ಬುಧವಾರ, ಆಗಸ್ಟ್ 15, 2007

ನನ್ನ ದೇಶ, ನನ್ನ ಜನ

ಆಗಸ್ಟ್ ೧೫. ಸ್ವಾತಂತ್ರ್ಯ ದಿನಾಚರಣೆ. ಕೆಲವೇ ವರ್ಷಗಳ ಹಿಂದಿನ ಮಾತು. ಸಂಭ್ರಮದಿಂದ ನಮ್ಮದೇ ಮನೆಯ ಕಾರ್ಯಕ್ರಮವೇನೋ ಎಂಬಂತೆ ಬೆಳಿಗ್ಗೆ ಎದ್ದು ಧ್ವಜಾರೋಹಣಕ್ಕೆ ಸಿದ್ಧಪಡಿಸಲು ಹೋಗುತ್ತಿದ್ದೆವು. ತಿಂಡಿ ತಿಂದಿರದಿದ್ದರೂ ಶಾಲೆಯಲ್ಲಿ ಕೊಡುತ್ತಿದ್ದ ಒಂದು ನಿಂಬೆ ಹುಳಿ ಚಾಕಲೇಟ್ ತಿಂದು ಮಧ್ಯಾಹ್ನದವರೆಗೆ ನಗರದ ಮುಖ್ಯ ಮೈದಾನದಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳನ್ನು ನೋಡಿ ಮುಗಿಸಿಕೊಂಡೇ ಮನೆಗೆ ಬರುತ್ತಿದ್ದೆವು. "ಆಹಾ! ಇಂದು ನಮ್ಮ ದೇಶಕ್ಕೆ ಸ್ವಾತಂತ್ರ್ಯ ಬಂದ ದಿನ!" ಎಂದು ಇತಿಹಾಸವನ್ನೂ, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದ ವೀರರನ್ನೂ ನೆನಪಿಸಿಕೊಳ್ಳುತ್ತಿದ್ದೆವು. ಈಗ? "ವಾವ್! ಒನ್ ಡೇ ಫುಲ್ ರೆಸ್ಟ್ ತಗೋಬಹುದು" ಎನ್ನುವ ಭಾವನೆ. ಧ್ವಜಾರೋಹಣಕ್ಕೆ ಹೋಗುವುದಿರಲಿ, ದೂರದರ್ಶದಲ್ಲಿ ತೋರಿಸುವ ಪರೇಡ್ ನೋಡಲೂ ನಮಗೆ ಪುರಸೊತ್ತಿಲ್ಲ.

೩ನೇ ತರಗತಿಯಲ್ಲಿದ್ದಾಗ ಓದಿದ ಒಂದು ಪದ್ಯದ ಪಲ್ಲವಿ ನೆನಪಿಗೆ ಬರುತ್ತಿದೆ:
ನನ್ನ ದೇಶ ನನ್ನ ಜನ
ನನ್ನ ಮಾನ ಪ್ರಾಣ ಘನ
ತೀರಿಸುವೆನೆ ಅದರ ಋಣ ಈ ಒಂದೇ ಜನ್ಮದಿ...
ಆಗ ನಾವಿನ್ನೂ ಚಿಕ್ಕವರು. ಇದು ಕೇವಲ ಕಂಠಪಾಠಕ್ಕಾಗಿಟ್ಟ ಒಂದು ಪದ್ಯವಾಗಿತ್ತು. ಆದರೆ ಈಗ ಅದರ ಅರ್ಥ ನೋಡಿದಾಗ ನಿಜಕ್ಕೂ ಕವಿಯ ಬಗ್ಗೆ ಗೌರವ ಉಕ್ಕುತ್ತದೆ. ಈ ದೇಶ ಏನೇನನ್ನು ಕೊಟ್ಟಿಲ್ಲ ನಮಗೆ: ಇರಲು ನೆಲ, ತಿನ್ನಲು ಅನ್ನ, ಉಸಿರಾಡಲು ಗಾಳಿ, ಕುಡಿಯಲು ನೀರು. ಅವನ್ನು ಎಲ್ಲ ದೇಶಗಳೂ ಕೊಡುತ್ತವೆ, ನಿಜ. ಆದರೆ ಅವೆಲ್ಲಕ್ಕಿಂತ ಭಿನ್ನವಾಗಿ ಭಾರತ ನಿಲ್ಲುವುದು ಇದರ ಅನೇಕತೆಯಲ್ಲಿನ ಐಕ್ಯತೆಯಿಂದ. ಹಿಂದೂ, ಮುಸ್ಲಿಂ, ಕ್ರೈಸ್ತ, ಬೌದ್ಧ, ಜೈನ ಎಲ್ಲ ಜಾತಿ-ಮತದ ಜನರೊಂದಿಗೆ ಸಹಬಾಳ್ವೆ ನಡಸುವ, ಅವರ ಸಂಸ್ಕೃತಿಯನ್ನು ಅರ್ಥ ಮಾಡಿಕೊಳ್ಳುವ ಅವಕಾಶ ಇನ್ನಾವ ರಾಷ್ಟ್ರದವರಿಗಿದೆ? ಮರುಭೂಮಿ, ಹಿಮಾಚ್ಛಾದಿತ ಪ್ರದೇಶ, ಕರಾವಳಿ, ಜಲಪಾತ, ಪರ್ವತಶ್ರೇಣಿಗಳೆಲ್ಲವನ್ನೂ ಒಂದೆಡೆ ನೋಡಿ ಪ್ರಕೃತಿಯ ಸೊಬಗನ್ನು ಅನುಭವಿಸುವ ಅದೃಷ್ಟ ಇನ್ನಾವ ನಾಡಿನಲ್ಲಿ ಸಿಕ್ಕೀತು?

ಭಾರತಕ್ಕೆ ಸ್ವಾತಂತ್ರ್ಯ ಬಂದು ೬೦ ವರ್ಷಗಳಾವು. ೩೫ ಕೋಟಿ ಇದ್ದ ಜನಸಂಖ್ಯೆ ೧೧೫ ಕೋಟಿ ಆಗಿದೆ. ೧.೨೫ ಡಾಲರ್ ಇದ್ದ ರೂಪಾಯಿ ಬೆಲೆ ೦.೦೨೫ ಡಾಲರ್‍ಗೆ ಇಳಿದಿದೆ. ಆದರೆ ಇವಾವುದರ ಪರಿವೆಯೂ ಜನರಿಗಿದ್ದಂತಿಲ್ಲ. ಇಂದಿನ ಮಾಧ್ಯಮಗಳು ಬಿಂಬಿಸುತ್ತಿಲ್ಲ ಕೂಡ. ದುಡ್ಡಿಗಾಗಿ ದೇಶ ಮಾರಲು ಸಿದ್ಧವಿರುವವರು ನಮ್ಮ ರಾಜಕೀಯ ನಾಯಕರು! ದುಡ್ಡಿಗಾಗಿ ತಮ್ಮನ್ನೇ ಮಾರಿಕೊಂಡಿರುವ ಸಿನಿಮಾ ನಟರು, ಕ್ರಿಕೆಟಿಗರು ನಮ್ಮ ಆದರ್ಶವ್ಯಕ್ತಿಗಳು!! ಲಗೇ ರಹೋ ಮುನ್ನಾ ಭಾಯ್ ಚಿತ್ರದಲ್ಲಿನ ಗಾಂಧೀಜಿ ಹೇಳುವಂತೆ, ದೇಶವೇನೋ ನಮ್ಮದಾಗಿದೆ, ಆದರೆ ಜನ ಪರಕೀಯರಾಗಿದ್ದಾರೆ. ನನ್ನ ತಂದೆ ಆಗಾಗ ಹೇಳುವ ಒಂದು ಸಾಲು ಹೀಗಿದೆ:
ದೇಖ್ ತೇರಾ ಸಂಸಾರ್ ಕೀ ಹಾಲತ್ ಕ್ಯಾ ಹೋ ಗಯೀ ಭಗವಾನ್...
ಕಿತನಾ ಬದಲ್ ಗಯಾ ಇನ್‍ಸಾನ್...
ನಿನ್ನೆ ಪೇಪರ್‍ನಲ್ಲಿ ಓದಿದ ಒಂದು ಸುದ್ದಿ: "ಅಕ್ರಮವಾಗಿ ಹರಿಸಲಾಗಿದ್ದ ವಿದ್ಯುತ್ ತಂತಿ ತುಳಿದು ತೆಂಗಿನಕಾಯಿ ಕದಿಯಲು ಹೋಗಿದ್ದ ಇಬ್ಬರ ಸಾವು".
ನೀವೇ ಹೇಳಿ, ನಾವೆಲ್ಲಿಗೆ ಬಂದು ನಿಂತಿದ್ದೇವೆ? ಎತ್ತ ಸಾಗುತ್ತಿದ್ದೇವೆ?

ಕಾಮೆಂಟ್‌ಗಳಿಲ್ಲ: