ಬುಧವಾರ, ಅಕ್ಟೋಬರ್ 24, 2012

ಬೆಳದಿಂಗಳ ಬೇಗೆ

ಸರಿಯಿದೆಯೆ ಈ ಕ್ರಮ ಹೇಳೆಲೋ ಚಂದ್ರಮ
ಪರಿತಾಪದಲ್ಲಿಯೂ ನಿನಗೇಕೆ ಸಂಭ್ರಮ

ಚೆಲುವಿನ ಹೂವು ಕೂಡ ಕಪ್ಪಾಗಿ ಕಂಡಿದೆ
ಮಿನುಗುವ ತಾರೆಯೂ ಮಂಕಾಗಿ ಹೋಗಿದೆ
ಏಕೊ ಏನೊ ನನ್ನ ಸಖಿಯ ಮುಖ ಬಾಡಿದೆ
ಅದರಿಂದ ನನ್ನ ಮನದಿ ಬೇಸರವು ಮೂಡಿದೆ

ಮತ್ತೆ ಮತ್ತೆ ಕೇಳುವಂಥ ಮಾಧುರ್ಯದ ದನಿ
ಕೇಳದಂತೆ ಆಗಿದೆ ಮೌನವಾಗಿ ಕೂತಿದೆ
ತಿರುಗಿ ತಿರುಗಿ ನೋಡುವಂಥ ಸೌಂದರ್ಯದ ಖನಿ
ಧುಮ್ಮಿಕ್ಕಿ ಹರಿದಿದೆ ಧಾರೆಯಾಗಿ ಕಂಬನಿ

ಕಾರಣವೆ ಸಿಗದ ರೀತಿ ಮನಸಿನಲ್ಲಿ ತತ್ತರ
ಬೆಳದಿಂಗಳು ಕೂಡ ನನಗೆ ಬೇಗೆಯಾಗಿ ಹೋಗಿದೆ
ನನ್ನ ಮನದ ಪ್ರಶ್ನೆಯ ಕೇಳಿ ನಿನ್ನ ಹತ್ತಿರ
ಕಾದು ಕುಳಿತೆ ಚಂದ್ರಮ ಬರಲಿ ನಿನ್ನ ಉತ್ತರ

ಸೋಮವಾರ, ಏಪ್ರಿಲ್ 23, 2012

ಹಳೇ ಮಳೆ

ಬಿಸಿಗಾಲದಲ್ಲಿ ಖಗ ನೀಲದಲ್ಲಿ
ಹಿಂಡಾಗಿ ಬಂತು ಮೋಡ
ಮಳೆ ಬರುವುದೆಂಬ ಹೊಸ ಆಸೆಯೊಂದು
ಮೂಡಿತ್ತು ಮನದಿ ನೋಡ

ಕರಿಮೋಡ ಸುತ್ತ ಬರೆದಾನ ಬೆಳ್ಳಿ
ಗೆರೆಯಲ್ಲಿ ಸೂರ್ಯ ಚಿತ್ರ
ಮನೆಯಲ್ಲೆ ನಿಂತು ಸೊಬಗನ್ನ ನೋಡಿ
ನಲಿದಿತ್ತು ಮಗುವು ಮಿತ್ರ

ಕೋಲ್ಮಿಂಚಿನಾಟ ನೋಡುತ್ತ ಕಂದ
ಕೇಳಿತ್ತು ಗುಡುಗು ಸಿಡಿಲ
ಹೌಹಾರಿ ಬೆದರಿ ಕ್ಷಣದಲ್ಲಿ ತಾನು
ಸೇರಿತ್ತು ತಾಯಿ ಮಡಿಲ

ಬಾನನ್ನು ತೊರೆದು ಭುವಿಯತ್ತ ಹೊರಟು
ಸುರಿದಿತ್ತು ಮೊದಲ ಮಳೆಯು
ನೀರಲ್ಲಿ ಮಿಂದು ನೆಲವೆಲ್ಲ ನೆನೆದು
ಪಸರಿತ್ತು ಕಂಪ ಇಳೆಯು

ಶುಕ್ರವಾರ, ಮಾರ್ಚ್ 30, 2012

ಮರಳಿದ ನೆನಪು

ಬಾ, ಗೆಳತಿ ಇಂದು ನಿನ್ನ ನೆನಪು ಹಸಿಯಾಗಿದೆ
ಅಂದೇ ಹಣ್ಣಾಗಿ ಮಾಗಿದ ಒಲವ ನೀ ನಲ್ಲೆ ಮರೆತೆಯಾ
ನಾ ಮರೆಯಲಾರೆನು.. ಎಂದೂ ನೀ ಬಾರದಾದೆಯಾ

ಸೂತ್ರ ಕಟ್ಟಿ ಹಾರಿಬಿಟ್ಟ ಗಾಳಿಪಟವು ಕಂಡಿದೆ
ಜಾತ್ರೆ ಪೇಟೆಯಲ್ಲಿ ಸುತ್ತಿ ಬಂದ ನೆನಪು ಕಾಡಿದೆ
ರಾತ್ರಿ ಚಂದ್ರನಲ್ಲಿ ಕೂಡ ನಿನ್ನ ಮೊಗವೆ ಮೂಡಿದೆ
ಬಾ, ಗೆಳತಿ ನನ್ನ ಮನವು ನಿನ್ನ ಬಳಿ ಓಡಿದೆ

ನಾವೆಯಲ್ಲಿ ಕೂತು ಹೋದ ನದಿಯ ದಂಡೆ ಕಾದಿದೆ
ಭಾವ ತುಂಬಿ ನೀನು ನುಡಿದ ಮಾತಿನಿಂದ ಬೆಂದಿದೆ
ನೋವಿನಿಂದ ಬೀಳುಕೊಟ್ಟ ದಿನವ ನೆನೆದು ನೊಂದಿದೆ
ಬಾ, ಗೆಳತಿ ನನ್ನ ಹೃದಯ ನಿನ್ನ ಬಳಿ ಬಂದಿದೆ

ಕಣ್ಣ ಒರೆಸಿ ಕಾಣೆಯಾದ ನಿನ್ನ ಬಗ್ಗೆ  ದೂರಿದೆ
ತಣ್ಣಗಾಗಿ ಹೇಳುವಂಥ ನನ್ನ ಕಥೆಯು ನೂರಿದೆ
ಬಣ್ಣ ಬಣ್ಣದಿಂದ ಇರುವ ಜೋಡಿ ಹಕ್ಕಿ ಹಾರಿದೆ
ಬಾ, ಗೆಳತಿ ನನ್ನ ಜೀವ ನಿನ್ನ ಜೊತೆ ಕೋರಿದೆ

(ಸ್ಫೂರ್ತಿ: ಜಯಂತ್ ಕಾಯ್ಕಿಣಿ ರಚಿಸಿರುವ ನೀನೆ ಬರಿ ನೀನೆ ಗುಚ್ಛದ ಸೋನು ನಿಗಮ್ ಹಾಡಿರುವ ಬಾ ನೋಡು ಗೆಳತಿ ನವಿಲುಗರಿಯು ಮರಿ ಹಾಕಿದೆ ಹಾಡು)

ಶುಕ್ರವಾರ, ಮಾರ್ಚ್ 23, 2012

ಯುಗಾದಿ

ಪ್ರತಿ ಅಂತ್ಯಕ್ಕೊಂದು ನಾಂದಿ ಇರುವಂತೆ
ಶರತ್ಕಾಲದ ನಂತರದ ವಸಂತ ಮಾಸದಂತೆ
ಇರುಳಿನ ಹಿಂದೆಯೇ ಬರುವ ಹಗಲಿನಂತೆ

ಹಳೇ ಬೇರಿನಿಂದ ಹೊಸ ಚಿಗುರು ಬರುವಂತೆ
ಹಿರಿಯರ ಆಶೀರ್ವಾದ ನವ ಪೀಳಿಗೆಯ ಏಳ್ಗೆಯಂತೆ
ಎಲ್ಲಾ ಪುರಾತನ ಸೃಷ್ಟಿ ನವೀನವಾಗುವಂತೆ

ಹೊಸ ಹುಮ್ಮಸ್ಸು ಜಡವನ್ನು ಕಿತ್ತೊಗೆಯಲಿ
ಕಾದಿದ್ದ ಎಲ್ಲಾ ಕನಸುಗಳು ನನಸಾಗಲಿ
ಹರುಷದ ಅಲೆಯು ಎಲ್ಲೆಲ್ಲೂ ಹರಡಲಿ

ಯುಗಾದಿಯು, ಬೇವಿನ ಕಹಿ ಕಡಿಮೆ ತರಲಿ
ಬೆಲ್ಲದ ಸಿಹಿ ಬಾಳಲ್ಲಿ ಹೊಳೆಯಾಗಿ ಹರಿಯಲಿ
ಬೇವು-ಬೆಲ್ಲ ಜೀವನದ ಸಾರವಾಗಲಿ

ಸೋಮವಾರ, ಮಾರ್ಚ್ 12, 2012

ಆಶಯ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಿದ ಪಾತ್ರಗಳೆಷ್ಟೋ
ಪಾತ್ರದ ಭಾವನೆಗಳೆಷ್ಟೋ -
ಒಮ್ಮೆ ಅಳು, ಒಮ್ಮೆ ನಗು.
ಒಮ್ಮೆ ದುಃಖ, ಒಮ್ಮೆ ಸುಖ

ಜೀವನವೆಂಬ ನಾಟಕದಲ್ಲಿ
ನೀವು ನಟಿಸಬೇಕಾಗಿರುವ ಪಾತ್ರಗಳೆಷ್ಟೋ
ಪಾತ್ರದ ನಿರೀಕ್ಷೆಗಳೆಷ್ಟೋ -
ತುಂಬು ಪ್ರೀತಿ, ಸದಾ ನೆಮ್ಮದಿ.
ಗಟ್ಟಿ ನೆಲೆ, ಆಶಯದ ಸೆಲೆ

ಪಾತ್ರದ ಆಯ್ಕೆ ಸೂತ್ರದಾರನದ್ದು
ನಟಿಸುವ ಸಾಮರ್ಥ್ಯ ಮಾತ್ರ ನಿಮ್ಮದು
ಪಾತ್ರ ಯಾವುದೇ ಇರಲಿ
ರಂಗ ಯಾವುದೇ ಇರಲಿ
ನಿಮ್ಮ ಸಾಮರ್ಥ್ಯ ಎಂದೂ ಕುಗ್ಗದಿರಲಿ
ಯಶಸ್ಸಿನ ಗರಿ ಸದಾ ನಿಮ್ಮೊಂದಿಗಿರಲಿ

ಮಂಗಳವಾರ, ಫೆಬ್ರವರಿ 14, 2012

ಪ್ರೊಪೋಸ್ ಮಾಡದಿರಲು ೧೨ ಕಾರಣಗಳು!

ಇಂದು ಫೆಬ್ರುವರಿ ೧೪. ಸೋ ಕಾಲ್ಡ್ ವ್ಯಾಲೆಂಟೈನ್ಸ್ ಡೇ; ಅಥವಾ ಪ್ರೇಮಿಗಳ ದಿನಾಚರಣೆ. ಅದು ಭಾರತೀಯರಲ್ಲಿ ಎಷ್ಟು ಪ್ರಸ್ತುತ, ಏಕೆ ಪ್ರಸ್ತುತ ಎಂಬ ವಾದಗಳನ್ನೆಲ್ಲ ಬದಿಗಿಡೋಣ.

ಪ್ರೀತಿಸಲು ನೂರಾರು ಕಾರಣಗಳಿರಬಹುದು. ಆದರೆ ಹುಡುಗ ಅಥವಾ ಹುಡುಗಿಗೆ ಪ್ರೇಮ ನಿವೇದನೆ ಮಾಡಿಕೊಳ್ಳಲು ಒಂದೇ ಕಾರಣವಿರಲು ಸಾಧ್ಯ. ಹೃದಯದ ಕರೆಗೆ ಓಗೊಟ್ಟು ಅವನನ್ನು ಅಥವಾ ಅವಳನ್ನು ಇಷ್ಟಪಟ್ಟಿದ್ದು.

ಆದರೆ ಎಷ್ಟೋ ಪ್ರೇಮಿಗಳು ತಮ್ಮ ಪ್ರೀತಿಯನ್ನು ತಮ್ಮ ಪ್ರಿಯತಮ/ಪ್ರಿಯತಮೆಯೊಂದಿಗೆ ಹೇಳಿಕೊಳ್ಳಲಾಗದೆ ಮರುಗುತ್ತಾರೆ. ಅದಕ್ಕೆ ಕಾರಣಗೇಳಿನರಬಹುದು? ಯೋಚಿಸಿದ್ದೀರಾ? ಪ್ರೊಪೋಸ್ ಮಾಡದೇ ಇರಲು ನನಗನ್ನಿಸಿದ ಕೆಲವು ಕಾರಣಗಳನ್ನು ಇಲ್ಲಿ ಪಟ್ಟಿ ಮಾಡಿದ್ದೇನೆ:

೧. ನಾನು ಅವನಿಗೆ/ಅವಳಿಗೆ ಇಷ್ಟ ಆಗುತ್ತೇನೋ ಇಲ್ಲವೋ ಎಂಬ ಗೊಂದಲ.
೨. ನಾನೇ ಯಾಕೆ ಪ್ರೊಪೋಸ್ ಮಾಡ್ಲಿ, ಆಕೆಗೆ/ಅವನಿಗೆ ಇಷ್ಟ ಇದ್ರೆ ಅವಳೇ/ಅವನೇ ಮಾಡಲಿ ಎಂಬ ಭಾವನೆ.
೩. ಹುಡುಗ/ಹುಡುಗಿ ಒಪ್ಪಿಕೊಳ್ಳದೇ ಇದ್ರೆ ಅವಮಾನ ಎನ್ನುವ ಭಾವನೆ.
೪. ಒಂದೊಮ್ಮೆ ಒಪ್ಪದಿದ್ದರೆ ಇರುವ ಸ್ನೇಹವೂ ಹಾಳಾಗಬಹುದು ಎಂಬ ಭಯ.
೫. ತಾನು ನಿಜವಾಗಿಯೂ ಪ್ರೀತಿಯಲ್ಲಿ ಇದೀನೋ ಇಲ್ವೋ ಅನ್ನೋದೇ ಗೊತ್ತಾಗದೇ ಇರೋ ಭಾವನೆ.
೬. ನಿಜವಾದ ಪ್ರೀತಿ ಇದ್ದರೂ ಮನೆಯಲ್ಲಿ ಲವ್ ಎಂದರೆ ಏನೆಂದುಕೊಳ್ಳುತಾರೋ ಎಂಬ ಭಾವನೆ.
೭. ಒಂದು ವೇಳೆ ಪ್ರೇಮವಿವಾಹಕ್ಕೆ ಒಪ್ಪುವ ಕುಟುಂಬವೇ ಆದರೂ, ಮನೆಯವಲ್ಲಿನ ಇತರರಿಗೆ ಹುಡುಗ/ಹುಡುಗಿ ಹೊಂದಾಣಿಕೆ ಆಗದಿದ್ದರೆ ಏನು ಗತಿ ಎಂಬ ಗೊಂದಲ.
೮. ಹುಡುಗ/ಹುಡುಗಿಯೂ ಅದಕ್ಕೆ ಒಪ್ಪಿ ಮದುವೆಯೂ ಆದರೂ, ಜಾತಕ ಕೂಡಿ ಬರದೆ ಮುಂದೆ ವೈವಾಹಿಕ ಜೀವನದಲ್ಲೇನಾದರೂ ವಿರಸವುಂಟಾಗಿ, ಮುಂದೆ ಹಿರಿಯರು ಆಡಿಕೊಳ್ಳುವಂತಾದರೆ ಎಂಬ ಭಯ.
೯. ಈಗಾಗಲೇ ಆ ಹುಡುಗ/ಹುಡುಗಿ ಬೇರೆ ಯಾರನ್ನೋ ಇಷ್ಟಪಟ್ಟಿದ್ದರೆ ಏನು ಗತಿ ಎಂಬ ಸಂಶಯ.
೧೦. ಹುಡುಗಿಯ ಸೋದರ/ಸಂಬಂಧಿಗಳಾರಾದರೂ ಗೂಂಡಾಗಳ ಥರ ಇದ್ದರೆ, ಅಥವಾ ಕುಟುಂಬಗಳ ಮಧ್ಯೆ ಪಾರಂಪರಿಕ ದ್ವೇಷ ಇದ್ದರೆ, ಪರಸ್ಪರ ಇಷ್ಟ ಪಟ್ಟಿದ್ದರೂ ಅದನ್ನು ಹೇಳಿಕೊಳ್ಳಲು ಹುಡುಗ-ಹುಡುಗಿ ಇಬ್ಬರಿಗೂ ಆಕೆಯ ಸೋದರ/ಸಂಬಂಧಿಯ ಅಥವಾ ಅವರ ಕುಟುಂಬದ ಬಗ್ಗೆ ಇರುವ ಭಯ.
೧೧. ಹುಡುಗ/ಹುಡುಗಿಯ ಆಸ್ತಿ-ಅಂತಸ್ತಿನಲ್ಲಿ ಅಜಗಜಾಂತರ ವ್ಯತ್ಯಾಸ ಇದ್ದು, ಅವನಿಗೆ/ಅವಳಿಗೆ ತಾನು ಸರಿಸಾಟಿ ಹೌದೋ ಅಲ್ಲವೋ ಎಂಬ ಅನಿಸಿಕೆಯಿಂದ ಉಂಟಾಗುವ ಕೈಗೆ ಸಿಗದ ದ್ರಾಕ್ಷಿ ಹುಳಿ ಎಂಬ ಭಾವನೆ.
೧೨. ಹುಡುಗ/ಹುಡುಗಿಯ ವಿದ್ಯಾರ್ಹತೆಯಲ್ಲಿ ವ್ಯತ್ಯಾಸ (ಹುಡುಗಿ ಅತಿ ಕಡಿಮೆ ಓದಿರುವುದು ಅಥವಾ ಹುಡುಗನಿಗಿಂತ ಹೆಚ್ಚು ಓದಿರುವುದು) ಇದ್ದು, ತನಗೂ ಆತನಿಗೂ/ಆಕೆಗೂ ಹೊಂದಾಣಿಕೆಯಾಗುತ್ತದೆಯೋ ಇಲ್ಲವೋ ಎಂಬ ಸಂಶಯ.

ಇವುಗಳ ಹೊರತಾಗಿ ಬೇರೆ ಕಾರಣಗಳೂ ನಿಮಗೆ ಹೊಳೆಯಬಹುದು ಅಥವಾ ಅನುಭವಕ್ಕೆ ಬಂದಿರಬಹುದು. ಅದನ್ನು ನೀವು ಮುಕ್ತವಾಗಿ ಹಂಚಿಕೊಳ್ಳಬಹುದು.

ಸೋಮವಾರ, ಜನವರಿ 30, 2012

ಸ್ನೇಹ ಬಂಧ



ಮೌನಿಯಾದಾಗ
ಮಾತಾಗಿತ್ತು
ಒಂಟಿಯಾದಾಗ
ಜೊತೆಗಾರನಾಗಿತ್ತು
ದುಗುಡಗೊಂಡಾಗ
ಶಾಂತಗೊಳಿಸಿತ್ತು
ಆತುರಬಿದ್ದಾಗ
ತಡೆಹಿಡಿದಿತ್ತು
ಕೆಳಗೆ ಬಿದ್ದಾಗ
ಏಣಿಯಾಗಿತ್ತು
ಮೇಲೇರಿದಾಗ
ಬೆನ್ನು ತಟ್ಟಿತ್ತು
ಪ್ರತಿ ಕ್ಲಿಷ್ಟತೆಯಲೂ
ಜೊತೆಯಾಗಿತ್ತು
ಯಾರದೋ ವಕ್ರದೃಷ್ಟಿಗೆ
ಬಲಿಯಾಗಿತ್ತು
ನಿನ್ನ ನನ್ನಿಂದ ಮಾಡಿ ದೂರ
`ಸ್ನೇಹ ಬಂಧ ` ಕಳಚಿತ್ತು.

ಸೋಮವಾರ, ಜನವರಿ 2, 2012

ಜೀವನ ರೇಖೆ

ಹಲವು ರೇಖೆಗಳನು ಗೀಚಿ
                 ಮರಳಿ ಅಳಿಸಿ ಹಾಕಿದೆ,
ಹಲವು ಕನಸುಗಳನು ಕಂಡು
                 ನನಸ ಮರೆತು ಜಾರಿದೇ ||

ಮೊದಲ ಮಾತು ಮೊದಲ ಕನಸು
                 ಮನದಲಿನ್ನು ಉಳಿಯಿತೇ,
ಅದಕೆ ಏನೋ ಇಂದು ಮನವು
                 ನಿನ್ನ ಕಡೆಯೇ ಜಾರಿದೇ||

ನಲಿವ ಹಾದಿಯಲ್ಲಿ ನಾನು
                ನಗದೆ ಹೋದೆನಲ್ಲವೇ,
ನಿನ್ನ ಪ್ರೀತಿಯಲ್ಲಿ ನಾನು
                ಕರಗಿ ಹೋದೆನಲ್ಲವೇ||

ನಲ್ಲೆ ನಿನ್ನ ಕೊರಗು ಎನಗೆ
                 ಕನಸಿನಲ್ಲೂ ಕಾಡಿತು,
ಅದಕೆ ಏನೋ ಇಂದು ನಲಿವ
                 ನನಸನೊಂದು ನೀಡಿದೇ||

ನಲ್ಲೆ ಏಕೋ ಇಂದು ಮನವು ನಿನ್ನ ಕಡೆಯೇ ಜಾರಿದೇ..