ಶುಕ್ರವಾರ, ಏಪ್ರಿಲ್ 18, 2008

ಮನ್ನಣೆ

ಅವಧಿಯಲ್ಲಿ ಚೇತನಾ ತೀರ್ಥಹಳ್ಳಿ ಬರೆದ ಸೋನಿಯಾ ಔರ್ ಸಾನಿಯಾ ಎಂಬ ಲೇಖನ ನೋಡಿ ನನಗೆ ಈ ಘಟನೆ ನೆನಪಾಯಿತು.

*****

ಅದೊಂದು ಶಾಲೆ. ಅಲ್ಲೊಂದು ಕಂಠಪಾಠ ಸ್ಪರ್ಧೆ. ಭಾಗವಹಿಸಲು ಇಷ್ಟವಿದ್ದವರು ತಮ್ಮ ತರಗತಿಯ ಪಠ್ಯದಲ್ಲಿರುವ ನಿಗದಿಪಡಿಸಿದ ಕನ್ನಡ ಅಥವಾ ಹಿಂದೀ ಪದ್ಯವನ್ನು ಬಾಯಿಪಾಠ ಮಾಡಿ ಹೇಳಬೇಕಾಗಿತ್ತು. ಚೆನ್ನಾಗಿ ಹಾಡು ಹೇಳುವವರಿಗೆ ಸರಿಯಾಗಿ ಕಂಠಪಾಠ ಮಾಡಲು ಕಷ್ಟವಾಗುತ್ತಿತ್ತು; ಕಂಠಪಾಠ ಮಾಡಲು ಎತ್ತಿದ ಕೈ ಎನ್ನುವಂಥವರಿಗೆ ಹಾಡಲು ಬರುತ್ತಿರಲಿಲ್ಲ. ಒಟ್ಟಿನಲ್ಲಿ ಒಂದು ಒಳ್ಳೆ ಪೈಪೋಟಿ ಏರ್ಪಟ್ಟಿತ್ತು.

ಹೀಗಿರುವಾಗ ಆ ದಿನ ಬಂದೇ ಬಿಟ್ಟಿತು. ಪ್ರೇಕ್ಷಕರಾಗಿ ಎಲ್ಲರೂ ಜಮಾಯಿಸಿದರು. ಎಲ್ಲ ಶಿಕ್ಷಕ-ಶಿಕ್ಷಕಿಯರೂ ಬಂದು ಸೇರಿದರು. ಒಬ್ಬೊಬ್ಬರಾಗಿ ಬಂದು ಪದ್ಯಗಳನ್ನು ತಮಗೆ ತಿಳಿದಷ್ಟು ಚೆನ್ನಾಗಿ ಹೇಳಲಾರಂಭಿಸಿದರು. ಕೆಲವರಿಗೆ ಸಭಾಕಂಪದಿಂದಾಗಿ ಕಲಿತಿದ್ದ ಪದ್ಯ ಮರೆತು ಹೋಯಿತು. ಕೆಲವರು ಕಲಿತಿದ್ದೇ ಸುಳ್ಳು ಎನ್ನುವಂತೆ ಹೇಳಿ ಹೋದರು. ಇನ್ನೂ ಕೆಲವರು ಪದ್ಯಕ್ಕೆ ರಾಗ ಹಾಕುವ ಭರದಲ್ಲಿ ಪದ್ಯ ಮರೆತರು. ಕೆಲವರಿಗೆ ಪದ್ಯ ಹೇಳುತ್ತ ಹೇಳುತ್ತ ನಿಗದಿಪಡಿಸಿದ್ದ ಸಮಯ ಹೋಗಿದ್ದೇ ತಿಳಿಯಲಿಲ್ಲ.

ಹೀಗೇ ಸಾಗುತ್ತಿತ್ತು ಸ್ಪರ್ಧೆ... ಒಬ್ಬ ಬಾಲಕ ಪದ್ಯವೊಂದನ್ನು ಕಥೆ ಹೇಳಿದಂತೆ ಹೇಳಿ ನೆರೆದಿದ್ದವರನ್ನೆಲ್ಲಾ ನಗೆಗಡಲಲ್ಲಿ ಮುಳುಗಿಸಿದ. ಶಾಲೆಯಲ್ಲಿ ಹಾಡು ಹೇಳಲು ಪ್ರಸಿದ್ಧವಾಗಿದ್ದ ಒಬ್ಬ ಬಾಲಕಿ ಬಂದಳು. ಅವಳ ಸುಶ್ರಾವ್ಯವಾದ ಕಂಠಕ್ಕೆ ಎಲ್ಲರೂ ತಲೆದೂಗಲಾರಂಭಿಸಿದರು. ತೃತೀಯ ಭಾಷೆಯನ್ನಾಗಿ ಸಂಸ್ಕೃತವನ್ನು ತೆಗೆದುಕೊಂಡಿದ್ದರೂ ಹಿಂದಿಯ "ಮೇರಾ ನಯಾ ಬಚಪನ್" ಪದ್ಯವನ್ನು ಆಕೆ ಹೇಳಿದ ಪರಿ ಎಲ್ಲರನ್ನು ನಿಬ್ಬೆರಗಾಗಿಸಿತ್ತು. ಆದರೆ ಸಮಯಾಭಾವದಿಂದ ಆಕೆಗೆ ಕೂಡ ಎರಡೇ ಸೊಲ್ಲು ಹೇಳಲು ಸಮಯ ಸಿಕ್ಕಿತು.

ಮರುದಿನ ತರಗತಿಗೆ ಬಂದ ಮುಖ್ಯೋಪಾಧ್ಯಾಯರು ಕೇಳಿದರು: "ನಿನ್ನೆ ಯಾಕೆ ಎಷ್ಟೊಂದು ಜನ ಭಾಗವಹಿಸಿರಲಿಲ್ಲ?" ಎಲ್ಲರಿಂದ ಮೌನವೇ ಉತ್ತರವಾಗಿತ್ತು. ತರಗತಿಯಲ್ಲಿ ಎಲ್ಲರಿಗಿಂತ ಹೆಚ್ಚು ಅಂಕಗಳನ್ನು ತೆಗೆಯುತ್ತಿದ್ದವರೂ ಸ್ಪರ್ಧೆಯಲ್ಲಿ ಭಾಗವಹಿಸಿರಲಿಲ್ಲ. ಅವರಿಗೆ ಪದ್ಯ ಕಂಠಪಾಠ ಮಾಡಲು ಬರಲಿಲ್ಲ ಎನ್ನುವುದು ಯಾರೂ ನಂಬದ ವಿಷಯವಾಗಿತ್ತು. ಆಗ ಮುಖ್ಯೋಪಾಧ್ಯಾಯರು ವಿವರಿಸಿದರು: "ಹಾಡುವುದು, ಭಾಗವಹಿಸುವುದು ಮುಖ್ಯವೇ ಹೊರತು ಗೆಲ್ಲುವುದಲ್ಲ. ನಿನ್ನೆ ಇದ್ದಿದ್ದು ಹಾಡು ಹೇಳುವ ಸ್ಪರ್ಧೆಯಲ್ಲ; ಕಂಠಪಾಠ ಸ್ಪರ್ಧೆ. ಅದರಲ್ಲಿ ನೀವು ಪದ್ಯವನ್ನು ಕಲಿತು ಹೇಳುತ್ತೀರಿ ಎನ್ನುವುದು ಮುಖ್ಯವೇ ಹೊರತು ನೀವು ಎಷ್ಟು ರಾಗವಾಗಿ ಹಾಡುತ್ತೀರಿ ಎನ್ನುವುದಲ್ಲ".

ಉತ್ತಮವಾಗಿ, ಸಂಪೂರ್ಣವಾಗಿ ಹಾಡು ಹೇಳಿದ್ದ ಒಬ್ಬ ಬಾಲಕಿಗೆ ಪ್ರಥಮ ಬಹುಮಾನ ಬಂದಿತ್ತು. ಕಥೆಯಂತೆ ಹೇಳಿ ಹೋಗಿದ್ದ ಬಾಲಕನಿಗೆ ಎರಡನೆಯ ಬಹುಮಾನ ಬಂದಿದ್ದರೆ, ರಾಗವಾಗಿ ಹೇಳಿದ್ದ ಆ ಹುಡುಗಿಗೆ ಮೂರನೆಯ ಬಹುಮಾನ ಬಂದಿತ್ತು. ಎಲ್ಲರಿಗೂ ಆಶ್ಚರ್ಯ! ನಿಜಕ್ಕೂ ರಾಗಕ್ಕಿಂತ ಕಂಠಪಾಠವೇ ಬಹುಮಾನದ ಆಯ್ಕೆಯಲ್ಲಿ ಪ್ರಮುಖ ಪಾತ್ರ ವಹಿಸಿತ್ತು. ಸರಿಯಾಗಿ ಪದ್ಯ ಬಂದರೂ ಭಾಗವಹಿಸಿರದಿದ್ದವರ ಮುಖ ಬಾಡಿತ್ತು.

*****

ಹಾಗೆ ಮುಖ ಬಾಡಿದವರಲ್ಲಿ ನಾನೂ ಒಬ್ಬನಾಗಿದ್ದೆ.

ಶಾಲೆಯ ಹೆಸರು ಮೈಸೂರು ಕಿರ್ಲೋಸ್ಕರ್ ಎಜುಕೇಶನ್ ಟ್ರಸ್ಟ್ (ಎಂ.ಕೆ.ಇ. ಟಿ/ಎಂಕೆಟಿ). ಹರಿಹರದಲ್ಲಿ ಯಾವ ಶಾಲೆ ಒಳ್ಳೆಯದು ಎಂದು ಯಾರನ್ನೇ ಕೇಳಿದರೂ ತೋರಿಸುತ್ತಿದ್ದ ಶಾಲೆ. ನಮಗೇನು ಗೊತ್ತು ಅದರ ಬೆಲೆ? ನಮ್ಮ ಬಾಯಲ್ಲಿ ಎಂಕೆಟಿ ಎಂಬುದು "ಮಂಡಕ್ಕಿ ಖಾರ ಟೀ" ಆಗಿತ್ತು. ಏನೇ ಇರಲಿ, ಪ್ರತಿಭೆಯನ್ನು ಗುರುತಿಸುತ್ತಿದ್ದ, ಯಾವ ಪೂರ್ವಾಗ್ರಹವೂ ಇಲ್ಲದೆ ಎಲ್ಲರನ್ನೂ ಸಮಾನವಾಗಿ ನೋಡುತ್ತಿದ್ದ ಅಂಥ ಶಾಲೆಯಲ್ಲಿ ಓದಿದ್ದಕ್ಕೆ ನನಗೆ ಹೆಮ್ಮೆಯಿದೆ.

2 ಕಾಮೆಂಟ್‌ಗಳು:

ಅನಾಮಧೇಯ ಹೇಳಿದರು...

ಪ್ರತಿಭೆ - ಮನ್ನಣೆ ಕುರಿತ ಲೇಖನ ಚೆನ್ನಾಗಿದೆ. ಬಾಲ್ಯದ ನೆನಹುಗಳನ್ನ, ಸಂಕಟಗಳನ್ನ ಹೊರಗೆಡವುವಲ್ಲಿ ಈ ಬರಹ ಸಾಫಲ್ಯ ಕಂಡಿದೆ.

Harisha - ಹರೀಶ ಹೇಳಿದರು...

ಧನ್ಯವಾದ ಗಣೇಶ್ :)