ಮಂಗಳವಾರ, ಸೆಪ್ಟೆಂಬರ್ 13, 2011

ಗೆಳತಿಗೊಂದು ಪತ್ರ

ಗೆಳತಿ,

ಅದೇನೋ ಹೇಳುತ್ತಾರಲ್ಲ ಮೊದಲ ಪ್ರೀತಿ ಮರೆಯೋಕೆ ಸಾಧ್ಯ ಇಲ್ಲ ಅಂತ.. ಅದು ಅಕ್ಷರಶಃ ನಿಜ ಕಣೇ. ಆ ಘಟನೆ ನಡೆದು ನಾಲ್ಕು ವರ್ಷಗಳೇ ಕಳೆದಿದ್ದರೂ ನಿನ್ನ ನೆನಪು ನನ್ನ ಮನಸ್ಸಿನಲ್ಲಿ ಒಂಚೂರೂ ಅಚ್ಚಳಿಯದೆ ಹಾಗೇ ಇದೆ. ಫಳಫಳ ಹೊಳೆಯುವ ದುಂಡನೆಯ ಬಿಳುಪಾದ ಮುಖ, ಕಡುಗಪ್ಪು ಕೂದಲು, ಇವುಗಳಿಗೆ ಹೊಂದುವ ತೆಳುಗುಲಾಬಿ ಬಣ್ಣದ ತುಟಿಗಳು, ನಕ್ಕರೆ ಗುಳಿ ಬೀಳುವ ಬಲಗೆನ್ನೆ, ತಿದ್ದಿ ತೀಡಿದಂತಹ ಹುಬ್ಬು, ನೇರನೋಟಕ್ಕೆ ಸಿಕ್ಕಿದರೆ ಕೊಂದುಬಿಡಡುತ್ತವೇನೋ ಎಂಬಂಥ ಕಣ್ಣುಗಳು, ದಷ್ಟಪುಷ್ಟವಾದರೂ ದಪ್ಪ ಎನ್ನಲಾಗದ ಸುಂದರ ಮೈಮಾಟ, ತನ್ನನ್ನು ಯಾರು ಗಮನಿಸುತ್ತಿದ್ದಾರೆಂದು ಕದ್ದು ನೋಡುವ ಓರೆಗಣ್ಣ ನೋಟ, ತಾನಾಯಿತು, ತನ್ನ ಕೆಲಸವಾಯಿತು ಎಂಬಂತಿರುವ ಸ್ವಭಾವ, ಮಾತನಾಡುವಾಗ ನವರಸಭರಿತ ಹಾವ ಭಾವ - ಇಷ್ಟು ಹೇಳಿದರೆ ಬಹುಶಃ ನಿನ್ನ ಅಂದವೆಂಬ ರಸದೌತಣದ ಒಂದಗುಳಷ್ಟನ್ನಾದರೂ ವರ್ಣಿಸಿದಂತಾಗುತ್ತದೆಯೇನೋ! ಸುಮ್ಮನೆ ಹೊಗಳಿ ಅಟ್ಟಕ್ಕೇರಿಸುತ್ತಿದ್ದೇನೆ ಎಂದು ಬೇಸರಗೊಳ್ಳಬೇಡ. ಅಥವಾ ನಿನ್ನ ರೂಪಕ್ಕೆ ಮರುಳಾಗಿ ನಿನ್ನ ಹಿಂದೆ ಬಿದ್ದಿದ್ದೆ ಎಂದು ತಪ್ಪು ತಿಳಿಯಬೇಡ. ನಿನ್ನ ಅಂದಕ್ಕಿಂತ ಹೆಚ್ಚಾಗಿ ನನಗೆ ನನಗಿಷ್ಟವಾಗಿದ್ದು ನಿನ್ನ ಗುಣ.

ಅಂದೊಂದು ದಿನ ನಮ್ಮ ಪರೀಕ್ಷೆಯ ಫಲಿತಾಂಶ ಬಂದು ನಾನು ೪ ವಿಷಯಗಳಲ್ಲಿ ಫೇಲ್ ಆಗಿ, ಮನೆಗೂ ಹೋಗದೆ ಬೇಸರದಿಂದ ಒಂಟಿಯಾಗಿ ಕುಳಿತಿದ್ದಾಗ ಬಂದು ನನ್ನನ್ನು ಸಂತೈಸಿದ್ದನ್ನು ಹೇಗೆ ತಾನೇ ಮರೆಯಲು ಸಾಧ್ಯ? "ರಘು, ಬದುಕು ಎಂದರೆ ಕೇವಲ ನಾವು ಕಾಲೇಜಿನಲ್ಲಿ ಓದಿ ಬರೆಯುವ ಪರೀಕ್ಷೆಯಲ್ಲ. ಅದು ಬಾಳಿನ ಪ್ರತಿ ಹೆಜ್ಜೆ ಹೆಜ್ಜೆಗೂ ಎದುರಾಗುವ ಸಂಕಷ್ಟಗಳನ್ನು ಸಮರ್ಥವಾಗಿ ಎದುರಿಸುವ, ಅವುಗಳಿಗೆ ಪರಿಹಾರ ಕಂಡುಕೊಳ್ಳುವ ಕಲೆ. ನೀನು ಹೀಗೆ ಖಿನ್ನನಾಗಿ ಕುಳಿತು ಹಿಂದಿನದನ್ನು ನೆನೆಯುತ್ತಾ ಕೂರೋ ಬದಲು ಮುಂದೆ ಏನು ಮಾಡಬೇಕು ಅನ್ನೋದನ್ನ ಯೋಚಿಸು. ಇವತ್ತು ಪರೀಕ್ಷೆಯಲ್ಲಿ ಫೇಲಾದರೇನಾಯ್ತು.. ಮತ್ತೆ ಪರೀಕ್ಷೆ ಕಟ್ಟಿ ಪಾಸಾಗಬಹುದು. ನಿನ್ನ ಜೀವನ ಮುಗಿದಿಲ್ಲ. ಇಂದಲ್ಲ ನಾಳೆ ನೀನು ಏನಾದರೂ ದೊಡ್ಡದನ್ನ ಸಾಧಿಸಿಯೇ ಸಾಧಿಸ್ತೀಯ ರಘು.. ಆ ಭರವಸೆ ನನಗಿದೆ" ಎಂದು ನೀನು ಅಂದು ಹೇಳಿದ್ದು ನನಗೆ ಇನ್ನೂ ಕಿವಿಯಲ್ಲಿ ರಿಂಗಣಿಸ್ತಾ ಇದೆ. ಅದೇ ನನ್ನ ಬಾಳಿನ ಮುಖ್ಯ ತಿರುವು ಆಗಿತ್ತು ಅಂತ ಇವತ್ತು ನನಗೆ ಗೊತ್ತಾಗ್ತಿದೆ. "ಇನ್ನು ಮುಂದೆ ಈ ರೀತಿ ಮುಖ ಜೋಲು ಮಾಡ್ಕೊಂಡು ಕೂರಲ್ಲ; ಏನೇ ಬರಲಿ ಎದುರಿಸ್ತೀನಿ ಅಂತ ಮಾತು ಕೊಡು ರಘು" ಎಂದು ನೀನು ಕೈ ಚಾಚಿದೆಯಲ್ಲ, ಆ ಕ್ಷಣಕ್ಕೆ ನನಗೆ ಏನು ಮಾಡಬೇಕೆಂದೇ ತೋಚಿರಲಿಲ್ಲ. ಎರಡು ನಿಮಿಷ ಯೋಚಿಸಿ ಆಗಲಿ ಎಂದು ನಿನ್ನ ಕೈಯೊಳಗೆ ಕೈಯಿರಿಸಿ ಮುಗುಳ್ನಕ್ಕಿದ್ದೆ. ಅಂದಿನ ರಾತ್ರಿ ನನಗೆ ನಿದ್ದೆ ಬಂದಿರಲಿಲ್ಲ. ನೀನು ಹೇಳಿದ್ದು ಮತ್ತೆ ಮತ್ತೆ ನೆನಪಾಗುತ್ತಿತ್ತು. ಅಂದು ನಾ ಹಿಡಿದ ನಿನ್ನ ಕೈ ಸದಾ ನನ್ನೊಂದಿಗಿರುತ್ತದೆ ಎಂದೇ ಭಾವಿಸಿದೆ. ಅದೇ ನನಗೆ ಬಂದಿದ್ದನ್ನು ಎದುರಿಸುವ ಶಕ್ತಿಯನ್ನು ನೀಡಿತ್ತು. ಮುಂದಿನ ಸೆಮೆಸ್ಟರಿನಲ್ಲಿ ಚೆನ್ನಾಗಿ ಓದಿ ಎಲ್ಲಾ ವಿಷಯಗಳಲ್ಲೂ ತೇರ್ಗಡೆಯಾದೆ. ನನ್ನ ಫಲಿತಾಂಶವನ್ನು ನಾನು ನೋಡುವ ಮೊದಲೇ ನನ್ನ ಬಳಿ ಬಂದು "ರಘು, ನೀನು ಗ್ರೇಟ್ ಕಣೋ... ಎಲ್ಲಾ ಸಬ್ಜೆಕ್ಟಿನಲ್ಲೂ ಪಾಸಾಗಿದೀಯ.. ಈ ಸೆಮ್ ಡಿಸ್ಟಿಂಕ್ಷನ್ ಬೇರೆ ಬಂದಿದೆ" ಅಂತ ಹೇಳಿದ್ದು ನೋಡಿ ನನಗೆ ಏನು ಹೇಳಬೇಕೆಂದೇ ತೋಚಿರಲಿಲ್ಲ. "ನಾನೂ ಪಾಸಾಗಿದೀನಿ ಕಣೋ" ಎಂದು ನೀನು ಹೇಳಿದಾಗಲೇ ನನಗೆ ತಿಳಿದಿದ್ದು ನಿನ್ನ ಫಲಿತಾಂಶ ಏನಾಗಿದೆ ಎಂಬುದನ್ನೂ ಕೇಳಿರಲಿಲ್ಲ ಅಂತ.

ನಮ್ಮಿಬ್ಬರ ಒಡನಾಟ ಅಂದಿನಿಂದ ಹೆಚ್ಚಿದ್ದು ನಿನಗೂ ಗೊತ್ತು. ಗೆಳೆಯರೆಲ್ಲ ನಮ್ಮ ಬೆನ್ನ ಹಿಂದೆ ನಮ್ಮನ್ನು ಲವರ್ಸ್ ಎಂದು ಹೇಳುತ್ತಿದ್ದರು. ನೀನು ಅದನ್ನು ಕೇಳಿಯೂ ಕೇಳದಂತೆ ಇರುತ್ತಿದ್ದಿದ್ದನ್ನು ನೋಡಿ ನಿನಗೂ ಅದೇ ಭಾವನೆಯಿದೆ ಎಂದು ಭಾವಿಸಿದೆ. ನಿನಗೆ ನನ್ನ ಬಗ್ಗೆ ಏನು ಅನಿಸಿಕೆ ಇತ್ತೋ ನಾ ಕಾಣೆ. ಆದರೆ ನಾನು ಮಾತ್ರ ನಿನ್ನನ್ನು ನನ್ನ ಬಾಳಿನ ಬೆಳಕು ಎಂದೇ ನಾನು ಭಾವಿಸಿದೆ. ಅದನ್ನೆಂದೂ ನಿನ್ನ ಮುಂದೆ ಹೇಳಬೇಕೆನಿಸಲೇ ಇಲ್ಲ ಅಥವಾ ಹೇಳಬೇಕೆನಿಸಿದರೂ ಅಕಸ್ಮಾತ್ ಅದರಿಂದ ನಮ್ಮ ಸ್ನೇಹಕ್ಕೆಲ್ಲಿ ಕುತ್ತು ಬರುವುದೋ ಎಂಬ ನನ್ನಲ್ಲಿನ ಅಂಜಿಕೆ ಕೇಳದಂತೆ ಮಾಡಿತೋ ಗೊತ್ತಿಲ್ಲ. ನಮ್ಮನ್ನು ನೋಡಿ ಎಲ್ಲರೂ ಒಳಗೇ ಹೊಟ್ಟೆಕಿಚ್ಚು ಪಡುತ್ತಿದ್ದಿದ್ದೂ ನನ್ನ ಗಮನಕ್ಕೆ ಬಂದಿತ್ತು. ಒಟ್ಟಿನಲ್ಲಿ ಆ ಎರಡು ವರ್ಷಗಳ ಕಾಲ ಮಿಂಚಿನಂತೆ ಬಂದು ಮರೆಯಾಗಿ ಹೋಯಿತು. ವಿದ್ಯಾಭ್ಯಾಸ ಮುಗಿಸಿ ಎಲ್ಲರೂ ಬೀಳ್ಕೊಡುವಾಗ ನಾನು ನಿನಗೆ "ಆಲ್ ದಿ ಬೆಸ್ಟ್ ಫಾರ್ ಯುವರ್ ಫ್ಯೂಚರ್" ಎಂದು ಹೇಳಿದೆ. ಅದಕ್ಕೆ ಪ್ರತಿಯಾಗಿ "ಥ್ಯಾಂಕ್ಸ್ ರಘು.. ನಿನಗೂ ಸಹ.. ಬಾಳಿನಲ್ಲಿ ಬಯಸಿದ್ದೆಲ್ಲ ಸಿಗಲಿ" ಎಂದು ಬೀಳ್ಕೊಟ್ಟೆ. ಆದರೆ ಆ ಕ್ಷಣವೂ, ಪ್ರತಿ ಕ್ಷಣವೂ ನಾ ಬಯಸಿದ್ದು ನಿನ್ನನ್ನೇ ಎಂದು ನಿನಗೆ ಹೇಗೆ ತಾನೇ ತಿಳಿದೀತು? ತಿಳಿಯಲು ನಾ ತಿಳಿಸಿದ್ದರೆ ತಾನೆ? ನೀ ಹೋದ ದಾರಿಯನ್ನೇ ನಾನು ನೋಡುತ್ತಿದ್ದೆ. ಒಮ್ಮೆ ತಿರುಗಿ ನೋಡುತ್ತೀಯೇನೋ ಎಂದು... ಊಹೂಂ, ನೀನು ತಿರುಗಲೇ ಇಲ್ಲ.

ಕಾಲೇಜು ಮುಗಿಸಿದ ತಕ್ಷಣ ನೀನು ಊರಿಗೆ ಹೋಗಿದ್ದರಿಂದ ನಿನ್ನ ಸಂಪರ್ಕ ಮಾಡಲೇ ಆಗಲಿಲ್ಲ. ಅಂದಿನಿಂದ ಇಂದಿನವರೆಗೂ ಕಾದೆ.. ನೀನು ಮತ್ತೆ ಸಿಗುತ್ತೀಯೇನೋ ಅಂತ.. ಆದರೆ ಸಿಗಲಿಲ್ಲ. ನೀನು ಸಿಗುತ್ತೀಯ ಅನ್ನೋ ಭರವಸೆ ನನಗೆ ಈಗ ಉಳಿದಿಲ್ಲ. ಆದರೆ ನಾನು ನನ್ನ ಕಾಲ ಮೇಲೆ ನಿಂತು ಸುಖವಾಗಿ ಇರೋದಕ್ಕೆ ಆ ದಿನ ನನಗೆ ಧೈರ್ಯ, ವಿಶ್ವಾಸ ತುಂಬಿದ ನೀನೇ ಕಾರಣ. ಅದನ್ನ ನನ್ನಿಂದ ಎಂದಿಗೂ ಮರೆಯೋಕೆ ಸಾಧ್ಯ ಇಲ್ಲ. ಮುಂದಿನ ಜನ್ಮವೇನಾದರೂ ಇದ್ದರೆ ಈ ಜನ್ಮದಲ್ಲಿ ಆದಂತಾಗದಿರಲಿ. ನೀನು ನನಗೆ ಸಿಗುವಂತಾಗಲಿ ಅಂತ ದೇವರ ಹತ್ರ ಕೇಳ್ಕೋತೀನಿ. ಯಾವ ಹೂವು ಯಾರ ಮುಡಿಗೋ ಅನ್ನುತ್ತಾರಲ್ಲ.. ಇದಕ್ಕೇ ಇರಬೇಕು ಕಣೇ. ಇನ್ನೇನೂ ಬರೆಯಲಾಗುತ್ತಿಲ್ಲ. ನಿನಗೆ ನನ್ನ ಬಗ್ಗೆ ಏನು ಭಾವನೆಯಿತ್ತು, ಅಥವಾ ಈಗ ಯಾವ ಭಾವನೆಯಿದೆ ಎಂದೇ ತಿಳಿಯದೆ ಇಷ್ಟೆಲ್ಲಾ ಬರೆದಿದ್ದಕ್ಕೆ ಕ್ಷಮಿಸಿಬಿಡು..

ಎಂದೆಂದೂ ನಿನ್ನವ,
ರಘು

10 ಕಾಮೆಂಟ್‌ಗಳು:

ಸೋಮಶೇಖರ ಹುಲ್ಮನಿ ಹೇಳಿದರು...

ಅಬಾಬಬ ......
ಭಾವನೆಗಳು ಅನುಭವದಿಂದ ಬಂದಿದ್ದೋ ಅಥವಾ .......?
ಚೆನ್ನಾಗಿದೆ .....ಅವಳನ್ನು ಬಿಳ್ಕೊಡುವ ಸಂದರ್ಭ ಮಾತ್ರ ಕೃತಕ ಅನ್ನಿಸಿದೆ

ತೇಜಸ್ ಜೈನ್ Tejas jain ಹೇಳಿದರು...

ಕಥೆ ಎದುರು ಮನೆಯಲ್ಲಿ ನೆಡೆದಿದ್ದೇನೋ ಅನ್ನುವಷ್ಟು ಆಪ್ತವಾಗಿದೆ... :)

Vijay Mhapsekar ಹೇಳಿದರು...

ಸರಿಯಾದ ವಿಳಾಸ ಹಾಕಪ್ಪ. ಬೇರೆ ಯಾರಿಗಾದರೂ ಹೋಗಿ ಬಿಟ್ಟರೆ ಈ ಪತ್ರ, ಕಷ್ಟ :)

ಚೆನ್ನಾಗಿ ಬರೆದಿದ್ದೀಯ.

ತೇಜು,
ಚಿತ್ರದ ಮೇಲೆ ಇನ್ನೂ ಸ್ವಲ್ಪ ಕೆಲಸ ಮಾಡಬೇಕಿತ್ತು. ಬಹಳವೇ ಛಾಯಾಚಿತ್ರದ ಹಾಗೆ ಕಾಣುತ್ತಿದೆ ;)

nirvana ಹೇಳಿದರು...

ಹರೀಶ, ಇದು ನಿನ್ನ ಕಲ್ಪನೆಯೋ ಅಥವಾ ಅನುಭವವೋ? ಲೇಖನ ಚೆನ್ನಾಗಿದೆ.

ತೇಜಸ್ ಜೈನ್ Tejas jain ಹೇಳಿದರು...

ವಿಜಿ,
ಕೆಲಸ ಮಾಡದಂತೆ ನನ್ನ ಮೇಲೆ ಆಡಿಳಿತ ಪಕ್ಷದವರು ಒತ್ತಡ ಹೇರಿದರು... :)

vishutk ಹೇಳಿದರು...

ಹರೀಶ್ ಕಥೆ ಚೆನ್ನಾಗಿ ಮೂಡಿದೆ.

Harisha - ಹರೀಶ ಹೇಳಿದರು...

@ಸೋಮ, ಕೆಲವಂ ಬಲ್ಲವರಿಂದೆ ಕಲ್ತು, ಕೆಲವಂ ಸುಜ್ಞಾನದಿಂ ನೋಡುತ..
ಮುಂದೆ ಬರೀಬೇಕಾದ್ರೆ ನೀನು ಹೇಳಿದ ಮಾತು ನೆನಪಿಟ್ಟು ಇನ್ನೂ ಚೆನ್ನಾಗಿ ಬರೆಯೋಕೆ ಪ್ರಯತ್ನಿಸ್ತೀನಿ :)

@ತೇಜಸ್, ಹೌದಾ! ಎದುರು ಮನೆಯಲ್ಲಿ ಕಾಲೇಜಿದ್ಯಾ?!

@ವಿಜಯ್, ಅಯ್ಯೋ.. ಸರಿಯಾದ ವಿಳಾಸ ಬರೆದು ಕಳ್ಸಿದ್ರೆ ಅಟ್ಟಿಸ್ಕೊಂಡು ಬರ್ತಾರೆ :D

@ಕಿರಣ್, ಎಲ್ಲ ಅರ್ಧಂಬರ್ಧ.. :P

@ವಿಶು, ಧನ್ಯವಾದ :-)

Vijay Mhapsekar ಹೇಳಿದರು...

ನಮ್ಮೆಲ್ಲರ ವಿಶ್ವಾಸ ಮತ ನಿಮ್ಮೊಡನೆ ಇದೆ. ಆಡಳಿತ ಪಕ್ಷಕ್ಕೆ ಒಂದೆರಡು ಒದೆ ನೀಡಿ ನಿಮ್ಮ ಕೆಲಸ ಮುಂದುವರಿಸಿ :)

Sandeepa ಹೇಳಿದರು...

ಹುಡುಗನ ಮನದ ಚಿತ್ರಣ ತುಂಬಾ ಸ್ಪಷ್ಟವೂ, ಆಪ್ತವೂ ಆಗಿ ಮೂಡಿಬಂದಿದೆ. ಚೆನ್ನಾಗಿದೆ. ಬರೆಯುತ್ತಿರು :)

ಅಂದಹಾಗೆ,
" ನೀ ಹೋದ ದಾರಿಯನ್ನೇ ನಾನು ನೋಡುತ್ತಿದ್ದೆ. ಒಮ್ಮೆ ತಿರುಗಿ ನೋಡುತ್ತೀಯೇನೋ ಎಂದು... ಊಹೂಂ, ನೀನು ತಿರುಗಲೇ ಇಲ್ಲ. "
ಈ ಸಾಲುಗಳು, ಗೆಳತಿ ಶ್ಯಾಮಾ ಬರೆದ ಬರಹವನ್ನು ನೆನಪಿಸಿತು.

prashasti ಹೇಳಿದರು...

ಚೆನ್ನಾಗಿದ್ದೋ ಹರೀಶಣ್ಣ.. ಈ ತರದ ಕಥೆಗಳು ನಮ್ಮ ಮಧ್ಯನೂ ನಡೀತಾ ಇರ್ತು.. ಎಲ್ಲೂ ನಿಲ್ಲದೇ ಕೊನೆವರೆಗೂ ಓದಿಸಿಕೊಂಡು ಹೋತು