತಿ ನನ್ನ ಹೃದಯ ನಿನ್ನ ಬಳಿ ಬಂದಿದೆ

ಕಣ್ಣ ಒರೆಸಿ ಕಾಣೆಯಾದ ನಿನ್ನ ಬಗ್ಗೆ  ದೂರಿದೆ
ತಣ್ಣಗಾಗಿ ಹೇಳುವಂಥ ನನ್ನ ಕಥೆಯು ನೂರಿದೆ
ಬಣ್ಣ ಬಣ್ಣದಿಂದ ಇರುವ ಜೋಡಿ ಹಕ್ಕಿ ಹಾರಿದೆ
ಬಾ, ಗೆಳತಿ ನನ್ನ ಜೀವ ನಿನ್ನ ಜೊತೆ ಕೋರಿದೆ

(ಸ್ಫೂರ್ತಿ: ಜಯಂತ್ ಕಾಯ್ಕಿಣಿ ರಚಿಸಿರುವ ನೀನೆ ಬರಿ ನೀನೆ ಗುಚ್ಛದ ಸೋನು ನಿಗಮ್ ಹಾಡಿರುವ ಬಾ ನೋಡು ಗೆಳತಿ ನವಿಲುಗರಿಯು ಮರಿ ಹಾಕಿದೆ ಹಾಡು)