ಗುರುವಾರ, ಆಗಸ್ಟ್ 14, 2008

ನಮ್ಮ ನಾಡ ಯೋಧರು...

Indian army in Kashmir

ಧೀರ ವೀರ ಶೂರರು ನಮ್ಮ ನಾಡ ಯೋಧರು
ದೇಶವನ್ನು ಪೊರೆವರು ಸ್ವಹಿತವನ್ನು ನೋಡರು

ಜೊತೆಗೆ ಇಲ್ಲ ಬಂಧು-ಬಳಗ-ಅಕ್ಕ-ತಂಗಿ-ಅಪ್ಪ-ಅಮ್ಮ
ಸ್ವಾರ್ಥರಹಿತ ರಕ್ಷಕರಿಗೆ ಜನರೇ ಇಲ್ಲಿ ಅಣ್ಣ-ತಮ್ಮ
ಹತ್ತಬೇಕು ಗುಡ್ಡ ಬೆಟ್ಟ, ಅಲೆಯಬೇಕು ಕಾಡು-ಮೇಡು
ಇವರು ಕೂಡ ಸುಖವ ಬಯಸೆ ಹೇಗೆ ಹೇಳಿ ನಮ್ಮ ಪಾಡು?

ಗಡಿವಲಯದ ದಾಳಿಕೋರ ವೈರಿಗಳಿಗೆ ಕಲಿಗಳು
ಹೃದಯವಂತ ಮನುಜರು ಮನುಷ್ಯರೂಪಿ ಹುಲಿಗಳು
ಚಳಿಯೆ ಇರಲಿ ಮಳೆಯೆ ಇರಲಿ ಧಗೆಯೆ ಇರಲಿ ದುಡಿವರು
ನಾಡಿಗಾಗಿ ತಮ್ಮ ಪ್ರಾಣ ಲೆಕ್ಕಿಸದೇ ಮಡಿವರು

ಅಕಾಲಮೃತ್ಯು ಪಾತ್ರರಾದ ಶತ-ಶತಾದಿ ಹುತಾತ್ಮರು
ದೇಶ ಸೇವೆ ಈಶ ಸೇವೆ ಎಂದರಿತ ಮಹಾತ್ಮರು
ಪ್ರಾಣವನ್ನು ತೆತ್ತರು ಸುರಿಸಿ ತಮ್ಮ ನೆತ್ತರು
ಮತ್ತೆ ಮರಳಿ ಬಾರರಿವರು ನಾವು ಎಷ್ಟೆ ಅತ್ತರು

Indian army at Kargil


ಪ್ರತಿ ವರ್ಷ ನಮ್ಮ ದೇಶ ಸ್ವತಂತ್ರವಾದ ದಿನವನ್ನು ಸಂಭ್ರಮದಿಂದ ಆಚರಿಸುತ್ತೇವೆ. ಆದರೆ ಸ್ವಾತಂತ್ರ್ಯ ತಂದು ಕೊಟ್ಟವರ, ಆ ಸ್ವಾತಂತ್ರ್ಯ ಉಳಿಸಿಕೊಳ್ಳಲು ಹಗಲಿರುಳೆನ್ನದೆ ದೇಶ ಕಾಯುವ ಸೈನಿಕರ ಬಗ್ಗೆ ಕೂಡ ಯೋಚಿಸುವುದು ಒಳಿತಲ್ಲವೇ?

ಎಲ್ಲರಿಗೂ ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು.

ಮಂಗಳವಾರ, ಜುಲೈ 29, 2008

ನಾನೊಬ್ಬ ಮೂರ್ಖ

ರೆಡ್ ಸಿಗ್ನಲ್ ಬಿದ್ದಿದೆ. ಫ್ರೀ ಲೆಫ್ಟ್ ಇಲ್ಲವೆಂದು ಬೋರ್ಡು ಹಾಕಿದ್ದಾರೆ. ಸಿಗ್ನಲ್ ಹಸಿರಾಗಲು ಕಾಯುತ್ತಾ ನಿಂತಿದ್ದೇನೆ. ನನ್ನ ಹಿಂದಿಂದ ಬಂದ ಒಬ್ಬ ನನ್ನ ಪಕ್ಕ ನಿಲ್ಲಿಸಿದ. ಆಚೀಚೆ ನೋಡಿದ. ಯಾರೂ ಪೋಲೀಸರಿಲ್ಲ. ವಾಹನಗಳೂ ಬರುತ್ತಿಲ್ಲ. ತನ್ನ ಪಾಡಿಗೆ ಎಡ ರಸ್ತೆಗೆ ತಿರುಗಿ ಹೋಗಿಬಿಟ್ಟ. ನಾನಿನ್ನೂ ಕಾಯುತ್ತಲೇ ಇದ್ದೇನೆ...
ನಾನೊಬ್ಬ ಮೂರ್ಖ.

ವೇಗವಾಗಿ ಹೋಗುತ್ತಿದ್ದೇನೆ. ಇದ್ದಕ್ಕಿದ್ದಂತೆ ಸಿಗ್ನಲ್ ಹಳದಿ ಬಣ್ಣಕ್ಕೆ ತಿರುಗಿರುವುದು ಕಂಡಿದೆ. ಇದ್ದ ಬಲವನ್ನೆಲ್ಲಾ ಹಾಕಿ ಬ್ರೇಕ್ ತುಳಿದು ಬೈಕ್ ನಿಲ್ಲಿಸಿದೆ. ಅಷ್ಟರಲ್ಲಿ ಸಿಗ್ನಲ್ ಕೆಂಪು ಬಣ್ಣಕ್ಕೆ ತಿರುಗಿದೆ. ನನ್ನ ಹಿಂದಿನಿಂದ ಬಂದ ಇನ್ನೊಬ್ಬ ಇನ್ನೂ ಹಸಿರು ದೀಪವೆ ಇದೆಯೇನೋ ಎಂಬಂತೆ ಮುಂದಕ್ಕೆ ನಡೆದ. ಏನೂ ಆಗಲಿಲ್ಲ. ಆತ ಮುಂದೆ ನಡೆದ. ಮತ್ತೆ ನನ್ನ ಸರತಿ ಬರಲು ನಾನಿನ್ನೂ ೬ ನಿಮಿಷ ಕಾಯಬೇಕು...
ನಾನೊಬ್ಬ ಮೂರ್ಖ.

ಆಫೀಸಿನಿಂದ ಹೊರಗೆ ಬಂದೆ. ನನಗೆ ಹೋಗಬೇಕಾಗಿರುವುದು ಬಲಕ್ಕೆ. ಆದರೆ ಮಧ್ಯ ಡಿವೈಡರ್ ಇರುವುದರಿಂದ ಯೂ-ಟರ್ನ್ ಸಿಗುವವರೆಗೂ ಎಡಕ್ಕೆ ಹೋಗಿ ಅಲ್ಲಿ ತಿರುಗಿಸಿಕೊಂಡು ಬರಬೇಕು. ಏನಿಲ್ಲವೆಂದರೂ ೫ ನಿಮಿಷ ತಗುಲುತ್ತದೆ. ಇರಲಿ ಎಂದು ಎಡಕ್ಕೆ ಹೊರಳುತ್ತೇನೆ. ಅಲ್ಲಿ ಸಿಗ್ನಲ್ ಬಿದ್ದಿದೆ. ಅದೆಲ್ಲ ಮುಗಿದು ಮರಳಿ ಆಫೀಸಿನ ಮುಂದೆ ಬರುವಷ್ಟರಲ್ಲಿ ೧೦ ನಿಮಿಷವಾಗಿದೆ. ನನ್ನ ಸಹೋದ್ಯೋಗಿ, ಆಗಷ್ಟೆ ಹೊರಗೆ ಬಂದವನು ರಾಜಾರೋಷವಾಗಿ ಬಲಕ್ಕೆ ತಿರುಗಿ ಸ್ವಲ್ಪವೇ ದೂರದಲ್ಲಿ ಇರುವ ಕ್ರಾಸಿಂಗ್ ನಲ್ಲಿ ರಸ್ತೆ ದಾಟಿ ನನ್ನನ್ನು ಸೇರಿಕೊಂಡಿದ್ದಾನೆ. ನಾನು ಏನಿಲ್ಲವೆಂದರೂ ಒಂದೈದು ರೂಪಾಯಿ ಪೆಟ್ರೋಲ್ ಕಳೆದುಕೊಂಡೆ. ಆತ ಉಳಿಸಿದ...
ನಾನೊಬ್ಬ ಮೂರ್ಖ.

ರೈಲ್ವೆ ಕ್ರಾಸಿಂಗ್ ಬಳಿ ಗೇಟ್ ಹಾಕಿದೆ. ಸುಮಾರು ಅರ್ಧ ಕಿಲೋಮೀಟರ್ ಉದ್ದಕ್ಕೆ ವಾಹನಗಳು ನಿಂತಿವೆ. ನಾನು ಕಾರನ್ನು ಅವುಗಳ ಹಿಂದೆ ನಿಲ್ಲಿಸಿದೆ. ನನ್ನ ಹಿಂದಿಂದ ಬಂದ ರಿಕ್ಷಾದವನೊಬ್ಬ ನಿಂತಿದ್ದ ಎಲ್ಲ ವಾಹನಗಳನ್ನೂ ಓವರ್ಟೇಕ್ ಮಾಡಿ ಗೇಟಿನ ಬಳಿ ಹೋಗಿ ನಿಲ್ಲಿಸಿದ. ಅವನ ಹಿಂದೆ ಇನ್ನೊಬ್ಬ ಕಾರಿನವನೂ ಅಲ್ಲೇ ಹೋಗಿ ನಿಲ್ಲಿಸಿದ. ರೈಲು ಹೋಯಿತು. ಗೇಟ್ ತೆಗೆದಾಗ ಮುಂದಿನಿಂದ ಬರುವ ವಾಹನಗಳಿಗೆ ಜಾಗವಿರಲಿಲ್ಲ. ಹಾಗಾಗಿ ಆ ರಿಕ್ಷಾ ಮತ್ತು ಕಾರಿನವರನ್ನೇ ಮೊದಲು ಬಿಡಲಾಯಿತು. ನನ್ನ ಮುಂದಿದ್ದ ಎಲ್ಲಾ ವಾಹನಗಳೂ ಹಳಿ ದಾಟಿ ನಾನು ದಾಟುವಷ್ಟರಲ್ಲಿ ೧೫ ನಿಮಿಷ ಆಯಿತು. ನಾನೂ ಆ ರಿಕ್ಷಾದವನಂತೆ ಮಾಡಬಹುದಿತ್ತೇನೋ, ಆದರೆ ಮಾಡಲಿಲ್ಲ...
ನಾನೊಬ್ಬ ಮೂರ್ಖ.

ಟ್ರಾಫಿಕ್ ಜಾಮ್ ಆಗಿದೆ. ಹಿಂದಿನಿಂದ ಅಂಬ್ಯುಲೆನ್ಸ್ ಒಂದು ಶಬ್ದ ಮಾಡುತ್ತಾ ಬರುತ್ತಿದೆ. ಹೇಗಾದರೂ ಅದಕ್ಕೆ ಜಾಗ ಮಾಡಿಕೊಡಬೇಕೆಂದು ಇದ್ದಿದ್ದರಲ್ಲೇ ಸ್ವಲ್ಪ ಆಚೀಚೆ ಸರಿದು ಅಂಬ್ಯುಲೆನ್ಸ್ ಗೆ ಜಾಗ ಮಾಡಿ ಕೊಟ್ಟೆ. ಅಷ್ಟರಲ್ಲಿ ಯಾರೋ ಒಬ್ಬ ಪಕ್ಕದಲ್ಲಿದ್ದವನು ಬೇಕೆಂದಲೇ ಅಂಬ್ಯುಲೆನ್ಸ್ ನ ಮುಂದಕ್ಕೆ ಬಂದು ನಿಂತ. ಅವನು ಸರಿಯುವವರೆಗೂ ಅಂಬ್ಯುಲೆನ್ಸ್ ಚಲಿಸುವಂತಿಲ್ಲ. ಟ್ರಾಫಿಕ್ ಪೋಲಿಸ್ ಅವನು ನಿಂತಿದ್ದ ಲೇನ್ ಅನ್ನು ಮೊದಲು ಬಿಟ್ಟು ಅಂಬ್ಯುಲೆನ್ಸ್ ಗೆ ಜಾಗ ಮಾಡಿಕೊಟ್ಟ. ಆತ ಟ್ರಾಫಿಕ್ ಜಾಮ್ ನಿಂದ ನಿಮಿಷ ಮಾತ್ರದಲ್ಲಿ ಹೊರಗೆ ಹೋದ. ನಾನಿನ್ನೂ ಇಲ್ಲೇ ನಿಂತಿದ್ದೇನೆ...
ನಾನೊಬ್ಬ ಮೂರ್ಖ.

ನಾನೆಂದು ಈ ಮೂರ್ಖತನದಿಂದ ಪಾರಾಗುತ್ತೇನೆ? ನನಗೆ ಬುದ್ಧಿ ಬರುವುದು ಯಾವಾಗ?

ಶನಿವಾರ, ಜುಲೈ 26, 2008

ಆರು ಹಿತವರೋ ಎನಗೆ

ಏಪ್ರಿಲ್ ನಲ್ಲಿ ನಡೆದ ವಿಷಯ. ಏನನ್ನೋ ತರಲು ಬ್ರಿಗೇಡ್ ರೋಡಿಗೆ ಹೋಗಬೇಕಾಗಿತ್ತು. ಟ್ರಿನಿಟಿ ವೃತ್ತದಿಂದ ಮಹಾತ್ಮಾ ಗಾಂಧಿ ರಸ್ತೆಯಲ್ಲಿ ಹೋಗುತ್ತಿದ್ದೆ. ಎದುರಿನಿಂದ ಒಬ್ಬ ವ್ಯಕ್ತಿ ಕುಂಟುತ್ತಾ ಬರುತ್ತಿದ್ದ. ಪೋಲಿಯೋ ಆಗಿದ್ದಿರಬೇಕು. ಯಾವ ಜನ್ಮದಲ್ಲಿ ಏನು ಪಾಪ ಮಾಡಿದ್ದನೋ ಏನೋ, ನಡೆದಾಡಲು ಕಷ್ಟ ಪಡುತ್ತಿದ್ದ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್... ಐ ಡೋಂಟ್ ಹ್ಯಾವ್ ಮನಿ. ಪ್ಲೀಸ್ ಗಿವ್ ೧೦ ರುಪೀಸ್" ಎಂದು ಕೇಳಿದ. ನೋಡಿ ಕನಿಕರ ಮೂಡಿತು. ಹತ್ತು ರೂಪಾಯಿ ತೆಗೆದು ಕೊಟ್ಟೆ.

ಸುಮಾರು ಹದಿನೈದು ದಿನಗಳು ಕಳೆದಿರಬಹುದು. ಭಾನುವಾರವಾಗಿದ್ದರಿಂದ ಮಧ್ಯಾಹ್ನದ ಅಡಿಗೆಗೆ ತರಕಾರಿ ತರಲು ಇಂದಿರಾನಗರದ ೮೦ ಅಡಿ ರಸ್ತೆಯಲ್ಲಿ ಬರುತ್ತಿದ್ದೆ. "ಸಾರ್.. ಐ ವಾಂಟ್ ಟು ಗೋ ಟು ಮೆಜೆಸ್ಟಿಕ್..." ಎಂಬ ಧ್ವನಿ ಕೇಳಿತು. ಅದೇ ವ್ಯಕ್ತಿ! ಎಲಾ ಇವನ! ದುಡ್ಡು ಕಳೆದುಕೊಂಡು ಮೆಜೆಸ್ಟಿಕ್ಕಿಗೆ ಹೋಗುವುದು ಇವನ ಖಾಯಂ ಉದ್ಯೋಗ!! "ಸ್ವಲ್ಪ ದಿನದ ಹಿಂದೆ ಎಂ.ಜಿ.ರೋಡಿನಲ್ಲಿ ಸಿಕ್ಕಿ ಇದೇ ಕಥೆ ಹೇಳಿದ್ದೆಯಲ್ಲಾ" ಎಂದು ಗದರಿದೆ. ಅವನು ಕಕ್ಕಾಬಿಕ್ಕಿಯಾದವನಂತೆ ಕಂಡ. ಮತ್ತೇನೂ ಕೇಳದೆ ಹಾಗೇ ಮುಂದೆ ಹೋಗಿಬಿಟ್ಟ.

ಕಳೆದ ತಿಂಗಳು ಐ.ಟಿ.ಪಿ.ಎಲ್ ಪಕ್ಕದಲ್ಲಿರುವ ನಮ್ಮ ಆಫೀಸಿನ ಮುಂದೆ ನಡೆದು ಬರುತ್ತಿದ್ದೆ. ಅದೇ ವ್ಯಕ್ತಿ ಮತ್ತೆ ಕಂಡ. ಅವನಿಗೆ ನನ್ನ ಗುರುತು ಹೇಗೆ ಸಿಕ್ಕೀತು? "ಸಾರ್.." ಎಂದು ತನ್ನ ವರಸೆ ಆರಂಭಿಸಿದ. ಆದರೆ ಆತ ತನ್ನ ಬಾಯಿ ತೆಗೆಯುವಷ್ಟರಲ್ಲಿಯೇ ಅವನನ್ನು ಸುಮ್ಮನಿರಿಸಿ, ಮತ್ತೆ ಮತ್ತೆ ನನಗೇ ಗಂಟು ಬೀಳುತ್ತೀಯಾ ಎಂದು ಬೈದು ಮುಂದೆ ಹೋದೆ. ಕಾಲು ಹೀಗಾಗಿದ್ದರೂ ಈ ರೀತಿ ಜನರಿಗೆ ಸುಳ್ಳು ಹೇಳಿ ದುಡ್ಡು ಕೀಳುತ್ತಾರಲ್ಲಾ ಎಂದೆನಿಸಿತು.

ಅದಾದ ಮೇಲೆ ನನಗವನು ಕಂಡಿಲ್ಲ. ಆದರೆ ಯಾರೇ ಬೇಡುತ್ತಿರುವವರು ಕಂಡರೂ ಆತ ನನ್ನ ಮನಸ್ಸಿನಲ್ಲಿ ಪ್ರತ್ಯಕ್ಷವಾಗುತ್ತಾನೆ.

***

ಸ್ವಲ್ಪ ದಿನಗಳ ಹಿಂದೆ ರಾತ್ರಿ ಡೈರಿ ಸರ್ಕಲ್ ಬಳಿ ಬಸ್ ಕಾಯುತ್ತಾ ನಿಂತಿದ್ದೆ. ಯಾರೋ ಒಬ್ಬ ಬಂದು "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದ. ಹೌದೆಂದು ತಲೆಯಾಡಿಸಿದೆ. ಮಹಾರಾಷ್ಟ್ರದಿಂದ ಬಂದಿದ್ದಾಗಿಯೂ ತನ್ನ ಪರ್ಸ್ ಅನ್ನು ಯಾರೋ ಕದ್ದಿದ್ದಾರೆಂದೂ, ಈಗ ಇರಲು-ಉಣ್ಣಲು ದುಡ್ಡಿಲ್ಲವೆಂದೂ ತನ್ನ ಕಥೆ ಹೇಳಿದ. ತನಗೇನೂ ದುಡ್ಡು ಬೇಡ, ತನ್ನ ಮಗನಿಗೆ ಊಟಕ್ಕೆ ದುಡ್ಡು ಕೊಟ್ಟುಬಿಡಿ ಎಂದು ತನ್ನ ಮಗನನ್ನು ತೋರಿಸಿದ. ಅವನ ಹೆಂಡತಿಯೂ ಜೊತೆಯಲ್ಲಿದ್ದಳು. ಆಕೆಯೂ ದೀನವಾದ ಮುಖದಿಂದ ಬೇಡಿದಳು. ಆದರೆ ಹಿಂದಿನ ಅನುಭವದಿಂದಲೋ ಏನೋ, ಕೊಡುವುದಿಲ್ಲವೆಂದು ಹೇಳಿ ಕಳುಹಿಸಿಬಿಟ್ಟೆ. ಅವನು ಹೋದ ಮೇಲೆ ಏನೇನೋ ಯೋಚನೆಗಳು ಬಂದವು. ಅವನು ನಿಜವಾಗಿಯೂ ದುಡ್ಡು ಕಳೆದುಕೊಂಡವನಾಗಿದ್ದರೆ...? ಯಾರೋ ಸುಳ್ಳು ಹೇಳಿ ಭಿಕ್ಷೆ ಎತ್ತಿದ್ದರಿಂದಾಗಿ ನಿಜವಾಗಿ ಕಷ್ಟದಲ್ಲಿರುವವರೂ ಏನನ್ನೂ ಪಡೆಯಲಾಗುವುದಿಲ್ಲವಲ್ಲ ಎನಿಸಿತು.

ಮರುದಿನ ಆಫೀಸಿನಿಂದ ಮನೆಗೆ ಬರುವಾಗ ಸಂಜೆ ಮನೆಯ ಬಳಿ ಪಾನೀಪುರಿ ತಿನ್ನುತ್ತಾ ನಿಂತಿದ್ದೆ. ಹಿಂದಿನ ದಿನ ಕಂಡಿದ್ದ ಅದೇ ವ್ಯಕ್ತಿ ಅಲ್ಲಿಗೆ ಬರಬೇಕೆ? ಅವನ ಹೆಂಡತಿಯೂ ಮಗನೂ ಜೊತೆಗಿದ್ದರು. "ಕ್ಯಾ ಆಪ್ಕೋ ಹಿಂದೀ ಮಾಲೂಮ್ ಹೈ?" ಎಂದಾಗ "ನಿನ್ನೆ ಡೈರಿ ಸರ್ಕಲ್ ನಲ್ಲಿ ಸಿಕ್ಕಿದ್ಯಲ್ಲಾ" ಎಂದೆ. ಕನ್ನಡದಲ್ಲಿ ನಾನು ಹೇಳಿದ್ದು ಅವನಿಗೆ ತಿಳಿಯಿತೋ ಬಿಟ್ಟಿತೋ, ಆದರೆ ತಕ್ಷಣ ಅಲ್ಲಿಂದ ಜಾಗ ಖಾಲಿ ಮಾಡಿದ. ಅಲ್ಲಿ ಪಾನೀಪುರಿ ತಿನ್ನಲು ಬಂದವರೆಲ್ಲಾ ನನ್ನನ್ನೇ ನೋಡಲಾರಂಭಿಸಿದರು. ಅವರಲ್ಲೊಬ್ಬ "ಅವನು ನಿಮಗೆ ಹಿಂದಿ ಬರುತ್ತಾ ಎಂದು ಕೇಳಿದ" ಎಂದ. ಆಗ ಆ ವ್ಯಕ್ತಿಯ ಪುರಾಣವನ್ನು ಅಲ್ಲಿದ್ದವರಿಗೆ ತಿಳಿಸಿದೆ. "ಹೀಗೆ ಭಿಕ್ಷೆ ಕೇಳುವವರು ಬಹಳ ಜನರಿದ್ದಾರೆ" ಎಂದು ಕೆಲವರು ಗೊಣಗಿಕೊಂಡರು.

***

ಬೆಂಗಳೂರಿನಲ್ಲಿ ಗೆಳೆಯರು, ಸಂಬಂಧಿಗಳು ಬೇಕೆಂದರೂ ಸಿಗುವುದು ಕಷ್ಟ. ಅಂಥದ್ದರಲ್ಲಿ ಇವರು ಮತ್ತೆ ಮತ್ತೆ ನನಗೇ ಸಿಗುತ್ತಾರೆ ಎಂದರೆ ಅದೇನು ವಿಧಿವಿಲಾಸವೋ ಕಾಕತಾಳೀಯವೋ?

ಯಾರನ್ನು ನಂಬಬೇಕು ಯಾರನ್ನು ಬಿಡಬೇಕು ಎಂದೇ ತಿಳಿಯುವುದಿಲ್ಲ. ಆರು ಹಿತವರೋ ಎನಗೆ...

ಭಾನುವಾರ, ಜೂನ್ 29, 2008

ಮೀಲ್ ಪಾಸು ಮತ್ತು ಖೋಟಾ ನೋಟು...

ಎಂದಾದರೂ ಸೊಡೆಕ್ಸ್‍ಹೋ ಮೀಲ್ ಪಾಸ್ ಅಥವಾ ಟಿಕೆಟ್ ಕೂಪನ್ಗಳ ಬಗ್ಗೆ ಕೇಳಿದ್ದೀರಾ? ಕೇಳಿರದಿದ್ದರೆ ಕೇಳಿ, ಕೇಳಿದ್ದರೆ ಅದರ ಬಗ್ಗೆ ಸ್ವಲ್ಪ ಯೋಚಿಸಿ.

ಸೊಡೆಕ್ಸ್‍ಹೋ ಮೀಲ್ ಪಾಸ್ ಮತ್ತು ಟಿಕೆಟ್ ಕೂಪನ್ನು ಇತ್ತೀಚಿಗೆ ಬಹಳಷ್ಟು ಜನರ, ಅದರಲ್ಲೂ ಐಟಿ ಉದ್ಯೋಗಿಗಳ ಕೈಯಲ್ಲಿ ದುಡ್ಡಿಗೆ ಪರ್ಯಾಯವಾಗಿ ಚಲಾವಣೆಯಾಗುತ್ತಿದೆ. ಯಾವುದೇ ಮಧ್ಯಮ ಹಾಗೂ ದೊಡ್ಡ ಹೋಟೆಲ್ ಅಥವಾ ಅಂಗಡಿಗಳು ಮತ್ತು ಸೂಪರ್ ಮಾರ್ಕೆಟ್‍ಗಳಲ್ಲಿ ಇದನ್ನು ದುಡ್ಡಿಗೆ ಬದಲಾಗಿ ತೆಗೆದುಕೊಳ್ಳುತ್ತಾರೆ. ಬಹಳಷ್ಟು ಸಾಫ್ಟ್‍ವೇರ್ ಕಂಪನಿಗಳು ಪ್ರತಿ ತಿಂಗಳೂ ಬೋನಸ್ ರೂಪದಲ್ಲಿ ಈ ಕೂಪನ್ನುಗಳನ್ನು ತಮ್ಮ ಕಂಪನಿಯ ಉದ್ಯೋಗಿಗಳಿಗೆ ವಿತರಿಸುತ್ತವೆ. ೫, ೧೦, ೧೫, ೨೦, ೫೦ ಮುಂತಾದ ಮುಖಬೆಲೆಯಲ್ಲಿ ಸಿಗುವ ಈ ಪಾಸ್ "ಚಿಲ್ಲರೆ ಕೊರತೆ"ಯನ್ನು ನಿವಾರಿಸುವ ನೆಪದಲ್ಲಿ ಬಳಕೆಯಾಗುತ್ತಿದೆ. ಆದರೆ ನಿಜವಾಗಿಯೂ ಇದರಿಂದಾಗುವ ಪ್ರತಿಕೂಲ ಪರಿಣಾಮಗಳೇನು ಎಂಬುದನ್ನು ಅದನ್ನು ಕೊಡುವವರಾಗಲಿ, ತೆಗೆದುಕೊಳ್ಳುವವರಾಗಲಿ ಅಥವಾ ಉಪಯೋಗಿಸುವವರಾಗಲಿ ಯೋಚಿಸಿದ್ದಾರಾ? ಯೋಚಿಸುತ್ತಾರಾ?

ತೆರಿಗೆ ಕಟ್ಟುವುದು ಕಮ್ಮಿಯಾಗುವುದೆಂಬ ನೆಪ ಒಡ್ಡಿ ಕಂಪನಿಗಳು ಹಣದ ಬದಲಿಗೆ ಕೂಪನ್ನುಗಳನ್ನು ಕೊಡುತ್ತವೆ. ತೆಗೆದುಕೊಳ್ಳುವವರೂ ಇದನ್ನು ನಂಬುತ್ತಾರೆ. ಕಮಿಷನ್ನಿನ ಆಸೆಗೋ ಇನ್ನಾವುದೋ ಆಮಿಷಕ್ಕೋ ಒಳಗಾಗಿ ಅಂಗಡಿಗಳು ಇವನ್ನು ಚಲಾವಣೆಗೆ ತರುತ್ತವೆ. ಅನಧಿಕೃತವಾಗಿದ್ದರೂ ರಾಜಾರೋಷವಾಗಿ ಬಳಕೆಯಾಗುವ ಈ ಕೂಪನ್ನುಗಳು ಕಪ್ಪು ಹಣವಾಗಿ ಸಮಾಜದ ಮುಖ್ಯವಾಹಿನಿಗೆ ಸೇರ್ಪಡೆಯಾಗುತ್ತವೆ. ಹಾಗಾದರೆ ಇದರಿಂದ ಭರ್ಜರಿ ಲಾಭವಾಗುವುದು, ಭಯಂಕರ ನಷ್ಟವಾಗುವುದು ಯಾರಿಗೆ? ಕೊಡುವವರಿಗೋ, ತೆಗೆದುಕೊಳ್ಳುವವರಿಗೋ ಅಥವಾ ಉಪಯೋಗಿಸುವವರಿಗೋ? ದುರದೃಷ್ಟವಶಾತ್ ಇವರಾರಿಗೂ ಅಲ್ಲ. ಹಾಗೇನಾದರೂ ಆಗಿದ್ದರೆ ಬಹುಶಃ ಇದು ಬಳಕೆಯಾಗುತ್ತಿರಲೇ ಇಲ್ಲ.

ಹಾಗಾದರೆ ನಿಜವಾಗಿ ಇದರಿಂದ ಹೊಡೆತ ಬೀಳುತ್ತಿರುವುದು ಯಾರಿಗೆ? ಸರ್ಕಾರಕ್ಕೆ, ಜನರಿಗೆ. ಒಬ್ಬ ಸಾಫ್ಟ್‍ವೇರ್ ಇಂಜಿನಿಯರ್‌ಗೆ ತಿಂಗಳಿಗೆ ೧೦೦೦ ರೂಪಾಯಿಯ ಕೂಪನ್ ಸಿಗುತ್ತದೆ ಎಂದುಕೊಳ್ಳೋಣ. ಒಂದು ಸಾಧಾರಣ ಕಂಪನಿಯಲ್ಲಿ ೧೦೦ ಜನ ಕೆಲಸ ಮಾಡುತ್ತಿದ್ದಾರೆ ಎಂದುಕೊಂಡರೆ, ಒಂದು ತಿಂಗಳಿಗೆ ಒಂದು ಕಂಪನಿಯಿಂದ ಒಂದು ಲಕ್ಷ ರೂಪಾಯಿ ಮೌಲ್ಯದ ಕೂಪನ್ನು ಚಲಾವಣೆಗೆ ಬರುತ್ತದೆ. ಇಂತಹ ಒಂದು ನೂರು ಕಂಪನಿಗಳಾದರೂ ಇಲ್ಲವೇ ಉದ್ಯಾನನಗರಿಯಲ್ಲಿ? ಪರೋಕ್ಷವಾಗಿ ಒಂದು ಕೋಟಿ ರೂಪಾಯಿಯಷ್ಟು ಕಪ್ಪು ಹಣ ಪ್ರತಿ ತಿಂಗಳೂ ಜನರ ಕೈಗೆ ಹೋದಂತಾಯಿತು. ಅದರಿಂದ ಕೂಪನ್ನುಗಳನ್ನು ತಮ್ಮ ಉದ್ಯೋಗಿಗಳಿಗೆ ಹಂಚುವ ಕಂಪನಿಗೆ ಏನು ಲಾಭವೋ ಸರಿಯಾಗಿ ಗೊತ್ತಿಲ್ಲ. ಆದರೆ ಆ ಕೂಪನ್ನನ್ನು ಪ್ರಿಂಟ್ ಮಾಡಿ ದುಡ್ಡು ತೆಗೆದುಕೊಂಡು ಮಾರುವ ಸೊಡೆಕ್ಸ್‍ಹೊ ಅಥವಾ ಟಿಕೆಟ್ಟಿನವರಿಗಂತೂ ಸುಗ್ಗಿ.

ಸೊಡೆಕ್ಸ್‍ಹೊ ಬ್ಯುಸಿನೆಸ್ ಮಾಡೆಲ್ ಪ್ರಕಾರ ಅಂಗಡಿಯವರು ಜನರಿಂದ ಅವರು ಪಡೆದ ಕೂಪನ್ನುಗಳನ್ನು ಹಿಂದಿರುಗಿಸಿ ಹಣ ಪಡೆಯಬಹುದು. ಆದರೆ ಅದೆಷ್ಟು ಅಂಗಡಿಗಳ ಜನ ಹೀಗೆ ತಮಗೆ ಸೇರಬೇಕಾದ ಹಣವನ್ನು ಹಿಂದೆ ಪಡೆದಿದ್ದಾರೋ ಗೊತ್ತಿಲ್ಲ. ಏನಿಲ್ಲವೆಂದರೂ ಶೇ. ೨೫ ರಷ್ಟಾದರೂ ಜನರ/ಅಂಗಡಿಯವರ ಬಳಿ ಇದೆ ಎಂದುಕೊಳ್ಳಬಹುದಲ್ಲವೆ? ಒಂದೊಮ್ಮೆ ನಾಳೆಯೇ ಈ ಸೊಡೆಕ್ಸ್‍ಹೊ ಕಂಪನಿ ಕೈಕೊಟ್ಟು ಮುಚ್ಚಿಕೊಂಡು ಹೋದರೆ ನಮ್ಮ ಬಳಿ ಇರುವ ಕೂಪನ್ನನ್ನು ಏನು ಮಾಡಬೇಕು? ೨೫ ಲಕ್ಷ ರೂಪಾಯಿ ಏನೂ ಇಲ್ಲದೆಯೇ ಆ ಕೂಪನ್ ಕಂಪನಿಗೆ ಹೋದಂತಾಗಲಿಲ್ಲವೇ? ಹಾಗೇನಾದರೂ ಆದರೆ ನ್ಯಾಯಾಲಯದ ಮೊರೆ ಹೋಗಲು ಸಾಧ್ಯವಾಗುತ್ತದೆಯೆ? ಸರ್ಕಾರ ಅದಕ್ಕೆ ಭರವಸೆ ಕೊಡುತ್ತದೆಯೇ?

ಈಗ ಖೋಟಾ ನೋಟಿನ ವಿಷಯಕ್ಕೆ ಬರೋಣ. ಯಾರೋ ಒಬ್ಬ ಖೋಟಾ ನೋಟನ್ನು ಪ್ರಿಂಟ್ ಮಾಡಿ ಜನರಿಗೆ ಕೊಡುತ್ತಾನೆ. ಜನ ಅದು ಕಪ್ಪು ಹಣವೆಂಬ ಪರಿವೆಯಿಲ್ಲದೆ ಮಾಮೂಲಿನಂತೆ ದಿನನಿತ್ಯ ಬಳಸಲಾರಂಭಿಸುತ್ತಾರೆ. ಅವರಿಗೇನೂ ನಷ್ಟವಿಲ್ಲ. ಅಕಸ್ಮಾತ್ ಖೋಟಾ ನೋಟ್ ಚಲಾವಣೆ ಮಾಡುತ್ತಿರುವಾಗ ಸಿಕ್ಕಿ ಬಿದ್ದರೆ ಆ ಕ್ಷಣದಲ್ಲಿ ಯಾರ ಬಳಿ ನೋಟಿರುತ್ತದೋ ಅವನು ಗೊತ್ತಿದ್ದೋ ಗೊತ್ತಿಲ್ಲದೆಯೋ ಬಕರಾ ಆಗುತ್ತಾನೆ. ಹಾಗಾದರೆ ಇಲ್ಲಿ ಲಾಭವಾಗಿದ್ದು ಯಾರಿಗೆ? ಪ್ರಿಂಟ್ ಮಾಡಿದ ವ್ಯಕ್ತಿಗೆ ತಾನೇ?

ನೋಡಲು ಖೋಟಾ ನೋಟು ನಿಜವಾದ ನೋಟನ್ನು ಹೋಲುತ್ತದೆ. ಆದರೆ ಈ ಮೀಲ್ ಪಾಸುಗಳು ಹೋಲುವುದಿಲ್ಲ. ಇದನ್ನು ಬಿಟ್ಟು ಬೇರೆ ಏನಾದರೂ ವ್ಯತ್ಯಾಸ ನಿಮಗೆ ಕಾಣುತ್ತದೆಯೇ?

ಬುಧವಾರ, ಜೂನ್ 18, 2008

ಅಗ್ನಿ ಜಂಬೂಕ - ಬೆಂಕಿ ನರಿ - ಫೈರ್ ಫಾಕ್ಸ್ !!

ಬೆಂಕಿನರಿಯ (Firefox) ಮೂರನೆಯ ಆವೃತ್ತಿ ಬಂದಿದೆ. ನೋಡಲು ಚೆನ್ನಾಗಿದ್ದು, ಬಳಸಲು ಸುಲಭವಾಗಿರುವುದರ ಜೊತೆ ಗಮನಾರ್ಹ ಬದಲಾವಣೆಗಳನ್ನೂ ತಂದಿದೆ.

ಅಷ್ಟೇ ಹೇಳುವದಾದರೆ ನಾನೇಕೆ ಇದನ್ನು ಬರೆಯಬೇಕಾಗಿತ್ತು? ಕಾರಣವಿದೆ. ಹಿಂದಿನ ಆವೃತ್ತಿಯ firefox ನಲ್ಲಿ ಕೆಲವು ಬ್ಲಾಗುಗಳಲ್ಲಿ justify ಮಾಡಿರುತ್ತಿದ್ದ ಅಕ್ಷರಗಳು ಬಿಡಿಬಿಡಿಯಾಗಿ ಕಂಡು ಓದಲು ಕಷ್ಟವಾಗುತ್ತಿತ್ತು. ಆದರೆ ಈಗ ಬಂದಿರುವ ಈ ಮೂರನೆಯ ಆವೃತ್ತಿಯಲ್ಲಿ ಆ ದೋಷ ಪರಿಹಾರಗೊಂಡಿದೆ. ಹಾಗಾಗಿ ಕೆಲವು ಬ್ಲಾಗುಗಳಿಗಾಗಿ Internet Explorer ಗೆ ಹೋಗುವ ಅಗತ್ಯ ಈಗಿಲ್ಲ.

ನಾನೇನು ಹೇಳಲು ಬಯಸುತ್ತಿದ್ದೇನೆಂದರೆ, ನೀವು ಹಿಂದಿನ ಆವೃತ್ತಿಯನ್ನು ಉಪಯೋಗಿಸುತ್ತಿದ್ದಲ್ಲಿ ಈ ಪರಿಚ್ಛೇದವನ್ನು ಓದುವುದು ಕಷ್ಟ. ಇದನ್ನು ಅನುಭವಿಸಿ ಅಥವಾ ಈಗಲೇ firefox ಅನ್ನು download ಮಾಡಿಕೊಳ್ಳಿ.

ಬೆಂಕಿನರಿಗೆ ಜಯವಾಗಲಿ! ಆಗ್ ಲೋಮಡೀ ಕೀ ಜೈ!! ಜಯತು ಅಗ್ನಿ ಜಂಬೂಕಃ !!!